ಕಾಶ್ಮೀರದಲ್ಲಿ ಈಗಲೂ ಹಲವು ಪಕ್ಷಗಳ ನಾಯಕರಿಗೆ ನಿರ್ಬಂಧವಿದೆ. ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ. ಈ ಮಧ್ಯೆ ಎಲ್ಲಾ ನಾಯಕರನ್ನು ಇನ್ನು ಐದು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ಯವರ್ ಮಿರ್, ನ್ಯಾಷನಲ್ ಕಾನ್ಫರೆನ್ಸ್ ನ ನೂರ್ ಮೊಹಮ್ಮದ್, ಕಾಂಗ್ರೆಸ್ನ ಶೋಯೆಬ್ ಲೋನ್ ಅವರು ನಿಯಮ ಉಲ್ಲಂಘಿಸುವುದಿಲ್ಲ, ಯಾವುದೇ ಕಾರಣಕ್ಕೂ ಕಾಶ್ಮೀರದಲ್ಲಿ ಶಾಂತಿಗೆ ಭಂಗ ತರುವುದಿಲ್ಲ ಎಂದು ಸಹಿ ಮಾಡಿದ್ದಾರೆ. ಹೀಗಾಗಿ ಎಲ್ಲಾ ನಾಯಕರನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಆಡಳಿತ ಎಲ್ಲಾ ಮಾಜಿ ಮುಖ್ಯಮಂತ್ರಿಗಳನ್ನು ಬಂಧನದಿಂದ ಮುಕ್ತಗೊಳಿಸುವುದಾಗಿ ಹೇಳಿದೆ. ಒಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಅನೇಕ ನಾಯಕರನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.
ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಪ್ರತಿಭಟನೆ, ಉಗ್ರರ ದಾಳಿ ಸಾಧ್ಯತೆ ಹಿನ್ನೆಲೆ ಪ್ರಮುಖ ರಾಜಕೀಯ ನಾಯಕರು ಸೇರಿದಂತೆ ಸುಮಾರು 800 ಮಂದಿಯನ್ನು ಬಂಧನದಲ್ಲಿರಿಸಲಾಗಿತ್ತು. ಅದರಲ್ಲಿ 250 ಮಂದಿಯನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಈಗ ಯಾವುದೇ ಹಿಂಸಾತ್ಮಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವುದಿಲ್ಲ, ಕಾಶ್ಮೀರದ ಶಾಂತಿಗೆ ಭಂಗ ತರುವುದಿಲ್ಲ ಎಂದು ರಾಜಕೀಯ ನಾಯಕರಿಂದ ಸಹಿ ಮಾಡಿಸಿಕೊಂಡು, ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಸೆಪ್ಟಂಬರ್ 21ರಂದು ಮಾಜಿ ಸಚಿವ ಇಮ್ರಾನ್ ರಜಾ ಅನ್ಸಾರಿ ಅವರಿಗೆ ಅನಾರೋಗ್ಯ ಹಿನ್ನೆಲೆ ಬಿಡುಗಡೆ ಮಾಡಲಾಗಿತ್ತು. ಹಿರಿಯ ರಾಜಕೀಯ ನಾಯಕರ ಮುಂದಿನ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಣದಲ್ಲಿರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಜಮ್ಮುಕಾಶ್ಮೀರ ಗವರ್ನರ್, ಮುಖ್ಯ ಸಲಹೆಗಾರ, ಬಂಧಿತರಾಗಿರುವ ರಾಜಕೀಯ ನಾಯಕರನ್ನು ಒಬ್ಬೊಬ್ಬರಾಗಿ, ಕ್ರಮೇಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.