ತುಮಕೂರು ಜಿಲ್ಲೆಯ ಚಿ.ನಾ.ಹಳ್ಳಿಯಲ್ಲಿ ನಿರ್ಮಿಸಿದ್ದ ತೀನಂಶ್ರೀ ಭವನವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದು ಸಾಹಿತಿಗಳ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.
ಧ್ವನಿ-ಬೆಳಕು ವ್ಯವಸ್ಥೆ, ಕಾಂಪೌಂಡ್ ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿರಲಿಲ್ಲ. ಆದರು ಆತುರಾತುರವಾಗಿ ಸಚಿವ ಸಿ.ಟಿ.ರವಿ ಅವರನ್ನ ಕರೆಸಿ ಉದ್ಘಾಟಿಸುವ ಅಗತ್ಯವೇನಿತ್ತು? ತೀನಂಶ್ರೀ ಭವನ ಬೇಕೆಂದು ಹಲವು ವರ್ಷಗಳಿಂದ ಹೋರಾಡಿದ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಯಾವುದೇ ಕನ್ನಡ ಪರ ಸಂಘಟನೆಗಳು ಮತ್ತು ಸಾಹಿತಿಗಳನ್ನು ಬೇಕೆಂದೇ ಆಹ್ವಾನಿಸದೇ ಹೊರಗಿಟ್ಟಿದ್ದು ಏಕೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಕಳೆದ ಏಳೆಂಟು ವರ್ಷಗಳಿಂದಲೂ ತೀನಂಶ್ರೀ ಭವನ ನಿರ್ಮಾಣ ಮಾಡಬೇಕೆಂದು ಕನ್ನಡದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್, ಸಾಹಿತಿಗಳು, ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳ ಒತ್ತಾಸೆಯಾಗಿತ್ತು. ಇಂದು ತೀನಂಶ್ರೀ ಭವನ ನಿರ್ಮಾಣಗೊಳ್ಳಲು ಇದೇ ಕಾರಣ.
ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತೀನಂಶ್ರೀ ಭವನ ಉದ್ಘಾಟನೆಗೆ ಸಿ.ಟಿ.ರವಿ ಅವರನ್ನು ಕರೆಸಿದರು. ಅಧಿಕಾರಿಗಳು ಕಾಮಗಾರಿ ಮುಗಿದಿಲ್ಲ, ಉದ್ಘಾಟಿಸುವುದು ಬೇಡವೆಂದರೂ ಸಹ, ಸಚಿವ ಮಾಧುಸ್ವಾಮಿ ‘ಇಲ್ರೀ, ನಾನು ಹೇಳಿದಷ್ಟು ಕೇಳ್ರಿ’ ಎಂದು ಎಚ್ಚರಿಕೆ ಕೊಟ್ಟರು ಎನ್ನಲಾಗಿದೆ.
ಸಚಿವರ ಸೂಚನೆ ಮೇರೆಗೆ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಆಹ್ವಾನ ಪತ್ರಿಕೆ ಮುದ್ರಿಸಿದ್ದರು. ಸೌಜನ್ಯಕ್ಕೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸೇರಿದಂತೆ ಯಾವುದೇ ಪದಾಧಿಕಾರಿಗಳು, ಸಾಹಿತಿಗಳಿಗೂ ಮಾಹಿತಿ ತಿಳಿಸದೆ ಆಹ್ವಾನ ಪತ್ರಿಕೆಯಲ್ಲಿ ಕಸಾಪ ಹೆಸರು ಮುದ್ರಿಸಿದ್ದಾರೆ.
ರಾಜಕಾರಣಿಗಳನ್ನು ಬಿಟ್ಟು ಬೇರೆ ಯಾವ ಸಾಹಿತಿಗಳನ್ನೂ ಆಹ್ವಾನಿಸದೆ, ಹೆಸರನ್ನೂ ಹಾಕದೆ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ.
ಯಾರಿಗೂ ಮಾಹಿತಿಯೇ ಇಲ್ಲದಂತೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಚಿಕ್ಕನಾಯಕನಹಳ್ಳಿಯವರೇ ಆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರು, ಸಾಹಿತಿಗಳು ಆದ ಎಸ್.ಜಿ ಸಿದ್ದರಾಮಯ್ಯ. ಸಂಶೋಧಕ ಕೆ.ಬಿ.ಶಿವತಾರಕ್, ತಿಮ್ಮನಹಳ್ಳಿ ವೇಣುಗೋಪಾಲ್, ನಟರಾಜ್ ಹುಳಿಯಾರ್, ಹುಳಿಯಾರು ಕಾಲೇಜಿನ ಪ್ರಾಂಶುಪಾಲರು, ಲೇಖಕರಾದ ಬಿಳಿಗೆರೆ ಕೃಷ್ಣಮೂರ್ತಿ, ಕೃಷಿಕ ಸಾಹಿತಿ ಬಾಳೇಕಾಯಿ ಶಿವ ನಂಜಪ್ಪ ಹೀಗೆ ಜಿಲ್ಲೆಯ ಯಾವ ಪ್ರಾತಿನಿಧಿಕ ಸಾಹಿತಿಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನೂ ಮುದ್ರಿಸಲಿಲ್ಲ.
ಇದನ್ನೂ ಓದಿ: ಡಿ.ಜೆ ಹಳ್ಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ: ನಿರಪರಾಧಿಗಳ ಬಿಡುಗಡೆಗೆ ಆಗ್ರಹ
ಜಿಲ್ಲೆಯ ಎಲ್ಲಾ ಸಾಹಿತಿಗಳು ಪ್ರಗತಿಪರ ನಿಲುವುಳ್ಳವರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರ ನಿಲುವುಗಳಿಗೆ ವಿರುದ್ಧ ಚಿಂತನೆಗಳನ್ನು ಬೆಳೆಸಿಕೊಂಡವರು. ಜಿಲ್ಲಾ ಉಸ್ತುವಾರಿ ಸಚಿವರ ಧೋರಣೆಯನ್ನು ಟೀಕೆಗೆ ಒಳಪಡಿಸುವವರು ಎಂಬ ಕಾರಣಕ್ಕೆ ಉದ್ದೇಶಪೂರಕವಾಗಿಯೇ ದೂರ ಇಡಲಾಯಿತು. ಅಷ್ಟೇ ಅಲ್ಲ ಜಿಲ್ಲಾ ಉಸ್ತುವಾರಿ ಸಚಿವರು ‘ತುಮಕೂರು ಮೋದಿ’ ಇದ್ದಂತೆ. ಸರ್ವಾಧಿಕಾರಿ ಧೋರಣೆಗೆ ಮತ್ತೊಂದು ಹೆಸರು ಜೆ.ಸಿ.ಮಾಧುಸ್ವಾಮಿ. ಅವರು ಹೇಳಿದ್ದೇ ವೇದವಾಕ್ಯ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸಿ.ಟಿ. ರವಿಯವರ ಚಿಂತನೆಗೆ ವಿರುದ್ಧವಾಗಿ ನಡೆದುಕೊಳ್ಳಬಾರದೆಂಬ ಕಾರಣಕ್ಕಾಗಿ ಎಲ್ಲರನ್ನೂ ದೂರವಿಟ್ಟರು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, “ತೀನಂಶ್ರೀ ಪ್ರಸಿದ್ದ ವಿದ್ವಾಂಸರು. ಕನ್ನಡ ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಅಪಾರವಾದುದು. ಇಂತಹವರ ಹೆಸರಿನಲ್ಲಿ ಸಾಹಿತ್ಯ ಭವನ ನಿರ್ಮಾಣವಾಗತೊಡಗಿದ್ದು ಸಾಹಿತ್ಯ ವಲಯದಲ್ಲಿ ಹೆಮ್ಮೆಯ ಸಂಗತಿಯಾಗಿತ್ತು. ಆದರೆ ತೀನಂಶ್ರೀ ಭವನವನ್ನು ತರಾತುರಿಯಲ್ಲಿ ಉದ್ಘಾಟನೆಯಾಗಿದ್ದು ಸಾಹಿತ್ಯಾಸಕ್ತರಿಗೆ ನಿರಾಸೆ ತಂದಿದೆ” ಎಂದಿದ್ದಾರೆ.
“ತೀನಂಶ್ರೀ ಅವರಿಗೆ ಘನತೆ-ಗೌರವ ತರುವ ರೀತಿಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ವಿಚಾರ ಸಂಕಿರಣ ಏರ್ಪಡಿಸುವ ಮೂಲಕ ಒಂದು ಸಾಹಿತ್ಯ-ಸಂಸ್ಕಂತಿಯ ಹಬ್ಬದಂತೆ ಮಾಡಬಹುದಿತ್ತು. ಇದ್ಯಾವುದೂ ಆಗಲಿಲ್ಲ ಎಂಬ ನೋವು ಇದೆ. ಸಾಹಿತಿ, ಲೇಖಕ, ಶಿಷ್ಯವೃಂದ, ಸಾಹಿತ್ಯಾಸಕ್ತರ ಅನುಪಸ್ಥಿತಿಯಲ್ಲಿ ತೀನಂಶ್ರೀ ಭವನ ಅನಾಥವಾಗಿ ಲೋಕಾರ್ಪಣೆಗೊಂಡಿದ್ದು ನೋವಿನ ಸಂಗತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಒಂದೇ ಧೋರಣೆಯವರು. ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಈಗಿನ ಸರ್ಕಾರ ಭಿನ್ನ ನಿಲುವುಗಳನ್ನು ವ್ಯಕ್ತಪಡಿಸುವ ಸಾಹಿತಿ-ಕಲಾವಿದರನ್ನು ತೀನಂಶ್ರೀ ಭವನ ಉದ್ಘಾಟನೆಯಂಥ ಸಾಂಸ್ಕೃತಿಕ ಕಾರ್ಯಕ್ರಮದಿಂದ ಹೊರಗಿಟ್ಟಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವೇದಿಕೆಯಲ್ಲಿ ಟಿ.ಎಸ್.ನಾಗರಾಜರಾವ್ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಸಾಹಿತಿ ಇರಲಿಲ್ಲ. ಬಿಜೆಪಿ ಸರ್ಕಾರದ ಚಿಂತನೆಗಳು ಮತ್ತು ಧೋರಣೆಗಳಿಗೆ ಹತ್ತಿರವಾಗಿರುವ ನಾಗರಾಜ್ ರಾವ್ ಅವರ ಹೆಸರನ್ನು ಹಾಕದಿದ್ದರೂ ಸ್ವಾಗತ ಮಾಡಿದ್ದು ಅವರೇ ಎಂದು ಕಾರ್ಯಕ್ರಮಕ್ಕೆ ಭಾಗಿಯಾಗಿದ್ದವರು ತಿಳಿಸಿದರು.
ತೀನಂಶ್ರೀ ಭನವ ಉದ್ಘಾಟನೆಗೆ ಅವರ ಶಿಷ್ಯ ವೃಂದವನ್ನೂ ಆಹ್ವಾನಿಸಿಲ್ಲ. ಜಿಲ್ಲೆಯ ಸಾಹಿತಿ-ಚಿಂತಕರನ್ನು ಕರೆದಿಲ್ಲ. ಇದು ಸಾಹಿತ್ಯ ವಲಯದಲ್ಲಿ, ಕನ್ನಡಪರ ಸಂಘಟನೆಗಳ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣ ವಾಗಿದೆ.
ಸಿ.ಟಿ.ರವಿ ಮತ್ತು ಜೆ.ಸಿ.ಮಾಧುಸ್ವಾಮಿ ಸಚಿವದ್ವಯರಿಗೆ ಸಾಹಿತಿಗಳನ್ನು ಕಂಡರೆ ಆಗುವುದಿಲ್ಲ. ಸಾಹಿತಿಗಳ ಭಿನ್ನ ನಿಲುವುಗಳನ್ನು ಸಹಿಕೊಳ್ಳದ ಉಸ್ತುವಾರಿ ಸಚಿವರು ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.
ಇದನ್ನೂ ಓದಿ: 10 ಲಕ್ಷ ಡಿಸ್ಲೈಕ್ ಮೂಲಕ ದಾಖಲೆ ಬರೆದ ಮೋದಿಯ ‘ಮನ್-ಕಿ-ಬಾತ್’!: ಡಿಸ್ಲೈಕ್ ತೆಗೆದುಹಾಕಲಾಗಿದೆಯೆಂಬ ಆರೋಪ?