ಜಾನುವಾರಗಳ ಕಳ್ಳಸಾಗಣಿಕೆ ಹೆಸರಲ್ಲಿ ರಾಜ್ಯದಲ್ಲಿ ನೈತಿಕ ಪೊಲೀಸ್ಗಿರಿ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಅತಿಯಾಗುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಘಟನೆಯನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು “ಕಳೆದ ಭಾನುವಾರ ರಾತ್ರಿ ಹಾಸನ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕದಬಳ್ಳಿ (ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು) ಬಳಿ ಗಂಡಸಿ ಹೋಬಳಿಯ ಜಾನುವಾರು ಜಾತ್ರೆಯಲ್ಲಿ ಎತ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದ ರೈತರನ್ನು ಅದೇ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ದೆಹಲಿ ಮೂಲದ ಜನರು ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಲ್ಲದೆ ಗಲಾಟೆ ಮಾಡಿ ಎತ್ತುಗಳಿದ್ದ ವಾಹನ ತಡೆದಿದ್ದರು” ಎಂದಿದ್ದಾರೆ.
“ಸ್ಥಳಕ್ಕೆ ಬಂದ ಬಿಂಡಿಗನವಿಲೆ ಪೊಲೀಸರಿಗೆ ರೈತರು ವಾಸ್ತವ ಮನವರಿಕೆ ಮಾಡಿಕೊಟ್ಟರೂ ಸಹ ಎತ್ತು ಹಾಗೂ ವಾಹನ ಬಿಡದಿದ್ದಾಗ ಪೊಲೀಸರ ವಿರುದ್ಧ ಆಕ್ರೋಶಗೊಂಡು ಪ್ರತಿಭಟನೆಯ ರೂಪಕ್ಕೆ ತಿರುಗಿತು. ಘಟನೆಯ ಬಗ್ಗೆ ಸ್ಥಳೀಯ ಮುಖಂಡರಿಂದ ಮಾಹಿತಿ ತಿಳಿದು ಪ್ರತಿಭಟನಾ ನಿರತ ಸ್ಥಳಕ್ಕೆ ಧಾವಿಸಿದೆ. ಪೊಲೀಸರೊಂದಿಗೆ ರೈತರ ಪರಿಸ್ಥಿತಿಯ ಹಾಗೂ ವಾಸ್ತವದ ಬಗ್ಗೆ ಮನವರಿಕೆ ಮಾಡಿಕೊಟ್ಟು ಜಾನುವಾರುಗಳನ್ನು ಬಿಡಿಸಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ಸ್ಪರ್ಧೆ ಇಲ್ಲ, ನಾನು ಚಾಮುಂಡೇಶ್ವರಿಗೆ ಹೋಗುತ್ತೇನೆ- ಎಚ್.ಡಿ.ಕೆ: ರಾಮನಗರಕ್ಕೆ ನಿಖಿಲ್ ಫಿಕ್ಸ್?
ಭಾನುವಾರ ರಾತ್ರಿ ಗಂಡಸಿ ಹೋಬಳಿಯ ಜಾನುವಾರು ಜಾತ್ರೆಯಲ್ಲಿ ಎತ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದ ರೈತರನ್ನು ಹಾಸನ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕದಬಳ್ಳಿ ಬಳಿ ಮಂಗಳೂರಿಗೆ ತೆರಳುತ್ತಿದ್ದ ದೆಹಲಿ ಮೂಲದ ಜನರು ಕಸಾಯಿ ಖಾನೆಗೆ ಸಾಗಿಸುತ್ತಿದ್ದಾರೆಂದು ಗಲಾಟೆ ಮಾಡಿ ಎತ್ತುಗಳಿದ್ದ ವಾಹನ ತಡೆದಿದ್ದರು. 1/3https://t.co/oMywHXzRuH
— Prajwal Revanna (@iPrajwalRevanna) February 23, 2022
’ಜಾನುವಾರು ಕಳ್ಳಸಾಗಾಣಿಕೆ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ನೈತಿಕ ಪೊಲೀಸ್ಗಿರಿ ಮಾಡುವುದು ಸರಿಯಲ್ಲ, ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಅತಿಯಾಗುತ್ತಿದೆ, ಇದಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳದಲ್ಲಿದ್ದ ಮಂಡ್ಯದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದೆ’ ಎಂದು ತಮ್ಮ ಫೋಸ್ಟ್ಗಳಲ್ಲಿ ತಿಳಿಸಿದ್ದಾರೆ.
ಟ್ವೀಟ್ಗಳ ಜೊತೆಗೆ ಪ್ರತಿಭಟನಾ ಸ್ಥಳದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರೈತರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವುದು ಕಾಣಿಸುತ್ತದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಪರಿಸ್ಥಿತಿಯನ್ನು ತಿಳಿಸುತ್ತಿದ್ದಾರೆ.
“ಅರಸಿಕೆರೆಯಲ್ಲಿಯೂ ಇದೇ ತಂಡ ರೈತರನ್ನು ಹಿಡಿದು ಪ್ರಕರಣದ ದಾಖಲಿಸಲು ಒತ್ತಡ ಹೇರಿದ್ದು, ಅದಕ್ಕೆ ಪೊಲೀಸರು ಒಪ್ಪದಿದ್ದಾಗ ಇಲ್ಲಿಗೆ ಬಂದು ಮತ್ತೆ ಇಂತಹದ್ದೆ ಕೆಲಸ ಮಾಡಿದ್ದಾರೆ. ಬಜರಂಗದಳದ ಒಂದು ಕಾರ್ಡ್ ತೋರಿಸುವುದು ರೈತರನ್ನು ಹಿಡಿದು ಜಾನುವಾರು ಕಳ್ಳ ಸಾಗಾಣಿಕೆ ಅಂತ ಆರೋಪ ಮಾಡುವುದು ಇದೆ ನಡೆಯುತ್ತಿದೆ. ಅವರಿಗೆ ಅಂತಹ ಅನುಮಾನಗಳಿದ್ದರೆ..ಸೀದಾ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು ಅವರು ಅದರ ಸತ್ಯಾಸತ್ಯತೆ ತನಿಖೆ ಮಾಡುತ್ತಾರೆ. ಆದರೆ, ಅದು ಬಿಟ್ಟು ಅವರೇ ಗಾಡಿಗಳನ್ನು ಹಿಡಿಯುವುದು 30, 40 ಸಾವಿರ ಕಿತ್ತುಕೊಳ್ಳುವುದು ಮಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇವರು ಹೇಗೆ ರೈತರ ಮೇಲೆ ಕ್ರಮ ತೆಗೆದುಕೊಳ್ಲುತ್ತಾರೆ. ಇವರು ಯಾರು ರೈತರನ್ನು ಅಡ್ಡ ಹಾಕುವವರು…? ಅದಕ್ಕೆ ಅಂತ ಪೊಲಿಸ್ ಇಲಾಖೆಯಿದೆ. ನೀವು ಇವರ ಮೇಲೆ ಕಠಿಣ ಕ್ರಮ ತೆಗೆದುಬೇಕು. ಇವರೇ ಎಲ್ಲಾ ಮಾಡುವುದಾದರೇ ಪೊಲೀಸರು ಯಾಕೆ ಬೇಕು…? ಸಿವಿಲ್ ಪೊಲೀಸಿಂಗ್ಗೆ ಕಾನೂನಿನಲ್ಲಿ ಯಾವುದೇ ಅಧಿಕಾರವಿಲ್ಲ. ಇತ್ತೀಚೆಗೆ ಇದು ಅತಿಯಾಗುತ್ತಿದೆ. ಇದು ನಿಲ್ಲಬೇಕು” ಎಂದು ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ 2023: ಎಚ್.ಡಿ ಕುಮಾರಸ್ವಾಮಿ V/S ಯೋಗೇಶ್ವರ್ ನಡುವೆ ಗೆಲುವು ಯಾರಿಗೆ?