ಭಾರತದಲ್ಲಿ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2024 ರಲ್ಲಿ 74.4% ರಷ್ಟು ಹೆಚ್ಚಾಗಿದೆ ಎಂದು ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ಸಂಸ್ಥೆಯಾದ ‘ಇಂಡಿಯಾ ಹೇಟ್ ಲ್ಯಾಬ್’ ಸೋಮವಾರ ಪ್ರಕಟಿಸಿದ ಅಧ್ಯಯನ ಹೇಳಿದೆ. ‘ಭಾರತದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ದ್ವೇಷ ಭಾಷಣ’ ಎಂಬ ಅಧ್ಯಯನದಲ್ಲಿ ಕಳೆದ ವರ್ಷ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ಮುಖ್ಯವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು 1,165 ದ್ವೇಷ ಭಾಷಣದ ಪ್ರಕರಣಗಳನ್ನು ಅದು ದಾಖಲಿಸಿದೆ.
“ದ್ವೇಷ ಭಾಷಣವು 2023 ಕ್ಕಿಂತ 74.4% ಹೆಚ್ಚಳವನ್ನು ಸೂಚಿಸುತ್ತದೆ. 2023ರಲ್ಲಿ 668 ಇಂತಹ ಘಟನೆಗಳು ದಾಖಲಾಗಿತ್ತು. 2024ರಲ್ಲಿ ವರದಿಯಾದ ಪ್ರಕಗಣಗಳಲ್ಲಿ 1,147 (98.5%) ಭಾಷಣಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡವು.” ಎಂದು ಅಧ್ಯಯನ ಹೇಳಿದೆ. ಭಾರತದಲ್ಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ದ್ವೇಷ ಭಾಷಣವನ್ನು ಹೆಚ್ಚಾಗಿ ಹರಡುವ 10 ಜನರಲ್ಲಿ ಆರು ಜನರು ರಾಜಕಾರಣಿಗಳಾಗಿದ್ದಾರೆ ಎಂದು ವರದಿಯು ಹೇಳಿದೆ. ದ್ವೇಷ ಭಾಷಣ ಹರಡುವ ಪ್ರಮುಖದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದ್ದಾರೆ.
ಒಟ್ಟು ದ್ವೇಷ ಭಾಷಣಗಳಲ್ಲಿ ಆದಿತ್ಯನಾಥ್ 86 (7.4%) ದ್ವೇಷ ಭಾಷಣ ಘಟನೆಗಳಿಗೆ ಕಾರಣರಾಗಿದ್ದಾರೆ. ಪ್ರಧಾನಿ ಮೋದಿ 67 ಭಾಷಣಗಳನ್ನು ನೀಡಿದ್ದು, ಇದು 2024 ರ ದ್ವೇಷ ಭಾಷಣಗಳ ಪೈಕಿ 5.7% ದಷ್ಟು ಪಾಲನ್ನು ಹೊಂದಿದೆ ಎಂದು ವರದಿ ಹೇಳಿದೆ.
2024 ರಲ್ಲಿ ಭಾರತದಲ್ಲಿ ಪರಿಶೀಲಿಸಿದ ವೈಯಕ್ತಿಕ ದ್ವೇಷ ಭಾಷಣ ಘಟನೆಗಳ ಪ್ರಸಾರ ಮತ್ತು ವರ್ಧಿಸುವಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಪಾತ್ರವನ್ನು ಅಧ್ಯಯನವು ವಿಶ್ಲೇಷಿಸಿದೆ. ವರದಿಯು ರಾಜಕೀಯ ರ್ಯಾಲಿಗಳು, ಚುನಾವಣಾ ಪ್ರಚಾರ ಕಾರ್ಯಕ್ರಮಗಳು, ಧಾರ್ಮಿಕ ಮೆರವಣಿಗೆಗಳು ಮತ್ತು ಪ್ರತಿಭಟನಾ ಮೆರವಣಿಗೆಗಳಂತಹ ವಿವಿಧ ರೀತಿಯ ಸಾರ್ವಜನಿಕ ಸಭೆಗಳನ್ನು ಈ ವಿಶ್ಲೇಷಣೆ ಒಳಗೊಂಡಿದೆ.
ದ್ವೇಷ ಭಾಷಣ ದಾಖಲಾದ 931 ಅಥವಾ 79.9% ಘಟನೆಗಳು ಬಿಜೆಪಿ ಆಡಳಿತದ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿವೆ ಎಂದು ವರದಿ ಹೇಳಿದೆ. “ದತ್ತಾಂಶವು ರಾಜಕೀಯ ನಿಯಂತ್ರಣ ಮತ್ತು ದ್ವೇಷ ಭಾಷಣದ ಹರಡುವಿಕೆಯ ನಡುವಿನ ಬಲವಾದ ಸಂಬಂಧವನ್ನು ಸೂಚಿಸುತ್ತದೆ” ಎಂದು ಸಂಶೋಧನೆ ಹೇಳಿದೆ.
ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ 2024 ರಲ್ಲಿ 234 ಅಥವಾ 20% ರಷ್ಟು ದ್ವೇಷ ಭಾಷಣ ಘಟನೆಗಳು ದಾಖಲಾಗಿವೆ ಎಂದು ಅದು ಹೇಳಿದೆ.
“ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಅತಿ ಹೆಚ್ಚು ದ್ವೇಷ ಭಾಷಣ ಘಟನೆಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಒಟ್ಟಾರೆಯಾಗಿ 2024 ರಲ್ಲಿ ದಾಖಲಾದ ಎಲ್ಲಾ ಘಟನೆಗಳಲ್ಲಿ 47% ರಷ್ಟಿದೆ” ಎಂದು ಅಧ್ಯಯನ ಹೇಳಿದೆ.
“ಬಿಜೆಪಿ ಸ್ವತಃ ಅತಿ ಹೆಚ್ಚು ಆಯೋಜಕನಾಗಿದ್ದು, 340 ದ್ವೇಷ ಭಾಷಣ ಘಟನೆಗಳಿಗೆ ಅದು ಕಾರಣವಾಗಿದೆ. ಈ ಘಟನೆಗಳು ಹೆಚ್ಚಾಗಿ ಮಾರ್ಚ್ ಮತ್ತು ಜೂನ್ ನಡುವಿನ ಸಾರ್ವತ್ರಿಕ ಚುನಾವಣೆಗಳು ಹಾಗೂ ಜಾರ್ಖಂಡ್ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ನಡೆದಿದೆ. ಇದು 2023 ಕ್ಕಿಂತ 580% ರಷ್ಟು ಹೆಚ್ಚಳವಾಗಿದೆ.” ಎಂದು ವರದಿ ಹೇಳಿದೆ.
ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣವು ಆಕಸ್ಮಿಕವಾಗಿ ನಡೆದಿಲ್ಲ, ಬದಲಾಗಿ ಇವುಗಳು ಉದ್ದೇಶಪೂರ್ವಕ ಮಾದರಿಯನ್ನು ಅನುಸರಿಸಿದೆ ಎಂದು ವರದಿ ತೋರಿಸಿದೆ ಎಂದು ಇಂಡಿಯಾ ಹೇಟ್ ಲ್ಯಾಬ್ ಅನ್ನು ನಡೆಸುತ್ತಿರುವ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್ನ ಕಾರ್ಯನಿರ್ವಾಹಕ ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಗಳ ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿ 110 ಭಾಷಣಗಳಲ್ಲಿ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ನ ಆಗಸ್ಟ್ ವರದಿಯಲ್ಲಿ ಹೇಳಲಾಗಿತ್ತು. “ಕನಿಷ್ಠ 110 ಭಾಷಣಗಳಲ್ಲಿ, ಪ್ರಧಾನಿ ಮೋದಿ ರಾಜಕೀಯ ವಿರೋಧವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಈ ಹೇಳಿಕೆಯು ತಪ್ಪು ಮಾಹಿತಿಯ ಮೂಲಕ ಬಹುಸಂಖ್ಯಾತ ಹಿಂದೂ ಸಮುದಾಯದಲ್ಲಿ ಭಯವನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು” ಎಂದು ಈ ವರದಿ ಹೇಳಿತ್ತು.
ಇದನ್ನೂಓದಿ: ಅಲಿಗಢ ವಿಶ್ವವಿದ್ಯಾಲಯ ಬಿರಿಯಾನಿ ವಿವಾದ; ಹಲವರ ವಿರುದ್ಧ ಎಫ್ಐಆರ್ ದಾಖಲು
ಅಲಿಗಢ ವಿಶ್ವವಿದ್ಯಾಲಯ ಬಿರಿಯಾನಿ ವಿವಾದ; ಹಲವರ ವಿರುದ್ಧ ಎಫ್ಐಆರ್ ದಾಖಲು


