Homeಕರ್ನಾಟಕಅಂಬಿ ಸಮಾಧಿ ಮುಂದೆ ದೇವೇಗೌಡರ ಸೆಕ್ಯುಲರ್ ಶಪಥ!

ಅಂಬಿ ಸಮಾಧಿ ಮುಂದೆ ದೇವೇಗೌಡರ ಸೆಕ್ಯುಲರ್ ಶಪಥ!

- Advertisement -
- Advertisement -

|ತುಂಟ |

ಅದು ಕಂಠೀರವ ಸ್ಟೂಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿ. ರಾತ್ರಿ ಹನ್ನೆರಡೂವರೆ ಒಂದು ಗಂಟೆ ಸಮಯವಿರಬಹುದು. ಬಿಳಿ ಪಂಚೆ, ಬಿಳಿ ಶರ್ಟು ಹಾಕಿದ, ತಲೆಗೆ ಮಫ್ಲರಿನಂತೆ ಟವೆಲ್ ಸುತ್ತಿಕೊಂಡ  ವಯಸ್ಸಾದ ಹಿರಿ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಸಮಾಧಿ ಮುಂದೆ ನಿಂತು ಸಣ್ಣಗೆ ಕಣ್ಣೀರು ಮಿಡಿಯುತ್ತಿದ್ದರು. ಕುತೂಹಲಗೊಂಡು ಹತ್ತಿರ ಹೋಗಿ ನೋಡಿದೆ. ಏನಾಶ್ಚರ್ಯ, ಅದು ನಮ್ಮ ಮಾಜಿ ಪ್ರಧಾನಿ ದೇವೇಗೌಡರು!

ಆ ಭಾವನಾತ್ಮಕ ವಾತಾವರಣ ಕದಡಲು ಇಷ್ಟವಾಗಲಿಲ್ಲ. ಸದ್ದು ಮಾಡದೆ, ದೇವೇಗೌಡರ ಪಕ್ಕಕ್ಕೆ ಹೋಗಿ ನಿಂತೆ. ನನ್ನತ್ತ ತಿರುಗಿ ನೋಡಿದ ಗೌಡರ ಕಣ್ಣುಗಳಲ್ಲಿ ಆ ಕ್ಷಣಕ್ಕೆ ಕಿಂಚಿತ್ತೂ ಕಪಟತೆ ಇರಲಿಲ್ಲ. ಮತ್ತೆ ಸಮಾಧಿಯತ್ತ ತಿರುಗಿದ ಅವರು ಅಂಬಿ ಸಮಾಧಿ ಜೊತೆ ಮಾತು ಮುಂದುವರೆಸಿದರು,

“ಅಂಬಿ, ನೀನು ನನ್ನ ಪಕ್ಷದಲ್ಲಿ ಇರಲಿ, ಇಲ್ಲದಿರಲಿ ಯಾವತ್ತೂ ನೀನು ನನ್ನ ಹುಡುಗನಾಗಿದ್ದೆ. ಅದೇ ಒರಟು ಭಾಷೆಯ, ಬೆಣ್ಣೆ ಹೃದಯದ ಹುಡುಗ. ನೀನು ಇಷ್ಟು ಬೇಗ ನಮ್ಮನ್ನೆಲ್ಲ ಅಗಲಿ ಹೋಗುತ್ತೀಯ ಅಂದುಕೊಂಡಿರಲಿಲ್ಲ. ನನ್ನ ಕಣ್ಣಮುಂದೆ ಆಡಿ ಬೆಳೆದ, ಸಿನಿಮಾ ಮಾಡಿದ ಹುಡುಗ ಕೊನೆಗೆ ನನ್ನ ಕಣ್ಣ ಮುಂದೆಯೇ ಅಗಲಿಹೋದದ್ದನ್ನು ನೆನೆಸಿಕೊಂಡರೆ ದುಃಖ ಉಕ್ಕಿ ಬರುತ್ತೆ. ನಿನ್ನ ಇಪ್ಪತ್ತೆರಡನೇ ವಯಸ್ಸಲ್ಲಿ ಮೊದಲ ಸಿನಿಮಾ ಮಾಡುವ ಹುಮ್ಮಸ್ಸಿನಲ್ಲಿ ನೀನಿದ್ದಾಗ ನಾನಾಗಲೇ ಎಂಎಲ್ಎ ಆಗಿ ಹತ್ತು ವರ್ಷ ಕಳೆದಿದ್ದೆ. ನನಗಿನ್ನೂ ಚೆನ್ನಾಗಿ ನೆನಪಿದೆ, ನಿನ್ನ ನಾಗರಹಾವು ಸಿನಿಮಾ ರಿಲೀಸ್ ಆದಾಗ ಅದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದ ನಾನು ಸಿನಿಮಾ ನೋಡಿ, ಈ ನಮ್ಮ ಮಂಡ್ಯದ  ಹುಡುಗ ಮುಂದೊಂದು ದಿನ ದೊಡ್ಡ ಸ್ಟಾರ್ ಆಗಿ ಬೆಳೆಯುತ್ತಾನೆ ನೋಡ್ತಾ ಇರಿ ಎಂದು ಎಲ್ಲರೆದುರು ಹೆಮ್ಮೆಯಿಂದ ಹೇಳಿಕೊಂಡು ತಿರುಗಾಡಿದ್ದೆ. ನನ್ನ ಮಾತು ಸುಳ್ಳಾಗಲಿಲ್ಲ. ನೀನು ನಿಜಕ್ಕೂ ಕರ್ಣನಂತವನು ಕಣಪ್ಪಾ…”

ಕ್ಷಣಕಾಲ ಮೌನಕ್ಕೆ ಶರಣಾದ ಗೌಡರು, ಮತ್ತೆ ನನ್ನತ್ತ ತಿರುಗಿ ನೋಡಿದರು. ಕಣ್ಣೀರಿನ ಪ್ರಮಾಣ ಕೊಂಚ ತಗ್ಗಿದಂತೆ ಕಾಣಿಸಿತು. ಬಹುಶಃ ಹೊರಟುಹೋಗುತ್ತಾರೇನೊ ಅಂತ ಭಾವಿಸಿದೆ. ಆದರೆ, ಮತ್ತೆ ಸಮಾಧಿಯತ್ತ ತಿರುಗಿದರು. ಈ ಮೊದಲು ಮೆದುವಾಗಿದ್ದ ಅವರ ದನಿಯಿಂದ ತುಸು ಬಿಗಿಯಾದ ಮಾತುಗಳು ತೇಲಿಬಂದವು. “ಈ ಸಲ ನೀನು ಮತ್ತೆ ಕಾಂಗ್ರೆಸ್ ಮೇಲೆ ಮುನಿಸಿಕೊಂಡೆ. ನನ್ನ ಹುಡುಗನ ಗುಣ ಎಂತದ್ದು ಅಂತ ಗೊತ್ತಿದ್ದರಿಂದ ನಾನು ಮತ್ತೆ ನಿನ್ನನ್ನು ಹತ್ತಿರಕ್ಕೆ ಸೆಳೆದುಕೊಂಡೆ. ಅದಕ್ಕೇ ಅಲ್ಲವೇ, ಕಾಂಗ್ರೆಸ್ ಮೇಲೆ ಬೇಸರಿಸಿಕೊಂಡ ನಿನ್ನನ್ನು ನಾನೇ ಸಂತೈಸಿ ನಮ್ಮ ಬೀಗ ತಮ್ಮಣ್ಣನ ಕಾರಿನಲ್ಲಿ ಮತದಾನ ಮಾಡಲು ಕಳಿಸಿದ್ದು. ನನ್ನ ಲೆಕ್ಕಾಚಾರ ಸರಿ ಇದ್ದಿದ್ದರೆ, ನಿನ್ನನ್ನ ಈ ಸಲ ಮಂಡ್ಯದ ಪಾರ್ಲಿಮೆಂಟ್ ಚುನಾವಣೆಗೆ ನನ್ನ ಪಾರ್ಟಿಯಿಂದ ನಿಲ್ಲಿಸೋಣ ಅಂದುಕೊಂಡಿದ್ದೆ. ಆದರೆ ವಿಧಿಯಾಟ, ನೀನೇ ನಮ್ಮನ್ನೆಲ್ಲ ಬಿಟ್ಟು ಹೋದೆ”. ಮತ್ತೆ ದೇವೇಗೌಡರ ಕಣ್ಣುಗಳು ನೀರಾಡಿದವು.

ಟವೆಲ್ಲಿನಿಂದ ಕಣ್ಣೊರೆಸಿಕೊಂಡ ಅವರು ಕ್ಷಣ ತಡೆದು ಇನ್ನಷ್ಟು ನಿಖರವಾಗಿ ಮಾತು ಮುಂದುವರೆಸಿದರು, “ನೀನು ಅಗಲಿದ ನೋವು ನಮ್ಮನ್ನೆಲ್ಲ ತುಂಬಾ ಕಾಡಿತು. ಕುಮಾರಸ್ವಾಮಿಯವರಂತೂ ಹಾರ್ಟ್ ಪೇಶೆಂಟಾಗಿದ್ದ್ರೂ ಒಡಹುಟ್ಟಿದ ಸೋದರನಂತೆ ಮುಂದೆ ನಿಂತು ಅಂತ್ಯಸಂಸ್ಕಾರ ಮಾಡಿದರು. ನನಗಂತೂ ಮೊಮ್ಮಗ ನಿಖಿಲ್ ರವರ ಮುಖದಲ್ಲಿ ನೀನೇ ಎದ್ದು ಬಂದಂತಾಗುತ್ತಿತ್ತು. ಅವರೂ ನಿನ್ನಂತೆಯೇ ಸಿನಿಮಾ ಸ್ಟಾರು. ನಿಖಿಲ್ ರವರನ್ನು ನೋಡಿದಾಗಲೆಲ್ಲ ನಿನ್ನದೇ ನೆನಪಾಗುತ್ತಿತ್ತು. ಅದಕ್ಕೆ ಅವತ್ತೇ ಡಿಸೈಡ್ ಮಾಡಿದೆ, ನೀನು ಪ್ರತಿನಿಧಿಸುತ್ತಿದ್ದ ಮಂಡ್ಯದಲ್ಲೇ ಅವರನ್ನು ಎಲೆಕ್ಷನ್ನಿಗೆ ನಿಲ್ಲಿಸಿ, ಅಂಬಿ ಇಲ್ಲದ ಕೊರಗು ನೀಗಿಕೊಳ್ಳೋಣ ಅಂತ!”.

ದೇವೇಗೌಡರ ಮಾತು ಕೇಳಿ ನನಗೆ ಶಾಕ್ ಆಯ್ತು! ಹಾಗಾದ್ರೆ, ನಿಖಿಲ್ ನನ್ನು ಮಂಡ್ಯದ ಚಕ್ರವ್ಯೂಹದೊಳಕ್ಕೆ ತಳ್ಳಿದ್ದು ಕುಟುಂಬ ರಾಜಕಾರಣದ ವಿಸ್ತರಣೆಯ ಭಾಗವಾಗಿ ಅಲ್ಲ, ಅಂಬಿ ಇಲ್ಲದ ಕೊರಗನ್ನು ನಿಖಿಲ್ ಮೂಲಕ ತುಂಬಲು..!!!! ಅಯ್ಯಯ್ಯೋ ಇಂಥಾ ಪುಣ್ಯಾತ್ಮನನ್ನ ತಪ್ಪಾಗಿ ತಿಳಿದುಬಿಟ್ಟಿದ್ದೆನ್ನಲ್ಲಾ ಅಂತ ವಿಪರೀತ ಸಂಕಟವಾಯ್ತು. ಜೊತೆಗೆ ದೇವೇಗೌಡರ ಮೇಲೆ ಗೌರವವೂ ಹೆಚ್ಚಾಯ್ತು. ಅಷ್ಟರೊಳಗೆ ಮತ್ತೆ ದೇವೇಗೌಡರ ಮಾತುಗಳು ಶುರುವಾಗಿದ್ದವು, “ಆದ್ರೆ ಇದನ್ನು ನನ್ನ ಮಗಳು ಸುಮಲತಾ ಅರ್ಥಾನೆ ಮಾಡಿಕೊಳ್ಳಲಿಲ್ಲ. ಪಾಪಾ, ಆಕೆಯಾದ್ರು ಏನು ಮಾಡುವಳು. ಸುತ್ತವರೆದಿರುವ ಮೀರ್ ಸಾದಿಕ್.ಗಳ ಮಾತು ಕೇಳಿ ಹಾಗೆ ಮಾಡ್ತಿದಾಳೆ. ನನಗಂತೂ ಸುಮಲತಾ ಮೇಲೆ ಸ್ವಲ್ಪವೂ ಬೇಸರವಿಲ್ಲ. ನನ್ನ ಮಕ್ಕಳಾದ ಕುಮಾರಸ್ವಾಮಿಯವರು ಮತ್ತು ರೇವಣ್ಣನವರ ಮೇಲಿಗಿಂತ ಜಾಸ್ತಿ ಪ್ರೀತಿ ಇದೆ. ಆದರೆ ನಿನಗೇ ಗೊತ್ತಲ್ಲವಾ ಈ ಹಾಳಾದ ರಾಜಕಾರಣದಲ್ಲಿ ಅದನ್ನೆಲ್ಲ ತೋರಿಸಿಕೊಳ್ಳಲು ಆಗುತ್ತಿಲ್ಲ. ಒಂದಲ್ಲ ಒಂದು ದಿನ  ಅರ್ಥವಾಗುತ್ತೆ. ಒಂದಂತೂ ಸತ್ಯ, ನನ್ನ ಮಗ ರೇವಣ್ಣನವರು ಅದ್ಯಾವುದೋ ಆತುರದಲ್ಲಿ ಆ ಮಗಳು ಸುಮಲತಾಗೆ ‘ಗಂಡ ಸತ್ತು ಆರು ತಿಂಗಳು ಕಳೆದಿಲ್ಲ, ಅಷ್ಟರಲ್ಲೇ ರಾಜಕೀಯ ಬೇಕಿತ್ತಾ?’ ಅಂತ ಕೇಳಿದ್ದು ನನಗೆ ತುಂಬಾನೇ ದುಃಖ ಉಂಟುಮಾಡಿದೆ. ಅದಕ್ಕೆ ನಾನೇ ಖುದ್ದಾಗಿ ಕಿವಿಹಿಂಡಿ ಬುದ್ದಿ ಹೇಳಿದೆ ನಮ್ಮ ಪಾರ್ಟಿ ಪ್ರೆಸಿಡೆಂಟು ಎಚ್.ವಿಶ್ವನಾಥರದ್ದು, ಕೊನೆಗೆ ಅವರಿಂದಲೇ ರೇವಣ್ಣನವರ ಪರವಾಗಿ ಕ್ಷಮೆಯನ್ನೂ ಕೇಳಿಸಿದ್ದೇನೆ”.

ನನಗೇ ಗೊತ್ತಿಲ್ಲದೆ ಈಗ ನನ್ನ ಕಣ್ಣಾಲಿಗಳಲ್ಲೂ ನೀರು ಜಿನುಗ ತೊಡಗಿದವು. ದೇವೇಗೌಡರ ಮಮಕಾರ ಕಂಡು ಕರಗಿಹೋದೆ.  ದೇವೇಗೌಡರು ಈಗ ಶಪಥಗೈಯ್ಯುವ ದನಿಯಲ್ಲಿ ಹೂಂಕರಿಸಿದರು, “ಇಲ್ಲಾ ಅಂಬಿ, ನಿನಗಿಂತ ನನ್ನ ಮೊಮ್ಮಗನ ಎಲೆಕ್ಷನ್ ದೊಡ್ಡದಲ್ಲ. ಅದಕ್ಕಿಂತಲೂ ಮುಖ್ಯವಾಗಿ, ಎಷ್ಟೇ ಬಾರಿ ಪಕ್ಷಾಂತರ ಮಾಡಿದರು ಕಾಂಗ್ರೆಸ್-ಜನತಾದಳ ನಡುವೆ ಓಡಾಡಿದೆಯೇ ವಿನಾಃ ಆ ಕೋಮುವಾದಿ ಬಿಜೆಪಿಯತ್ತ ತಲೆ ಹಾಕದ ನಿನ್ನ ಸಿದ್ಧಾಂತ ಕಾಯುವುದು ನನ್ನ ಧರ್ಮ ಅನ್ನಿಸುತ್ತಿದೆ. ಇವತ್ತು ಅದೇ ಬಿಜೆಪಿಯವರು ಮಗಳು ಸುಮಲತಾಗೆ ಬೆಂಬಲ ನೀಡುವ ನೆಪದಲ್ಲಿ ತಮ್ಮ ಕೈಗೊಂಬೆ ಮಾಡಲು ಯತ್ನಿಸುತ್ತಿದ್ದಾರೆ. ಅವರ ಆ ಆಸೆ ಈಡೇರಲು ನಾನು ಬಿಡುವುದಿಲ್ಲ. ನಿನ್ನ ಆತ್ಮ ಪರಿತಪಿಸುವುದನ್ನು ನಾನು ನೋಡಲಾರೆ. ಅದಕ್ಕೇ ಇವತ್ತು ರಾಜಾರೋಷವಾಗಿ ಜನರ ಮುಂದೆ ಘೋಷಿಸಿದ್ದೇನೆ ‘ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮುಗಿಸಿಯೇ ನಾನು ಹೋಗೋದು’ ಅಂತ. ಅದರ ಮೊದಲ ಹೆಜ್ಜೆಯನ್ನು ನಿನ್ನ ಪ್ರೀತಿಯ ಮಂಡ್ಯದಿಂದಲೇ ಶುರು ಮಾಡ್ತೀನಿ ಅಂಬಿ. ನನ್ನ ಮೊಮ್ಮಗನ ನಾಮಪತ್ರವನ್ನ ವಾಪಾಸು ಪಡೆದು, ಮಗಳು ಸುಮಲತಾ ಅವಿರೋಧವಾಗಿ ಆಯ್ಕೆ ಆಗುವಂತೆ ಮಾಡುತ್ತೇನೆ. ಕೋಮುವಾದಿ ಬಿಜೆಪಿಗಳಿಗೆ ಇಲ್ಲಿಂದಲೇ ಶಾಕ್ ಟ್ರೀಟ್ ಮೆಂಟ್ ಶುರು ಮಾಡ್ತೀನಿ. ಮಂಡ್ಯದಂತಹ ಹೊಸ ಜಾಗದಲ್ಲಿ ಬಿಜೆಪಿ ಬೇರೂರಲು ಬಿಡುವುದಿಲ್ಲ. ಇದು ನನ್ನ ಶಪಥ!”

ಗೌಡರ ಶಪಥ ಕೇಳಿ ನನ್ನ ಮೈ ರೋಮಗಳೆಲ್ಲ ಎದ್ದು ನಿಂತವು, ಎದೆ ಬಡಿತ ಅಂಕೆಗೇ  ಸಿಗದಷ್ಟು ಡಬಗುಟ್ಟಲು ಶುರುವಾಯ್ತು, ಮೈಯಲ್ಲೆಲ್ಲ ಬೆವರು ಬಸಿಯತೊಡಗಿತು. ಕಣ್ಮುಚ್ಚಿ, ಜೋರಾಗಿ ಉಸಿರು ಒಳಗೆಳೆದುಕೊಂಡು, ದೇವೇಗೌಡರಿಗೆ ಗಟ್ಟಿಯಾಗಿ ಜೈಕಾರ ಕೂಗಲು ಶುರು ಮಾಡಿದೆ.

ಛಟೀರ್…!

ಕೆನ್ನೆಯ ಮೇಲೆ ಏಟೊಂದು ಬಿತ್ತು. ರಾತ್ರಿ ಮಲಗಿದ ಹಾಸಿಗೆಯಲ್ಲೇ ನಾನಿದ್ದೆ. ಪಕ್ಕದಲ್ಲಿ ಹೆಂಡತಿ ಗೊಣಗುತ್ತಾ ಕೂತಿದ್ದಳು “ಹಗಲೆಲ್ಲ ಕೆಲ್ಸ ಮಾಡಿ ಸುಸ್ತಾಗಿ ರಾತ್ರಿ ನೆಮ್ದಿಯಿಂದ ಮಲಗೋಣ ಅಂದ್ರೆ, ದರಿದ್ರ, ನಿಮ್ಮದೊಂದು ಕಾಟ ನಮಿಗೆ. ನಿಮ್ ಜರ್ನಲಿಸ್ಟ್ ಬುದ್ದೀನ ಅಲ್ಲೇ ಆಫೀಸ್ನಲ್ಲಿ ಬಿಟ್ಟು ಬರೋಕೆ ಆಗಲ್ವಾ. ಹೀಗೆ ಕನಸ್ನಲ್ಲೂ ಕನವರಿಸ್ಕೊಂಡು ಯಾಕ್ರೀ ಪ್ರಾಣ ತಿಂತೀರಾ….?”

“ಹ್ಞಾಂ……!!!!”

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...