Homeಚಳವಳಿಮೆಟ್ರೊ ಸ್ಮಾರ್ಟ್ ಕಾರ್ಡ್‍ನಲ್ಲಿ ಕನಿಷ್ಠ 50ರೂ ಠೇವಣಿ ಹಿಂದಿನ ಹುನ್ನಾರಗಳೇನು?

ಮೆಟ್ರೊ ಸ್ಮಾರ್ಟ್ ಕಾರ್ಡ್‍ನಲ್ಲಿ ಕನಿಷ್ಠ 50ರೂ ಠೇವಣಿ ಹಿಂದಿನ ಹುನ್ನಾರಗಳೇನು?

- Advertisement -
- Advertisement -

| ಮುತ್ತುರಾಜು |

ದಿನಾಂಕ 27-03-2019 ರಿಂದ ಬೆಂಗಳೂರು ಮೆಟ್ರೊ ಅಧಿಕಾರಿಗಳು ಯಾವುದೇ ಪೂರ್ವ ಸೂಚನೆ ಇಲ್ಲದೆ, ಸಮರ್ಪಕ ಮಾಹಿತಿ ಕೊಡದೆ, ಸಾರ್ವಜನಿಕರ ಆಕ್ಷೇಪ ಕೇಳದೆ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಟ 50 ರೂಪಾಯಿ ಹಣ ಮೆಟ್ರೊ ಪ್ರವೇಶಕ್ಕೆ ಇಟ್ಟುಕೊಳ್ಳಬೇಕು ಅಂತ ಆದೇಶ ಮಾಡಿದ್ದಾರೆ. ಮುಂಚೆ  ಕನಿಷ್ಠ 10 ರೂ ಇದ್ದರೂ ಕೂಡ ಪ್ರವೇಶ ಸಾಧ್ಯವಿತ್ತು. ಆದರೆ ಈಗ ನಿಮ್ಮ ಸ್ಮಾರ್ಟ್ ಕಾರ್ಡ್‍ನಲ್ಲಿ 49 ರೂಗಳಿದ್ದರೂ, ನೀವು ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಿದ್ದರೂ (8.50ರೂ ದರ) ನಿಮಗೆ ಪ್ರವೇಶ ಸಿಗುವುದಿಲ್ಲ. ನೀವು ಮತ್ತೆ ಕನಿಷ್ಠ 50 ರೂಗಳನ್ನು ರೀಚಾರ್ಜ್ ಮಾಡಿಸಲೇಬೇಕು. ದೇಶದ ಯಾವ ಮೆಟ್ರೊದಲ್ಲಿಯೂ ಇಲ್ಲದ ಈ ನಿಯಮವನ್ನು ಬೆಂಗಳೂರು ಮೆಟ್ರೊ ಅಧಿಕಾರಿಗಳು ಜಾರಿ ಮಾಡಿದ್ದಾರೆ.

ಮೇಲ್ನೋಟಕ್ಕೆ ಅಸಂಬದ್ಧ ಎನ್ನಿಸುವ ಈ ನಿರ್ಧಾರದ ವಿರುದ್ಧ ಎಂತವರಿಗೂ ಸಿಟ್ಟು ಬರುತ್ತದೆ. ಹಾಗೆಯೇ ಹಲವು ಪ್ರಯಾಣಿಕರು ಈ ಹೊಸ ನಿಯಮದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕೃಷಿಕ್ ಎ.ವಿ ಎನ್ನುವ ಸಾಮಾಜಿಕ ಕಾರ್ಯಕರ್ತನೊಬ್ಬ ಇದರ ವಿರುದ್ಧ ಸತತ ಎರಡು ದಿನಗಳ ಕಾಲ ಹೋರಾಟ ಮುಂದುವರೆಸಿದ್ದಾರೆ. ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯ ಮೆಟ್ರೊ ಹೊರಗಡೆ ಗಂಟೆಗಟ್ಟಲೇ ಪ್ಲೇಕಾರ್ಡ್ ಹಿಡಿದು ಪ್ರತಿಭಟಿಸಿದ್ದಲ್ಲದೇ 300ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ ಪಡೆದು ಸಹಿ ಸಂಗ್ರಯ ಅಭಿಯಾನ ಕೂಡ ಮಾಡಿದ್ದಾರೆ. ಪೋಲೀಸರು ಇವರನ್ನು ಬಂಧಿಸಿ ಬಿಡುಗಡೆ ಮಾಡಿದ ನಂತರ ತಮ್ಮ ಹೋರಾಟವನ್ನು ಟೌನ್ ಕಡೆಗೆ ತಿರುಗಿಸಿ ಅಲ್ಲಿಯೂ ಪ್ರತಿಭಟನೆ ನಡೆಸಿದ್ದಾರೆ.  ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಮತ್ತು ಕೆಲ ಸಾರ್ವಜನಿಕರು ಇದಕ್ಕೆ ಸಾಥ್ ನೀಡಿದ್ದಾರೆ.

ಜನರಿಗೆ ತೊಂದರೆಯಾಗುವ ಈ ನಿರ್ಧಾರವನ್ನು ಮೆಟ್ರೊ ಏಕೆ ತೆಗೆದುಕೊಂಡಿತ್ತು ಎಂದು ಹುಡುಕುತ್ತಾ ಹೋದರೆ ಇದರ ಹಿಂದಿನ ಹುನ್ನಾರಗಳು ಒಂದೊಂದೆ ತೆರೆದುಕೊಳ್ಳುತ್ತಿವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ ಪ್ರತಿಯೊಬ್ಬ ಪ್ರಯಾಣಿಕರು ಮೆಟ್ರೊ ಸ್ಮಾರ್ಟ್ ಕಾರ್ಡ್ ಖರೀದಿಸುವಾಗಲೇ 50ರೂಗಳನ್ನು ಕಟ್ಟಿರುತ್ತಾರೆ. ಆ ಹಣ ವಾಪಸ್ ಬರುವುದಿಲ್ಲ. 15 ಲಕ್ಷಕ್ಕೂ ಹೆಚ್ಚು ಮೆಟ್ರೊ ಕಾರ್ಡುಗಳು ಈಗಾಗಲೇ ವಿತರಣೆಯಾಗಿವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. 15 ಲಕ್ಷ * 50 ರೂ ಎಂದರೂ 7.5 ಕೋಟಿಯಷ್ಟು ದೊಡ್ಡ ಮೊತ್ತವಾಗುತ್ತದೆ. ಈಗ ಅನಿವಾರ್ಯವಾಗಿ ಮತ್ತೆ 50 ರೂ ಠೇವಣಿ ಇಡಬೇಕೆಂದರೆ ಮತ್ತೆ 7.5 ಕೋಟಿ ಹಣ ಕೆಲವೇ ದಿನಗಳಲ್ಲಿ ಮೆಟ್ರೊ ಪಾಲಾಗುತ್ತದೆ. ಈ ಹಣವೂ ಸಹ ಪ್ರಯಾಣಿಕರಿಗೆ ವಾಪಸ್ ಹೋಗುವುದಿಲ್ಲ. ಇಷ್ಟು ಹಣ ಒಮ್ಮೆಲೆ ಸಿಗುತ್ತದೆ ಎಂದರೆ ಬಿಡುವವರ್ಯಾರು ಹೇಳಿ.?

ಇಷ್ಟೊಂದು ದೊಡ್ಡ ಮೊತ್ತವನ್ನು ಮೆಟ್ರೋ ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ಅಥವಾ ಏಳುವರೆ ಕೋಟಿ ರೂಗಳನ್ನು ಮೆಟ್ರೊದವರು ತಿಂಗಳಿಗೆ ಕೇವಲ 3% ಬಡ್ಡಿಯಂತೆ ಸಾಲ ಕೊಟ್ಟರೂ ಸಾಕು ಎಷ್ಟಾಗುತ್ತದೆ ಲೆಕ್ಕ ಹಾಕಿ. ಪ್ರತಿ ತಿಂಗಳು ಅವರಿಗೆ 22.5 ಲಕ್ಷ ಬಡ್ಡಿ ಸಿಗುತ್ತದೆ ಎಂದರೆ ನೀವು ನಂಬಲೇಬೇಕು. ಈಗಾಗಲೇ  ಭಾರತದಲ್ಲಿಯೇ ಮೆಟ್ರೊ ದರ ಅತ್ಯಂತ ಹೆಚ್ಚು ಬೆಂಗಳೂರಿನಲ್ಲಿದೆ. ಇನ್ನು ದರ ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದು ಈ ರೀತಿಯ ಅಡ್ಡ ದಾರಿಗಳನ್ನು ಮೆಟ್ರೊದವರು ಹುಡುಕಿಕೊಂಡು ಜನಸಾಮಾನ್ಯರಿಂದ ಲೂಟಿ ಮಾಡಲಾಗುತ್ತಿದೆ. ಮೆಟ್ರೊ ಪ್ರಯಾಣಿಕರು ಅಸಂಘಟಿತರಾಗಿರುವವರು. ಹಾಗಾಗಿ ಇದರ ವಿರುದ್ಧ ಸಂಘಟಿತ ಹೋರಾಟ ಸಾಧ್ಯವಿಲ್ಲ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ, ಬಹುತೇಕರು ಅಯ್ಯೋ 50ರೂ ತಾನೇ ಎಂದು ಸುಮ್ಮನಾಗಬೇಕಾದ ಪರಿಸ್ಥಿತಿ ಇರುವುದರಿಂದಲೇ ಮೆಟ್ರೊ ಈ ಜನವಿರೋಧಿ ನಿರ್ಧಾರವನ್ನು ತರಲು ಸಾಧ್ಯವಾಗಿದೆ.

ಈ ರೀತಿಯ ವಂಚನೆ ಮೆಟ್ರೊದಲ್ಲಿ ಮಾತ್ರವಲ್ಲಿ ಹಲವು ರಂಗಗಳಲ್ಲಿಯೂ ನಡೆಯುತ್ತಿದೆ. ಸ್ನ್ಯಾಪ್‍ಡೀಲ್ ಥರದ ಆನ್‍ಲೈನ್ ಮಾರಟಾಗಾರರು ಸಹ ಹಲವು ಬೆಲೆ ಬಾಳುವ ವಸ್ತುಗಳಿಗೆ ಶೇ.90% ರಷ್ಟು ರಿಯಾಯಿತಿ ಘೋಷಿಸುತ್ತಿತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಅದನ್ನು ನೋಡಿದ್ದೆ ತಡ ಇಷ್ಟೊಂದು ಕಡಿಮೆ ಬೆಲೆಯೇ, ನಮಗೊಂದು ಇರಲಿ ಎಂದು ಬುಕ್ ಮಾಡುತ್ತಾರೆ. ಕ್ಯಾಶ್ ಆನ್ ಡಿಲೆವರಿ ಅದು ತೆಗೆದುಕೊಳ್ಳದೇ ಕಾರ್ಡ್/ನೆಟ್ ಪೇಮೆಂಟ್ ಮಾಡಬೇಕಾಗುತ್ತದೆ. ಈ ರೀತಿಯಾಗಿ 500/- 1000/- ರೂಗಳಂತೆ ಸಾವಿರಾರು ಜನ ಆರ್ಡರ್ ಮಾಡಿದರೂ ಸಾಕು ಅದು ಕೋಟಿಗಟ್ಟಲೇ ಹಣ ಅವರ ಬಳಿ ಸಂಗ್ರಹವಾಗುತ್ತದೆ. 10-15 ದಿನ ಕಳೆದ ನಂತರ ಕಂಪನಿ ಹಲವು ಕಾರಣಗಳನ್ನು ಕೊಟ್ಟು ಆರ್ಡರ್ ಕ್ಯಾನ್ಸಲ್ ಮಾಡುತ್ತದೆ ಮತ್ತು ಅದಾದ ಎರಡು ಮೂರು ದಿನಗಳ ನಂತರ ಹಣವನ್ನು ಗ್ರಾಹಕರಿಗೆ ವಾಪಸ್ ಮಾಡುತ್ತದೆ. ಗ್ರಾಹಕರು ಅಬ್ಬ ಸದ್ಯ ನಮ್ಮ ಹಣ ವಾಪಸ್ ಬಂತಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ. ಈ ಚಕ್ರ ಹೀಗೆ ಸುತ್ತಿತ್ತಿದ್ದರೆ ಕಂಪನಿ ಬಳಿ ಸದಾ ಕೋಟಿಗಟ್ಟಲೇ ಹಣ ಇದ್ದೆ ಇರುತ್ತದೆ. ಅದನ್ನು ಅವರು ಎಲ್ಲಾದರೂ ಹೂಡಿಕೆ ಮಾಡಿ ಅದರಿಂದ ಲಾಭ ಗಳಿಸುತ್ತಿರುತ್ತಾರೆ.

ನಿಮಗೆಲ್ಲಾ ನೆನಪಿದೆಯೇ? ಕೇವಲ 251ರೂಗಳಿಗೆ ಫ್ರೀಡಂ251 ಎಂಬ ಸ್ಮಾರ್ಟ್ ಫೋನ್ ಸಿಗುತ್ತದೆ ಈಗಲೇ ಬುಕ್ ಮಾಡಿ ಎಂಬ ಜಾಹಿರಾತು ಎಲ್ಲೆಡೆ ಹರಿದಾಡಿತು. ಆರ್ಡರ್ ಓಪನ್ ಮಾಡಿದ ಕೆಲವೆ ಸೆಕೆಂಡ್‍ಗಳಲ್ಲಿ  ಸೈಟ್ ಗೆ 6 ಲಕ್ಷಕ್ಕೂ ಅಧಿಕ ಹಿಟ್ಸ್‍ ಗಳು ಬಂದಿದ್ದವು. ಸುಮಾರು ಏಳುವರೆ ಕೋಟಿ ಜನ ಬುಕ್ ಮಾಡಿದ್ದರು. ಅದರಲ್ಲಿ ಕೆಲವರು ಮುಂಗಡ ಹಣ ಕೊಟ್ಟು ಬುಕ್ ಮಾಡಿದ್ದರೆ ಇನ್ನು ಕೆಲವರು ಕ್ಯಾಶ್ ಆನ್ ಡಿಲೆವರಿ ಮಾಡಿದ್ದರು. ರಿಂಗಿಂಗ್ ಬೆಲ್ಸ್ ಎಂಬ ಕಂಪನಿ ಈ ಬಳಾಂಗ್ ಬಿಟ್ಟಿತ್ತು. ಕಂಪನಿಗೆ ಮುಖ್ಯಸ್ಥ ಮೋಹಿತ್ ಗೋಯಲ್ ನರೇಂದ್ರ ಮೋದಿಯವರ ಹೆಸರೇಳಿಕೊಂಡು ಇಂತಹ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದ. ಈಗ ಯಾರಿಗಾದರೂ ಆ ಮೊಬೈಲ್ ತಲುಪಿತ ಎಂದು ನೋಡಿದರೆ ಇಲ್ಲ ಎಂಬ ಉತ್ತರ ಬರುತ್ತದೆ. ಹಣವೂ ಸಹ ವಾಪಸ್ ಬಂದಿಲ್ಲ. ಈ ರೀತಿ ಬಹಿರಂಗವಾಗಿ ಜನರನ್ನು ಮೋಸ ಮಾಡುವು ದೊಡ್ಡ ಜಾಲವಿದೆ.

ಈಗ ಮೆಟ್ರೊ ಕಥೆಗೆ ಮತ್ತೆ ಬರೋಣ. ಇದು ನೇರವಾಗಿಯೇ ಹಲವು ನಿಯಮಗಳ ಹೆಸರಿನಲ್ಲಿ ನಡೆಯುವ ಲೂಟಿ ಅಷ್ಟೇ. ಮೆಂಟೇನೆನ್ಸ್‍ ಗಾಗಿ ಎಂದು ಅವರು ಸಬೂಬು ಹೇಳಿದರೂ, ಸಾವಿರಾರು ಕೋಟಿ ಹೂಡಿಕೆ ಮಾಡಿರುವ ಮೆಟ್ರೊಗೆ ಏಳೂವರೆ ಕೋಟೆ ಹೆಚ್ಚಿನ ಹೊರೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಇಷ್ಟು ದೊಡ್ಡ ಮಟ್ಟದ ವಿರೋಧ ಬರುತ್ತದೆ ಎಂದು ಸ್ವತಃ ಮೆಟ್ರೊದವರಿಗೆ ಅನ್ನಿಸಿರಲಿಲ್ಲ. ಈಗ ಪ್ರತಿಭಟನೆಯ ಕೂಗು ಡಿಸಿಎಂ ಪರಮೇಶ್ವರ್‍ ರನ್ನು ಮುಟ್ಟಿದೆ. ಚುನಾವಣಾ ಸಂದರ್ಭದಲ್ಲಿ ಹೊಸ ನಿರ್ಧಾರ ಬೇಡವಾಗಿತ್ತು ಎಂದು ಮೆಟ್ರೊ ಅಧಿಕಾರಿಗಳಿಗೆ ಹೇಳಿದ್ದಾರಂತೆ. ಇದು ಸಾಧ್ಯವಾಗಲು ಹೋರಾಟ ಮತ್ತಷ್ಟು ಜೋರಾಗಬೇಕಿದೆ ಅಷ್ಟೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ…..’,: ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿವರಿಸಿ ಪತ್ರ...

0
ಕಾಂಗ್ರೆಸ್‌ ಪ್ರಣಾಳಿಕೆಯ ಬಗ್ಗೆ ಮೋದಿ, ಅಮಿತ್‌ ಶಾ ಚುನಾವಣಾ ಭಾಷಣದಲ್ಲಿ ಸುಳ್ಳು ಆಪಾದನೆ ಮಾಡುತ್ತಿರುವ ಮಧ್ಯೆ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಚರ್ಚೆಗೆ ನರೇಂದ್ರ ಮೋದಿ ಅಥವಾ ಅವರಿಂದ ನಿಯೋಜಿಸಲ್ಪಟ್ಟ ಯಾರಾದರು ಬನ್ನಿ ಎಂದು...