ಕಳೆದ 30 ದಿನದಿಂದ ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಆಂದೋಲನವನ್ನು ಇನ್ನೂ ತೀವ್ರಗೊಳಿಸಲು ತೀರ್ಮಾನಿಸಿದ್ದು, ರೈತ ಸಂಘಗಳ ಸದಸ್ಯರು ಶುಕ್ರವಾರ ಬೆಳಿಗ್ಗೆ ಹರಿಯಾಣದಲ್ಲಿ ಹಲವಾರು ಟೋಲ್ ಪ್ಲಾಜಾಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಕಳೆದ ನವೆಂಬರ್ 27 ರಿಂದ ಮೂರು ದಿನಗಳವರೆಗೆ ದೆಹಲಿ- ಹರಿಯಾಣ ಗಡಿಯ ಎಲ್ಲಾ ಟೋಲ್ ಪ್ಲಾಜಾಗಳನ್ನು ವಾಹನಗಳಿಗೆ ಉಚಿತವಾಗಿಸಲು ರೈತರು ಕರೆ ನೀಡಿದ್ದರು.
ಈಗಾಗಲೇ ದೆಹಲಿಯನ್ನು ಬೇರೆ ಬೇರೆ ಉತ್ತರದ ರಾಜ್ಯಗಳೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 44 ರಲ್ಲಿರುವ ಕಾರ್ನಾಲ್ನಲ್ಲಿರುವ ಬಸ್ತಾರಾ ಟೋಲ್ ಪ್ಲಾಜಾ, ಅಸ್ಸಂಧ್-ಕರ್ನಾಲ್ ಹೆದ್ದಾರಿಯಲ್ಲಿನ ಗುಲ್ಲರ್ಪುರ ಟೋಲ್ ಪ್ಲಾಜಾ ಮತ್ತು ಹಿಸಾರ್-ಚಂಡೀಗಡ ಹೆದ್ದಾರಿಯಲ್ಲಿರುವ ಕುರುಕ್ಷೇತ್ರದ ಥೋನಾ ಟೋಲ್ ಪ್ಲಾಜಾದಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ರೈತರು ಬಲವಂತವಾಗಿ ಸರಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ತೆರೆದ ಪಾಣಿಪತ್ ಟೋಲ್ ಪ್ಲಾಜಾ ಮತ್ತು ಪಾಣಿಪತ್-ರೋಹ್ಟಕ್ ಹೆದ್ದಾರಿಯ ದಹಾರ್ ಟೋಲ್ ಪ್ಲಾಜಾವನ್ನು ಸರಿಸಲು ರೈತರ ಸಂಘದ ಮುಖಂಡರು ಯೋಜಿಸುತ್ತಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು
ಪ್ರತಿಭಟನಾ ನಿರತ ರೈತರು ಟೋಲ್ ಗೇಟ್ಗಳನ್ನು ತೆರೆಯುವಾಗ ಅಲ್ಲಿಯೇ ಇದ್ದ ಪೊಲೀಸರು ಅವರನ್ನು ತಡೆಯದೆ, ಎಲ್ಲಾ ವಾಹನಗಳ ಶುಲ್ಕ ರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಸೂಚನೆಯಂತೆ ಮುಂದಿನ ಮೂರು ದಿನಗಳವರೆಗೂ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಹರಿಯಾಣದ ಟೋಲ್ ಪ್ಲಾಜಾಗಳಿಗೆ ಭಾರತೀಯ ಕಿಸಾನ್ ಯೂನಿಯನ್ (ಚಾರುನಿ) ಅಧ್ಯಕ್ಷ ಗುರುನಮ್ ಸಿಂಗ್ ಚಾರುನಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಬೇಕು ಮತ್ತು ಯಾವುದೇ ಹಿಂಸಾಚಾರದಲ್ಲಿ ಪಾಲ್ಗೊಳ್ಳಬಾರದು ಎಂದು ಶುಕ್ರವಾರ ಬೆಳಿಗ್ಗೆ ತನ್ನ ವಿಡಿಯೋ ಸಂದೇಶದಲ್ಲಿ ಚಾರುಣಿ ರೈತರಿಗೆ ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಜಿಯೋ ಟವರ್ಗಳ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ರೈತರು
ನಿನ್ನೆ ಮೊನ್ನೆವರೆಗೂ ಅನ್ನದಾತರು. ಇಂದು ಪ್ರಶ್ನಿಸಿದ್ದಕ್ಕೆ ಭಯೋತ್ಪಾದಕರ? ಪ್ರಧಾನಿ ಮೋದಿಗೆ ರೈತರ ದಿಟ್ಟ ಪ್ರಶ್ನೆ