Homeಅಂಕಣಗಳುರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು

ರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು

ಜಾತಿ ಅಥವಾ ಕಸುಬಿನಿಂದ ತಮ್ಮನ್ನು ಗುರುತಿಸಿಕೊಳ್ಳುವಂತೆ ನ್ಯಾಯಾಧೀಶರು ಗಾಂಧೀಜಿಯನ್ನು ಕೇಳಿದರು. ’ನಾನೊಬ್ಬ ರೈತ ಮತ್ತು ನೇಕಾರ’ ಎಂದಿದ್ದರು ಗಾಂಧಿ.

- Advertisement -
- Advertisement -

ಬಿಳಿತೊಗಲಿನ ಬ್ರಿಟಿಷರಿಂದ ಚಂಪಾರಣ್ ರೈತ ಹೋರಾಟದಲ್ಲಿ ನ್ಯಾಯ ಕೇಳಿದ ಗಾಂಧಿ ಈಗ ಇಲ್ಲ. ಇದ್ದಿದ್ದರೆ ಅವರು ಕೂಡ ದೇಶದ್ರೋಹದ ಅಪಾದನೆ ಹೊತ್ತು ಜೈಲಿನಲ್ಲಿ ಕೊಳೆಯುತ್ತಿದ್ದರು.

1922ರ ಮಾರ್ಚ್ ತಿಂಗಳು. ದೇಶದ್ರೋಹದ ಆಪಾದನೆಯ ಮೇರೆಗೆ ಗಾಂಧೀಜಿಯವರನ್ನು ಬಂಧಿಸಿ ಅಹಮದಾಬಾದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಂದು ಜಾರಿಯಲ್ಲಿದ್ದ ಕಾನೂನಿನ ಪ್ರಕಾರ, ಜಾತಿ ಅಥವಾ ಕಸುಬಿನಿಂದ ತಮ್ಮನ್ನು ಗುರುತಿಸಿಕೊಳ್ಳುವಂತೆ ನ್ಯಾಯಾಧೀಶರು ಗಾಂಧೀಜಿಯನ್ನು ಕೇಳಿದರು. ’ನಾನೊಬ್ಬ ರೈತ ಮತ್ತು ನೇಕಾರ’ ಎಂದರು ಗಾಂಧಿ. ಚಕಿತಗೊಂಡ ನ್ಯಾಯಾಧೀಶ ಪುನಃ ಅದೇ ಪ್ರಶ್ನೆ ಕೇಳಿದರು. ಗಾಂಧೀ ಅದೇ ಉತ್ತರವನ್ನೂ ನೀಡಿದರು.

ತಮ್ಮ ಧಮನಿಗಳಲ್ಲಿ ಹರಿಯುತ್ತಿರುವುದು ಝಣ ಝಣ ಹಣ ಮತ್ತು ವ್ಯಾಪಾರ ಎನ್ನುತ್ತಾರೆ ಅದೇ ಗುಜರಾತಿನ ನೆಲದಲ್ಲಿ ಹುಟ್ಟಿ ಬಂದಿರುವ ಪ್ರಧಾನ ಸೇವಕ ನರೇಂದ್ರ ಮೋದಿ. ದೆಹಲಿಯ ಗಡಿಗಳ ಬಟಾಬಯಲುಗಳಲ್ಲಿ ಭಾರೀ ರೈತ ಸಮೂಹಗಳು, ನಾಲ್ಕೈದು ಡಿಗ್ರಿಗೆ ಕುಸಿದ ಎಲುಬು ಕೊರೆಯತೊಡಗಿರುವ ಥಂಡಿಯಲ್ಲಿ ಸತ್ಯಾಗ್ರಹದಲ್ಲಿ ತೊಡಗಿವೆ. ರೈತರನ್ನು ಶೋಷಣೆಯ ಬಾಣಲೆಯಿಂದ ಕಡುಶೋಷಣೆಯ ಉರಿಬೆಂಕಿಗೆ ತಳ್ಳುವ ಕರಾಳ ಕಾನೂನುಗಳನ್ನು ವಾಪಸು ಪಡೆಯಬೇಕೆಂದು ಶಾಂತಿಯುತ ಆಗ್ರಹದಲ್ಲಿ ತೊಡಗಿ ಇನ್ನೇನು ತಿಂಗಳೊಪ್ಪತ್ತು ಉರುಳಲಿದೆ. ಮಣ್ಣನ್ನು ಉತ್ತು ಅನ್ನ ಬೆಳೆದುಕೊಡುವ ರೈತ ಅಕ್ಷರಶಃ ಬೀದಿಪಾಲಾಗಿದ್ದಾನೆ. ಹೀಗಿದ್ದಾಗ ದೇಶವನ್ನು ಆಳುವ ನಾಯಕನಿಗೆ ಎದೆಯಲ್ಲಿ ನೀರಿನ ಪಸೆಯಂತಹದು ಏನಾದರೂ ಉಳಿದಿದ್ದರೆ ಆತ ನಿದ್ದೆ ನೀರಡಿಕೆಗಳನ್ನು ಕಳೆದುಕೊಳ್ಳಬೇಕು. ಆದರೆ ಪ್ರಧಾನಮಂತ್ರಿಯವರು ಸುಖದ ಸುಪ್ಪತ್ತಿಗೆಗೆ, ಆಮೋದ ಪ್ರಮೋದಗಳಿಗೆ ಯಾವ ಭಂಗವೂ ಬಂದಂತಿಲ್ಲ.

ವ್ಯವಸಾಯವೇ ಭಾರತದ ಅರ್ಥವ್ಯವಸ್ಥೆಯ ಬೆನ್ನೆಲುಬು ಎಂದಿದ್ದರು ಮಹಾತ್ಮಾ ಗಾಂಧಿ. ಈ ಮಾತುಗಳನ್ನು ಇಂದು ಕೂಡ ಹೆಚ್ಚು ಬದಲಾಯಿಸಬೇಕಿಲ್ಲ. ಬಹುದೊಡ್ಡ ಪ್ರಮಾಣದ ಜನಸಂಖ್ಯೆ ಉದ್ಯೋಗಕ್ಕಾಗಿ ಇಂದಿಗೂ ಆಧರಿಸಿರುವುದು ಕೃಷಿಯನ್ನೇ.

ಆದರೆ ಬಾಬಾಸಾಹೇಬ ಅಂಬೇಡ್ಕರ್ ಗಾಂಧೀಜಿಗಿಂತ ಭಿನ್ನ ನಿಲುವನ್ನು ಹೊಂದಿದ್ದನ್ನು ಇಲ್ಲಿ ದಾಖಲಿಸಲೇಬೇಕಿದೆ. ಅವರ ಈ ನಿಲುವು ಒಕ್ಕಲುತನದಿಂದ ದೂರವಿಟ್ಟ ಭೂವಂಚಿತ ದಲಿತ ಸಮುದಾಯಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡಿತ್ತು. ಅವರು ಪ್ರತಿಪಾದಿಸಿದ ಕೃಷಿ ನೀತಿಯಲ್ಲಿ ಜಾತಿವಿನಾಶದ ಬೀಜಗಳಿದ್ದವು. ಸಮಾಜವಾದಿ ಮೂಲದ ನಗರೀಕರಣ ಮತ್ತು ಕೈಗಾರಿಕೀಕರಣವನ್ನು ಕೃಷಿ ನೀತಿ ಒಳಗೊಳ್ಳಬೇಕು ಎಂದಿದ್ದರು. ಭೂಮಾಲೀಕನ ದರ್ಪ ಮತ್ತು ಭೂಮಿಹೀನನ ದೈನ್ಯವನ್ನು ಅಳಿಸಿ ಹಾಕುವ ಅವರ ಕೃಷಿ ನೀತಿ ಅತ್ಯಂತ ಕ್ರಾಂತಿಕಾರಿಯಾಗಿತ್ತು ಎಂದು ನೆನೆಯುತ್ತಾರೆ ಚಿಂತಕ ಶಿವಸುಂದರ್.

ಇದನ್ನೂ ಓದಿ: ‘ಕೃಷಿ ಸುಧಾರಣೆಯಲ್ಲಿ ಜಾತಿ ವಿನಾಶದ ಬೀಜಗಳಿವೆ’ – ಕೃಷಿ ಕುರಿತ ಅಂಬೇಡ್ಕರ್ ಚಿಂತನೆಗಳು

“ಭಾರೀ ಜನಸಂಖ್ಯೆ ಮತ್ತು ಅತ್ಯಲ್ಪ ಸಾಗುವಳಿ ಭೂಮಿಯ ಅರ್ಥವೇನೆಂದರೆ, ಕೃಷಿಯನ್ನು ಆಧರಿಸಿರುವ ಜನಸಂಖ್ಯೆಯ ಬಹುಪಾಲು ಕೆಲಸವಿಲ್ಲದೆ ಕಾಲಹರಣದಲ್ಲಿ ತೊಡಗುವುದು. ನಿರರ್ಥಕವಾಗಿರುವ ಈ ಅಪಾರ ಶ್ರಮವನ್ನು ಸಾರ್ಥಕ ಉತ್ಪಾದನೆಗೆ ತೊಡಗಿಸಿದರೆ ಪರಸ್ಪರರನ್ನು ಸುಲಿದು ತಿನ್ನುವುದು ನಿಲ್ಲುತ್ತದೆ. ಹೆಚ್ಚುವರಿ ಉತ್ಪಾದನೆಯೂ ಸಾಧ್ಯ. ಹೆಚ್ಚು ಉತ್ಪಾದನೆಯ ಅರ್ಥ ಹೆಚ್ಚು ಬಂಡವಾಳದ ಸೃಷ್ಟಿ. ಚುಟುಕಾಗಿ ಹೇಳಬೇಕೆಂದರೆ ಭಾರತದ ಕೈಗಾರಿಕೀಕರಣವೇ ಭಾರತದ ಕೃಷಿ ಸಮಸ್ಯೆಗಳಿಗೆ ಸಮರ್ಥ ಪರಿಹಾರ…” ಎಂದಿದ್ದರು ಬಾಬಾಸಾಹೇಬರು. ಆದರೆ ಬಾಬಾಸಾಹೇಬರ ಕಲ್ಪನೆಯ ಸಮಾಜವಾದಿ ಆಶಯದ ನಗರೀಕರಣ ಮತ್ತು ಕೈಗಾರಿಕೀಕರಣದಿಂದ ಇಂದಿನ ಭಾರತ ಬಹುದೂರ ಸಾಗಿ ಹೋಗಿದೆ.

ಬಂಡವಾಳಶಾಹಿ ಕ್ರೌರ್ಯ ಅದರ ರಕ್ತದ ಕಣಕಣಗಳಲ್ಲಿ ತುಂಬಿ ಹೋಗಿದೆ. ಭಾರತದ ರೈತಾಪಿ ಬದುಕಿನೊಂದಿಗೆ ಗಾಂಧೀಜಿಯ ಮೊದಲ ಮತ್ತು ನೇರ ಮುಖಾಮುಖಿ ಆಗಿದ್ದು ಉತ್ತರಬಿಹಾರದ ಚಂಪಾರಣ್‌ನಲ್ಲಿ. ಸಾಮ್ರಾಜ್ಯಶಾಹಿಯ ವಿರುದ್ಧ ಮುಂಬರುವ ದಶಕಗಳಲ್ಲಿ ಗಾಂಧೀಜಿ ಸಾರುವ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಮುಂತಾದ ಸ್ವಾತಂತ್ರ್ಯ ಹೋರಾಟದ ಹಲವು ಸಮರಗಳಿಗೆ ಪೂರ್ವಸಿದ್ಧತೆಯ ಕಸುವನ್ನು ನೀಡಿದ್ದು ಚಂಪಾರಣ್ ರೈತ ಹೋರಾಟ. ಸತ್ಯಾಗ್ರಹ ಎಂಬ ಗಾಂಧೀ ಹೋರಾಟದ ಪರಿಕಲ್ಪನೆಯ ಪ್ರಯೋಗಶಾಲೆಯಾಗಿದ್ದು ಇದೇ ನೀಲಿ ಸತ್ಯಾಗ್ರಹ. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತೀಯರ ಪ್ರತಿರೋಧದ ಪ್ರತೀಕವಾಯಿತು.

PC : The Irish Times

ಬ್ರಿಟನ್‌ನ ತನ್ನ ಜವಳಿ ಗಿರಣಿಗಳಿಗೆ ಕಚ್ಚಾವಸ್ತು ಪೂರೈಕೆಗಾಗಿ ನೀಲಿ ಬೆಳೆಯುವಂತೆ ಚಂಪಾರಣ್ ರೈತರನ್ನು ಬಲವಂತಪಡಿಸುತ್ತದೆ ಬ್ರಿಟಿಷ್ ಸರ್ಕಾರ. ಅದನ್ನು ತೀರಾ ಅಗ್ಗದ ದರಗಳನ್ನು ನೀಡಿ ಖರೀದಿಸುತ್ತದೆ. ತನ್ನ ಈ ಹುಕುಂಅನ್ನು ಉಲ್ಲಂಘಿಸಿದ ರೈತರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಈ ಸೀಮೆಗೆ ಭೇಟಿ ನೀಡುವ ಗಾಂಧಿ ಐದಾರು ತಿಂಗಳ ಕಾಲ ಅಲ್ಲಿಯೇ ನೆಲೆಸುತ್ತಾರೆ. ಮಣ್ಣಿನ ಮಕ್ಕಳ ವಿಶ್ವಾಸ ಸಂಪಾದಿಸುತ್ತಾರೆ. ಅವರ ಕಷ್ಟ ಕಣ್ಣೀರುಗಳನ್ನು ಅರಿಯುತ್ತಾರೆ. ಆರೇ ವಾರಗಳಲ್ಲಿ ಏಳು ಸಾವಿರ ಮಂದಿಯ ಹೇಳಿಕೆಗಳನ್ನು ಖುದ್ದು ಸಂಗ್ರಹಿಸುತ್ತಾರೆ. ಅವುಗಳನ್ನು ಆಳುವವರ ಮುಂದಿಡುತ್ತಾರೆ. ಬಿಹಾರ ಸರ್ಕಾರ ಚಂಪಾರಣ್ ಕೃಷಿ ವಿಚಾರಣಾ ಸಮಿತಿಯನ್ನು ನೇಮಕ ಮಾಡುತ್ತದೆ. ನಾಲ್ವರು ಐಸಿಎಸ್ ಅಧಿಕಾರಿಗಳು ಮತ್ತು ಗಾಂಧೀಜಿ ಸೇರಿದಂತೆ ಏಳು ಮಂದಿ ಸದಸ್ಯರು. ಕೆಲವೇ ತಿಂಗಳುಗಳಲ್ಲಿ ಈ ಸಮಿತಿ ಸಲ್ಲಿಸುವ ವರದಿ ಬಹುತೇಕ ರೈತ ಹಿತದ ಪರವಾಗಿರುತ್ತದೆ. ರೈತರ ತಲೆಯ ಮೇಲೆ ತೂಗಿದ ನೀಲಿ ಬೆಳೆಯುವ ಕಡ್ಡಾಯದ ಕತ್ತಿಯನ್ನು ನಿವಾರಿಸುತ್ತಾರೆ.

ತಮ್ಮ ಎದುರಾಳಿ ಬ್ರಿಟಿಷ್ ವಸಾಹತುಶಾಹಿಯ ಆಳ ಅಗಲಗಳ ತಿಳಿವಳಿಕೆಯನ್ನು ಗಾಂಧೀಜಿಗೆ ನೀಡಿದ ಆಂದೋಲನವಿದು. ಮುಂಬರುವ ದಶಕಗಳಲ್ಲಿ ಜನಸಮೂಹಗಳ ಮನ ಗೆಲ್ಲುವ ವಿಶ್ವಾಸವನ್ನು ಗಾಂಧೀಜಿಗೆ ನೀಡಿದ್ದು ಇದೇ ಚಂಪಾರಣ್.

ದೆಹಲಿಯ ಗಡಿಗಳಲ್ಲಿ ನಡೆದಿರುವ ರೈತ ಹೋರಾಟ ಸ್ವತಂತ್ರ ಭಾರತದ ಸರ್ವಾಧಿಕಾರಿ ಮತ್ತು ರೈತವಿರೋಧಿ ಆಡಳಿತದ ವಿರುದ್ಧ ಚಂಪಾರಣ್ ಮಾದರಿಯ ತಿಳಿವಳಿಕೆಯನ್ನೂ ಸ್ಫೂರ್ತಿ ಪ್ರೇರಣೆಗಳನ್ನು ನೀಡುತ್ತದೆಯೇ ಕಾದು ನೋಡಬೇಕಿದೆ.

ನೂರು ವರ್ಷಗಳ ಹಿಂದಿನ ಚಂಪಾರಣ್ ರೈತರ ಸ್ಥಿತಿಯೇ ಇಂದಿನ ಭಾರತದ ರೈತರ ಸ್ಥಿತಿಗತಿಯೂ ಆಗಿದೆ ಎನ್ನುತ್ತಾರೆ ಗಾಂಧೀಜಿಯ ಮೊಮ್ಮಗ ತುಷಾರ್ ಗಾಂಧಿ. ಅತಿ ದೀನ ದಲಿತ ರೈತರ ಶೋಷಣೆ ಇಂದಿಗೂ ನಿಂತಿಲ್ಲ. ಬ್ರಿಟಿಷರ ಭಾರತದಲ್ಲಿ ಲಾಭಬಡುಕತನವೇ ರೈತರ ಶೋಷಣೆಯ ಮೂಲವಾಗಿತ್ತು. ಸ್ವತಂತ್ರ ಭಾರತದಲ್ಲಿಯೂ ಈ ಸ್ಥಿತಿ ಬದಲಾಗಿಲ್ಲ. ಕಚ್ಚಾ ಉತ್ಪನ್ನವನ್ನು ಬಿಕರಿಗಿಟ್ಟ ರೈತ ಮತ್ತು ಸಿದ್ಧ ಉತ್ಪನ್ನವನ್ನು ಖರೀದಿಸುವ ಬಳಕೆದಾರ ಇಬ್ಬರ ಕಣ್ಣಿಗೂ ಸುಣ್ಣವೇ. ಬೆಣ್ಣೆ ಉಣ್ಣುವವರು ಅಂದೂ ಪೊಗದಸ್ತಾಗಿದ್ದರು, ಇಂದೂ ಪೊಗದಸ್ತಾಗೇ ಮೆರೆದಿದ್ದಾರೆ.

ನೀಲಿ ಸತ್ಯಾಗ್ರಹ ಇಂದು ಹಿಂದೆಂದಿಗಿತ ಹೆಚ್ಚು ಪ್ರಸ್ತುತ. ತುಳಿತಕ್ಕೆ ಒಳಗಾದವರಿಗೆ ಶಕ್ತಿಯನ್ನು ಕೊಟ್ಟ ಆಂದೋಲನ ಅದು. ’ನೀಲಿ ಸತ್ಯಾಗ್ರಹ’ವನ್ನು ಸ್ವತಂತ್ರ ಭಾರತದಲ್ಲಿ ಕಟ್ಟುವುದು ಬ್ರಿಟಿಷರ ಭಾರತದಲ್ಲಿ ಕಟ್ಟಿದ್ದಕ್ಕಿಂತ ಕಷ್ಟದ ಕೆಲಸ ಎಂಬುದನ್ನು ಮೋದಿ ಸರ್ಕಾರ ಮನವರಿಕೆ ಮಾಡಿಕೊಡತೊಡಗಿದೆ.

ರೈತರನ್ನು ಬಾಧಿಸುವ ಸಂಗತಿಗಳು ಅಂತಿಮವಾಗಿ ಇಡೀ ಸಮಾಜವನ್ನು ಬಾಧಿಸುತ್ತವೆ ಎಂಬ ಆಳದ ತಿಳಿವಳಿಕೆ ಗಾಂಧೀಜಿಗೆ ಇತ್ತು. ಇಂತಹ ಅರಿವಿನ ಬೀಜವನ್ನು ಮೋದಿಯವರ ಕಲ್ಲೆದೆಯಲ್ಲಿ ಬಿತ್ತಿ ಬೆಳೆಯುವ ಅಸಾಧ್ಯ ಸವಾಲನ್ನು ಇಂದಿನ ರೈತ ಆಂದೋಲನ ಎದುರಿಸಿದೆ.

ರೈತರನ್ನು ಶೋಷಿಸುವ ಚಂಪಾರಣ್‌ಗಳು ಸ್ವತಂತ್ರ ಭಾರತದಲ್ಲಿ ಇನ್ನಷ್ಟು ಹುಲುಸಾಗಿ ಬೆಳೆದಿವೆ. ಕೊಬ್ಬಿ ಹಬ್ಬಿವೆ. ನೂರಾರು ಚಂಪಾರಣ್‌ಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳತೊಡಗಿರುವ ಸಾವಿರಾರು ರೈತ ಕುಟುಂಬಗಳ ಕಷ್ಟ ಕಣ್ಣೀರುಗಳ ಕಥನಗಳನ್ನು ಆಲಿಸಲು, ಅವುಗಳನ್ನು ಕಂದು ತೊಗಲಿನ ಸಾಹೇಬರುಗಳ ಸರ್ಕಾರದ ಮುಂದಿರಿಸಿ ನ್ಯಾಯ ಕೇಳುವ ಗಾಂಧಿ ಈಗ ಇಲ್ಲ. ಇದ್ದಿದ್ದರೆ ಅವರು ಆಜೀವ ಪಯಂತ ಜೈಲಿನಲ್ಲಿ ಕೊಳೆಯುತ್ತಿದ್ದರು.


ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...