‘ಕೋವಿಡ್-19ರ ಎರಡನೇ ಅಲೆಯ ಸಂದರ್ಭದಲ್ಲಿ, ‘ಪ್ರುಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್’ ಮತ್ತು ‘ಎಲ್ಎಜೆ ಎಕ್ಸ್ಪೋರ್ಟ್ಸ್’ ಲಿಮಿಟೆಡ್ ಕಂಪನಿಗಳು ಪಿಪಿಇ ಕಿಟ್ಗಳನ್ನು ದುಬಾರಿ ಬೆಲೆಗೆ ಪೂರೈಕೆ ಮಾಡಿವೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ಏಕಸದಸ್ಯ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಿದೆ.
ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಿರುವುದಕ್ಕೆ 76,51,35,000 ರೂಪಾಯಿ ಮೊತ್ತವನ್ನು ಪ್ರುಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್ ಮತ್ತು ಎಲ್ಎಜೆ ಎಕ್ಸ್ಪೋರ್ಟ್ಸ್ ಲಿಮಿಟೆಡ್ಗೆ ಪಾವತಿಸಲು ನಿರ್ದೇಶಿಸಿದ್ದ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ಮಂಗಳವಾರ (ಫೆ.11) ನಡೆಸಿದೆ.
ಮೇಲ್ಮನವಿ ತಿದ್ದುಪಡಿ ಮಾಡಲು ಹಾಗೂ ಕೋವಿಡ್ ಹಗರಣದ ತನಿಖಾ ವರದಿ ಒಳಗೊಂಡು ಹೆಚ್ಚುವರಿ ದಾಖಲೆ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಕೆ ಮಾಡಿರುವ ಮಧ್ಯಂತರ ಅರ್ಜಿಗಳನ್ನು ಹೈಕೋರ್ಟ್ ಪುರಸ್ಕರಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯ ಪ್ರತಿಯನ್ನು ನಾಳೆಯೊಳಗೆ ಪ್ರುಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್ ಮತ್ತು ಎಲ್ಎಜೆ ಎಕ್ಸ್ಪೋರ್ಟ್ಸ್ಗೆ ನೀಡಬೇಕು. ಇದನ್ನು ಆಧರಿಸಿ ಮುಂದಿನ ವಿಚಾರಣೆ ವೇಳೆಗೆ ಪ್ರತಿವಾದಿ ಕಂಪನಿ ಪರ ವಕೀಲರು ವಾದಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ ಎಂದು ವರದಿ ತಿಳಿಸಿದೆ.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ರೊಬೆನ್ ಜಾಕಬ್ ಅವರು ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಪ್ರತಿ ಪಿಪಿಇ ಕಿಟ್ಗೆ 1,312 ರೂಪಾಯಿ ದರ ವಿಧಿಸಲಾಗಿತ್ತು. ಎರಡನೇ ಅವಧಿಯ ವೇಳೆಗೆ ಪಿಪಿಇ ಕಿಟ್ ಬೆಲೆ ಮಾರುಕಟ್ಟೆಯಲ್ಲಿ 400 ರೂಪಾಯಿ ಇದ್ದರೂ 1,312 ರೂಪಾಯಿ ದರ ವಿಧಿಸಲಾಗಿದೆ. ಇದರ ಪ್ರಕಾರ ಪ್ರತಿವಾದಿ ಕಂಪನಿಗೆ 23 ಕೋಟಿ ಪಾವತಿಸಬೇಕಿದೆ. ಆದರೆ, ಪ್ರುಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್ ಮತ್ತು ಎಲ್ಎಜೆ ಎಕ್ಸ್ಪೋರ್ಟ್ಸ್ 76 ಕೋಟಿ ರೂಪಾಯಿ ಶುಲ್ಕ ವಿಧಿಸುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ವಾದಿಸಿದ್ದಾರೆ.
ಪ್ರತಿ ಪಿಪಿಇ ಕಿಟ್ಗೆ 400 ರೂಪಾಯಿ ಮೂಲ ಬೆಲೆ ಇದ್ದರೂ ಅದನ್ನು 1,312 ರೂಪಾಯಿಗೆ ಪೂರೈಸಲಾಗಿದೆ. ಈ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತನಿಖೆ ನಡೆಸಿ ಅಕ್ರಮ ಪತ್ತೆ ಮಾಡಿದ್ದಾರೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಗರಣದ ತನಿಖೆಗೆ ರಚಿಸಲಾದ ನ್ಯಾಯಮೂರ್ತಿ ಕುನ್ಹಾ ಅವರ ನೇತೃತ್ವದ ಆಯೋಗವು ವರದಿ ನೀಡಿದೆ ಎಂದು ತಿಳಿಸಿದ್ದಾರೆ.
ನ್ಯಾಯಾಲಯ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿದೆ.
ಇದನ್ನೂ ಓದಿ : ಭದ್ರಾವತಿ | ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣ : ಎಫ್ಐಆರ್ ದಾಖಲು, ಮೂವರ ಬಂಧನ


