Homeಮುಖಪುಟಭಾರತ ಆಧ್ಯಾತ್ಮಿಕ ಗಣರಾಜ್ಯವೇ?

ಭಾರತ ಆಧ್ಯಾತ್ಮಿಕ ಗಣರಾಜ್ಯವೇ?

- Advertisement -
- Advertisement -

ಆರೆಸ್ಸೆಸ್ಸಿನ ವಕೀಲರ ಸಂಘಟನೆಯಾದ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಒಂದು ಉಪನ್ಯಾಸದಲ್ಲಿ, “1976ರಲ್ಲಿ ಭಾರತದ ಸಂವಿಧಾನದ ಪೀಠಿಕೆಯೊಳಗೆ ’ಸಮಾಜವಾದಿ’ (ಸೋಶಿಯಲಿಸ್ಟ್) ಮತ್ತು ’ಸೆಕ್ಯುಲರ್’ (ಧರ್ಮ ನಿರಪೇಕ್ಷ/ಜಾತ್ಯತೀತ ಮುಂತಾದಾಗಿ ವ್ಯಾಖ್ಯಾನಿಸಲಾಗಿದೆ. ಮುಂದೆ ಇದನ್ನು ಸೆಕ್ಯುಲರ್ ಎಂದೇ ಉಳಿಸಿಕೊಳ್ಳಲಾಗಿದೆ) ಎಂಬ ಶಬ್ದಗಳನ್ನು ಸೇರಿಸಿದುದು ಸಂವಿಧಾನದ ’ಆಧ್ಯಾತ್ಮಿಕ ವರ್ಚಸ್ಸಿನ ವಿಸ್ತಾರ’ವನ್ನು ಸಂಕುಚಿತಗೊಳಿಸಿದೆ” ಎಂದು ಜಮ್ಮು-ಕಾಶ್ಮೀರ-ಲಢಾಖ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಪಂಕಜ್ ಮಿತ್ತಲ್ ಅವರು ಹೇಳಿದರು. ದೇಶವನ್ನು ’ಭಾರತ ಆಧ್ಯಾತ್ಮಿಕ ಗಣರಾಜ್ಯ’ ಎಂದು ಕರೆಯಬೇಕು ಎಂದೂ ಅವರು ಹೇಳಿದರು.

ಸಂವಿಧಾನದೊಳಗೆ 1976ರಲ್ಲಿ ಈ ಪರಿಕಲ್ಪನೆಗಳನ್ನು ಸೇರಿಸಿದ್ದನ್ನು ನ್ಯಾ. ಮಿತ್ತಲ್ ಅವರಿಗಿಂತ ಮೊದಲೂ ಸಹ ವಿಮರ್ಶೆ ಮಾಡಿದವರಿದ್ದಾರೆ: ಈ ಪರಿಕಲ್ಪನೆಗಳನ್ನು ಸಂವಿಧಾನ ಕರ್ತರು ತಿರಸ್ಕರಿಸಿದ್ದರು, ಅವನ್ನು ಇಂದಿರಾ ಗಾಂಧಿಯವರು ’ಆಮದು’ ಮಾಡಿಕೊಂಡಿದ್ದಾರೆ – ಎನ್ನುವುದು ಅದಕ್ಕೆ ಕೊಡಲಾಗಿರುವ ಕಾರಣ. ಸೆಕ್ಯುಲರ್ ಎಂಬ ಶಬ್ದವು ಭಾರತದ ಸಂವಿಧಾನಕ್ಕೆ ಹೊರಗಿನದು ಎಂಬ ವಿಮರ್ಶೆ ತಪ್ಪು ಎಂದು ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಗಳ ವಿಶ್ಲೇಷಣೆಯ ಮೂಲಕವೂ, ಸುಪ್ರೀಂ ಕೋರ್ಟು ನೀಡಿದ ಒಂದು ತೀರ್ಪಿನ ಮೂಲಕವೂ ಈಗಾಗಲೇ ಸಾಬೀತು ಮಾಡಲಾಗಿದೆ.

ಸಂವಿಧಾನ ರಚನಾ ಸಭೆಯು ಸೆಕ್ಯುಲರ್ ಎಂಬ ಶಬ್ದವನ್ನು ಪೀಠಿಕೆಯಲ್ಲಿ ಸೇರಿಸಲು ಒಪ್ಪದೆ ಇದ್ದಾಗ್ಯೂ, ಸೆಕ್ಯುಲರಿಸಂನ ಮೂಲಭೂತ ತಳಹದಿಯಾದ, ತಾವು ನಂಬಿರುವ ಧರ್ಮವನ್ನು ಆಚರಿಸಲು ಎಲ್ಲ ವ್ಯಕ್ತಿಗಳಿಗೂ ಸ್ವಾತಂತ್ರ್ಯವಿದೆ ಹಾಗೂ ಪ್ರಭುತ್ವವು ಧರ್ಮದ ಆಧಾರದಲ್ಲಿ ಯಾವುದೇ ವ್ಯಕ್ತಿಯ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂಬ ವಿಚಾರದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂಬುದು ಅಲ್ಲಿ ಮಾತನಾಡಿದ ಅನೇಕ ಭಾಷಣಕಾರರ ಮಾತುಗಳಲ್ಲಿ ಸ್ಪಷ್ಟವಾಗಿತ್ತು. ಕೆ.ಎಂ.ಮುನ್ಷಿಯವರು ಸಭೆಯಲ್ಲಿ ಮಾತನಾಡುತ್ತಾ, ’… ನಮ್ಮ ಪ್ರಭುತ್ವಕ್ಕೆ ತನ್ನದೇ ಆದ ಒಂದು ಪ್ರಭುತ್ವ ಧರ್ಮ ಎಂಬುದು ಬಹುಶಃ ಇರಲು ಸಾಧ್ಯವಿಲ್ಲ’ ಎಂದು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ವಿಶಾಲ ಸಹಮತಿ ವ್ಯಕ್ತವಾಗಿತ್ತು.

ಎಸ್.ಆರ್.ಬೊಮ್ಮಾಯಿ ವರ್ಸಸ್ ಭಾರತ ಒಕ್ಕೂಟ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ಸೆಕ್ಯುಲರಿಸಂ ಭಾರತೀಯ ಸಂವಿಧಾನದ ಮೂಲ ಸಂರಚನೆಯೊಳಗಿನ ಒಂದು ಅವಿಭಾಜ್ಯ ಭಾಗವಾಗಿದೆ ಎಂಬ ನಿಲುವಿಗೆ ತಲುಪಿತು ಹಾಗೂ 42ನೇ ಸಂವಿಧಾನ ತಿದ್ದುಪಡಿಯು ಭಾರತದ ಸಂವಿಧಾನದಲ್ಲಿ ಅಂತರ್ಗತವಾಗಿದ್ದ ಅಂಶವನ್ನು ಪ್ರಕಟವಾಗಿ ವ್ಯಕ್ತಪಡಿಸಿದೆ ಎಂದು ಸ್ಪಷ್ಟವಾಗಿ ತೀರ್ಮಾನ ಹೇಳಿತು. ಸಂವಿಧಾನದ ಪೀಠಿಕೆಯೇ ’ಚಿಂತನೆ, ಅಭಿವ್ಯಕ್ತಿ, ವಿಶ್ವಾಸ, (ಧಾರ್ಮಿಕ) ನಂಬಿಕೆ ಹಾಗೂ ಆರಾಧನೆಗಳ ಸ್ವಾತಂತ್ರ್ಯ’ಗಳ ಕುರಿತು ಹೇಳಿರುವುದರಿಂದಲೂ, ಧರ್ಮದ ಆಧಾರದಲ್ಲಿನ ತಾರತಮ್ಯವನ್ನು ಸಂವಿಧಾನದ 15ನೇ ವಿಧಿಯು ನಿಷೇಧಿಸಿರುವುದರಿಂದಲೂ, ಸೆಕ್ಯುಲರಿಸಂ ಎಂಬುದು ನಮ್ಮ ಸಂವಿಧಾನಕ್ಕೆ ಹೊರಗಿನದು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ವಾಸ್ತವದಲ್ಲಿ, ’ಧರ್ಮದ ಆಧಾರದಲ್ಲಿನ ತಾರತಮ್ಯದ ಬಗ್ಗೆ ಸಂವಿಧಾನವು ಅಸಹ್ಯವನ್ನೇ ವ್ಯಕ್ತಪಡಿಸಿದೆ.’

ಪಂಕಜ್ ಮಿತ್ತಲ್

ಪೀಠಿಕೆಯೊಳಗೆ ’ಸಮಾಜವಾದ’ ಶಬ್ದವನ್ನು ಸೇರಿಸುವುದನ್ನು ಕುರಿತ ತಿದ್ದುಪಡಿಯೊಂದನ್ನು ಸಂವಿಧಾನ ರಚನಾ ಸಭೆಯು ಸ್ಪಷ್ಟವಾಗಿ ತಿರಸ್ಕರಿಸಿತಾದರೂ, ಪೀಠಿಕೆಯಲ್ಲಿ ಹೇಳಲಾಗಿರುವ ’ನ್ಯಾಯ – ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ’ ಎಂಬ ಉಲ್ಲೇಖದಲ್ಲಿ ಸಮಾಜವಾದದ ಕೆಲವು ಅಂಶಗಳು ಅದಾಗಲೇ ಒಳಗೊಂಡಿದ್ದವು. ದೇಶದ ಅರ್ಥ ವ್ಯವಸ್ಥೆಯು ಸಂಪತ್ತಿನ ಕೇಂದ್ರೀಕರಣಕ್ಕೆ ದಾರಿ ಮಾಡದ ರೀತಿಯಲ್ಲಿ ಪ್ರಭುತ್ವ ನೀತಿ ಇರಬೇಕು ಎಂದು ’ರಾಜ್ಯ ನಿರ್ದೇಶಕ ತತ್ವಗಳ’ ಆರ್ಟಿಕಲ್ 38(b) ಸ್ಪಷ್ಟಪಡಿಸಿರುವುದರಲ್ಲಿ ಸಮಾಜವಾದಿ ಕಳಕಳಿಯೇ ವ್ಯಕ್ತವಾಗಿರುವುದು. ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ’ಜನಕಲ್ಯಾಣ ಸಮಾಜ ಮತ್ತು ಸಮಾನತೆಯ ಸಮಾಜ’ವನ್ನು ನಿರ್ಮಿಸುವುದು ’ಭಾರತ ಸಂವಿಧಾನದ ಮೂಲ ರಚನೆ’ಯ ಭಾಗವಾಗಿದೆ ಎಂದು ಸೂಚಿಸಿದೆ. ಇದೂ ಸಹ ಸಮಾಜವಾದಿ ತತ್ವದ ಉಲ್ಲೇಖವೇ ಆಗಿದೆ.

ಹೀಗೆ, ಸೆಕ್ಯುಲರಿಸಂ ಮತ್ತು ಸಮಾಜವಾದಗಳನ್ನು ಕುರಿತಂತೆ ಸುಭದ್ರವಾದ ಒಂದು ನ್ಯಾಯಿಕ ಮತ್ತು ಸಾಂವಿಧಾನಿಕ ಚರ್ಚೆ ನಡೆದುಬಂದಿದೆ. ಸಂವಿಧಾನ ರಚನಾ ಸಭೆಯ ಚರ್ಚೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನಾಧರಿಸಿ, 1976ರಲ್ಲಿ ಈ ಶಬ್ದಗಳನ್ನು ಸೇರ್ಪಡೆ ಮಾಡಿರುವ ವಿಚಾರದ ಪರವಾಗಿಯಾಗಲಿ ಅಥವಾ ವಿರುದ್ಧವಾಗಿಯಾಗಲಿ ವಾದ ಮಾಡುವುದು ಸಾಧ್ಯವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು – ಈ ಶಬ್ದಗಳನ್ನು ಸೇರ್ಪಡೆ ಮಾಡುವುದಾಗಲಿ ತೆಗೆದು ಹಾಕುವುದಾಗಲಿ ’ಭಾರತ ಸಂವಿಧಾನದ ಮೂಲ ರಚನೆ’ಯನ್ನು ನಾಶಪಡಿಸುವುದಿಲ್ಲ ಎನ್ನುವುದು.

ಮೇಲೆ ಹೇಳಿದ ಉಪನ್ಯಾಸದಲ್ಲಿ ಸದರಿ ಮುಖ್ಯ ನ್ಯಾಯಾಧೀಶರು ತಮ್ಮ ವ್ಯಾಖ್ಯಾನವನ್ನು ಮುಂದಿಡುವ ತವಕದಲ್ಲಿ, ’ಮೇಲ್ಪಂಕ್ತಿ’ಯ ಮೌಲ್ಯವಿರುವ ನ್ಯಾಯಿಕ ಚರ್ಚೆಗಳನ್ನೂ, ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಪರಿಕಲ್ಪನೆಗಳ ಜಾಡು ಹಿಡಿಯುವುದನ್ನೂ ಕಡೆಗಣಿಸಿದ್ದಾರೆ.

ಭಾರತದ ’ಆಧ್ಯಾತ್ಮಿಕ ಚಿತ್ರಣ’ದ ’ವಿಸ್ತಾರ’ವನ್ನು ’ಸೆಕ್ಯುಲರ್’ ಎಂಬ ಪದವು ಕಿರಿದಾಗಿಸುತ್ತದೆ ಎಂಬ ಹೇಳಿಕೆಯನ್ನು ಸಾಮಾನ್ಯರು ಹೇಳಿದ್ದರೆ ಅರ್ಥಮಾಡಿಕೊಳ್ಳಬಹುದು. ಆದರೆ ತನ್ನ ಪ್ರತಿಜ್ಞೆಯಲ್ಲಿ ’ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಇರಿಸುತ್ತೇನೆ’ ಎಂದಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೊಬ್ಬರಿಂದ ಈ ಹೇಳಿಕೆ ಬಂದಾಗ ಅತಿಯಾದ ಗೊಂದಲ ಹುಟ್ಟುತ್ತದೆ.

ಈ ದೇಶವು ’ಭಾರತದ ಆಧ್ಯಾತ್ಮಿಕ ಗಣರಾಜ್ಯ’ವೆಂದು ಕರೆಯಲ್ಪಡಬೇಕೆಂದು ಪ್ರತಿಪಾದಿಸುವ ಮೂಲಕ, ಸಂವಿಧಾನ ರಚನಾ ಸಭೆಯು ’ಧರ್ಮ’ ಅಥವಾ ಆಧ್ಯಾತ್ಮವನ್ನು ಆಧಾರವಾಗಿ ಪರಿಗಣಿಸುವುದನ್ನು ಖಚಿತವಾಗಿ ತಿರಸ್ಕರಿಸಿತು ಮತ್ತು ಅದರ ಬದಲಿಗೆ ’ಭಾರತದ ಪ್ರಜೆಗಳಾದ ನಾವು’ಗಳ ಮೇಲೆ ನಂಬಿಕೆಯಿರಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳುವಲ್ಲಿ ಸೋತಿರಬೇಕು. ಮುಖ್ಯ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ ಬದಲಾವಣೆಗಳು ’ಸಂವಿಧಾನ ಎಲ್ಲರಿಗಾಗಿ’-ಆಸ್ತಿಕರು ಮತ್ತು ನಾಸ್ತಿಕರು ಎಲ್ಲರಿಗೂ- ಎಂಬ ತಿಳಿವಳಿಕೆಗೇ ಸವಾಲೆಸೆಯುತ್ತದೆ.

ಮುಖ್ಯ ನ್ಯಾಯಮೂರ್ತಿಗಳು ನೀಡಿದ ಈ ಹೇಳಿಕೆಯ ಕೆಲವು ದಿನಗಳಲ್ಲೇ ಬಾಬ್ರಿ ಮಸೀದಿ ಧ್ವಂಸ ಮಾಡಿದ 28ನೇ ವರ್ಷದ ದಿನ ಬಂದಿದ್ದು ಭಾರತದ ಸಮಾಜವನ್ನು ಇಂದು ಹಿಡಿದಿರುವ ಅತಿ ದೊಡ್ಡ ಸವಾಲಾದ ಸಂವಿಧಾನ ವಿರೋಧಿ ಮನಸ್ಥಿತಿಯ ದ್ಯೋತಕವಾಗಿದೆ. ಸಂವಿಧಾನವನ್ನು ರಕ್ಷಿಸುವ ಪ್ರಮಾಣ ವಚನ ಸ್ವೀಕರಿಸುವ ನ್ಯಾಯಮೂರ್ತಿಗಳೂ ಈ ಅಲೆಯಿಂದ ಬಚಾವಾಗಿಲ್ಲವೆನ್ನುವುದು ಆತಂಕಕಾರಿಯಾದ ಸಂಗತಿಯಾಗಿದೆ.

ಸೆಕ್ಯುಲರ್ ಪದದ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳಿಗಿರುವ ತೊಂದರೆ ಮತ್ತು ’ಭಾರತವು ಅಧ್ಯಾತ್ಮಿಕ ಗಣರಾಜ್ಯ’ವೆಂಬ ಅವರ ವಕಾಲತ್ತು, ಭಾರತೀಯ ಸಂವಿಧಾನಕ್ಕೆ ಒಮ್ಮೆ ಕರಸೇವೆ ಮಾಡಬೇಕು ಎಂದು ಪರೋಕ್ಷವಾಗಿ ಹೇಳಿದಂತೆ ತೋರುತ್ತಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಅರವಿಂದ್ ನಾರಾಯಣ್ ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ಸಂವಿಧಾನ ಬದಲಿಸಬೇಕು ಎನ್ನುವವರಿಗೆ ಪಂಚಾಯತ್ ವ್ಯವಸ್ಥೆ ಬಗ್ಗೆ ನಂಬಿಕೆ ಇದೆಯಾ? – ಹರಿಪ್ರಸಾದ್ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...