Homeಮುಖಪುಟಭಾರತ ಆಧ್ಯಾತ್ಮಿಕ ಗಣರಾಜ್ಯವೇ?

ಭಾರತ ಆಧ್ಯಾತ್ಮಿಕ ಗಣರಾಜ್ಯವೇ?

- Advertisement -
- Advertisement -

ಆರೆಸ್ಸೆಸ್ಸಿನ ವಕೀಲರ ಸಂಘಟನೆಯಾದ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಒಂದು ಉಪನ್ಯಾಸದಲ್ಲಿ, “1976ರಲ್ಲಿ ಭಾರತದ ಸಂವಿಧಾನದ ಪೀಠಿಕೆಯೊಳಗೆ ’ಸಮಾಜವಾದಿ’ (ಸೋಶಿಯಲಿಸ್ಟ್) ಮತ್ತು ’ಸೆಕ್ಯುಲರ್’ (ಧರ್ಮ ನಿರಪೇಕ್ಷ/ಜಾತ್ಯತೀತ ಮುಂತಾದಾಗಿ ವ್ಯಾಖ್ಯಾನಿಸಲಾಗಿದೆ. ಮುಂದೆ ಇದನ್ನು ಸೆಕ್ಯುಲರ್ ಎಂದೇ ಉಳಿಸಿಕೊಳ್ಳಲಾಗಿದೆ) ಎಂಬ ಶಬ್ದಗಳನ್ನು ಸೇರಿಸಿದುದು ಸಂವಿಧಾನದ ’ಆಧ್ಯಾತ್ಮಿಕ ವರ್ಚಸ್ಸಿನ ವಿಸ್ತಾರ’ವನ್ನು ಸಂಕುಚಿತಗೊಳಿಸಿದೆ” ಎಂದು ಜಮ್ಮು-ಕಾಶ್ಮೀರ-ಲಢಾಖ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಪಂಕಜ್ ಮಿತ್ತಲ್ ಅವರು ಹೇಳಿದರು. ದೇಶವನ್ನು ’ಭಾರತ ಆಧ್ಯಾತ್ಮಿಕ ಗಣರಾಜ್ಯ’ ಎಂದು ಕರೆಯಬೇಕು ಎಂದೂ ಅವರು ಹೇಳಿದರು.

ಸಂವಿಧಾನದೊಳಗೆ 1976ರಲ್ಲಿ ಈ ಪರಿಕಲ್ಪನೆಗಳನ್ನು ಸೇರಿಸಿದ್ದನ್ನು ನ್ಯಾ. ಮಿತ್ತಲ್ ಅವರಿಗಿಂತ ಮೊದಲೂ ಸಹ ವಿಮರ್ಶೆ ಮಾಡಿದವರಿದ್ದಾರೆ: ಈ ಪರಿಕಲ್ಪನೆಗಳನ್ನು ಸಂವಿಧಾನ ಕರ್ತರು ತಿರಸ್ಕರಿಸಿದ್ದರು, ಅವನ್ನು ಇಂದಿರಾ ಗಾಂಧಿಯವರು ’ಆಮದು’ ಮಾಡಿಕೊಂಡಿದ್ದಾರೆ – ಎನ್ನುವುದು ಅದಕ್ಕೆ ಕೊಡಲಾಗಿರುವ ಕಾರಣ. ಸೆಕ್ಯುಲರ್ ಎಂಬ ಶಬ್ದವು ಭಾರತದ ಸಂವಿಧಾನಕ್ಕೆ ಹೊರಗಿನದು ಎಂಬ ವಿಮರ್ಶೆ ತಪ್ಪು ಎಂದು ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಗಳ ವಿಶ್ಲೇಷಣೆಯ ಮೂಲಕವೂ, ಸುಪ್ರೀಂ ಕೋರ್ಟು ನೀಡಿದ ಒಂದು ತೀರ್ಪಿನ ಮೂಲಕವೂ ಈಗಾಗಲೇ ಸಾಬೀತು ಮಾಡಲಾಗಿದೆ.

ಸಂವಿಧಾನ ರಚನಾ ಸಭೆಯು ಸೆಕ್ಯುಲರ್ ಎಂಬ ಶಬ್ದವನ್ನು ಪೀಠಿಕೆಯಲ್ಲಿ ಸೇರಿಸಲು ಒಪ್ಪದೆ ಇದ್ದಾಗ್ಯೂ, ಸೆಕ್ಯುಲರಿಸಂನ ಮೂಲಭೂತ ತಳಹದಿಯಾದ, ತಾವು ನಂಬಿರುವ ಧರ್ಮವನ್ನು ಆಚರಿಸಲು ಎಲ್ಲ ವ್ಯಕ್ತಿಗಳಿಗೂ ಸ್ವಾತಂತ್ರ್ಯವಿದೆ ಹಾಗೂ ಪ್ರಭುತ್ವವು ಧರ್ಮದ ಆಧಾರದಲ್ಲಿ ಯಾವುದೇ ವ್ಯಕ್ತಿಯ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂಬ ವಿಚಾರದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂಬುದು ಅಲ್ಲಿ ಮಾತನಾಡಿದ ಅನೇಕ ಭಾಷಣಕಾರರ ಮಾತುಗಳಲ್ಲಿ ಸ್ಪಷ್ಟವಾಗಿತ್ತು. ಕೆ.ಎಂ.ಮುನ್ಷಿಯವರು ಸಭೆಯಲ್ಲಿ ಮಾತನಾಡುತ್ತಾ, ’… ನಮ್ಮ ಪ್ರಭುತ್ವಕ್ಕೆ ತನ್ನದೇ ಆದ ಒಂದು ಪ್ರಭುತ್ವ ಧರ್ಮ ಎಂಬುದು ಬಹುಶಃ ಇರಲು ಸಾಧ್ಯವಿಲ್ಲ’ ಎಂದು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ವಿಶಾಲ ಸಹಮತಿ ವ್ಯಕ್ತವಾಗಿತ್ತು.

ಎಸ್.ಆರ್.ಬೊಮ್ಮಾಯಿ ವರ್ಸಸ್ ಭಾರತ ಒಕ್ಕೂಟ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ಸೆಕ್ಯುಲರಿಸಂ ಭಾರತೀಯ ಸಂವಿಧಾನದ ಮೂಲ ಸಂರಚನೆಯೊಳಗಿನ ಒಂದು ಅವಿಭಾಜ್ಯ ಭಾಗವಾಗಿದೆ ಎಂಬ ನಿಲುವಿಗೆ ತಲುಪಿತು ಹಾಗೂ 42ನೇ ಸಂವಿಧಾನ ತಿದ್ದುಪಡಿಯು ಭಾರತದ ಸಂವಿಧಾನದಲ್ಲಿ ಅಂತರ್ಗತವಾಗಿದ್ದ ಅಂಶವನ್ನು ಪ್ರಕಟವಾಗಿ ವ್ಯಕ್ತಪಡಿಸಿದೆ ಎಂದು ಸ್ಪಷ್ಟವಾಗಿ ತೀರ್ಮಾನ ಹೇಳಿತು. ಸಂವಿಧಾನದ ಪೀಠಿಕೆಯೇ ’ಚಿಂತನೆ, ಅಭಿವ್ಯಕ್ತಿ, ವಿಶ್ವಾಸ, (ಧಾರ್ಮಿಕ) ನಂಬಿಕೆ ಹಾಗೂ ಆರಾಧನೆಗಳ ಸ್ವಾತಂತ್ರ್ಯ’ಗಳ ಕುರಿತು ಹೇಳಿರುವುದರಿಂದಲೂ, ಧರ್ಮದ ಆಧಾರದಲ್ಲಿನ ತಾರತಮ್ಯವನ್ನು ಸಂವಿಧಾನದ 15ನೇ ವಿಧಿಯು ನಿಷೇಧಿಸಿರುವುದರಿಂದಲೂ, ಸೆಕ್ಯುಲರಿಸಂ ಎಂಬುದು ನಮ್ಮ ಸಂವಿಧಾನಕ್ಕೆ ಹೊರಗಿನದು ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ. ವಾಸ್ತವದಲ್ಲಿ, ’ಧರ್ಮದ ಆಧಾರದಲ್ಲಿನ ತಾರತಮ್ಯದ ಬಗ್ಗೆ ಸಂವಿಧಾನವು ಅಸಹ್ಯವನ್ನೇ ವ್ಯಕ್ತಪಡಿಸಿದೆ.’

ಪಂಕಜ್ ಮಿತ್ತಲ್

ಪೀಠಿಕೆಯೊಳಗೆ ’ಸಮಾಜವಾದ’ ಶಬ್ದವನ್ನು ಸೇರಿಸುವುದನ್ನು ಕುರಿತ ತಿದ್ದುಪಡಿಯೊಂದನ್ನು ಸಂವಿಧಾನ ರಚನಾ ಸಭೆಯು ಸ್ಪಷ್ಟವಾಗಿ ತಿರಸ್ಕರಿಸಿತಾದರೂ, ಪೀಠಿಕೆಯಲ್ಲಿ ಹೇಳಲಾಗಿರುವ ’ನ್ಯಾಯ – ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ’ ಎಂಬ ಉಲ್ಲೇಖದಲ್ಲಿ ಸಮಾಜವಾದದ ಕೆಲವು ಅಂಶಗಳು ಅದಾಗಲೇ ಒಳಗೊಂಡಿದ್ದವು. ದೇಶದ ಅರ್ಥ ವ್ಯವಸ್ಥೆಯು ಸಂಪತ್ತಿನ ಕೇಂದ್ರೀಕರಣಕ್ಕೆ ದಾರಿ ಮಾಡದ ರೀತಿಯಲ್ಲಿ ಪ್ರಭುತ್ವ ನೀತಿ ಇರಬೇಕು ಎಂದು ’ರಾಜ್ಯ ನಿರ್ದೇಶಕ ತತ್ವಗಳ’ ಆರ್ಟಿಕಲ್ 38(b) ಸ್ಪಷ್ಟಪಡಿಸಿರುವುದರಲ್ಲಿ ಸಮಾಜವಾದಿ ಕಳಕಳಿಯೇ ವ್ಯಕ್ತವಾಗಿರುವುದು. ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ’ಜನಕಲ್ಯಾಣ ಸಮಾಜ ಮತ್ತು ಸಮಾನತೆಯ ಸಮಾಜ’ವನ್ನು ನಿರ್ಮಿಸುವುದು ’ಭಾರತ ಸಂವಿಧಾನದ ಮೂಲ ರಚನೆ’ಯ ಭಾಗವಾಗಿದೆ ಎಂದು ಸೂಚಿಸಿದೆ. ಇದೂ ಸಹ ಸಮಾಜವಾದಿ ತತ್ವದ ಉಲ್ಲೇಖವೇ ಆಗಿದೆ.

ಹೀಗೆ, ಸೆಕ್ಯುಲರಿಸಂ ಮತ್ತು ಸಮಾಜವಾದಗಳನ್ನು ಕುರಿತಂತೆ ಸುಭದ್ರವಾದ ಒಂದು ನ್ಯಾಯಿಕ ಮತ್ತು ಸಾಂವಿಧಾನಿಕ ಚರ್ಚೆ ನಡೆದುಬಂದಿದೆ. ಸಂವಿಧಾನ ರಚನಾ ಸಭೆಯ ಚರ್ಚೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನಾಧರಿಸಿ, 1976ರಲ್ಲಿ ಈ ಶಬ್ದಗಳನ್ನು ಸೇರ್ಪಡೆ ಮಾಡಿರುವ ವಿಚಾರದ ಪರವಾಗಿಯಾಗಲಿ ಅಥವಾ ವಿರುದ್ಧವಾಗಿಯಾಗಲಿ ವಾದ ಮಾಡುವುದು ಸಾಧ್ಯವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು – ಈ ಶಬ್ದಗಳನ್ನು ಸೇರ್ಪಡೆ ಮಾಡುವುದಾಗಲಿ ತೆಗೆದು ಹಾಕುವುದಾಗಲಿ ’ಭಾರತ ಸಂವಿಧಾನದ ಮೂಲ ರಚನೆ’ಯನ್ನು ನಾಶಪಡಿಸುವುದಿಲ್ಲ ಎನ್ನುವುದು.

ಮೇಲೆ ಹೇಳಿದ ಉಪನ್ಯಾಸದಲ್ಲಿ ಸದರಿ ಮುಖ್ಯ ನ್ಯಾಯಾಧೀಶರು ತಮ್ಮ ವ್ಯಾಖ್ಯಾನವನ್ನು ಮುಂದಿಡುವ ತವಕದಲ್ಲಿ, ’ಮೇಲ್ಪಂಕ್ತಿ’ಯ ಮೌಲ್ಯವಿರುವ ನ್ಯಾಯಿಕ ಚರ್ಚೆಗಳನ್ನೂ, ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಪರಿಕಲ್ಪನೆಗಳ ಜಾಡು ಹಿಡಿಯುವುದನ್ನೂ ಕಡೆಗಣಿಸಿದ್ದಾರೆ.

ಭಾರತದ ’ಆಧ್ಯಾತ್ಮಿಕ ಚಿತ್ರಣ’ದ ’ವಿಸ್ತಾರ’ವನ್ನು ’ಸೆಕ್ಯುಲರ್’ ಎಂಬ ಪದವು ಕಿರಿದಾಗಿಸುತ್ತದೆ ಎಂಬ ಹೇಳಿಕೆಯನ್ನು ಸಾಮಾನ್ಯರು ಹೇಳಿದ್ದರೆ ಅರ್ಥಮಾಡಿಕೊಳ್ಳಬಹುದು. ಆದರೆ ತನ್ನ ಪ್ರತಿಜ್ಞೆಯಲ್ಲಿ ’ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಇರಿಸುತ್ತೇನೆ’ ಎಂದಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೊಬ್ಬರಿಂದ ಈ ಹೇಳಿಕೆ ಬಂದಾಗ ಅತಿಯಾದ ಗೊಂದಲ ಹುಟ್ಟುತ್ತದೆ.

ಈ ದೇಶವು ’ಭಾರತದ ಆಧ್ಯಾತ್ಮಿಕ ಗಣರಾಜ್ಯ’ವೆಂದು ಕರೆಯಲ್ಪಡಬೇಕೆಂದು ಪ್ರತಿಪಾದಿಸುವ ಮೂಲಕ, ಸಂವಿಧಾನ ರಚನಾ ಸಭೆಯು ’ಧರ್ಮ’ ಅಥವಾ ಆಧ್ಯಾತ್ಮವನ್ನು ಆಧಾರವಾಗಿ ಪರಿಗಣಿಸುವುದನ್ನು ಖಚಿತವಾಗಿ ತಿರಸ್ಕರಿಸಿತು ಮತ್ತು ಅದರ ಬದಲಿಗೆ ’ಭಾರತದ ಪ್ರಜೆಗಳಾದ ನಾವು’ಗಳ ಮೇಲೆ ನಂಬಿಕೆಯಿರಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳುವಲ್ಲಿ ಸೋತಿರಬೇಕು. ಮುಖ್ಯ ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ ಬದಲಾವಣೆಗಳು ’ಸಂವಿಧಾನ ಎಲ್ಲರಿಗಾಗಿ’-ಆಸ್ತಿಕರು ಮತ್ತು ನಾಸ್ತಿಕರು ಎಲ್ಲರಿಗೂ- ಎಂಬ ತಿಳಿವಳಿಕೆಗೇ ಸವಾಲೆಸೆಯುತ್ತದೆ.

ಮುಖ್ಯ ನ್ಯಾಯಮೂರ್ತಿಗಳು ನೀಡಿದ ಈ ಹೇಳಿಕೆಯ ಕೆಲವು ದಿನಗಳಲ್ಲೇ ಬಾಬ್ರಿ ಮಸೀದಿ ಧ್ವಂಸ ಮಾಡಿದ 28ನೇ ವರ್ಷದ ದಿನ ಬಂದಿದ್ದು ಭಾರತದ ಸಮಾಜವನ್ನು ಇಂದು ಹಿಡಿದಿರುವ ಅತಿ ದೊಡ್ಡ ಸವಾಲಾದ ಸಂವಿಧಾನ ವಿರೋಧಿ ಮನಸ್ಥಿತಿಯ ದ್ಯೋತಕವಾಗಿದೆ. ಸಂವಿಧಾನವನ್ನು ರಕ್ಷಿಸುವ ಪ್ರಮಾಣ ವಚನ ಸ್ವೀಕರಿಸುವ ನ್ಯಾಯಮೂರ್ತಿಗಳೂ ಈ ಅಲೆಯಿಂದ ಬಚಾವಾಗಿಲ್ಲವೆನ್ನುವುದು ಆತಂಕಕಾರಿಯಾದ ಸಂಗತಿಯಾಗಿದೆ.

ಸೆಕ್ಯುಲರ್ ಪದದ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳಿಗಿರುವ ತೊಂದರೆ ಮತ್ತು ’ಭಾರತವು ಅಧ್ಯಾತ್ಮಿಕ ಗಣರಾಜ್ಯ’ವೆಂಬ ಅವರ ವಕಾಲತ್ತು, ಭಾರತೀಯ ಸಂವಿಧಾನಕ್ಕೆ ಒಮ್ಮೆ ಕರಸೇವೆ ಮಾಡಬೇಕು ಎಂದು ಪರೋಕ್ಷವಾಗಿ ಹೇಳಿದಂತೆ ತೋರುತ್ತಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಅರವಿಂದ್ ನಾರಾಯಣ್ ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ಸಂವಿಧಾನ ಬದಲಿಸಬೇಕು ಎನ್ನುವವರಿಗೆ ಪಂಚಾಯತ್ ವ್ಯವಸ್ಥೆ ಬಗ್ಗೆ ನಂಬಿಕೆ ಇದೆಯಾ? – ಹರಿಪ್ರಸಾದ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...