“ನಾವು ಮರೆತ್ತಿಲ್ಲ. ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ ಮಹಿಳೆಯರಿಗೆ ಥಳಿಸಿದವರು ನೀವು. ಅಂದು ಏಟು ತಿಂದ ಮಹಿಳೆಯರ್ಯಾರೂ ಮುಸ್ಲಿಮರಲ್ಲ, ಶೂದ್ರರು” ಎಂದು ಹೈಕೋರ್ಟ್ ಹಿರಿಯ ವಕೀಲರಾದ ಎಸ್.ಬಾಲನ್ ಹೇಳಿದರು.
ಹಿಜಾಬ್ ಸಂಬಂಧ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಹೆಣ್ಣುಮಕ್ಕಳು, ಶೂದ್ರರು ಓದಬಾರದೆಂದು ಕಾನೂನು ಮಾಡಿದವರು ನೀವು. ಬ್ರಾಹ್ಮಣ ಮಹಿಳೆಯರಿಗೂ ಓದುವ ಅವಕಾಶ ನೀಡದವರು ನೀವು. ಹಿಂದೂ ಕೋಡ್ ಬಿಲ್ ಮಂಡಿಸಿ ಮಹಿಳೆಯರಿಗೆ ವಿಚ್ಛೇದನಾ ಹಕ್ಕು, ಆಸ್ತಿಯಲ್ಲಿ ಹಕ್ಕು ಕೊಟ್ಟಿದ್ದು ಅಂಬೇಡ್ಕರ್. ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಮನೆಯ ಮುಂದೆ ಧಿಕ್ಕಾರ ಹಾಕಿದವರು ನೀವು” ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮಗಳಲ್ಲಿ ಒಂದು ದನಿ ಬರುತ್ತಿದೆ. ನಾವು ಹಿಂದೂ ರಾಷ್ಟ್ರ ಕಟ್ಟುತ್ತೇವೆ. ಹಾಗಾಗಿ ನೀವು ಹಿಜಾಬ್ ಧರಿಸಬಾರದು. ಹಿಜಾಬ್ ಧರಿಸಿದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಿದ್ದಾರೆ. ಈ ದೇಶ ಜಾತ್ಯತೀತ ದೇಶ. ಪಾಕಿಸ್ತಾನವಲ್ಲ. ಪಾಕಿಸ್ತಾನ ಧಾರ್ಮಿಕ ದೇಶ. ಹಿಂದೂ ರಾಷ್ಟ್ರ ಬೇಕು ಅನ್ನೋರು ದೇಶ ಬಿಟ್ಟು ಹೋಗಿ ಎಂದು ಬಾಲನ್ ಗುಡುಗಿದರು.
ಈ ದೇಶ ಈ ಜನರ ದೇಶ. ಜನರ ಹಕ್ಕುಗಳಿಗೆ ಧಕ್ಕೆ ಮಾಡಬೇಡಿ. ನಿಮ್ಮ ರಾಜಕೀಯ ರಕ್ತದ ಮೇಲೆ, ದ್ವೇಶದ ಮೇಲೆ ನಿಂತಿದೆ. ಗುಜರಾತ್ನಲ್ಲಿ ಮುಸ್ಲಿಮರನ್ನು ಕೊಂದಿರಿ. ದಲಿತರು, ಹಿಂದುಳಿದವರನ್ನು ಜೈಲಿಗೆ ತಳ್ಳಿದಿರಿ. ವೈಶ್ಯರು, ಬ್ರಾಹ್ಮಣರು ಅಧಿಕಾರ ಹಿಡಿದು ಐಶಾರಾಮಿ ಜೀವನ ಮಾಡಿದಿರಿ ಎಂದು ವಾಗ್ದಾಳಿ ನಡೆಸಿದರು.
ಹಿಜಾಬ್, ಖಿಮರ್, ಅಬಯ ಎಂದರೆ ಏನು? ಹಿಜಾಬ್ ಎಂದರೆ ತಲೆಯ ಮೇಲೆ ಬಟ್ಟೆಯನ್ನು ಧರಿಸಿಕೊಳ್ಳುವುದು. ಖಿಮಾರ್ ಅಂದರೆ ಚಕ್ರಾಕಾರದ ಬಟ್ಟೆಯನ್ನು ತಲೆಯ ಮೇಲೆ ಹಾಕಿಕೊಳ್ಳುವುದು. ಅಬಯ ಅಂದರೆ ಇಡೀ ದೇಹದ ಮೇಲೆ ಬಟ್ಟೆಯನ್ನು ಧರಿಸುವುದು ಇಷ್ಟೇ. ಇದರ ಬಗ್ಗೆ ಕುರಾನ್ನಲ್ಲಿದೆ, ಶರಯತ್ನಲ್ಲಿದೆ. ಸಾಧಾರಣ ಉಡುಗೆ ಇರಬೇಕು. ದೇಹಾಕೃತಿ ಹೊರಗೆ ಕಾಣಬಾರದು ಎಂದು ಇಸ್ಲಾಂ ನಂಬಿದೆ. ಇದನ್ನು 1400 ವರ್ಷಗಳಿಂದ ಇಸ್ಲಾಂ ಅನುಯಾಯಿಗಳು ಅನುಸರಿಸುತ್ತಾ ಬಂದಿದ್ದಾರೆ. ಇದರ ಬಗ್ಗೆ ತಿಳಿಯಬೇಕಾದರೆ ಕುರಾನ್ ಓದಬೇಕು. ಚಾಪ್ಟರ್ 24 ವರ್ಸಸ್ 31 ಓದಿ, 34 ವರ್ಸಸ್ 59 ಓದಿ. ಇದರಲ್ಲಿ ಹಿಜಾಬ್, ಖಿಮೂರ್, ಹಿಜಾಬ್ ಕುರಿತು ವಿವರಗಳಿವೆ. ಇದೊಂದು ಧಾರ್ಮಿಕ ಆಚರಣೆ. ಇದೊಂದು ಧಾರ್ಮಿಕ ವಸ್ತ್ರ. ಅದು ಅವರ ಧಾರ್ಮಿಕ ಹಕ್ಕು ಎಂದು ಪ್ರತಿಪಾದಿಸಿದರು.
ನಮ್ಮ ದೇಶದಲ್ಲಿ ಸಾವಿರ ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಸುಲ್ತಾನರ ಕಾಲದಲ್ಲಿ, ಮೊಘಲ್, ಶಿವಾಜಿ ಕಾಲದಲ್ಲಿ, ವಿಜಯನಗರ ಅರಸರ ಕಾಲದಲ್ಲಿ ಹಿಜಾಬ್ ಇತ್ತು. ಮುಸ್ಲಿಂ ಮಹಿಳೆಯರು ತಮ್ಮ ಗುರುತು ಎಂಬಂತೆ ಹಿಜಾಬ್ ಧರಿಸುತ್ತಲೇ ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಜರತ್ ಬೇಗಂ ಥರದ ವೀರ ಮಹಿಳೆಯರೂ ಹಿಜಾಬ್ ಧರಿಸಿ ಹೋರಾಡಿದ್ದರು ಎಂದು ಹೇಳಿದರು.
ಸಿಖ್ಗಳು ಶೇ. 1.8 ಇದ್ದಾರೆ. ಇಸ್ಲಾಮಿಯರ ಸಂಖ್ಯೆ ಶೇ. 15ರಷ್ಟು ಇದೆ. ಅಂದರೆ ದೇಶದಲ್ಲಿ ಇಪ್ಪತ್ತು ಕೋಟಿ ಜನರಿದ್ದಾರೆ. ಸಿಖ್ಗಳು ಆರ್ಮಿಯಲ್ಲಿ ಗಡ್ಡ ಬಿಟ್ಟಿರುತ್ತಾರೆ. ಟರ್ಬನ್ ಹಾಕಿರುತ್ತಾರೆ. ಅವರನ್ನು ಶಾಲೆಗಳಲ್ಲಿ ಸೇರಿಸಿಕೊಳ್ಳುತ್ತೀರಿ. ಸಿಖ್ಗಳು ಗಡ್ಡ ಬಿಡುವುದು, ಮುಸ್ಲಿಮರು ಹಿಜಾಬ್ ಧರಿಸುವುದು ಎರಡೂ ಒಂದೇ. ಅವರು ಗಡ್ಡ ಬಿಡಬಹುದು, ಇವರು ಹಿಜಾಬ್ ಹಾಕಬಾರದು. ಹಿಂದೂ ಮಹಿಳೆಯರು ಹಣೆಗೆ ಬಿಂದಿ ಇಡುತ್ತಾರೆ, ಕೈಗೆ ಬಳೆ ಹಾಕುತ್ತಾರೆ. ಹೂ ಮುಡಿಯುತ್ತಾರೆ. ಸೆರಗು ಹಾಕಿಕೊಳ್ಳುತ್ತಾರೆ. ಅದು ಅವರ ಧಾರ್ಮಿಕ ಹಕ್ಕು ಎಂದು ತಿಳಿಸಿದರು.
ನೀವು ತಂದಿರುವ ಆದೇಶ ಬಾಂಬೇ ಹಾಗೂ ಕೇರಳ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಿದೆ. ಹಿಜಾಬ್ ಧರಿಸುವುದು ಧಾರ್ಮಿಕರ ಹಕ್ಕು. ಆ ಧಾರ್ಮಿಕ ಗುರುತನ್ನು ಕೆಡಿಸಬೇಡಿ.
“ಇವರಿಗೂ ಭಯೋತ್ಪಾದನೆ ಸಂಘಟನೆಗೂ ಸಂಬಂಧ ಇದೆಯಾ ಹುಡುಕಿ, ಕಾಲ್ ಡೀಟೆಲ್ ತೆಗೆದುಕೊಳ್ಳಿ” ಎಂದು ಉನ್ನತ ಅಧಿಕಾರಿಗಳಿಗೆ ಹೋಮ್ ಮಿನಿಸ್ಟರ್ ಆದೇಶ ಮಾಡಿದ್ದಾರಂತೆ. ಇವರನ್ನು (ಹೆಣ್ಣುಮಕ್ಕಳನ್ನು) ಯುಎಪಿಎ ಕಾಯ್ದೆಯಡಿ ಸಿಕ್ಕಿಸಲು ನೀವು ಪ್ಲಾನ್ ಮಾಡ್ತಾ ಇದ್ದೀರಾ. ದೇಶದ್ರೋಹದ ಅಡಿಯಲ್ಲಿ ಬಂಧಿಸಲು ಪ್ಲಾನ್ ಮಾಡ್ತಾ ಇದ್ದೀರಿ. ಇದನ್ನು ಒಪ್ಪುವುದಿಲ್ಲ” ಎಂದರು.
ಇವತ್ತು ಮುಸ್ಲಿಮರ ಮೇಲೆ, ಕ್ರೈಸ್ತರ ಮೇಲೆ, ಕಮ್ಯುನಿಸ್ಟರು, ಕಾರ್ಮಿಕರು, ಆದಿವಾಸಿಗಳ ಮೇಲೆ ಎರಗಿದ್ದೀರಿ. ನಾಳೆ ನೀವು ಸಿಖ್ಗಳ ಮೇಲೆ ಬರುತ್ತೀರಿ. ದೇಶವನ್ನು ಕಟ್ಟಿರುವ ಶೇ. 95ರಷ್ಟು ಜನರಿಗೆ ತೊಂದರೆ ಕೊಡುತ್ತಿದ್ದೀರಿ. ಕಾರ್ಮಿಕರು, ರೈತರ ಹಕ್ಕನ್ನು ಕಿತ್ತುಕೊಂಡಿದ್ದೀರಿ. ವ್ಯಾಪಾರಿಗಳ ಹಕ್ಕನ್ನು ಜಿಎಸ್ಟಿ ಹಾಕಿ ಕಿತ್ತುಕೊಂಡಿದ್ದೀರಿ. ಜನರ ಹಕ್ಕನ್ನು ಡಿಮಾಟೈಷೇಷನ್ ಮಾಡಿ ಕಿತ್ತುಕೊಂಡಿದ್ದೀರಿ. ಏರೋಪ್ಲೇನ್, ರೋಡ್, ಟೆಲಿಫೋನ್ ಎಲ್ಲವನ್ನೂ ಮಾರುತ್ತಿದ್ದೀರಿ. ಇದನ್ನು ಮುಚ್ಚಿಹಾಕಲು ಹಿಜಾಬ್ ಎನ್ನುತ್ತಿದ್ದೀರಿ. ಇದು ಸರಿಯಲ್ಲ. ಜನ ನಿಮಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಬಾಲನ್ ಅವರೇ ಇದು ಹಿಂದೂ ನೆಲಗಟ್ಟಿನ ಮೇಲೆ ನಿರ್ಮಾಣ ಆಗಿರುವ ದೇಶ ,ಇಲ್ಲಿ ಹಿಂದೂಗಳೇ ಸಾರ್ವಭೌಮ ನೀನು ದೇಶ ಬಿಟ್ಟು ಹೋಗಬಹುದು
ಬಾಲನ್ ಅವರೇ ಇದು ಹಿಂದೂ ನೆಲಗಟ್ಟಿನ ಮೇಲೆ ನಿರ್ಮಾಣ ಆಗಿರುವ ದೇಶ ,ಇಲ್ಲಿ ಹಿಂದೂಗಳೇ ಸಾರ್ವಭೌಮ ನೀನು ದೇಶ ಬಿಟ್ಟು ಹೋಗಬಹುದು