ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಕಾಲೇಜಿಗೆ ಹಿಜಾಬ್ ಧರಿಸಿ ಬರುವ ಮುಸ್ಲಿಂ ಹೆಣ್ಣು ಮಕ್ಕಳನ್ನು ವಿರೋಧಿಸಿ ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಇಂದು ಶಿವಮೊಗ್ಗ ಮತ್ತು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಒಂಟಿ ಹೆಣ್ಣು ಮಕ್ಕಳನ್ನು ಗುರಿಯಾಗಿಸಿದ ಕೇಸರಿ ಶಾಲು ಧರಿಸಿದ್ದ ಕೆಲವು ಮಂದಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿನಿಯರು ತಿರುಗೇಟು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಪಿಇಎಸ್ ಕಾಲೇಜಿನಲ್ಲಿ ಇಂದು ಕೂಡ ಹಿಜಾಬ್-ಕೇಸರಿ ಶಾಲು ವಿವಾದ ಜೋರಾಗಿತ್ತು. ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಕುಳಿತಿದ್ದ ಹಲವರು, ಕಾಲೇಜು ಆವರಣದಲ್ಲಿ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯನ್ನು ಕಂಡ ತಕ್ಷಣವೇ ಆಕೆಯನ್ನು ಗುರಿಯಾಗಿಸಿದ್ದಾರೆ.
ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ಆಕೆಯನ್ನು ಸುತ್ತುವರೆಯಲು ಪ್ರಯತ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆಕೆ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾರೆ. ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದ ವಿದ್ಯಾರ್ಥಿಗಳನ್ನು ತಡೆಯಲು ಉಪನ್ಯಾಸಕರು ಹರ ಸಾಹಸ ಪಟ್ಟಿದ್ದಾರೆ. ಆದರೂ ಆಕೆಯನ್ನು ಹಿಂಬಾಲಿಸಿ ಆಕೆ ತರಗತಿಗೆ ಹೋಗುವವರೆಗೂ ಘೋಷಣೆ ಕೂಗಿದ್ದಾರೆ. ಬಳಿಕ ಉಪನ್ಯಾಸಕರ ಮಾತಿಗು ಒಪ್ಪದೆ ಅವರ ಜೊತೆಗೆ ವಾಗ್ವಾದ ನಡೆಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಇಸ್ಲಾಂ ವಿರುದ್ಧ ದ್ವೇಷ ಹರಡುವ ಈ ಲೇಖನ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿ ಬರೆದಿಲ್ಲ
ಮಂಡ್ಯದ PES ಕಾಲೇಜಿನಲ್ಲಿ ಒಬ್ಬಂಟಿ ಮುಸ್ಲಿಂ ವಿದ್ಯಾರ್ಥಿನಿಯ ಸುತ್ತಾ ಮುತ್ತಿಗೆ ಹಾಕಿ ಜೈಶ್ರೀರಾಮ್ ಘೋಷಣೆ ಕೂಗಿದ ಕೇಸರಿ ಶಾಲುಧಾರಿ ವಿದ್ಯಾರ್ಥಿಗಳು…. ವಿದ್ಯಾರ್ಥಿಗಳನ್ನು ತಡೆಯಲು ಉಪನ್ಯಾಸಕರ ಹರಸಾಹಸ…. ಪೂರ್ಣ ವಿಡಿಯೋ pic.twitter.com/sIVuWMKGuC
— Naanu Gauri (@naanugauri) February 8, 2022
ಇತ್ತ ಉಡುಪಿಯ ಎಂಜಿಎಂ ಕಾಲೇಜಿನಲ್ಲಿಯೂ ಬುರ್ಖಾ ತೊಟ್ಟ ಮುಸ್ಲಿಂ ವಿದ್ಯಾರ್ಥಿನಿಯನ್ನು ಸುತ್ತುವರೆದು ಕೇಸರಿ ಶಾಲುಧಾರಿಗಳು ದೌರ್ಜನ್ಯವೆಸಗಿದ್ದಾರೆ. ಆಕೆ ದಿಟ್ಟತನದಿಂದ ಉತ್ತರ ನೀಡಿದ್ದಾರೆ.
ಈ ಕುರಿತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವ್ನನು ಹಂಚಿಕೊಂಡಿದ್ದು, ಹೈಕೋರ್ಟ್ ಮಧ್ಯಪ್ರವೇಶಿಸಲು ಆಗ್ರಹಿಸಿದ್ದಾರೆ.
ಹೆಣ್ಣು ಮಕ್ಕಳು ತಮ್ಮ ಸಹಪಾಠಿಗಳಿಂದ ಕಿರುಕುಳ, ಬೆದರಿಸುವಿಕೆ, ಅಪಮಾನ ಮತ್ತು ಅವಮಾನಕ್ಕೆ ಒಳಗಾಗುತ್ತಿದ್ದಾರೆ. ನಮ್ಮ ಕಣ್ಣ ಮುಂದೆ ಏನಾಗುತ್ತಿದೆ ಎಂಬುದನ್ನು ನೋಡಲು ಅಸಹ್ಯಕರವಾಗಿದೆ, ಬಿಜೆಪಿಯು ಮಕ್ಕಳಲ್ಲೂ ನೈತಿಕತೆಯನ್ನು ನಾಶಪಡಿಸಿದೆ. ಕೂಡಲೇ ಹೈಕೋರ್ಟ್ ಮಧ್ಯಪ್ರವೇಶಿಸಲಿ ಎಂದು ಹೇಳಿದ್ದಾರೆ.
Girls are being heckled, bullied, humiliated & insulted by their fellow classmates, the rot runs deep!
Disgusting to see what is unfolding in front of our eyes, the BJP has destroyed the moral compass even in kids… Hope the Hon. High court steps in immediately…#HijabRow pic.twitter.com/dv9b0JwNMc
— Rizwan Arshad (@ArshadRizwan) February 8, 2022
ಇನ್ನು ಘರ್ಷಣೆ ಹೆಚ್ಚಾದ ಹಿನ್ನೆಲೆ ತುರ್ತು ಸಭೆ ನಡೆಸಿದ ಉಡುಪಿಯ ಎಂಜಿಎಂ ಕಾಲೇಜು ಆಡಳಿತ ಮಂಡಳಿ ಕಾಲೇಜಿಗೆ ಅನಿರ್ಧಿಷ್ಠಾವಧಿ ರಜೆ ಘೊಷಿಸಿದೆ. ನ್ಯಾಯಾಲಯದ ತೀರ್ಪು ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕಾಲೇಜು ಸೂಚನೆ ನೀಡುವವರೆಗೂ ವಿದ್ಯಾರ್ಥಿಗಳು ಕಾಲೇಜಿಗೆ ಬರಬಾರದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ತಾರಕಕ್ಕೇರಿದ ಹಿಜಾಬ್, ಕೇಸರಿ ಶಾಲು ವಿವಾದ: ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ