ನಟ ಸೂರ್ಯ ಅಭಿನಯದ ಜೈ ಭೀಮ್ ಚಿತ್ರ ಬಿಡುಗಡೆಯಾಗಿ ಮೂರು ತಿಂಗಳು ಕಳೆದರೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈಗ ಆಸ್ಕರ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಚಿತ್ರದ ದೃಶ್ಯಗಳು ಪ್ರಸಾರವಾಗುವುದರೊಂದಿಗೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಮಂಗಳವಾರ (ಜ.18) ಆಸ್ಕರ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ತಮಿಳು ಚಿತ್ರ ಜೈ ಭೀಮ್ನ ದೃಶ್ಯಗಳನ್ನು ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ “ಸೀನ್ ಅಟ್ ದಿ ಅಕಾಡೆಮಿ” ವಿಭಾಗದಲ್ಲಿ 12 ನಿಮಿಷ 47 ಸೆಕೆಂಡ್ ಅಪ್ಲೋಡ್ ಮಾಡಲಾಗಿದೆ. ಚಿತ್ರದ ನಿರ್ದೇಶಕ ಜ್ಞಾನವೇಲು ಅವರ ನಿರೂಪಣೆಯೊಂದಿಗೆ ಚಿತ್ರದ ಒಂದೊಂದು ದೃಶ್ಯಗಳನ್ನು ತೋರಿಸಲಾಗಿದೆ.
’ಇರುಳ’ ಆದಿವಾಸಿ ಬುಡಕಟ್ಟು ಸಮುದಾಯದ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಕಾನೂನಾತ್ಮಕವಾಗಿ ನಡೆದ ಹೋರಾಟದ ಎಳೆಯನ್ನು ಇಟ್ಟುಕೊಂಡು ಟಿ.ಜೆ. ಜ್ಞಾನವೇಲ್, ಜೈ ಭೀಮ್ ಸಿನಿಮಾ ನಿರ್ದೇಶಿಸಿದ್ದರು. ಚಿತ್ರದಲ್ಲಿ ನಟ ಸೂರ್ಯ, ಮದ್ರಾಸ್ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಕೆ. ಚಂದ್ರು ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…
ಕಳೆದ ವರ್ಷ ಅಮೆಜಾನ್ ಪ್ರೈಮ್ನಲ್ಲಿ ಬಿಡುಡೆಯಾಗಿದ್ದ ಜೈ ಭೀಮ್ ಚಿತ್ರದಲ್ಲಿ ಪ್ರಕಾಶ್ ರಾಜ್, ರಾವ್ ರಮೇಶ್, ರಜಿಶಾ ವಿಜಯನ್, ಕೆ.ಮಣಿಕಂಠನ್ ಮತ್ತು ಲಿಜೋಮೋಲ್ ಜೋಸ್ ಇತರರು ನಟಿಸಿದ್ದಾರೆ.
ಆಸ್ಕರ್ನ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಿರುವ ವೀಡಿಯೋದಲ್ಲಿ, ನಿರ್ದೇಶಕ ಜ್ಞಾನವೇಲ್ ಕಥೆ ಹುಟ್ಟಿಕೊಂಡಿದ್ದು, ಜಾತಿ ವ್ಯವಸ್ಥೆ, ಅದನ್ನು ಸಿನಿಮಾಗೆ ಹೊಂದಿಸಿದ್ದು, ಸಿನಿಮಾ ಏನನ್ನು ಹೇಳಲು ಹೊರಟಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಜೊತೆ ಜೊತೆಯಲ್ಲಿ ಸಿನಿಮಾದ ದೃಶ್ಯಗಳನ್ನು ತೋರಿಸಲಾಗಿದೆ.
“ಈ ಸಿನಿಮಾ ಕೇವಲ ಬುಡಕಟ್ಟು ಸಮುದಾಯದ ಮೇಲಿನ ಪೊಲೀಸರ ದೌರ್ಜನ್ಯದ ಕುರಿತು ಮಾತಾಡುವುದಿಲ್ಲ ಇದು ಜಾತಿ ತಾರತಮ್ಯದ ಅಡಿಯಲ್ಲಿ ನಡೆಯುವ ಪೊಲೀಸ್ ದೌರ್ಜನ್ಯ, ತಾರತಮ್ಯದ ಕುರಿತು ಮಾತಾಡುತ್ತದೆ” ಎಂದು ಟಿ.ಜೆ.ಜ್ಞಾನವೇಲ್ ಹೇಳಿದ್ದಾರೆ.