ಶ್ರೀನಗರದಲ್ಲಿ ಮೊಹರಂ ಮೆರವಣಿಗೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿತ್ತು. ಹಲ್ಲೆ ನಡೆದು ಒಂದು ದಿನದ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಶ್ರೀನಗರ ಎಸ್ಎಸ್ಪಿಗೆ ಸೂಚಿಸಿದ್ದಾರೆ.
ಶ್ರೀನಗರದ ಕೆಲವು ಮಾಧ್ಯಮಗಳ ಜೊತೆಗೆ ಪೊಲೀಸರ ವರ್ತನೆಯ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಗಂಭೀರವಾದ ಕ್ರಮವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮಂಗಳವಾರ ಶ್ರೀನಗರದ ಜಹಾಂಗೀರ್ ಚೌಕ್ ಫ್ಲೈ ಓವರ್ ಬಳಿ 8 ನೇ ಮೊಹರಂ ಮೆರವಣಿಗೆಯನ್ನು ವರದಿ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು. ಫೋಟೋ ಜರ್ನಲಿಸ್ಟ್, ಸಾಜದ್ ಹಮೀದ್ ಅವರ ಕ್ಯಾಮೆರಾ ಲೆನ್ಸ್ ಅನ್ನು ಪೊಲೀಸರು ಹೊಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹೆಸರು ಬದಲಾವಣೆ ಮುಂದುವರೆಸಿದ ಬಿಜೆಪಿ: ಉತ್ತರ ಪ್ರದೇಶದ ಅಲಿಗಢ ಮರುನಾಮಕರಣಕ್ಕೆ ಪ್ರಸ್ತಾಪ
In pics- Scores of media persons were on Tuesday thrashed by the policemen when they were performing their processional duties (covering Muharram procession) at Jehangir Chowk in Srinagar. (KNO) #Srinagar #Kashmir #JournalismIsNotACrime pic.twitter.com/WmmcUJxHME
— Umar Ganie (@UmarGanie1) August 17, 2021
ಶ್ರೀನಗರ ಪೊಲೀಸರು ಪತ್ರಕರ್ತರನ್ನು ಥಳಿಸುವ ವಿಡಿಯೊ, ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಪೊಲೀಸರ ಕೃತ್ಯಕ್ಕೆ ಕಾಶ್ಮೀರ ಪ್ರೆಸ್ ಕ್ಲಬ್ ಮತ್ತು ಕಾಶ್ಮೀರ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಸೇರಿದಂತೆ ಕಾಶ್ಮೀರ ಮೂಲದ ಮಾಧ್ಯಮ ಸಂಸ್ಥೆಗಳಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಕಾಶ್ಮೀರ ಪ್ರೆಸ್ ಕ್ಲಬ್ , ’ಶೆರ್ಗರಿ ಪೊಲೀಸ್ ಠಾಣೆಯ ಪೊಲೀಸರು ಯಾವುದೇ ಪ್ರಚೋದನೆಯಿಲ್ಲದೆ ಮಾಧ್ಯಮದವರನ್ನು ಥಳಿಸಿದ್ದಾರೆ. ಈ ಪೊಲೀಸರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಪೊಲೀಸ್ ಅಧಿಕಾರಿಗಳು ಸಂವಿಧಾನದ ಪ್ರಕಾರ ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸಬೇಕು” ಎಂದು ಒತ್ತಾಯಿಸಿದೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೂಡ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಪೀಪಲ್ಸ್ ಕಾನ್ಫರೆನ್ಸ್ ಮತ್ತು ಅಪ್ನಿ ಪಾರ್ಟಿ ಸೇರಿದಂತೆ ಇತರ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಕೂಡ ಘಟನೆಯನ್ನು ಖಂಡಿಸಿವೆ.
ಇದನ್ನೂ ಓದಿ: ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿದೆ ಎಂದು ಸುಳ್ಳು ಸುದ್ದಿ ಹಂಚುತ್ತಿರುವ ಬಿಜೆಪಿ