Homeಕರ್ನಾಟಕಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!...

ಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!…

- Advertisement -
- Advertisement -

ಜನವಾಹಿನಿಯ ನೆನಪುಗಳು: ಅಂಕಣ-7
ನಿಖಿಲ್ ಕೋಲ್ಪೆ

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಮೊದಲೇ ಹೇಳಿದಂತೆ ಕಂಪ್ಯೂಟರ್ ಇತ್ಯಾದಿ ಬಂದಿದ್ದರೂ, ಆಗ ಆನ್ಲೈನ್ ಎಡಿಟಿಂಗ್ ಹೊಸ ವಿಷಯವಾಗಿದ್ದುದರಿಂದ ಅದಕ್ಕಾಗಿಯೇ ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಪೂರೈಸಿದ ಕಂಪೆನಿಯವರು ವಿಶೇಷ ತರಬೇತಿ ಏರ್ಪಡಿಸಿದ್ದರು.

ನಮ್ಮಲ್ಲಿ ಕೆಲವರು ಪೇಜ್‍ಮೇಕರ್ ಇತ್ಯಾದಿಗಳಲ್ಲಿ ನಿಷ್ಣಾತರಾಗಿದ್ದರೂ, ನನ್ನನ್ನೂ ಸೇರಿದಂತೆ ಕೆಲವರಿಗೆ ಕನ್ನಡ ಟೈಪಿಂಗ್ ಕೂಡಾ ಬರುತ್ತಿರಲಿಲ್ಲ! ವಿಭಾಗ ಮುಖ್ಯಸ್ಥರು ಸುದ್ದಿಗಳನ್ನು ಆಯ್ಕೆ ಮಾಡಿ, ಉಪಸಂಪಾದಕರಿಗೆ ಹಂಚಬೇಕು. ಉಪಸಂಪಾದಕರು ಟೈಪ್ ಮಾಡಿದ್ದನ್ನು ಮತ್ತೊಮ್ಮೆ ಓದಿ ವಿಭಾಗ ಮುಖ್ಯಸ್ಥರಿಗೆ ಆಂತರಿಕ ನೆಟ್ವರ್ಕ್ ಮೂಲಕ ಕಳಿಸಬೇಕು. ಅದನ್ನವರು ಪರಿಶೀಲಿಸಿ, ಹೆಡ್ಡಿಂಗ್ ಇತ್ಯಾದಿ ಸರಿಪಡಿಸಿ ಮರಳಿ ಪೇಜ್ ಮಾಡಲು ಕಳಿಸಬೇಕು. ಪೇಜ್ ಮಾಡಿದ ಬಳಿಕ ಅದರ ಪ್ರಿಂಟ್ ತೆಗೆದು ಮತ್ತೆ ಮುಖ್ಯಸ್ಥರಿಗೆ ತೋರಿಸಿ, ಅವರು ಅಂಗೀಕರಿಸಿದ ಬಳಿಕ ಎ3 ಪ್ರಿಂಟರಲ್ಲಿ ಬಟರ್‍ಶೀಟ್‍ನಲ್ಲಿ, ಬಣ್ಣದ ಪುಟವಾಗಿದ್ದರೆ ಫಿಲ್ಮ್ ಶೀಟ್‌ನಲ್ಲಿ ಪ್ರಿಂಟ್ ತೆಗೆದು ಪ್ರೀಪ್ರೆಸ್‍ಗೆ ಕಳುಹಿಸಬೇಕು. ಅಲ್ಲಿ ಪ್ಲೇಟ್ ತಯಾರಿಸಿ ಮುದ್ರಣ ವಿಭಾಗಕ್ಕೆ ಕಳಿಸುತ್ತಾರೆ. ಇದಕ್ಕಾಗಿ ಎಲ್ಲಾ ಕಂಪ್ಯೂಟರ್‌ಗಳಿಗೆ ಸಿರಿಯಲ್ ನಂಬರ್ ನೀಡಲಾಯಿತು. (ನಂತರ ಬಣ್ಣದ ಪುಟಗಳಿಗೆ ದುಬಾರಿ ಬೆಲೆಯ ಆ ಕಾಲದಲ್ಲಿ ಅತ್ಯಾಧುನಿಕ ಎನಿಸಿದ ಇಮೇಜ್ ಸೆಟ್ಟರ್ ಬಂತು. ಅದು ಕಲರ್ ಸೆಪರೇಶನ್ ಮಾಡಿ ಇಡೀ ಪುಟದ ಫಿಲ್ಮ್ ಹೊರತೆಗೆಯುತ್ತಿತ್ತು.)

ಆಗ ಈಗಿನಂತೆ ಎಲ್ಲವೂ ಡಿಜಿಟಲ್ ಫೋಟೋಗಳಾಗಿರಲಿಲ್ಲ. ಪ್ರಿಂಟ್‍ಗಳೂ ಇರುತ್ತಿದ್ದವು. ಅವುಗಳನ್ನು ತಾಂತ್ರಿಕ ವಿಭಾಗಕ್ಕೆ ಕಳುಹಿಸಿದರೆ, ಅಲ್ಲಿ ಸ್ಕ್ಯಾನ್ ಮಾಡಿ ಆಯಾ ಫೋಲ್ಡರ್‌ಗಳಿಗೆ ಹಾಕುತ್ತಿದ್ದರು. ದೇಶ, ವಿದೇಶಗಳ ಫೋಟೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಅವು ಸಂಜೆಯ ಹೊತ್ತಿಗೆ ಇಂಟರ್‌ನೆಟ್ ಮೂಲಕ ಬರುತ್ತಿದ್ದವು. ನೆಟ್‍ಗಾಗಿಯೇ ಡೆಡಿಕೇಟೆಡ್ ಕೇಬಲ್ ಅಳವಡಿಸಲಾಗಿತ್ತು. ಆದರೂ, ಆಗಿನ ಸ್ಪೀಡ್ ನೆನೆಸಿಕೊಂಡರೆ ನಗು ಬರುತ್ತದೆ! ಒಂದು ಫೋಟೋ ಬರಲು ಹೆಂಡತಿಯ ಹೆರಿಗೆಗಾಗಿ ಆಸ್ಪತ್ರೆಯಲ್ಲಿ ಕಾಯುವ ಗಂಡನ ಸ್ಥಿತಿ!

ಇವೆಲ್ಲವೂ ಈಗ ನೆನಸುವಷ್ಟು ಸುಲಭವಾಗಿ ಇರಲಿಲ್ಲ! ಇದಕ್ಕೆ ಹೊಂದಿಕೊಳ್ಳಲು ಕೆಲವು ದಿನಗಳೇ ಹಿಡಿದವು! ಅದಕ್ಕಾಗಿಯೇ ತರಬೇತಿ. ಕಂಪೆನಿಯಿಂದ ಸೌರಭ್ ಎಂಬ ಯುವಕ ಬಂದಿದ್ದರು. ಆತ ಒಳ್ಳೆಯ ಶಿಕ್ಷಕ. ನಡುವೆ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದವರಿಗೆ ಒಂದು ಚಾಕಲೇಟ್ ಬಹುಮಾನ! ಕಂಪ್ಯೂಟರ್ ಅಜ್ಞಾನಿಯಾಗಿದ್ದ ನನಗೆ ಮೂರು ಚಾಕಲೇಟ್ ಸಿಕ್ಕಿದ್ದು ಇವತ್ತೂ ನೆನಪಿದೆ. ನಾವೆಲ್ಲ ಬಿಡುವಿನ ಸಂದರ್ಭದಲ್ಲಿ ಕನ್ನಡ ಟೈಪಿಂಗ್ ಕಲಿತೆವು. ಮೊದಲೇ ಹೇಳಿದಂತೆ DOS ಆಧರಿತ ‘ಪ್ರಕಾಶಕ್’ ಎಂಬ ಸಾಫ್ಟ್‌ವೇರ್. ಕಲಿಯಲು ಕಷ್ಟ. ಯಾಕೆಂದರೆ ಕೀ ಬೋರ್ಡ್ ಅಸಂಬದ್ಧ ಎಂಬಂತೆ ಕಾಣುತ್ತಿತ್ತು. ಇಂಗ್ಲೀಷ್ ಅಕ್ಷರಗಳಿಗೂ ಅದಕ್ಕೂ ಸಂಬಂಧವೇ ಇಲ್ಲ! ಒಮ್ಮೆ ಕಲಿತರೆ ಅತ್ಯಂತ ಸರಳ ಮತ್ತು ಅನುಕೂಲಕರ. ನಾನಂತೂ ಸ್ವಲ್ಪ ಸಮಯದಲ್ಲೇ ಹೆಚ್ಚುಕಡಿಮೆ ಮಾತಿನ ವೇಗದಲ್ಲಿ ಟೈಪ್ ಮಾಡಲು ಕಲಿತೆ! ಆಗ ಕಲಿತ ಒಂದು ಪಾಠವೆಂದರೆ, ಏನನ್ನಾದರೂ ಕಲಿಯಲು ಇರುವ ಅಡ್ಡಿಯೆಂದರೆ ಮಾನಸಿಕ ಹಿಂಜರಿಕೆ (mental block). ಇದನ್ನು ನಿವಾರಿಸಿದ್ದಕ್ಕಾಗಿ ಸೌರಭ್‌ರನ್ನು ನೆನಪಿಸಿಕೊಳ್ಳುತ್ತೇನೆ.

ಮೊದಲೇ ದುಬಾರಿ ಕಂಪ್ಯೂಟರ್! ಏನು ಮಾಡಿದರೆ ಏನು ಹಾಳಾಗುತ್ತದೋ ಎಂಬ ಭಯ ಬೇರೆ! “ನೀವು ಇದನ್ನು ಎತ್ತಿ ಹಾಕದ ಹೊರತು ಏನೂ ಆಗುವುದಿಲ್ಲ. ಪ್ರೋಗ್ರಾಂ ಫೈಲ್ಸ್ ಮುಟ್ಟಬೇಡಿ. ಮುಟ್ಟಿದರೂ ಅದು ಕನ್ಫರ್ಮೇಶನ್ ಕೇಳುತ್ತದೆ. ಡಿಲೀಟ್ ಮಾಡಬೇಡಿ. ಉಳಿದಂತೆ ನೀವು ಕಂಪ್ಯೂಟರ್ ಹಾಳು ಮಾಡಿ ತೋರಿಸಿ. ನಾನು ಬೇರೆ ಕಂಪ್ಯೂಟರ್ ಕೊಡುತ್ತೇನೆ” ಎಂದು ಅವರು ಧೈರ್ಯ ತುಂಬಿದ್ದರು! ಇದರಿಂದ ಮುಂದೆ ನಾವಾಗಿಯೇ ಒಂದೊಂದನ್ನೇ ಧೈರ್ಯವಾಗಿ ಕಲಿಯಲು ಸಾಧ್ಯವಾಯಿತು.

ಎಷ್ಟರ ಮಟ್ಟಿಗೆ ಎಂದರೆ, ಅವರು ಫೈಲ್ ಶೇರಿಂಗ್ ಮಾಡಲು ಇ-ಮೈಲ್‍ನಂತಹ ಸಾಫ್ಟ್‌ವೇರ್ ಕೊಟ್ಟಿದ್ದರು. ಅದು ಕಿರಿಕಿರಿ ಉಂಟು ಮಾಡುತ್ತಿತ್ತು! ಮುಂದೆ ನಾವೇ explorer ಮೂಲಕ ಕಾಪಿ ಪೇಸ್ಟ್ ಮಾಡುವ ಸರಳ ಉಪಾಯ ಕಂಡು ಹಿಡಿದೆವು!

ನಾವು ಸೀನಿಯರ್‌ಗಳಿಗೆ ಈ ತರಬೇತಿಗಳಲ್ಲಿ ನಿರಂತರ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದೆ. ಕಾರಣ ನಾವು ಪತ್ರಿಕೆಯಲ್ಲಿ ಇರಬೇಕಾದ ಸ್ಥಿರ ಶೀರ್ಷಿಕೆ, ವಿಭಾಗಗಳು ಇತ್ಯಾದಿಗಳ ಬಗ್ಗೆ ತಲೆಕೆರೆದುಕೊಳ್ಳುತ್ತಿದ್ದೆವು. ಪಟ್ಟಣಗಳ ಸುದ್ದಿ ಪುಟಗಳಿಗೆ ‘ಪೇಟೆ-ಪಟ್ಟಣ’, ಗ್ರಾಮೀಣ ಸುದ್ದಿಗಳ ಪುಟಗಳಿಗೆ ’ಊರು-ಕೇರಿ’, ಕ್ರೀಡಾಪುಟಗಳಿಗೆ ‘ಆಟ-ಕೂಟ’ ಹೀಗೆ ಹೆಸರುಗಳನ್ನು ಪಟ್ಟಿ ಮಾಡಿ ಅಂತಿಮಗೊಳಿಸುವುದೂ ದೊಡ್ಡ ಕೆಲಸವಾಗಿತ್ತು.

ಇನ್ನೊಂದು ದೊಡ್ಡ ಕೆಲಸವೆಂದರೆ ಬೇರೆ ಬೇರೆ ಆವೃತ್ತಿಗಳನ್ನು ಯೋಜಿಸುವುದು! ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಉಡುಪಿಗೆ ಒಂದು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ ಒಂದು, ಮಂಗಳೂರಿಗೆ ಒಂದು ಮತ್ತು ಅಂತಿಮವಾಗಿ ಲೇಟ್ ಸಿಟಿ ಎಡಿಷನ್! ಜೊತೆಗೆ ಉತ್ತರ ಕನ್ನಡ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಿಗೆ ಪ್ರತ್ಯೇಕ- ಹೀಗೆ ಹಲವು ಆವೃತ್ತಿಗಳು! ಇವುಗಳು ಎಷ್ಟು ದೂರ ಇವೆ, ಎಷ್ಟು ಗಂಟೆಗೆ ತಲುಪಬೇಕು, ಪುಟ ಎಷ್ಟು ಗಂಟೆಗೆ ಮುಗಿಯಬೇಕು, ಅದಕ್ಕೆ ತಕ್ಕಂತೆ ಸಿಬ್ಬಂದಿಗಳಿಗೆ ಶಿಫ್ಟ್ ಮತ್ತು ಕೆಲಸಕ್ಕೆ ಹಾಜರಾಗುವ ಸಮಯ ನಿಗದಿ ಪಡಿಸುವುದು ಇತ್ಯಾದಿಯಾಗಿ ಹಲವಾರು ತಲೆನೋವಿನ ಕೆಲಸಗಳು ನಮಗಿದ್ದವು!

ಇವೆಲ್ಲವನ್ನು ಅನುಷ್ಠಾನಕ್ಕೆ ತರಲು ಬೇರೆಬೇರೆ ವಿಭಾಗಗಳನ್ನು ರಚಿಸಲಾಯಿತು. ಆ ಕುರಿತು ಮತ್ತು ಅವುಗಳಲ್ಲಿ ನನಗೆ ನೆನಪಿರುವಂತೆ ಇದ್ದವರು ಯಾರು ಇತ್ಯಾದಿಗಳ ಕುರಿತು ಮುಂದೆ ಬರೆಯುತ್ತೇನೆ.
***

ಕಚೇರಿಯೇ ಮನೆಯಾಯಿತು!

ಪತ್ರಿಕೆಗಾಗಿ ಯೋಜನೆ, ತರಬೇತಿ ನಡೆಯುತ್ತಿದ್ದಾಗ ಮತ್ತು ನಂತರ ಪತ್ರಿಕೆ ಆರಂಭಗೊಂಡ ಬಳಿಕವೂ ನಾವು ಕೆಲವರು ಕಚೇರಿಯಲ್ಲಿಯೇ ಮಲಗುತ್ತಿದ್ದೆವು. ಕೆಲಸ ಅಷ್ಟಿತ್ತು! ಮುಖಪುಟ ನೋಡಿಕೊಳ್ಳಬೇಕಾಗಿದ್ದ ನನಗಂತೂ ನಿತ್ಯ ರಾತ್ರಿ ಪಾಳಿ ಖಾಯಂ! ರಾತ್ರಿ ಎಡಿಷನ್ ಮುಗಿಸಿ ಪತ್ರಿಕೆ ಪ್ರಕಟವಾಗಿ ಬಂಟ್ವಾಳ ಎಡಿಷನ್ ಸಾಗಿಸುವ ಕಾರಿನಲ್ಲಿ ಹೋಗಿ ಪಾಣೆಮಂಗಳೂರಿನಲ್ಲಿ ಇಳಿದು ಎರಡು ಕಿ.ಮೀ. ನಿಶಾಚರ ಪಿಶಾಚಿಯಂತೆ ನಡೆದು ಮನೆ ಸೇರಬೇಕು. ಮತ್ತೆ ನಿದ್ದೆಯ ಶಾಸ್ತ್ರ ಮಾಡಿ ಮರುದಿನ ಹಾಜರಾಗಬೇಕು. ಪ್ರಯಾಣದ ಸಮಯವೂ ವ್ಯರ್ಥ! ವಿಲ್ಫ್ರೆಡ್ ಡಿ’ಸೋಜಾ ಅವರಿಗೆ ಇನ್ನೂ ದೂರ- ಉಪ್ಪಿನಂಗಡಿ ದಾಟಿ ಹೋಗಬೇಕು. ಅಲ್ಲದೆ ಉಳಿದವರೂ ಬೈಕಂಪಾಡಿಯಿಂದ ರಾತ್ರಿ ಹೊತ್ತು ಸ್ವಂತ ವಾಹನವಿಲ್ಲದೇ ಹೊರಡುವುದು ಕಷ್ಟ. ನಗರದೊಳಗಿನ ಸಿಬ್ಬಂದಿಗೆ ವಾಹನ ವ್ಯವಸ್ಥೆ ಇತ್ತು.

ಒಂದು ದಿನ ಬೆಳ್ಳಂಬೆಳಗೆ ಆಡಳಿತ ನಿರ್ದೇಶಕ ಸ್ಯಾಮುಯೆಲ್ ಸಿಕ್ವೇರಾ ಕಚೇರಿಗೆ ಬಂದವರೇ ದಂಗು ಬಡಿದುಹೋದರು! ನಾವು ಕೆಲವರು ಕಚೇರಿಯಲ್ಲಿಯೇ ಸಿಕ್ಕಸಿಕ್ಕಲ್ಲಿ ಪೇಪರ್ ಹಾಸಿ ಮಲಗಿದ್ದೆವು. “ಹಾಂ! ನೀವು ಇಲ್ಲಿಯೇ ಮಲಗುತ್ತಿದ್ದೀರಾ!?” ಎಂದವರೇ, ಆಗ ಅವರ ಬಳಿ ಮಾತ್ರವಿದ್ದ ವಾಕಿಟಾಕಿ ಗಾತ್ರದ ಮೊಬೈಲ್ ಫೋನಿನಲ್ಲಿ ಮಾತನಾಡಲಾರಂಭಿಸಿದರು.

ಮಧ್ಯಾಹ್ನದ ಹೊತ್ತಿಗೆ ನಮ್ಮ ದೊಡ್ಡ ಹಾಲ್‍ನಲ್ಲಿ ಪಾರ್ಟಿಷನ್ ಆಯಿತು. ಫ್ಯಾನ್‍ಗಳು ಫಿಕ್ಸ್ ಆದವು. ಐದು ಮಂಚಗಳು, ಹಾಸಿಗೆ, ದಿಂಬು, ಹೊದಿಕೆ, ಬಟ್ಟೆಬರೆ ಇಡಲು ಲಾಕರ್ ಎಲ್ಲವೂ ಬಂದವು. ಅದೇ ರಾತ್ರಿಯಿಂದ ನಮ್ಮ ಪೇಪರ್ ಹಾಸಿಗೆಗೆ ವಿದಾಯ ಹೇಳಿದೆವು. ಇದಕ್ಕಾಗಿಯೇ ನಾನವರನ್ನು ಇಂದೂ ನೆನಪಿಸಿಕೊಳ್ಳುತ್ತೇನೆ. ನಾವೂ ಕೂಡಾ ಇಮ್ಮಡಿ ಪ್ರೀತಿಯಿಂದ ದುಡಿಯಲಾರಂಭಿಸಿದೆವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Thanks for this great write up on Janawahini by Nikhil Kolpe sir.. it manifests their struggle to get the newspaper published in time with perfection must be applauded.. Waiting for further episodes.

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...