ಕವಿ ಮತ್ತು ಪತ್ರಕರ್ತ ಸಿರಾಜ್ ಬಿಸ್ರಳ್ಳಿಯವರ ವಿರುದ್ಧ ಎಫ್ಐಆರ್ ದಾಖಲಿಸಿರುವ ಕ್ರಮವನ್ನು ನೂರಾರು ಜನರು ಖಂಡಿಸಿದ್ದಾರೆ. ಅಲ್ಲದೇ ಅವರು ಬರೆದ ಕವನವೂ ಈಗಾಗಲೇ ಇಂಗ್ಲಿಷ್, ತೆಲುಗು ಮತ್ತು ಕೊಂಕಣಿ ಭಾಷೆಗೆ ಅನುವಾದವಾಗಿದ್ದು ವೈರಲ್ ಆಗಿದೆ.

ಜನವರಿ 9 ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸ್ರಳ್ಳಿಯವರು ’ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ನುವ ಪದ್ಯ ಓದಿದ್ದರು. ಇದನ್ನೇ ದೇಶದ್ರೋಹವೆಂದು ಕರೆದು ಬಿಜೆಪಿಯು ದೂರು ನೀಡಿದ್ದು, ಗಂಗಾವತಿ ಪೊಲೀಸರು ದೂರು ಸಹ ದಾಖಲಿಸಿದ್ದಾರೆ. ಇದರ ವಿರುದ್ಧ ನಾಡಿನ ಕವಿಗಳು, ಸಾಹಿತಿಗಳು, ಜನಪರ ಹೋರಾಟಗಾರರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ನಿನ್ನ ದಾಖಲೆ ಯಾವಾಗ ನೀಡುತ್ತಿ?..( ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವಿತೆ)ಆಧಾರು, ರೇಷನ್ ಕಾರ್ಡಗಳ ಕ್ಯೂನಲ್ಲಿಥಂಬಿನ, ಸರ್ವರಿನ ಮಂಗನಾಟದಲ್ಲಿಬದುಕ ಕಳೆದುಕೊಳ್ಳು ತ್ತಿರುವವರ ದಾಖಲೆಕೇಳುವವನೇ ನಿನ್ನ ದಾಖಲೆ ಯಾವಾಗ ನೀಡುತ್ತಿ? ನಾಡಿನ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಲೇ ನೇಣಿಗೇರಿದವರ ,ಹೆಸರೂ ಬೇಡವೆಂದು ಹುತಾತ್ಮರಾದವರ ಇತಿಹಾಸದ ಹಾಳೆಗಳ ಹರಿಯುತ್ತಿರುವವನೇನಿನ್ನ ದಾಖಲೆ ಯಾವಾಗ ನೀಡುತ್ತಿ ? ತಾಜ್ ಮಹಲ್, ಚಾರ್ ಮಿನಾರು ಗುಂಬಜಗಳಿಗೆಕೆಂಪು ಕೋಟೆ ಕುತುಬ್ ಮಿನಾರುಗಳಿಗೆ ಸಾಕ್ಷಿ ಕೇಳುತ್ತಿರುವವನೇನಿನ್ನ ದಾಖಲೆ ಯಾವಾಗ ನೀಡುತ್ತಿ? ಬ್ರಿಟಿಷರ ಬೂಟು ನೆಕ್ಕಿದ ತಲೆಹಿಡುಕರಧರ್ಮ ದ್ವೇಷದ ಅಮಲಿನಲ್ಲಿ ರಕ್ತ ಕುಡಿಯುತ್ತಿರುವಗೊಬೆಲ್ ಸಂತತಿಯವನೇನಿನ್ನ ದಾಖಲೆ ಯಾವಾಗ ನೀಡುತ್ತಿ? ಪಕೋಡ ಮಾರಿ ಬದುಕಿದವನುಚಾ ಮಾರಿ ಬದುಕಿದವನು ನನ್ನೂರಿನಲ್ಲಿಮನುಷ್ಯತ್ವ ಮಾರಿಕೊಂಡಿಲ್ಲಸ್ವಾಭಿಮಾನ ಮಾರಿಕೊಂಡಿಲ್ಲ, ಸುಳ್ಳಿನ ಕಂತೆಗಳ ಕತೆ ಕಟ್ಟಿಲ್ಲಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ? ಮುಳ್ಳು ಚುಚ್ಚಿ, ಹರಿದು, ಸಿಡಿದು ಹೋದಟ್ಯೂಬುಗಳ, ಟೈಯರುಗಳ ತಿದ್ದಿ ತೀಡಿ ಗಾಳಿ ತುಂಬಿದಪಂಚರ್ ನವನು ತನ್ನತನವನ್ನು ಮಾರಿಕೊಳ್ಳಲಿಲ್ಲನೀನು ದೇಶವನ್ನೇ ಮಾರಿಬಿಟ್ಟೆಯಲ್ಲಹೇಳು ನಿನ್ನ ದಾಖಲೆಗಳ ಯಾವಾಗ ನೀಡುತ್ತಿ ? ದೇಶವನ್ನೇ ಯಾಮಾರಿಸಿದ ನಿನಗೆನಕಲಿ ದಾಖಲೆಗಳು ದೊಡ್ಡದಲ್ಲ ಬಿಡುಕನಿಷ್ಠ ಮನುಷ್ಯತ್ವವೂ ನಿನಗಿದೆಎನ್ನುವ ದಾಖಲೆ ಯಾವಾಗ ನೀಡುತ್ತಿ ?
Posted by Siraj Bisaralli on Tuesday, January 14, 2020
ಕೇಸು ಹಾಕುವುದಾದರೆ ನಮ್ಮ ಮೇಲೆಯೂ ಕೇಸು ಹಾಕಿ ಎಂದು ಸವಾಲು ಹಾಕಿರುವ ಜಾಲತಾಣಿಗರು ಅದೇ ಕವನವನ್ನು ತಮ್ಮ ಫೇಸ್ಬುಕ್ ವಾಲ್ನಲ್ಲಿ ಷೇರ್ ಮಾಡಿ ವೈರಲ್ ಮಾಡಿದ್ದಾರೆ. ಆ ಮೂಲಕ ಸಿರಾಜ್ ಬಿಸ್ರಳ್ಳಿಯವರಿಗೆ ನೈತಿಕ ಬೆಂಬಲ ನೀಡಿದ್ದಾರೆ.
ಈ ಕವನವನ್ನು ದೇಶದ್ರೋಹ ಎಂದು ಕರೆಯುವುದಾದರೆ ಶೇ.90% ಕಥೆ, ಕವನಗಳು ದೇಶದ್ರೋಹದ ಪಟ್ಟಿಗೆ ಸೇರುತ್ತವೆ. ಈ ಕವನವನ್ನು ಸಂಕುಚಿತವಾಗಿ ಅರ್ಥೈಸಿಕೊಂಡಿರುವ ಬಿಜೆಪಿ ಮತ್ತು ಪೊಲೀಸರ ಮನಸ್ಥಿತಿ ಖಂಡನೀಯ ಎಂದು ದೂರಿದ್ದಾರೆ. ಕವಿ ಚಿದಂಬರ ನರೇಂದ್ರರವರು ಗೃಹ ಸಚಿವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಅದರ ಪೂರ್ಣ ಪಾಠ ಕೆಳಗಿನಂತಿದೆ.
ಮಾನ್ಯ ಗೃಹಮಂತ್ರಿ ಬಸವರಾಜ್ ಬೊಮ್ಮಾಯಿಯವರೇ,
ಎಂ.ಎನ್. ರಾಯ್ ರಂಥ ಧೀಮಂತ ನಾಯಕನ ಶಿಷ್ಯರಾದ ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿಗಳಾದ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರ ಸುಪುತ್ರರಾದ ತಮ್ಮ ಅಧಿಕಾರಾವಧಿಯಲ್ಲಿ ಇಂತಹ ಅನ್ಯಾಯಗಳು ಜರುಗುವುದು ನಮ್ಮ ಸಂವಿಧಾನಕ್ಕೂ, ತಾವು ನಂಬಿಕೊಂಡಿರುವ ಬಸವ ತತ್ವಕ್ಕೂ ಮತ್ತು ಸ್ವತಃ ತಮ್ಮ ತೀರ್ಥರೂಪರ ಘನ ವ್ಯಕ್ತಿತ್ವಕ್ಕೂ ಅಪಮಾನವೆಂದು ತಿಳಿದು, ಈ ಮನವಿ ಸಲ್ಲಿಸುತ್ತಿದ್ದೇನೆ.
ಜನವರಿ 9 ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸ್ರಳ್ಳಿಯವರು ’ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ನುವ ಪದ್ಯ ಓದಿದ್ದಾರೆ. ಈ ದೇಶದ ಸಂವಿಧಾನದ ಕಲಂ 14 ರ ಸಮಾನತೆಯ ಆಶಯಕ್ಕೆ ವಿರುದ್ಧವಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶವಾಸಿಯಾಗಿ ತನ್ನ ವಿರೋಧವನ್ನು ಅಭಿವ್ಯಕ್ತಿಸಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿಯ ಕೊಪ್ಪಳ ನಗರ ಘಟಕವು ಜನವರಿ 15 ರಂದು ಕೊಪ್ಪಳದ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಕೇಂದ್ರ ಸರಕಾರದ ಯೋಜನೆ, ಪ್ರಧಾನಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರಿಗೆ, ಹಿಂಧೂ ಧರ್ಮಕ್ಕೆ ಅವಮಾನಿಸಿದ್ದಾಗಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಈ ದೂರಿನನ್ವಯ ಜಿಲ್ಲಾಧಿಕಾರಿಗಳು ಕಾರಣ ಕೇಳಿ ಕವಿಗೆ ನೋಟಿಸ್ ಜಾರಿ ಮಾಡಿರುತ್ತಾರೆ. ಕವಿಯು ಈ ನೋಟಿಸಿಗೆ ತನ್ನ ಪ್ರತಿಕ್ರಿಯೆ ನೀಡುವ ಮೊದಲೆ ಜನವರಿ 24 ರ ರಾತ್ರಿ ಗಂಗಾವತಿ ಪೋಲಿಸ್ ಸ್ಟೇಷನ್ನಿನಲ್ಲಿ ಎಫ್.ಐ.ಆರ್ ಕೂಡ ದಾಖಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಹಾಗಾಗಿ ನಾವುಗಳು ಖಂಡಿಸುತ್ತೇವೆ.

ಕಾವ್ಯ ಎಲ್ಲಾ ಕಾಲಕ್ಕೂ ಎದೆಯ ದನಿಯಾಗಿ ಮಾತನಾಡಿದೆ. ಯಾವುದೇ ಕವಿ ಅಥವಾ ಕವಯಿತ್ರಿ ತನ್ನ ಕಾಲದ ಒಳಗಿನ ಬಿಕ್ಕಟ್ಟುಗಳಿಂದಲೇ ಮೈಪಡೆಯುತ್ತಾರೆ. ಹೀಗೆ ಜಗತ್ತಿನ ಎಲ್ಲಾ ಬಿಕ್ಕಟ್ಟುಗಳ ಕಾಲದಲ್ಲಿಯೂ ಅಲ್ಲಿಯದೇ ಕವಿಗಳು ತಮ್ಮದೇ ನುಡಿಗಟ್ಟುಗಳಲ್ಲಿ ಕಾವ್ಯ ಕಟ್ಟಿದ್ದಾರೆ. ಇದೀಗ ಸಿಎಎ/ಎನ್.ಆರ್.ಸಿ ವಿರುದ್ಧವೂ ದೇಶವ್ಯಾಪಿ ಕಾವ್ಯ ಹುಟ್ಟಿದೆ. ಈ ನೆಲೆಯಲ್ಲಿ ಸಿರಾಜ್ ಅವರ ಕವಿತೆ ಈ ಕಾಲದ ಬಿಕ್ಕಟ್ಟುಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಪ್ರಶ್ನಿಸಿದ್ದಾರೆ. ಅಲ್ಲಿ ಯಾವುದೇ ಪಕ್ಷ, ನಿರ್ದಿಷ್ಠ ವ್ಯಕ್ತಿ ಎನ್ನುವುದಕ್ಕಿಂತ ಇದು ಸಾಂಕೇತಿಕವಾಗಿದೆ.
ಪ್ರಜಾಪ್ರಭುತ್ವದ ಸರಕಾರದಲ್ಲಿ ಕವಿಯೊಬ್ಬ ತನ್ನ ಆಳುವ ಸರಕಾರದ ನೀತಿಗಳನ್ನೂ, ಆಳುವ ಪ್ರಭುವನ್ನು ಪ್ರಶ್ನಿಸುವುದು ಸಂವಿಧಾನಿಕ ಹಕ್ಕು. ಅಂತೆಯೇ ಪ್ರಜಾಪ್ರಭುತ್ವದ ಸೌಂದರ್ಯ. ಹಾಗಾಗಿ ಸಿರಾಜ್ ಅವರ ಕವಿತೆ ದೇಶದ ನಾಗರೀಕರು ಕೇಳುವ ಪ್ರಶ್ನೆಯನ್ನು ಪ್ರಾತಿನಿಧಿಕವಾಗಿ ಕೇಳಿದ್ದಾರೆ. ಇದೊಂದು ಸಮೂಹದ ಪ್ರಶ್ನೆ. ಈ ಕೇಸ್ ದಾಖಲಿಸುವುದಾದರೆ ಈ ದೇಶದ ಶೇ 99% ಪ್ರಜಾಪ್ರಭುತ್ವವಾದಿಗಳ ವಿರುದ್ಧ ದಾಖಲಿಸಿಕೊಳ್ಳಬೇಕಿದೆ. ಕವಿತೆಯನ್ನು ವಾಚ್ಯವಾಗಿ ಅರ್ಥಮಾಡಿಕೊಂಡು ದೂರು ದಾಖಲಿಸಿದ ಕ್ರಮವನ್ನು ನಾನು ಖಂಡಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರದ ವಿರುದ್ಧದ ದುರುದ್ದೇಶಪೂರಿತ ದೂರನ್ನು ಕೈಬಿಡಬೇಕೆಂದು ಆಗ್ರಹಿಸುತ್ತೇನೆ.
ಎಂಬ ಪತ್ರವೂ ಸಹ ವೈರಲ್ ಆಗಿದ್ದು ನೂರಾರು ಜನ ಅದನ್ನು ಖಂಡಿಸಿ ಸಹಿ ಮಾಡಿದ್ದಾರೆ. ಅವರಲ್ಲಿ ವಿಜಯಮ್ಮ ಸುಕನ್ಯಾ ಮಾರುತಿ ವಸುಂಧರಾ ಭೂಪತಿ ಎಲ್.ಸಿ.ಸುಮಿತ್ರ ಕೆ.ಶರೀಫಾ ಎಮ್.ಎಸ್.ಆಶಾದೇವಿ ಕೆ.ನೀಲಾ ಮೀನಾಕ್ಷಿ ಬಾಳಿ ಪಿ.ಭಾರತೀದೇವಿ ಎಸ್.ಜಿ.ಸಿದ್ಧರಾಮಯ್ಯ ದಿನೇಶ್ ಅಮಿನಮಟ್ಟು ಎನ್.ಎಸ್.ಶಂಕರ ಪುರುಷೋತ್ತಮ ಬಿಳಿಮಲೆ ಪಿಚ್ಚಳ್ಳಿ ಶ್ರೀನಿವಾಸ ಬಸವರಾಜು ಅನಂತ ನಾಯಕ ಬಿ.ಶ್ರೀನಿವಾಸ ಹಸನ್ ನಯೀಂ ಸುರಕೋಡ ಬಿ.ಪೀರಬಾಷ ಎ.ಎಸ್.ಪ್ರಭಾಕರ ಶಶಿ ಸಂಪಳ್ಳಿ ಎಂ.ಡಿ.ಒಕ್ಕುಂದ ಪ್ರಭು ಖಾನಾಪುರೆ ಆರ್.ಕೆ.ಹುಡುಗಿ ವಡ್ಡಗೆರೆ ನಾಗರಾಜಯ್ಯ ಬಿ.ಶ್ರೀಪಾದ ಭಟ್ ಆರಿಫ್ ರಾಜಾ ರಝಾಕ್ ಉಸ್ತಾದ್ ಅಕ್ಷತಾ ಹುಂಚದಕಟ್ಟೆ ಅರುಣ್ ಜೋಳದಕೂಡ್ಲಿಗಿ, ಬಿ.ಸುರೇಶ್, ಕೆ.ಫಣಿರಾಜ್ ಪ್ರಮುಖರಾಗಿದ್ದಾರೆ.

ವರಕವಿ ದ.ರಾ.ಬೇಂದ್ರೆಯವರು ಸ್ವಾತಂತ್ರ್ಯಪೂರ್ವದಲ್ಲಿ ‘ನರಬಲಿ’ ಎಂಬ ಕವಿತೆ ರಚಿಸಿದ್ದರು. ಕವಿತೆಯಲ್ಲಿ ಮಹಾಕಾಳಿಯ ರೂಪಕವನ್ನು ಬಳಸಿ, ಬ್ರಿಟಿಷರ ದಬ್ಬಾಳಿಕೆಯನ್ನು ವರ್ಣಿಸಿದ್ದರು. ಭಾರತೀಯರು ತಮ್ಮನ್ನು ತಾವು ‘ನರಬಲಿ’ ಕೊಟ್ಟುಕೊಂಡಾದರೂ ಸ್ವಾತಂತ್ರ್ಯ ಪಡೆಯಬೇಕು ಎಂಬುದು ಕವಿತೆಯ ಆಶಯವಾಗಿತ್ತು. ಸಹಜವಾಗಿಯೇ ಪ್ರಭುತ್ವ ಸಹಿಸಲಿಲ್ಲ. ಬೇಂದ್ರೆಯವರನ್ನು ಪೊಲೀಸರು ಕರೆದೊಯ್ದರು. ಹಿಂಡಲಗಿ ಜೈಲಿನಲ್ಲಿ ಬೇಂದ್ರೆ ಮೂರು ತಿಂಗಳ ಶಿಕ್ಷೆ ಅನುಭವಿಸಿದರು. ಅದಾದಮೇಲೂ ಕ್ಷಮಾಪಣೆ ಕೇಳಲು (ಮುಚ್ಚಳಿಕೆ) ಒಪ್ಪದೆ ನಜರ್ ಬಂದಿ ಶಿಕ್ಷೆಗೆ ಒಳಗಾದರು. ಬ್ರಿಟಿಷರು ಕವಿತೆಗೆ ಹೆದರಿದರು, ಈಗ ನಮ್ಮನ್ನಾಳುವವರೂ ಬೆದರುತ್ತಿದ್ದಾರೆ. ಹೇಡಿಗಳಿಗೆ ಬಣ್ಣದ ಹಂಗೆಲ್ಲಿ? ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೂರವರು ಪ್ರಶ್ನಿಸಿದ್ದಾರೆ.


