Homeಅಂತರಾಷ್ಟ್ರೀಯಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

2006ರಿಂದ ಎರಿಟ್ರಿಯಾದಲ್ಲಿ ಖಾಸಗಿ ಮಾಧ್ಯಮಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಸ್ವತಂತ್ರ ಪತ್ರಕರ್ತರು ಜೈಲಿನಲ್ಲಿದ್ದಾರೆ. ಇಡೀ ಜಗತ್ತಿನಲ್ಲಿ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾದ ದೇಶಗಳಲ್ಲಿ ಎರಿಟ್ರಿಯಾ ಅಗ್ರ ಸ್ಥಾನಗಳನ್ನು ಅಲಂಕರಿಸುತ್ತಿದೆ.

- Advertisement -
- Advertisement -

ಅಮಾನ್ಯುವೆಲ್ ಅಸ್ರತ್ ಎಂಬ ಎರಿಟ್ರಿಯಾ ದೇಶದ ಪತ್ರಕರ್ತ 2001ರಲ್ಲಿ ಬಂಧನಕ್ಕೆ ಒಳಗಾದರು. ಅವರು ಜೆಮೆನ್ (ದ ಟೈಮ್ಸ್) ಎಂಬ ದಿನಪತ್ರಿಕೆಯ ಪ್ರಧಾನ ಸಂಪಾದಕ. ಅಮಾನ್ಯುವೆಲ್ ಎರಿಟ್ರಿಯಾದ ಪ್ರಶಸ್ತಿ ವಿಜೇತ ಕವಿ, ಜನಪ್ರಿಯ ಗೀತರಚನೆಕಾರರೂ ಹೌದು. ಎರಿಟ್ರಿಯಾದಲ್ಲಿ ನಡೆಯುತ್ತಿರುವ ಸರ್ವಾಧಿಕಾರಿ ಆಡಳಿತದ ವಿರುದ್ಧ ಕಾವ್ಯ ಕಥನಗಳ ಮೂಲಕ ಬಂಡಾಯ ಸಾರಿದ್ದವರು.

ಅಣ್ಣತಮ್ಮಂದಿರಂತೆ ಬದುಕಬೇಕಿದ್ದ ಎರಿಟ್ರಿಯಾ-ಇಥಿಯೋಪಿಯಾ ದೇಶಗಳು ಸತತ ಯುದ್ಧದಲ್ಲಿ ನರಳುತ್ತಿರುವುದನ್ನು ಅವರು ಸಹಿಸುತ್ತಿರಲಿಲ್ಲ. ಅಮಾನ್ಯುವೆಲ್ ಅಸ್ರತ್ ಕೇವಲ ಪತ್ರಿಕೆಯನ್ನು ನಡೆಸುತ್ತಿರಲಿಲ್ಲ. ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಸಾಟರ್ಡೇಸ್ ಸಪ್ಪರ್ ಎಂಬ ಹೆಸರಿನ ಸಾಹಿತ್ಯ ಕೂಟವನ್ನು ರಚಿಸಿದ್ದರು. ಎರಿಟ್ರಿಯಾದಲ್ಲಿ ಸಾಹಿತ್ಯದ ಅಭಿರುಚಿ ಪ್ರೋತ್ಸಾಹಿಸುವುದು ಅವರ ಗುರಿಯಾಗಿತ್ತು. ಅವರ ಜೆಮೆನ್ ಪತ್ರಿಕೆ ಕೂಡ ದೇಶದ ಪ್ರಮುಖ ಸಾಹಿತ್ಯ ಪತ್ರಿಕೆಯಾಗಿಯೇ ಗುರುತಿಸಿಕೊಂಡಿತ್ತು. ಅಮಾನ್ಯುವೆಲ್ ಯುದ್ಧದ ಕರಾಳತೆಯ ಕುರಿತು, ಜನಸಾಮಾನ್ಯರ ಸಮಸ್ಯೆಗಳ ಕುರಿತು ಬರೆದ ಪದ್ಯಗಳು ಜನಪ್ರಿಯವಾಗಿದ್ದವು. ಯಾವಾಗ ಅಮಾನ್ಯುವೆಲ್ ತಮಗೆ ಎದುರಾಳಿ ಎನಿಸಿತೋ, ಸರ್ಕಾರ ಅವರನ್ನು ನಾಪತ್ತೆ ಮಾಡಿಬಿಟ್ಟಿತು.

2001ರ ಸೆಪ್ಟೆಂಬರ್ 23ರಂದು ಅಮಾನ್ಯುವೆಲ್ ಸೇರಿದಂತೆ ಒಂದೇ ದಿನ ಹದಿನಾರು ಪ್ರಮುಖ ಪತ್ರಕರ್ತ/ಸಂಪಾದಕರನ್ನು ಬಂಧಿಸಲಾಯಿತು. ಎರಿಟ್ರಿಯಾ ಅಧ್ಯಕ್ಷ ಇಸಿಯಾಸ್ ಅಫ್ವೀರ್ಕಿಯ ದುರಾಡಳಿತದ ವಿರುದ್ಧ ಎರಿಟ್ರಿಯಾದ ರಾಜಕಾರಣಿಗಳು ಬರೆದ ಬಹಿರಂಗ ಪತ್ರವನ್ನು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಬಂಧನ ಕಾರ್ಯಾಚರಣೆ ನಡೆದಿತ್ತು. ಪತ್ರಕರ್ತರ ಜತೆಗೆ ಬಹಿರಂಗ ಪತ್ರ ಬರೆದ ರಾಜಕಾರಣಿಗಳನ್ನೂ ಬಂಧಿಸಲಾಯಿತು, ಹತ್ತೊಂಭತ್ತು ವರ್ಷಗಳು ಕಳೆದುಹೋಗಿವೆ. ಈವರೆಗೆ ಅವರ ಬಿಡುಗಡೆಯಾಗಿಲ್ಲ. ಬಿಡುಗಡೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅದಕ್ಕಿಂತ ಕ್ರೂರವೆಂದರೆ, ಇವರನ್ನೆಲ್ಲ ಎಲ್ಲಿ, ಹೇಗೆ ಕೂಡಿಡಲಾಗಿದೆ ಎಂಬುದರ ಮಾಹಿತಿಯನ್ನೂ ಎರಿಟ್ರಿಯಾ ಸರ್ಕಾರ ನೀಡುತ್ತಿಲ್ಲ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಅಮಾನ್ಯುವೆಲ್ ಅವರ ಸಂಪರ್ಕಕ್ಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಅವರ ಆರೋಗ್ಯ ಸ್ಥಿತಿಗತಿಯ ಕುರಿತೂ ಯಾವ ಮಾಹಿತಿಯಿಲ್ಲ. ಕೊನೆಯದಾಗಿ ಅಮಾನ್ಯುವೆಲ್ ಬದುಕಿದ್ದಾರಾ, ಸತ್ತಿದ್ದಾರಾ ಎಂಬ ಮಾಹಿತಿಯೂ ಇಲ್ಲ. ಎರಿಟ್ರಿಯಾದಲ್ಲಿ ಹಾಗೆಯೇ ಜನರು ಇದ್ದಕ್ಕಿದ್ದಂತೆ ಕಾಣೆಯಾಗಿಬಿಡುತ್ತಾರೆ. ಅವರು ಮುಂದೇನಾದರು ಎಂಬುದು ಯಾರಿಗೂ ತಿಳಿಯುವುದೇ ಇಲ್ಲ.

2017ರ ಮೇ ತಿಂಗಳಿನಲ್ಲಿ ಆಫ್ರಿಕನ್ ಮಾನವ ಹಕ್ಕುಗಳ ಆಯೋಗ ಈ ವಿಷಯದಲ್ಲಿ ತೀರ್ಪೊಂದನ್ನು ನೀಡಿ, ಅಮಾನ್ಯುವೆಲ್ ಅಸ್ರತ್ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ, ಎರಿಟ್ರಿಯಾ ಸರ್ಕಾರ ಈ ಕೂಡಲೇ ಎಲ್ಲ ಬಂಧಿತ ಪತ್ರಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಹೇಳಿತು. ಎರಿಟ್ರಿಯಾ ಸರ್ಕಾರ ಈ ಆಯೋಗದ ತೀರ್ಪಿಗೆ ಕ್ಯಾರೇ ಎನ್ನಲಿಲ್ಲ. ಬಿಡುಗಡೆ ಮಾಡುವುದಿರಲಿ, ಕೈದಿಗಳ ಕುರಿತು ಮಾಹಿತಿಗಳನ್ನೂ ನೀಡಲಿಲ್ಲ. ಒಂದು ಅಂತಾರಾಷ್ಟ್ರೀಯ ಸಂಸ್ಥೆಯ ಒತ್ತಡಕ್ಕಾದರೂ ಬಂಧಿತರಿಗೆ ಮುಕ್ತ ವಿಚಾರಣೆ, ಕಾನೂನು ಸೌಲಭ್ಯ, ವಕೀಲರನ್ನು ಇಟ್ಟುಕೊಳ್ಳುವ ಅವಕಾಶವನ್ನೂ ನೀಡಲಿಲ್ಲ.

ಎರಿಟ್ರಿಯಾ ಆಫ್ರಿಕಾ ಖಂಡದ ಪೂರ್ವಭಾಗದಲ್ಲಿರುವ ದೇಶ. ನೆರೆಯ ಇಥಿಯೋಪಿಯಾ ಜತೆಗೆ ಎರಿಟ್ರಿಯಾ ಸತತ ಸಂಘರ್ಷ ನಡೆಸುತ್ತಲೇ ಬಂದಿದೆ. ಒಂದಿಲ್ಲೊಂದು ಬಗೆಯ ಯುದ್ಧ. ಇತ್ತೀಚಿಗೆ, ಎರಡು ವರ್ಷಗಳ ಕೆಳಗೆ 2018ರ ಸೆಪ್ಟೆಂಬರ್‌ನಲ್ಲಿ ಇಥಿಯೋಪಿಯಾ ಜತೆ ಐತಿಹಾಸಿಕ ಒಪ್ಪಂದದ ಮೂಲಕ ಸಂಘರ್ಷವನ್ನು ಅಂತ್ಯಗೊಳಿಸಲಾಯಿತು. ಆದರೆ ಯುದ್ಧದ ಹೆಸರಲ್ಲಿ ಹೇರಲಾದ ಸರ್ವಾಧಿಕಾರ ಎರಿಟ್ರಿಯಾದಲ್ಲಿ ಕೊನೆಗೊಳ್ಳಲೇ ಇಲ್ಲ.

ನ್ಯಾಷನಲ್ ಸರ್ವಿಸ್ ಪ್ರೋಗ್ರಾಂ ಹೆಸರಿನಲ್ಲಿ ಎರಿಟ್ರಿಯಾ ಸರ್ಕಾರ ತನ್ನ ದೇಶದ ಪ್ರಜೆಗಳ ಮೇಲೆ ನಡೆಸುತ್ತಿರುವ ದೌರ್ಜನ್ಯಗಳಿಗೆ ಕೊನೆಮೊದಲಿಲ್ಲ. ಸರ್ಕಾರದ ಹುಚ್ಚಾಟಗಳಿಂದ ನರಳಿದ ಜನರು ದೇಶ ಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದೂ ಸಾಧ್ಯವಾಗುತ್ತಿಲ್ಲ. ಎರಿಟ್ರಿಯಾ ಸರ್ಕಾರ ದೇಶದ ಗಡಿಗಳನ್ನು ಬಂದ್ ಮಾಡಿ ಕುಳಿತಿದೆ. ದೇಶ ಬಿಟ್ಟುಹೋಗಲು ಯತ್ನಿಸಿದವರು ದೇಶದ್ರೋಹಿಗಳೆನಿಸಿಕೊಂಡು ಸೆರೆಮನೆಗಳಲ್ಲಿ ಕೊಳೆಯುತ್ತಿದ್ದಾರೆ ಅಥವಾ ಈ ಅಪರಾಧಕ್ಕಾಗಿ ಜೀವ ಕಳೆದುಕೊಂಡಿದ್ದಾರೆ.

ಎರಿಟ್ರಿಯಾದಲ್ಲಿ ನ್ಯಾಷನಲ್ ಸರ್ವಿಸ್ ಪ್ರೋಗ್ರಾಂ ಹೆಸರಿನಲ್ಲಿ ಹೈಸ್ಕೂಲ್ ಕೊನೆಯ ವರ್ಷ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ಹದಿನೆಂಟು ತಿಂಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹದಿನೆಂಟು ತಿಂಗಳು ಅವರು ದೇಶಕ್ಕಾಗಿ, ಅರ್ಥಾತ್ ಸರ್ಕಾರಕ್ಕೆ, ಅಲ್ಲಿನ ಅಧ್ಯಕ್ಷನಿಗಾಗಿ ಅಕ್ಷರಶಃ ಜೀತ ಮಾಡಬೇಕು. ವಿಶೇಷವೆಂದರೆ ಈ ಹದಿನೆಂಟು ತಿಂಗಳು ಮುಗಿದರೂ ಒಂದಲ್ಲ ಒಂದು ಕಾರಣವೊಡ್ಡಿ ಅವರ ಕಾರ್ಯಾವಧಿಯನ್ನು ವಿಸ್ತರಿಸುತ್ತ ಬರಲಾಗುತ್ತಿದೆ, ವರ್ಷಗಳಾದರೂ ಅವರಿಗೆ ಮುಕ್ತಿ ಇಲ್ಲ. ಈ ಸಣ್ಣ ಮಕ್ಕಳಿಗೆ ಆರು ತಿಂಗಳ ಕಾಲ ಸೇನಾ ತರಬೇತಿ ನೀಡಲಾಗುತ್ತದೆ, ಆದರೆ ಅವರನ್ನು ಸೇನೆಯ ಕಾರ್ಯಗಳಿಗೆ ಮಾತ್ರ ಬಳಕೆ ಮಾಡಲಾಗುವುದಿಲ್ಲ. ರಸ್ತೆಗಳ ನಿರ್ಮಾಣ ಸೇರಿದಂತೆ ಸರ್ಕಾರದ ಯೋಜನೆಗಳಲ್ಲಿ ಇವರು ಪುಕ್ಕಟೆ ಕೂಲಿಗಳು. ಎರಿಟ್ರಿಯಾದ ಶೇ.೫ರಷ್ಟು ಜನಸಂಖ್ಯೆ `ದೇಶದ’ ಹೆಸರಿನಲ್ಲಿ ಭೀಕರವಾದ ಸರ್ಕಾರಿ ಜೀತದಿಂದ ನರಳುತ್ತಿದೆ.

ಅಮಾನ್ಯುವೆಲ್ ಅಸ್ರತ್

2001ರಲ್ಲಿ ಸರ್ಕಾರದ ವಿರುದ್ಧ ಧ್ವನಿ ತೆಗೆದ ರಾಜಕಾರಣಿಗಳು, ಸ್ವತಂತ್ರ ಧರ್ಮ-ಪಂಥಗಳನ್ನು ಅನುಸರಿಸುತ್ತಿರುವವರನ್ನು ಬಂಧಿಸಲಾಯಿತು. ಅದು ತನ್ನ ದೇಶದ ನಾಗರಿಕರಿಗೆ ನೀಡಲಾದ ಕೊನೆಯ ಎಚ್ಚರಿಕೆ. ಸರ್ಕಾರದ ವಿರುದ್ಧ ಧ್ವನಿ ತೆಗೆದರೆ ಏನಾಗುತ್ತದೆ ಎಂಬುದರ ಪ್ರದರ್ಶನ. ಬಂಧನವೆಂದರೆ ಬಂಧಿತರಿಗೆ ವಕೀಲರ ಸೌಲಭ್ಯ, ಕುಟುಂಬದವರಿಗೆ ಭೇಟಿ ಮಾಡುವ ಅವಕಾಶ, ಎಲ್ಲಿ ಯಾವ ಜೈಲಿನಲ್ಲಿ ಹೇಗೆ ಇಡಲಾಗಿದೆ ಎಂಬುದರ ಮಾಹಿತಿಗಳು ಇರಬೇಕಲ್ಲವೇ? ಇದ್ಯಾವುದೂ ಎರಿಟ್ರಿಯಾದಲ್ಲಿ ಇಲ್ಲ. ಬೇರೆಯವರ ವಿಷಯ ಇರಲಿ, ಎರಿಟ್ರಿಯಾದ ಮಾಜಿ ಹಣಕಾಸು ಸಚಿವ ಬರ್ಹಾನೆ ಅಬ್ರೆಹೆಯವರನ್ನು ಎರಿಟ್ರಿಯಾದ ರಾಜಧಾನಿ ಅಸ್ಮಾರದಲ್ಲಿ 2018ರಲ್ಲಿ ಬಂಧಿಸಲಾಯಿತು. ಅವರ ಪುತ್ರನ ಪ್ರಕಾರ ಅಪ್ಪ ಎಲ್ಲಿದ್ದಾರೆ ಎಂಬುದನ್ನು ಸರ್ಕಾರ ಹೇಳುತ್ತಿಲ್ಲ. `ಎರಿಟ್ರಿಯಾ ಮೈ ಕಂಟ್ರಿ’ ಎಂಬ ತಮ್ಮ ಕೃತಿಯಲ್ಲಿ ಅವರು ಸರ್ಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಬಂಧಿಸಲಾಗಿತ್ತು.

2006ರಿಂದ ಎರಿಟ್ರಿಯಾದಲ್ಲಿ ಖಾಸಗಿ ಮಾಧ್ಯಮಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಸ್ವತಂತ್ರ ಪತ್ರಕರ್ತರು ಜೈಲಿನಲ್ಲಿದ್ದಾರೆ. ಇಡೀ ಜಗತ್ತಿನಲ್ಲಿ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾದ ದೇಶಗಳಲ್ಲಿ ಎರಿಟ್ರಿಯಾ ಅಗ್ರ ಸ್ಥಾನಗಳನ್ನು ಅಲಂಕರಿಸುತ್ತಿದೆ.

ಅಮಾನ್ಯುವೆಲ್ ರೀತಿಯಲ್ಲೇ ಎರಿಟ್ರಿಯಾ ಪ್ರಭುತ್ವ ಬಂಧಿಸಿ ಕಣ್ಮರೆಯಾಗಿಸಿದ ಇನೊಬ್ಬ ಪತ್ರಕರ್ತ ದಾವಿತ್ ಇಸಾಕ್. ಎರಿಟ್ರಿಯಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಬೇಕು ಎಂದು ಪ್ರಬಲವಾಗಿ ವಾದಿಸುತ್ತಿದ್ದರು ಇಸಾಕ್. 1990ರಲ್ಲಿ ಸೆಟಿಟ್ ಎಂಬ ಹೆಸರಿನ ಪತ್ರಿಕೆ ಆರಂಭಿಸಿದ್ದ ಇಸಾಕ್ ಅದರ ಮೂಲಕ ತನ್ನ ಪ್ರಜಾಪ್ರಭುತ್ವವಾದಿ ಹೋರಾಟವನ್ನು ನಡೆಸುತ್ತಿದ್ದರು. ಸೆಟಿಟ್ ಎಂಬುದು ಎರಿಟ್ರಿಯಾದ ಒಂದು ನದಿಯ ಹೆಸರು. ತನ್ನ ಪತ್ರಿಕೆಯೂ ನದಿಯಂತೆ ಯಾವ ಅಡೆತಡೆಯಿಲ್ಲದೆ ಹರಿಯಬೇಕು ಎಂದು ಅವರು ಬಯಸಿದ್ದರು. ಆದರೆ ಅವರ ಈ ಆಸೆ ನೆರವೇರಲಿಲ್ಲ. ಇಥಿಯೋಪಿಯಾ ಜತೆ ಮತ್ತೊಂದು ಸುತ್ತಿನ ಸಂಘರ್ಷ ಆರಂಭಗೊಂಡಿತ್ತು. ಯುದ್ಧವೆಂದರೆ ಗೊತ್ತಲ್ಲ, ಸರ್ಕಾರ ತನ್ನ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನೇ ಮೊದಲು ಕಿತ್ತುಕೊಳ್ಳುತ್ತದೆ.

ಇಸಾಕ್ ಪ್ರಾಣಭಯದಿಂದ ಸ್ವೀಡನ್‌ಗೆ ಪರಾರಿಯಾದರು. ಸ್ವೀಡಿಶ್ ನಾಗರಿಕತ್ವವನ್ನೂ ಪಡೆದುಕೊಂಡರು. ಆದರೆ ಅವರ ತಾಯ್ನಾಡಿನ ಸೆಳೆತ ಮತ್ತೆ ದೇಶಕ್ಕೆ ಬರುವಂತೆ ಪ್ರಚೋದಿಸಿತು. ೨೦೦೧ರಲ್ಲಿ ಎರಿಟ್ರಿಯಾದಲ್ಲಿ ಪರಿಸ್ಥಿತಿ ಸುಧಾರಿಸದೇ ಇದ್ದರೂ ವಾಪಾಸು ಬಂದರು. ಅಮಾನ್ಯುವೆಲ್ ಅವರ ಹಾಗೆಯೇ ಇಸಾಕ್ ಕೂಡ ಎರಿಟ್ರಿಯಾ ಅಧ್ಯಕ್ಷರಿಗೆ ಅಲ್ಲಿನ ಕೆಲವು ರಾಜಕಾರಣಿಗಳು ಬರೆದ ಬಹಿರಂಗ ಪತ್ರವನ್ನು ತಮ್ಮ ಸೆಟಿಟ್ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದನ್ನೇ ಕಾಯುತ್ತಿದ್ದ ಹಾಗೆ ಎರಿಟ್ರಿಯಾ ಸರ್ಕಾರ ಅವರನ್ನು ಬಂಧಿಸಿ ಜೈಲಿಗಟ್ಟಿತು.

ಇಸಾಕ್ ಅವರ ಸಹೋದರ ಇಸಾಯಸ್ ಈಗಲೂ ಸಣ್ಣ ಆಶಾವಾದ ಇಟ್ಟುಕೊಂಡು ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ ಅವರ ಸಹೋದರನ ಕುರಿತು ಕಿಂಚಿತ್ತು ಮಾಹಿತಿಯನ್ನೂ ಅಲ್ಲಿನ ಪ್ರಭುತ್ವ ನೀಡುತ್ತಿಲ್ಲ. ಯುನೆಸ್ಕೋ ಇಸಾಕ್ ಅವರಿಗೆ `ವಿಶ್ವ ಪತ್ರಿಕಾ ಸ್ವಾತಂತ್ರ‍್ಯ ಪ್ರಶಸ್ತಿ’ಯನ್ನು ನೀಡಿದೆ. ಆದರೆ ಪ್ರಶಸ್ತಿ ಸ್ವೀಕರಿಸಲು ಇಸಾಕ್ ಬದುಕಿದ್ದಾರೋ ಇಲ್ಲವೋ, ಬದುಕಿದ್ದರೂ ಹೇಗಿದ್ದಾರೋ ಯಾರಿಗೂ ಗೊತ್ತಿಲ್ಲ. ೨೦೦೧ರ ನಂತರ ಹತ್ತೊಂಭತ್ತು ವರ್ಷಗಳು ಉರುಳಿ ಹೋಗಿವೆ. ಸೆಟಿಟ್ ನದಿಯಲ್ಲಿ ಅದೆಷ್ಟು ನೀರು ಹರಿದುಹೋಯಿತೋ? ಪ್ರಜಾಪ್ರಭುತ್ವ ನೆಲೆಗೊಳ್ಳಬೇಕೆಂಬ ಆಕಾಂಕ್ಷೆಯ ಸೆಳೆತಕ್ಕೆ ಇಸಾಕ್ ಕೊಚ್ಚಿ ಹೋದರು.

2001ರಲ್ಲಿ ಬಂಧನಕ್ಕೆ ಒಳಗಾದ ಹದಿನಾರು ಪ್ರಮುಖ ಪತ್ರಕರ್ತರ ಪೈಕಿ ಮತ್ತೊಬ್ಬರು ಇದ್ರಿಸ್ ಸಯೀದ್ ಅಬಾ ಅರೆ ಕೂಡ ಒಬ್ಬರು. ಮಾತೃಭಾಷಾ ಶಿಕ್ಷಣ ನೀತಿಯ ಹೆಸರಿನಲ್ಲಿ ಒಂದೇ ಭಾಷೆಯನ್ನು ಹೇರುವ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸುತ್ತಿದ್ದವರು ಇದ್ರಿಸ್ ಸಯೀದ್. ಟೈಗ್ರಿನ್ಯಾ ಭಾಷೆಯನ್ನೇ ಸಮಸ್ತ ಎರಿಟ್ರಿಯನ್ನರ ಮೇಲೆ ಹೇರುವುದನ್ನು ಇದ್ರಿಸ್ ವಿರೋಧಿಸುತ್ತಿದ್ದರು. ಟೈಗ್ರಿನ್ಯಾ ಎರಿಟ್ರಿಯಾದ ಶೇ. 50ರಷ್ಟು ಜನರು ಮಾತನಾಡುವ ಭಾಷೆ ಆದರೂ, ಅಲ್ಲಿರುವ ಇತರ ಭಾಷಿಕ ಜನರಿಗೆ ತಮ್ಮದೇ ಭಾಷೆಯಲ್ಲಿ ಕಲಿಯುವ ಅವಕಾಶ ನೀಡಬೇಕು ಎಂಬುದು ಇದ್ರಿಸ್ ಅವರ ವಾದವಾಗಿತ್ತು.

ಎರಿಟ್ರಿಯಾದಲ್ಲಿ ಒಟ್ಟು ಒಂಭತ್ತು ಅಧಿಕೃತ, ರಾಷ್ಟ್ರಭಾಷೆಗಳಿವೆ. ಅವುಗಳ ಪೈಕಿ ಒಂದನ್ನು ಮಾತ್ರ ಮೆರೆಸುವುದು ಇತರ ಭಾಷೆಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದರು. ಬಂಧನಕ್ಕೆ ಒಳಗಾಗುವ ಮೊದಲು ಇದ್ರಿಸ್ ಶಿಕ್ಷಣ ಮಾಧ್ಯಮ ಕುರಿತ ವಿಸ್ತೃತ ಲೇಖನವೊಂದನ್ನು ಪ್ರಕಟಿಸಿದ್ದರು. ಎರಿಟ್ರಿಯಾದ ಎಲ್ಲ ಒಂಭತ್ತು ಭಾಷೆಗಳಲ್ಲೂ ಕಲಿಕೆಗೆ ಅವಕಾಶ ನೀಡಬೇಕು ಎಂದು ಅವರು ತಮ್ಮ ಲೇಖನದಲ್ಲಿ ಆಗ್ರಹಿಸಿದ್ದರು. ಒಂದು ವೇಳೆ ಟೈಗ್ರಿನ್ಯಾ ಹೊರತಾಗಿ ಇತರ ಭಾಷೆಗಳನ್ನು ಶಿಕ್ಷಣ ಮಾಧ್ಯಮದಿಂದ ಹೊರಗೆ ಇಟ್ಟರೆ ದೇಶದಲ್ಲಿ ಇತರ ಭಾಷಿಕರು ಅನಕ್ಷರಸ್ಥರಾಗಿ ಉಳಿದುಬಿಡುತ್ತಾರೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.

ಎರಿಟ್ರಿಯಾ ಸರ್ಕಾರ ಇದ್ರಿಸ್ ಅವರನ್ನೂ ಬಂಧಿಸಿತು. 2016ರವರೆಗೆ ಇದ್ರಿಸ್ ಅವರನ್ನು ಈರಿಯಾರೋ ಎಂಬಲ್ಲಿ ಜೈಲಿನಲ್ಲಿ ಇಡಲಾಗಿತ್ತು, ನಂತರ ಅವರನ್ನು ಎಲ್ಲಿಗೆ ಸಾಗಿಸಲಾಯಿತು ಎಂಬುದು ತಿಳಿದಿಲ್ಲ ಎನ್ನುತ್ತವೆ ಕೆಲವು ವರದಿಗಳು. ಇದ್ರಿಸ್ ಪತ್ರಕರ್ತರೇ ಅಲ್ಲ, ಅವರೊಬ್ಬ ಸರ್ಕಾರಿ ನೌಕರ ಎಂದು 2017ರಲ್ಲಿ ಸರ್ಕಾರಿ ಒಡೆತನದ ಎರಿಟ್ರಿಯನ್ ನ್ಯೂಸ್ ಏಜೆನ್ಸಿ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳಿಗೆ ಸ್ಪಷ್ಟನೆ ನೀಡಿತು. ಆದರೆ ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಮಾಹಿತಿಯನ್ನು ಈ ನ್ಯೂಸ್ ಏಜೆನ್ಸಿ ಕೂಡ ನೀಡಲಿಲ್ಲ.

ದಾವಿಸ್ ಇಸಾಕ್

ಪೆನ್ ಇಂಟರ್ ನ್ಯಾಷನಲ್ ಸಂಸ್ಥೆ ಅಬಾ ಅರೆ ಅವರ ಬಿಡುಗಡೆಗಾಗಿ ಸಾಕಷ್ಟು ಪ್ರಯತ್ನ ನಡೆಸಿ ವಿಫಲವಾಯಿತು. ಉಕ್ರೇನ್ ನಲ್ಲಿ 2017ರಲ್ಲಿ ಪೆನ್ ಇಂಟರ್‌ನ್ಯಾಷನಲ್ ನಡೆಸಿದ ವಿಶ್ವ ಅಧಿವೇಶನದಲ್ಲಿ ಇದ್ರಿಸ್ ಅಬಾ ಅರೆಯವರಿಗೆ ಖಾಲಿ ಖುರ್ಚಿಯ ಗೌರವ ನೀಡಲಾಯಿತು.

ಎರಿಟ್ರಿಯಾ ಇದುವರೆಗೆ ಜಾಗತಿಕ ಮಾನವ ಹಕ್ಕು ಸಂಘಟನೆಗಳ ಮನವಿಗಳನ್ನು ಧಿಕ್ಕರಿಸುತ್ತಲೇ ಬಂದಿದೆ. ಆಫ್ರಿಕನ್ ಮಾನವ ಹಕ್ಕು ಆಯೋಗದ ತೀರ್ಪನ್ನು ಅದು ಜಾರಿಗೆ ತರಲಿಲ್ಲ. ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಪೆನ್ ಇಂಟರ್‌ನ್ಯಾಷನಲ್‌ನಂಥ ಸಂಸ್ಥೆಗಳು ಮೇಲಿಂದ ಮೇಲೆ ಬಂಧಿತ ಪತ್ರಕರ್ತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ.

ಎರಿಟ್ರಿಯಾವನ್ನು 1993ರಿಂದ ಆಳುತ್ತಿರುವುದು ಇಸಾಯಿಸ್ ಅಫ್ವೆರ್ಕಿ ಎಂಬ ಸರ್ವಾಧಿಕಾರಿ. ಎರಿಟ್ರಿಯಾದಲ್ಲಿ ಏಕಪಕ್ಷದ ಆಡಳಿತ ವ್ಯವಸ್ಥೆಯಿದೆ. ಪೀಪಲ್ಸ್ ಫ್ರಂಟ್ ಫಾರ್ ಡೆಮಾಕ್ರಸಿ ಅಂಡ್ ಜಸ್ಟಿಸ್ (ಪಿಎಫ್‌ಡಿಜೆ) ಎರಿಟ್ರಿಯಾದ ಆಡಳಿತ ನಡೆಸುತ್ತಿರುವ ಏಕೈಕ ರಾಜಕೀಯ ಪಕ್ಷ. ಈ ಪಕ್ಷದ ಹೆಸರಿಗೂ, ಅದು ಕಾರ್ಯನಿರ್ವಹಿಸುತ್ತಿರುವ ಶೈಲಿಗೂ ಕಿಂಚಿತ್ತು ಸಂಬಂಧವೂ ಇಲ್ಲ. ಸತತ ಇಪ್ಪತ್ತೇಳು ವರ್ಷಗಳಿಂದ ಎರಿಟ್ರಿಯಾವನ್ನು ಆಳುತ್ತಿರುವ ಇಸಾಯಿಸ್ ಪಾಶ್ಚಾತ್ಯ ಶೈಲಿಯ ಪ್ರಜಾಪ್ರಭುತ್ವವನ್ನು ಗೇಲಿ ಮಾಡುತ್ತಾನೆ. ಆತ ತಾನು ಅಧಿಕಾರಕ್ಕೆ ಬಂದಾಗಿನಿಂದ ಎರಿಟ್ರಿಯಾದಲ್ಲಿ ನ್ಯಾಯಬದ್ಧ ಚುನಾವಣೆಗಳನ್ನೇ ನಡೆಸಿಲ್ಲ. 2003ರ ನಂತರ ಅಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದನ್ನೂ ಈತ ನಿಲ್ಲಿಸಿಬಿಟ್ಟಿದ್ದಾನೆ. ಅಲ್ ಜಜೀರಾಗೆ ನೀಡಿದ ಸಂದರ್ಶನವೊಂದಲ್ಲಿ ಈತ ಯಾವಹಿಂಜರಿಕೆ, ನಾಚಿಕೆಯೂ ಇಲ್ಲದೆ ಎರಿಟ್ರಿಯಾದಲ್ಲಿ ಚುನಾವಣೆ ನಡೆಸುವಂತಾಗಲು ಇನ್ನೂ ಮೂವತ್ತು-ನಲವತ್ತು ವರ್ಷಗಳು ಬೇಕಾಗಬಹುದು ಎಂದುಹೇಳಿಕೊಂಡಿದ್ದ. 20011ರಲ್ಲಿ ಎರಿಟ್ರಿಯಾದಲ್ಲಿ ರಾಷ್ಟ್ರೀಯ ಚುನಾವಣೆಗಳನ್ನು ಘೋಷಿಸಲಾಗಿತ್ತಾದರೂ ಅದು ನಡೆಯಲಿಲ್ಲ. ಎರಿಟ್ರಿಯಾದ ಶೇ.20ರಷ್ಟು ಭೂಭಾಗ ಶತ್ರು ದೇಶದ ವಶದಲ್ಲಿದೆ, ಹೀಗಾಗಿ ಚುನಾವಣೆ ನಡೆಸಲಾಗದು ಎಂದು ಇಸಾಯಿಸ್ ಹೇಳಿಕೊಂಡಿದ್ದ. ಆದರೆ ಅದು ಅವನು ತಾನು ಅಧ್ಯಕ್ಷನಾಗಿ, ಸರ್ವಾಧಿಕಾರಿಯಾಗಿ ಮೆರೆಯಲು ಕೊಟ್ಟುಕೊಂಡು ಬರುತ್ತಿರುವ ಸಬೂಬು ಅಷ್ಟೆ. ಇಥಿಯೋಪಿಯಾ ಜತೆಗಿನ ಯುದ್ಧ ಮುಗಿದರೂ ಆತ ಚುನಾವಣೆ ನಡೆಸಲಿಲ್ಲ.

ಇದ್ರಿಸ್ ಸಯೀದ್ ಅಬಾ ಅಲೆ

ಜಗತ್ತಿನ ಯಾವುದೇ ರೂಪದ ಫ್ಯಾಸಿಸ್ಟ್ ಪ್ರಭುತ್ವಗಳು ಮೊದಲು ಗುರಿ ಮಾಡುವುದೇ ಪತ್ರಕರ್ತರು, ನ್ಯಾಯವಾದಿಗಳು, ಪ್ರಾಧ್ಯಾಪಕರು, ಮಾನವ ಹಕ್ಕು ಹೋರಾಟಗಾರರನ್ನು. ಭಾರತದಲ್ಲಿ ಇದು ಕಳೆದ ಆರು ವರ್ಷಗಳಿಂದ ತೀವ್ರ ಸ್ವರೂಪ ತಾಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಪ್ರಭುತ್ವಗಳು ಸ್ವತಂತ್ರ ಚಿಂತನೆಗಳನ್ನು, ಭಿನ್ನ ಧ್ವನಿಗಳನ್ನು, ಜನರಲ್ಲಿ ಜಾಗೃತಿ ಮೂಡಿಸಬಹುದಾದ ವಿದ್ಯಾವಂತರನ್ನು ಸಹಿಸುವುದೇ ಇಲ್ಲ. ಇಂಥವರನ್ನು ಸರ್ಕಾರಿ ಅಥವಾ ಸರ್ಕಾರಿ ಪ್ರಾಯೋಜಕತ್ವದ ಖಾಸಗಿ ಪಡೆಗಳು ಕೊಲ್ಲುತ್ತವೆ ಅಥವಾ ಜೈಲಿಗೆ ಅಟ್ಟಲಾಗುತ್ತದೆ. ಎರಿಟ್ರಿಯಾದಲ್ಲಿ ನಡೆಯುತ್ತಿರುವುದು ಇದರ ತೀವ್ರ ಸ್ವರೂಪ. ಸರ್ವಾಧಿಕಾರದ ಕ್ರೂರ ನರ್ತನದಿಂದಾಗಿ ಪ್ರತಿಭಾವಂತ ಪತ್ರಕರ್ತರು ಅಕ್ಷರಶಃ ಕೊಳೆತುಹೋಗಿದ್ದಾರೆ.

(ಪೆನ್ ಇಂಟರ್‌ನ್ಯಾಷನಲ್ ಸಾಲಿಡಾರಿಟಿ ಬರಹಗಳನ್ನು ಅನುಸರಿಸಿ)
ಟಿ ದಿನೇಶ್ ಕುಮಾರ್ ಎಸ್. ಸಿ ಪತ್ರಕರ್ತರು


ಇದನ್ನೂ ಓದಿ: ಅಮೆರಿಕದ ಶಾಖಕ್ಕೆ ಭಾರತದಲ್ಲಿ ಬೆವರಿದ ಫೇಸ್‌ಬುಕ್ – ರಾಜಾರಾಂ ತಲ್ಲೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...