ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿಗಳ ಮೇಲೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಮಾಡಿರುವ ಟ್ವೀಟ್ಗಳು ವಿಮರ್ಶೆಗಳೇ ಹೊರತು ನಿಂದನೆಗಳಲ್ಲ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಚನಾತ್ಮಕ ವಿಮರ್ಶೆಗಳಿಂದ ನ್ಯಾಯಾಂಗ ವ್ಯವಸ್ಥೆಗೆ ಯಾವುದೇ ಪೆಟ್ಟಾಗುವುದಿಲ್ಲ. ಬದಲಾಗಿ ಗಟ್ಟಿಯಾಗುತ್ತದೆ ಎಂಬುದನ್ನು ಪರಿಗಣಿಸಿ ಪ್ರಶಾಂತ್ ಭೂಷಣ್ ಅವರಿಗೆ ಶಿಕ್ಷೆ ವಿಧಿಸದೇ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಬೇಕೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ಪ್ರಶಾಂತ್ ಭೂಷಣ್ ಅವರು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಪರಂಪರೆಯ ರಕ್ಷಣೆಗಾಗಿ ಹೋರಾಟ ನಡೆಸಿದವರು. ಅಣ್ಣಾ ಹಜಾರೆ ಜತೆಗೆ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ತಮ್ಮ ವಕೀಲ ವೃತ್ತಿ ಜೀವನದ ಐದು ದಶಕಗಳ ಉದ್ದಕ್ಕೂ ಜನರ ಹಕ್ಕುಗಳ ರಕ್ಷಣೆಗಾಗಿ ಯಾವ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ ಪ್ರಶ್ನಿಸುತ್ತಾ ಬಂದವರು. ನ್ಯಾಯಾಂಗದಲ್ಲಿ, ನ್ಯಾಯಾಧೀಶರಿಂದ ಲೋಪಗಳಾದಾಗಲೂ ಪ್ರಶ್ನಿಸಿದ್ದಾರೆ. ಇದು ಅವರು ಈ ದೇಶದ ಜನತೆ ಮತ್ತು ಪ್ರಜಾತಾಂತ್ರಿಕ-ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಮಾಡಿದ ಸೇವೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ 8 ಮುಖ್ಯ ನ್ಯಾಯಾಧೀಶರ ಮೇಲೆ ಮಾಡಿದ ಟೀಕೆ ಮತ್ತು ಈಗ ಮುಖ್ಯ ನ್ಯಾಯಾಧೀಶರನ್ನೊಳಗೊಂಡು ಮಾಡಿರುವ ವಿಮರ್ಶೆಗಳು ಸಾಕ್ಷ್ಯಾಧಾರ ಸಮೇತವಾಗಿವೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿವೆ. ಹಾಗಾಗಿ ಪ್ರಶಾಂತ್ ಭೂಷಣ್ ಅವರು ಎತ್ತಿರುವ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದವರನ್ನು ವಿಚಾರಣೆಗೆ ಒಳಪಡಿಸದೇ, ತಪ್ಪನ್ನು ಪ್ರಶ್ನಿಸಿದ ಪ್ರಶಾಂತ್ ಭೂಷಣ್ ಅವರನ್ನೇ ಶಿಕ್ಷೆಗೆ ಒಳಪಡಿಸಿರುವ ಸವೋಚ್ಚ ನ್ಯಾಯಾಲಯದ ಕ್ರಮ ದೇಶದ ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಮತ್ತು ಇದು ನ್ಯಾಯಾಲಯದ ಮೇಲಿನ ವಿಶ್ವಾಸ ಕ್ಷೀಣಿಸುವಂತೆ ಮಾಡಿದೆ ಎಂದಿದ್ದಾರೆ.
ನ್ಯಾಯಾಲಯದ ಈ ಕ್ರಮ ಮತ್ತು ಪ್ರಕರಣದ ವಿಚಾರಣೆಯಲ್ಲಿ ಪ್ರತಿವಾದಿಗೆ ನೇರವಾಗಿ ವಾದ ಮಂಡಿಸಲು ಅವಕಾಶ ನೀಡದೇ ಇರುವ ವಿಧಾನವನ್ನು ದೇಶದಾದ್ಯಂತ ಸಾವಿರಾರು ವಕೀಲರು, ನಿವೃತ್ತ ನ್ಯಾಯಾಧೀಶರು ಮತ್ತು ಕಾನೂನು ಪಂಡಿತರು ತೀವ್ರವಾಗಿ ಟೀಕಿಸಿದ್ದಾರೆ. ಹಾಗಾಗಿ, ಮೇಲಿನ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿ ದೇಶದ ಸರ್ವೋಚ್ಚ ನ್ಯಾಯಾಲಯವು ಪ್ರಶಾಂತ್ ಭೂಷಣ್ರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟು ನಿಜವಾದ ನ್ಯಾಯವನ್ನು ಎತ್ತಿಹಿಡಿಯಬೇಕು. ಆ ಮೂಲಕ ದೇಶದ ನಾಗರಿಕರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸಬೇಕು ಎಂದು ತಾಹಿರ್ ಹುಸೇನ್ ಹೇಳಿದ್ದಾರೆ.
ಇದನ್ನೂ ಓದಿ: ಭೂಷಣ್ ಪ್ರಕರಣ: ರಚನಾತ್ಮಕ ಟೀಕೆಯೊಂದನ್ನು ಸಹಿಸಲಾಗದಷ್ಟು ಸಂಕುಚಿತವೇ ಸುಪ್ರೀಮ್ ಭುಜಗಳು?