ಆಸ್ಪತ್ರೆಯಲ್ಲಿ ಪರೀಕ್ಷೆ, ಹಾಸಿಗೆ, ವೆಂಟಿಲೇಟರ್, ಆಮ್ಲಜನಕ, ಲಸಿಕೆ ಇದು ಯಾವುದೂ ಇಲ್ಲ, ಆದರೆ ಕೇವಲ ಹಬ್ಬದ ಸೋಗಷ್ಟೇ ಇದೆ, ಪಿಎಂ ಕೇರ್ಸ್ ಎಲ್ಲಿ ಹೋಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ, ಕೊರೊನಾ ವಿರುದ್ದ ಹೆಚ್ಚಿನ ಪ್ರಮಾಣದಲ್ಲಿ, ಹೆಚ್ಚಿನ ಜನರು ಲಸಿಕೆ ಪಡೆದುಕೊಳ್ಳುವುದನ್ನು ಉತ್ತೇಜಿಸಲು ಬೇಕಾಗಿ ಎಪ್ರಿಲ್ 11 ರಿಂದ 14 ರ ವರೆಗೆ ‘ಟಿಕಾ ಉತ್ಸವ್’(ಲಸಿಕೆ ಉತ್ಸವ) ಆಚರಿಸುವಂತೆ ಕರೆ ನೀಡಿದ್ದರು. ಆದರೆ ಇದು ಘೋಷಣೆ ಮಾಡುವುದಕ್ಕಿಂತ ಮುಂಚಿನಿಂದಲೇ ಹಲವು ರಾಜ್ಯಗಳು ತಮ್ಮಲ್ಲಿ ಲಸಿಕೆ ಕೊರತೆಯಿದೆ ಎಂದು ಕೇಂದ್ರದ ಬಳಿ ಆತಂಕ ತೋಡಿಕೊಂಡಿದ್ದವು. ಆದರೆ ಪ್ರಧಾನಿ ಮೋದಿ ಇದರ ಬಗ್ಗೆ ಇದುವರೆಗೂ ಯಾವುದೆ ಮಾತುಗಳನ್ನು ಹೇಳಿಲ್ಲ.
ಇದನ್ನೂ ಓದಿ: ವಿದೇಶಿ ಲಸಿಕೆಗಳ ಅನುಮೋದನೆ ಬಗ್ಗೆ ಕೇಂದ್ರಕ್ಕೆ ‘ಟಾಂಗ್’ ನೀಡಿದ ರಾಹುಲ್ ಗಾಂಧಿ!
ಅಷ್ಟೇ ಅಲ್ಲದೆ, ದೇಶದಾದ್ಯಂತ ದೈನಂದಿನ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಸರಿಯಾದ ಚಿಕಿತ್ಸೆಗಳಿಲ್ಲದೆ ಪರದಾಡುತ್ತಿರುವುದು ದೇಶದಾತ್ಯಂತ ವರದಿಯಾಗುತ್ತಿದೆ. ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಟ್ವೀಟ್ನಲ್ಲಿ, “ಆಸ್ಪತ್ರೆಯಲ್ಲಿ ಯಾವುದೇ ಪರೀಕ್ಷೆಗಳಿಲ್ಲ, ಹಾಸಿಗೆಗಳಿಲ್ಲ, ಯಾವುದೇ ವೆಂಟಿಲೇಟರ್ಗಳು ಇಲ್ಲ, ಆಮ್ಲಜನಕವಿಲ್ಲ, ಲಸಿಕೆ ಕೂಡ ಇಲ್ಲ, ಕೇವಲ ಹಬ್ಬದ ಸೋಗು ಮಾತ್ರ. ಪಿಎಂಕೇರ್ಸ್ ಎಲ್ಲಿ ಹೋಯಿತು?” ಎಂದು ಬರೆದಿದ್ದಾರೆ.
ना टेस्ट हैं, ना हॉस्पिटल में बेड,
ना वेंटिलेटर हैं, ना ऑक्सीजन,
वैक्सीन भी नहीं है,
बस एक उत्सव का ढोंग है।PMCares?
— Rahul Gandhi (@RahulGandhi) April 15, 2021
ಇದನ್ನೂ ಓದಿ: ಮಸ್ಕಿಯಲ್ಲಿ ಮಟಮಟ ಮಧ್ಯಾಹ್ನವೇ ಕಾಂಚಾಣ ಝಣಝಣ: ಬಿಜೆಪಿ ಪರ ಪ್ರಚಾರಕ್ಕಿಳಿದ ಗಾಯಕಿ ಮಂಗ್ಲಿ
ಪ್ರಧಾನಿ ‘ಉತ್ಸವ’ ಆಚರಿಸುವಂತೆ ಕರೆ ನೀಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಉಂಟು ಮಾಡಿತ್ತು. ದೇಶದಾದ್ಯಂತ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಕೊರೊನಾ ತೀವ್ರ ರೀತಿಯಲ್ಲಿ ಹರಡುತ್ತಿದೆ. ಸೋಂಕಿನಿಂದಾಗಿ ಸಾವು ನೋವುಗಳು ಕೂಡಾ ಹೆಚ್ಚುತ್ತಿದೆ. ಈ ಹೊತ್ತಿನಲ್ಲಿ ಪ್ರಧಾನಿ ‘ಉತ್ಸವ’ ಆಚರಿಸಲು ಕರೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸಿದ್ದರು.
ಲಸಿಕೆ ಉತ್ಸವಕ್ಕೆ ಕರೆ ನೀಡಿರುವ ಪ್ರಧಾನಿ ಮೋದಿ, ಪಂಜಾಬ್, ಮಹಾರಾಷ್ಟ್ರ, ಒರಿಸ್ಸಾ, ಬಿಹಾರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳು ಲಸಿಕೆ ಕೊರತೆಯ ಹೇಳಿದ್ದರೂ, ಅದರ ಬಗ್ಗೆ ಗಮನ ಹರಿಸದೆ ಲಸಿಕೆ ಕೊರತೆಯ ಸಮಯದಲ್ಲಿ ‘ಉತ್ಸವ’ ಆಚರಿಸಲು ಕರೆ ನೀಡಿರುವುದು ಕೂಡಾ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಮತ್ತೆ ಶುರುವಾಯಿತು ವಲಸೆ: ಊರುಗಳಿಗೆ ತೆರಳಲು ಮುಂಬೈ ರೈಲು ನಿಲ್ದಾಣದಲ್ಲಿ ಜಮಾಯಿಸಿದ ಸಾವಿರಾರು ಜನ