ನೀವು ಇದನ್ನು ಓದಿ ಮುಗಿಸುವ ಹೊತ್ತಿಗೆ ಮಸ್ಕಿ ಕ್ಷೇತ್ರದ ವಟಗಲ್ನಿಂದ ಒಂದು ರೊಕ್ಕ ಹಂಚುವ ವಿಡಿಯೋ ವೈರಲ್ ಆಗಬಹುದು. ಇಂದು ವಟಗಲ್ನಲ್ಲಿ ವೋಟಿಗೆ ಸಾವಿರ ರೂಪಾಯಿ ಕೊಡುವ ‘ಕಾರ್ಯಕ್ರಮ’ವನ್ನು ಬಿಜೆಪಿ ಹಮ್ಮಿಕೊಂಡಿದೆ ಮತ್ತು ಬೇರೆ ಊರುಗಳಲ್ಲಿ ಇದು ನಡೆಯುತ್ತಿದೆ ಎಂಬ ವಿಷಯ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ 5-ಎ ಕಾಲುವೆ ನೀರಾವರಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ, ‘ಹಿಂದೆಲ್ಲ ಮತದಾನದ ಹಿಂದಿನ ದಿನ ಹಣ-ಹೆಂಡ ಹಂಚಲಾಗುತ್ತಿತ್ತು. ಆದರೆ ಈಗ ಇಲ್ಲಿ ಚುನಾವಣೆಗೆ ವಾರ ಮೊದಲೇ ಮಟಮಟ ಮಧ್ಯಾಹ್ನವೇ ವೋಟಿಗೆ ಒಂದು ಸಾವಿರ ರೂಪಾಯಿ ಹಂಚಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ವಟಗಲ್ನಲ್ಲಿ ಈಗಾಗಲೇ ಇದು ಶುರು ಆಗಿರಬಹುದು. ಯಾವ ಕ್ಷಣದಲ್ಲಾದರೂ ವಿಡಿಯೋಗಳು ಹೊರ ಬೀಳಬಹುದು’ ಎಂದರು.
ನಿನ್ನೆ ಬಿಜೆಪಿ ಇಲ್ಲಿನ ಮೂರು ತಾಂಡಾಗಳಲ್ಲಿ ಬಂಜಾರಾ ಸಮುದಾಯದ ಪ್ರತಿಭಾನ್ವಿತ ಗಾಯಕಿ ಮಂಗ್ಲಿ ಅವರಿಂದ ಗಾಯನ ಕಾರ್ಯಕ್ರಮ ನಡೆಸಿತು. ಬಿಜೆಪಿಯ ಸ್ಥಳೀಯ ನಾಯಕರ ಜೊತೆಗೆ ಕಲಬುರ್ಗಿ ಸಂಸದ ಉಮೇಶ ಜಾಧವ್ ಕೂಡ ಇದ್ದರು. ಕೊವಿಡ್ ಪೀಡಿತ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕ್ವಾರಂಟೈನ್ನಲ್ಲಿ ಇದ್ದ ಕಾರಣ ಬಂದಿರಲಿಲ್ಲ ಅಷ್ಟೇ.
ಇನ್ನು ಮೊದಲಿಗೆ ‘ನೀರಾವರಿ ಹೋರಾಟ ಬೆಂಬಲಿಸಿ, ಪ್ರತಾಪಗೌಡರನ್ನು ಸೋಲಿಸಿ’ ಎಂಬ ಧ್ಯೇಯ ಹೊಂದಿದ್ದ ನೀರಾವರಿ ಹೋರಾಟ ಸಮಿತಿ ಈಗ ನೇರವಾಗಿ ಪ್ರಚಾರಕ್ಕೆ ಇಳಿದಿದ್ದು ಕಾಂಗ್ರೆಸ್ ಗೆಲ್ಲಿಸಿ ಎಂದು 5-ಎ ಕಾಲುವೆ ವ್ಯಾಪ್ತಿಗೆ ಬರುವ 58 ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದೆ.
‘ಈಗ ನಾವು ನೇರವಾಗಿಯೇ ಕಣಕ್ಕೆ ಧುಮುಕಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹೋರಾಟದ ಸ್ಥಳಕ್ಕೆ ಬಂದು ಸ್ಪಷ್ಟ ಭರವಸೆ ನೀಡಿದ ನಂತರ ನಾವು ನೇರವಾಗಿಯೇ ಕಾಂಗ್ರೆಸ್ ಗೆಲ್ಲಿಸಿ ಎಂದು ಪ್ರಚಾರ ನಡೆಸಿದ್ದೇವೆ. ಜನ ಕೂಡ ನಮ್ಮ ಮನವಿಯನ್ನು ಬೆಂಬಲಿಸುತ್ತಿದ್ದಾರೆ’ ಎನ್ನುವ ದೇವರಮನಿಯವರು, ‘ಹಣದಿಂದಲೇ ಎಲ್ಲವನ್ನೂ ಗೆಲ್ಲುತ್ತೇವೆ ಎಂದು ಭಾವಿಸಿರುವ ಬಿಜೆಪಿಗೆ ಇಲ್ಲಿ ದೊಡ್ಡ ನಿರಾಶೆ ಕಾದಿದೆ. ಪೊಲೀಸ್ ಮತ್ತು ಆಡಳಿತಯಂತ್ರದ ರಕ್ಷಣೆ ಇರುವ ಕಾರಣ ಅವರು ಮಟಮಟ ಮಧ್ಯಾಹ್ನವೇ ಹಣ ಹಂಚುವ ಹೀನ ಕ್ರಿಯೆಗೆ ಇಳಿದಿದ್ದಾರೆ. ಇದು ಬಿಜೆಪಿಯ ಹತಾಶೆಗೆ ಸಾಕ್ಷಿಯಾಗಿದೆ’ ಎಂದರು.
ಆರಂಭದಲ್ಲಿ ಇಲ್ಲಿ ಜೋರಾಗಿಯೇ ಸಭೆಗಳನ್ನು ಮಾಡುತ್ತ, ಜಾತಿವಾರು ಸಭೆಗಳನ್ನು ಮಾಡಿ, ಸ್ಥಳೀಯ ನಾಯಕರನ್ನು ‘ಒಲಿಸಿಕೊಳ್ಳಲು’ ಯತ್ನಿಸಿದ್ದ ವಿಜಯೇಂದ್ರ ಸದ್ಯ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ನಾಳೆ ರಾತ್ರಿಯವರೆಗೆ ಬಹಿರಂಗ ಪ್ರಚಾರ ಇರಲಿದ್ದು ನಂತರ ಇನ್ನಷ್ಟು ಹಣದ ಹೊಳೆ ಹರಿಯಲಿದೆ ಎಂದು ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ.
- ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ: ಮಸ್ಕಿ: ಬಿಜೆಪಿ ಹಣ ಹಂಚಿಕೆ ಆರೋಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್
Vote for congress party to save common people and to save democracy. Take money from BJP and vote for congress party.
ಇವಳಿಗೆ ಪೇಮೆಂಟ್ ಜಾಸ್ತಿನೇ ಇರಬಹುದು….