Homeಮುಖಪುಟಬಹುಜನ ಭಾರತ : ಸಿಂಧ್ಯ ಅಧಿಕಾರದಾಹ ಮತ್ತು ಕಾಂಗ್ರೆಸ್-ಬಿಜೆಪಿಯ ಅಷಾಢಭೂತಿತನ

ಬಹುಜನ ಭಾರತ : ಸಿಂಧ್ಯ ಅಧಿಕಾರದಾಹ ಮತ್ತು ಕಾಂಗ್ರೆಸ್-ಬಿಜೆಪಿಯ ಅಷಾಢಭೂತಿತನ

- Advertisement -
- Advertisement -

ಸ್ವತಂತ್ರ ಭಾರತದ ಮಾಜಿ ರಾಜಪರಿವಾರಗಳು ‘ಜನತಾಂತ್ರಿಕ’ ರಾಜಕಾರಣದಲ್ಲೂ ರಾಜ್ಯವಾಳುತ್ತ ಬಂದಿವೆ. ಅಂತಹ ಪರಿವಾರಗಳ ಪೈಕಿ ಮಧ್ಯಪ್ರದೇಶದ ಗ್ವಾಲಿಯರ್-ಗುಣಾದ ಸಿಂಧ್ಯಾ ಪರಿವಾರ ಎದ್ದು ಕಾಣುವಂತಹುದು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಾನ್ಹರಖೇಡ ಗ್ರಾಮದ ಪಾಟೀಲ ಜನಕೋಜೀರಾವ್ ವಂಶಜರು 27 ಬಾರಿ ಸಂಸದರಾಗಿದ್ದಾರೆ. ಒಂಬತ್ತು ಬಾರಿ ವಿಧಾನಸಭೆಗಳಿಗೆ ಆರಿಸಿಬಂದಿದ್ದಾರೆ. ರಾಜಮಾತಾ ವಿಜಯರಾಜೇ ಸಿಂಧ್ಯಾ ಅವರಿಂದ ಆಕೆಯ ಮೊಮ್ಮಗ ಜ್ಯೋತಿರಾದಿತ್ಯ ಸಿಂಧ್ಯ ಅವರ ತನಕ ಈ ಕುಟುಂಬದ ರಾಜಕೀಯ ಮಹತ್ವಾಕಾಂಕ್ಷೆಗಳು ರಾಜಕೀಯ ಪಕ್ಷಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತ ಬಂದಿವೆ.

ರಾಜಮಾತೆ ವಿಜಯರಾಜೇ ಸಿಂಧ್ಯ ಅವರು 1957ರಲ್ಲಿ ಗುಣಾ ಮತ್ತು 1962ರಲ್ಲಿ ಗ್ವಾಲಿಯರ್ ನಿಂದ ಕಾಂಗ್ರೆಸ್ ಸಂಸದರಾಗಿ ಆರಿಸಿ ಬಂದಿದ್ದರು. 1967ರ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಗುಣಾದಿಂದ ಗೆದ್ದರು. 1971ರಲ್ಲಿ ಜನಸಂಘ, 1989,1991, 1996, 1998ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಆರಿಸಿ ಬಂದರು.

ಜ್ಯೋತಿರಾದಿತ್ಯ ಅವರ ತಂದೆ ಮಾಧವರಾವ್ ಸಿಂಧ್ಯ 1971ರಲ್ಲಿ ಗುಣಾದಿಂದ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು, 1977ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 1980, 1984, 1989, 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದರಾದರು. 1996ರಲ್ಲಿ ಮಧ್ಯಪ್ರದೇಶ ವಿಕಾಸ ಕಾಂಗ್ರೆಸ್ ಸ್ಥಾಪಿಸಿ ಆಯ್ಕೆ ಹೊಂದಿದರು. 1998 ಮತ್ತು 1999ರಲ್ಲಿ ಪುನಃ ಕಾಂಗ್ರೆಸ್ ನಿಂದ ಆಯ್ಕೆ ಹೊಂದಿದರು.

ವಸುಂಧರಾ ರಾಜೇ ಅವರು ಐದು ಬಾರಿ ಸಂಸದೆ ಮತ್ತು ಐದು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವೆಯಾಗಿದ್ದೇ ಅಲ್ಲದೆ ಎರಡು ಬಾರಿ ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದರು.

ಯಶೋಧರಾ ರಾಜೇ ಐದು ಬಾರಿ ಶಾಸಕಿ ಮತ್ತು ಒಮ್ಮೆ ಸಂಸದೆಯಾಗಿದ್ದರು. ಕಾಂಗ್ರೆಸ್ಸಿನಲ್ಲಿದ್ದ ಜ್ಯೋತಿರಾದಿತ್ಯ ನಾಲ್ಕು ಬಾರಿ ಸಂಸದರು ಮತ್ತು ಎರಡು ಬಾರಿ ಕೇಂದ್ರ ಮಂತ್ರಿಯಾಗಿದ್ದರು.

ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ಸಿನಲ್ಲಿದ್ದ ಜ್ಯೋತಿರಾದಿತ್ಯ ಬಿಜೆಪಿಯತ್ತ ನಡೆದಿದ್ದಾರೆ. ಸಿಂಧ್ಯಾ ಕುಟುಂಬದ ಅಧಿಕಾರದಾಹದ ಹೊಸ ಅಧ್ಯಾಯದ ಪುಟಗಳು ತೆರೆಯತೊಡಗಿವೆ. ಜ್ಯೋತಿರಾದಿತ್ಯ ಅವರ ಅತ್ತೆಯರಾದ (ತಂದೆ ಮಾಧವರಾವ್ ಸಿಂಧ್ಯಾ ಅವರ ಸೋದರಿಯರು) ವಸುಂಧರಾರಾಜೇ ಸಿಂಧ್ಯ ಮತ್ತು ಯಶೋಧರರಾಜೇ ಸಿಂಧ್ಯಾ ಈಗಾಗಲೇ ಬಿಜೆಪಿಯಲ್ಲಿ ಬೇರು ಬಿಟ್ಟ ತಲೆಯಾಳುಗಳು. ಜ್ಯೋತಿರಾದಿತ್ಯ ಅವರ ಹಾಲಿ ನಡೆಯನ್ನು ಇವರಿಬ್ಬರೂ ಸ್ವಾಗತಿಸಿದ್ದಾರೆ. ಜ್ಯೋತಿರಾದಿತ್ಯ ತವರಿಗೆ ಮರಳುತ್ತಿದ್ದಾನೆ ಎಂಬ ಅವರ ಮಾತು ನಿಜ.

ಜ್ಯೋತಿರಾದಿತ್ಯ ಅವರ ಅಜ್ಜಿ ರಾಜಮಾತಾ ವಿಜಯರಾಜೇ ಸಿಂಧ್ಯ ಅವರು ಹಿಂದೂ ಮಹಾಸಭಾದಲ್ಲಿ ಎತ್ತರದ ಸ್ಥಾನದಲ್ಲಿದ್ದವರು. ಆನಂತರ ಜನಸಂಘಕ್ಕೆ ಸೇರಿದ್ದರು. ಆನಂತರ ಬಿಜೆಪಿಯ ಸ್ಥಾಪಕ ಸದಸ್ಯರಷ್ಟೇ ಅಲ್ಲದೆ ಈ ಪಕ್ಷದ ಅಧ್ಯಕ್ಷರೂ ಆಗಿದ್ದವರು. ತಂದೆ ಮಾಧವರಾವ್ ಸಿಂಧ್ಯಾ ಕೂಡ 1972ರಲ್ಲಿ ಜನಸಂಘದಿಂದ ಲೋಕಸಭೆಗೆ ಆರಿಸಿ ಬಂದಿದ್ದವರು. ಇಂದಿರಾಗಾಂಧೀ ಅವರ ಕೃಪೆಯಿಂದಾಗಿ ತುರ್ತುಪರಿಸ್ಥಿತಿಯಲ್ಲಿ ಜೈಲು ತಪ್ಪಿಸಿಕೊಂಡಿದ್ದರು. 1977ರಲ್ಲಿ ಪಕ್ಷೇತರ ಸಂಸದ. 1980ರಲ್ಲಿ ಕಾಂಗ್ರೆಸ್ ಸೇರಿ 1996ರಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಪುನಃ ಕಾಂಗ್ರೆಸ್ ಸೇರಿದ್ದವರು. 2001ರಲ್ಲಿ ಅಪಘಾತದಲ್ಲಿ ನಿಧನರಾಗುವ ತನಕ ಕಾಂಗ್ರೆಸ್ಸಿನಲ್ಲೇ ಇದ್ದರು.

ಮಧ್ಯಪ್ರದೇಶದ ರಾಜಕಾರಣವನ್ನೇ ಗಣನೆಗೆ ತೆಗೆದುಕೊಳ್ಳುವುದಾದರೆ ಸಿಂಧ್ಯಾ ಕುಟುಂಬ 53 ವರ್ಷದ ಹಳೆಯ ಇತಿಹಾಸದ ದಾಳವನ್ನು ಪುನಃ ಉರುಳಿಸಿದೆ. 1967ರಲ್ಲಿ ವಿಜಯರಾಜೇ ಸಿಂಧ್ಯಾ ಅವರ ಕಾರಣ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬೇಕಾಗಿತ್ತು. ಇದೀಗ ಅವರ ಮೊಮ್ಮಗನ ಕಾಂಗ್ರೆಸ್ ಸರ್ಕಾರವನ್ನು ಪತನದ ಅಂಚಿಗೆ ನೂಕಿದ್ದಾರೆ.

2018ರ ಡಿಸೆಂಬರ್ ನಲ್ಲಿ ಮಧ್ಯಪ್ರದೇಶದ ಮತದಾರರು ಅತಂತ್ರ ವಿಧಾನಸಭೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಬಹುಮತದ ಅಂಚಿಗೆ ಬಂದಿದ್ದ ಕಾಂಗ್ರೆಸ್ ಪಕ್ಷ ಬಿ.ಎಸ್.ಪಿ., ಪಕ್ಷೇತರರು ಮತ್ತು ಎಸ್.ಪಿ. ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ಜ್ಯೋತಿರಾದಿತ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಹಾತೊರೆದಿದ್ದರು. ಆದರೆ ಕಾಂಗ್ರೆಸ್ ಪಕ್ಷ ಹಳೆಯ ಪಂಟ ಕಮಲನಾಥ್ ಅವರಿಗೆ ಮಣೆ ಹಾಕಿತು. ಆಗಲೇ ಮುನಿದಿದ್ದ ಜ್ಯೋತಿರಾದಿತ್ಯ ಅವರಿಗೆ ಬಿಜೆಪಿ ಬಲೆ ಬೀಸಿತ್ತು. ಕಮಲನಾಥ್ ಮತ್ತು ಸಿಂಧ್ಯ ನಡುವಣ ಕಂದಕ ಹಿರಿದಾಗುತ್ತಲೇ ಹೋಯಿತು. ಸೋನಿಯಾಗಾಂಧೀ-ರಾಹುಲ್ ಗಾಂಧೀ- ಪ್ರಿಯಾಂಕಾ ಗಾಂಧೀ ಈ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಅದರ ಫಲಿತಾಂಶ ಇಂದು ಅನಾವರಣಗೊಂಡಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಮೋದಿ ಸರ್ಕಾರದ ಕ್ರಮವನ್ನು ಜ್ಯೋತಿರಾದಿತ್ಯ ಸ್ವಾಗತಿಸಿದ್ದರು. ಹೈದರಾಬಾದಿನಲ್ಲಿ ಅತ್ಯಾಚಾರದ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿ ಕೊಂದ ನಡೆಯನ್ನೂ ಅವರು ಬೆಂಬಲಿಸಿದ್ದರು. ಈ ನಡುವೆ ಸಾಮಾಜಿಕ ಜಾಲತಾಣದ ಅವರ ಅಕೌಂಟುಗಳಿಂದ ಕಾಂಗ್ರೆಸ್ ಬಾವುಟ ಕಾಣೆಯಾಗಿತ್ತು. ಈ ಎಲ್ಲ ಸುಳಿವು ಸಂಕೇತಗಳನ್ನು ಕಾಂಗ್ರೆಸ್ ಓದಲಾರದಾಯಿತು.

ಗ್ವಾಲಿಯರ್ ಸಂಸ್ಥಾನವನ್ನು ಆಳಿದ ಸಿಂಧ್ಯ ಪೂರ್ವಜರು ಬ್ರಿಟಿಷರೊಂದಿಗೆ ಗೆಳೆತನ ಹೊಂದಿದ್ದವರು. ಅವರಿಂದ ಬಿರುದು ಬಾವಲಿಗಳನ್ನು ಸ್ವೀಕರಿಸಿದ್ದವರು. 1857ರಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಮತ್ತು ಬ್ರಿಟಿಷರ ನಡುವೆ ನಡೆದ ಯುದ್ಧದಲ್ಲಿ ಲಕ್ಷ್ಮೀಬಾಯಿಯನ್ನು ಬೆಂಬಲಿಸಲಿಲ್ಲ ಎಂಬ ಆರೋಪ ಹೊತ್ತವರು. ಸಂಕಟದಲ್ಲಿದ್ದ ಲಕ್ಷ್ಮೀಬಾಯಿಗೆ ನಿಶ್ಯಕ್ತ ಕುದುರೆ ನೀಡಿ ಆಕೆಯ ಸಾವಿಗೆ ಕಾರಣನಾಗಿದ್ದ ಗ್ವಾಲಿಯರ್ ಮಹಾರಾಜ ಎಂಬ ಆರೋಪವನ್ನು ಬಿಜೆಪಿಯೇ ಮಾಡಿರುವುದುಂಟು.

ಜ್ಯೋತಿರಾದಿತ್ಯ ಸಿಂಧ್ಯ ಅವರನ್ನು ಬಿಜೆಪಿ ಮುಂಬರುವ ಕೆಲ ಕಾಲ ಹೆಗಲ ಮೇಲೆ ಹೊತ್ತು ಮೆರೆಸಿ ಡೋಲು ಬಾರಿಸೀತು. ಇತ್ತ ಕಾಂಗ್ರೆಸ್ಸು ಬಿಜೆಪಿ ಮಾಡಿದ್ದ ಆಪಾದನೆಯನ್ನೇ ಮಾಡಿ ರಾಣಿ ಲಕ್ಷ್ಮೀಬಾಯಿಯ ಬೆನ್ನಿಗೆ ಚೂರಿ ಹಾಕಿದ ವಂಶಸ್ಥನಿಂದ ಇನ್ನೇನು ನಿರೀಕ್ಷಿಸಲಾದೀತು ಎಂದು ಬಾಯಿ ಬಡಿದುಕೊಳ್ಳಲಿದೆ. ಎರಡೂ ಪಕ್ಷಗಳು ಆಷಾಢಭೂತಿಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...