Homeಮುಖಪುಟಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ

- Advertisement -
- Advertisement -

ಅಪ್ರತಿಮ ನೀರಾವರಿ ತಜ್ಞ ಹಾಗೂ ಅತಿ ದೂರದೃಷ್ಟಿಯ ರಾಜಕಾರಣಿ ರಮೇಶ ಜಾರಕಿಹೊಳಿ ಅವರು ಮೊನ್ನೆ ಮಹದಾಯಿ ನದಿ ಹುಟ್ಟುವ ಕಣಕುಂಬಿ ಜಂಗಲ್ಲಿಗೆ ಹೋಗಿದ್ದರು. ಅಲ್ಲಿ ಹೋದಮ್ಯಾಲೆ ರೈತರು ಆಯೋಜಿಸಿದ ಸಭೆಗೆ ಹೋಗಲು ಒಲ್ಲೆ ಅಂದರು. ಸಭೆ ಕಟ್ಟಿ ಹತ್ತಿದವರು ಇಳದರು. ನಾನು ಬರಬಾರದಾಗಿತ್ತು. ಬಂದಿದ್ದು ತಪ್ಪು. ಈ ವಿವಾದ ಸುಪ್ರೀಂ ಕೋರ್ಟಿನ್ಯಾಗ ಅದ. ನಾನು ಇಲ್ಲಿ ಇವತ್ತು ಬಂದದ್ದು ಗೋವಾದವರಿಗೆ ಗೊತ್ತಾದರ ಅವರು ತಕರಾರು ಮಾಡತಾರ. ಆಗ ರಾಜ್ಯದ ಹಿತಾಸಕ್ತಿಗೆ ಕುಂದು ಆಗಬಹುದು. ಇದನ್ನ ಟೀವಿಯೊಳಗ ತೋರಿಸಬ್ಯಾಡ್ರಿ. ದಯವಿಟ್ಟು ತೋರಿಸಬ್ಯಾಡ್ರಿ, ಅಂತ ಅವಲತ್ತು ಕೊಂಡರು.

ಇಷ್ಟು ಶಾಣ್ಯಾ ಮನುಷ್ಯ ಅಷ್ಟು ದೊಡ್ಡ ತಪ್ಪು ಹೆಂಗ ಮಾಡಿದಾ? ಅಷ್ಟಾಗಿಯೂ ಆ ವಿವಾದ ಏನು?

ಭಾರತದೊಳಗ ಎರಡು ರೀತಿ ನದಿ ಅದಾವು. ಕೆಲವು ಬಲಗಡೆ ಹರಿದು ಬಂಗಾಳ ಕೊಲ್ಲಿಯೊಳಗ ಕೂಡತಾವು. ಇನ್ನು ಕೆಲವು ಎಡಗಡೆ ಹರಕೊಂಡು ಹೋಗಿ ಅರಬ್ಬೀ ಸಮುದ್ರದೊಳಗ ಸೇರತಾವು ಕರಾವಳಿ ಮಂದಿ ಅವಕ್ಕ ಪಶ್ಚಿಮವಾಹಿನಿ ಅಂತಾರ. ಮಜಾ ಅಂದರ ಆದರ ತಮ್ಮೂರಾಗ ಹರಿಯುವ ನದಿಗಳಿಗೆ ಅವರು ಪೂರ್ವವಾಹಿನಿ ಅನ್ನಂಗಿಲ್ಲ.

ಮಹದಾಯಿ ಅಥವಾ ಮ್ಹಾದೇಯಿ ಅಥವಾ ಮಾಂಡೋವಿ ಅನ್ನೋದು ಪಶ್ಚಿಮಘಟ್ಟದೊಳಗ ಹುಟ್ಟಿ ಎಡಗಡೆ ಹರದು ಮೀರಾಮಾರ ಅನ್ನೋ ಗೋವಾದ ಪ್ರದೇಶದಾಗ ಅರಬ್ಬೀ ಸಮುದ್ರಕ್ಕೆ ಸೇರೋ ಪಶ್ಚಿಮ ವಾಹಿನಿ. ಸುಮಾರು 90 ಕಿಲೋಮಿಟರ್ ಹರಿಯುವ ಇದು ದೇಶದ ಅತಿ ಸಣ್ಣ ನದಿಗಳಲ್ಲಿ ಒಂದು. ಅದರಾಗ ಹರಿಯೋ ನೀರಿನ ಪ್ರಮಾಣ ಸುಮಾರು 175 ಟಿಎಂಸಿ ಫೀಟು ನೀರು ಅಂದರ ಸುಮಾರು 4.81 ಲಕ್ಷ ಕೋಟಿ ಲೀಟರು ನೀರು ಇರಬಹುದು ಅಂತ ಕೇಂದ್ರ ನದಿ ನೀರು ಮಂಡಳಿ ಅಂದಾಜು. ಅದರಾಗ ಗೋವಾ 122 ಟಿಎಂಸಿ, ಕರ್ನಾಟಕ 34 ಹಾಗೂ ಮಹಾರಾಷ್ಟ್ರ 6.5 ಟಿಎಂಸಿ ನೀರು ಕೇಳಿದ್ದವು. ಮಹದಾಯಿ ಮಂಡಳಿ ಕರ್ನಾಟಕ 13, ಗೋವಾ 24 ಹಾಗೂ ಮಹಾರಾಷ್ಟ್ರ 1.3 ಟಿಎಂಸಿ ನೀರು ತೊಗೋಬಹುದು ಅಂತ ಹೇಳೇದ.

ಆದರ ಕರ್ನಾಟಕ ತಯಾರಿಸಿರುವ ಯೋಜನೆಗಳಿಂದ ಅರಣ್ಯ ಹಾಗೂ ಪರಿಸರ ನಾಶ ಆಗತದ, ವನ್ಯಜೀವಿಗಳಿಗೆ ನೀರು ಸಿಗೋದಿಲ್ಲ, ನದಿಪಾತ್ರದೊಳಗ ನೀರು ಕಮ್ಮಿ ಆಗತದ, ಗೋವಾದ ಜೀವ ದ್ರವ್ಯವಾದ ಮೀನುಗಾರಿಕೆ ಬಂದ್ ಆಗತದ ಅಂತೆಲ್ಲಾ ಹೇಳಿ ಗೋವಾದವರು ಸುಪ್ರೀಂಕೋರ್ಟಿಗೆ ಹೋಗ್ಯಾರ. ಅಲ್ಲಿನ ಪರಿಸರವಾದಿಗಳು, ಸಂಘಟನೆಗಳು ಸಹಿತ ಆಂದೋಲನ ನಡಿಸ್ಯಾವ.

ಕಾವೇರಿ, ಕೃಷ್ಣ ಹಾಗೂ ಗೋದಾವರಿಗೂ, ಮಹದಾಯಿಗೂ ಏನು ವ್ಯತ್ಯಾಸ ಅಂದರ ಮೊದಲಿನ ಮೂರರಾಗ ನದಿ ನೀರು ಹಂಚಿಕೆಯ ಪ್ರಮಾಣದ ಬಗ್ಗೆ ವಿವಾದ ಇದ್ದರ, ಮಹದಾಯಿಯೊಳಗ ಪರಿಸರ ಕಾಳಜಿಯಿಂದ ಈ ಯೋಜನೆ ಆಗಲೇಬಾರದು ಅನ್ನೋ ವಿವಾದ ಅದ.

ಗೋವಾದವರು ಮಾಡಿರುವ ಆರೋಪಗಳಲ್ಲಿ ಮುಖ್ಯವಾದವು ಇವು- ಮೊದಲನೇಯದು ಕಳಸಾ ಹಾಗೂ ಬಂಡೋರಿ ನಾಲಾಗಳು ಮಹದಾಯಿ ನದಿಗೆ ಸೇರೋಗಿಂತಾ ಮುಂಚೇನ ಅವುಗಳಿಂದ ನೀರನ್ನ ಹೀರಿಕೊಂಡು ನದಿಯನ್ನ ಬರಡಾಗಿಸಲಾಗತದ. ಇದು ಅವೈಜ್ಞಾನಿಕ. ಎರಡನೆಯದು ಈ ಯೋಜನೆಗಳಲ್ಲಿ ಭೂಮಿಯ ಒಳಗ ಸುರಂಗ ಕೊರದು ನೀರು ಹರಸತಾರ. ಇದರಿಂದ ಅರಣ್ಯ ನಾಶ ಆಗತದ. ಮೂರನೆಯದು ಮಹದಾಯಿ ಜಲವಿದ್ಯುತ್ ಯೋಜನೆಯೊಳಗ ಪಶ್ಚಿಮಘಟ್ಟದ ಗುಡ್ಡದ ನೆತ್ತಿಯ ಮ್ಯಾಲೆ ಅಣೆಕಟ್ಟು ಕಟ್ಟಿ ನೀರು ಸಂಗ್ರಹ ಮಾಡತಾರ. ಇದರಿಂದ ಅಣೆಕಟ್ಟಿಗೂ ಅಪಾಯ, ಸುತ್ತಲಿನ ಕಾಡು, ಜೀವಜಾಲ, ಪಕ್ಷಿಗಳಿಗೂ ಅಪಾಯ.

ಹೀಗೆಲ್ಲಾ ಮಾಡಿದರ ನದಿ ಕೆಲವು ವರ್ಷಗಳ ನಂತರ ಬತ್ತಿ ಹೋಗತಾವು. ನೀವು ಸಾವಿರಾರು ಕೋಟಿ ರೂಪಾಯಿ ಕೊಟ್ಟು ಕಟ್ಟಿದ ಅಣೆಕಟ್ಟುಗಳು ಇದರಿಂದ ಖಾಲಿ ಹೊಡೀತಾವು. ಹತ್ತು ಹನ್ನೆರಡು ವರ್ಷಗಳ ಬಳಿಕ ಜನ ನೀರು ಕೇಳಿದರ ಏನು ಹೇಳತೀರಿ ಅನ್ನೋ ಪ್ರಶ್ನೆಗೆ ಯಾರ ಹತ್ತರನೂ ಉತ್ತರ ಇಲ್ಲ.

ಇವು ಯಾವುಕ್ಕೂ ಕರ್ನಾಟಕ ಸರಕಾರ ಇಲ್ಲಿಯವರೆಗೂ ಸರಿಯಾದ ಉತ್ತರ ಕೊಟ್ಟಿಲ್ಲ. ಹಿಂದೆ ಈ ಇಲಾಖೆ ಹೊಂದಿದ ಸಚಿವರೂ ಹಾಗೂ ಈಗ ಇದನ್ನು ಜಿದ್ದಿನಿಂದ ಪಡೆದುಕೊಂಡ ರಮೇಶ ಸಾಹುಕಾರ ಅವರಾಗಲೀ ಯಾರೂ ಪರಿಸರವಾದಿಗಳ ಆತಂಕಗಳಿಗೆ ಪರಿಹಾರ ಕೊಟ್ಟಿಲ್ಲ. ಪರಿಸರವಾದಿಗಳನ್ನು ಪರಿಸರವ್ಯಾಧಿಗಳು ಅಂತ ಒಬ್ಬ ರಾಜಕೀಯ ಪಂಡಿತರು ಕರದಾರ. ಅವರಿಗೆ ನೆಲದ ಕೆಳಗ ಇರುವ ಜೀವ ಜಂತುಗಳು ಕಾಣತಾವೆ, ನೆಲದ ಮೇಲೆ ಇರೋ ಜನ ಕಾಣಂಗಿಲ್ಲ ಅಂತ ಹಿರಿಯ ರಾಜಕಾರಣಿಯೊಬ್ಬರು ಹೇಳ್ಯಾರ. ಒಟ್ಟಿನ್ಯಾಗ ಇಂತಹ ಮೌಲಿಕ ಪ್ರಶ್ನೆಗಳನ್ನ ಚಾಪೆ ಕೆಳಗ ತೂರಿಸಿ ನೆಲ ಸ್ವಚ್ಛ ಮಾಡುವ ಕೆಲಸ ನಡದದ.

ಇನ್ನು ಅಡವಿಯೊಳಗ ಮಾಡುವ ಯೋಜನೆಗಳಿಗೆ ಅವಶ್ಯಕವಾಗಿ ಬೇಕಾದ ಪರಿಸರ ಇಲಾಖೆ ಅನುಮತಿಯನ್ನು ಈ ಯೋಜನೆಗೆ ತೊಗೊಂಡಿಲ್ಲ. ಇದು ಕುಡಿಯುವ ನೀರು ಯೋಜನೆ. ಇದಕ್ಕ ಅದು ಬೇಕಾಗಿಲ್ಲ ಅಂತ ಕೇಳಿದವರ ಬಾಯಿ ಮುಚ್ಚಿಸೋ ಪ್ರಯತ್ನ ನಡದದ. ಇದು ಕುಡಿಯೋ ನೀರು ಯೋಜನೆ ಆಗಿದ್ದರ ಹುಬ್ಬಳ್ಳಿ- ಧಾರವಾಡ- ಗದಗ- ನರಗುಂದದ ಜನಾ ಹೋರಾಟ ಮಾಡಬೇಕಾಗಿತ್ತಲ್ಲಾ, ಆದರ ಯೋಜನೆ ಕನಾಲು ಹಾಸಿ ಹೋಗೋ ಜಮೀನಿನ ಪಕ್ಕದ ರೈತರು ಹೋರಾಟ ಮಾಡಲಿಕ್ಕೆ ಹತ್ಯಾರ. ಅದಕ್ಕೇನು ಮಾಡೋದು ಅಂತ ಕೇಳಿದರ ಅದಕ್ಕ ಉತ್ತರ ಇಲ್ಲ. ನೀರು ಕನಾಲಿನೊಳಗ ಹರದುಹೋಗೋವಾಗ ಅದನ್ನ ರೈತರು ಪಂಪು ಸೆಟ್ಟ ಹಚ್ಚಿ ಎಳಕೊಳ್ಳೋದು ಸಹಜ. ಅದನ್ನೇನೂ ಮಾಡಲಿಕ್ಕೆ ಆಗಂಗಿಲ್ಲ ಅನ್ನೋ ಅಸಹಾಯಕ ಪ್ರತಿಕ್ರಿಯೆ ಬರತದ.

ವಿವಾದ ಬಗೆಹರಿಸೋ ಜವಾಬುದಾರಿ ಇರೋ ಮಹದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಲ ಕರ್ನಾಟಕಕ್ಕ 13, ಗೋವಾಕ್ಕ 24 ಹಾಗೂ ಮಹಾರಾಷ್ಟ್ರಕ್ಕ 1.3 ಟಿಎಂಸಿ ನೀರು ಬಳಸಬಹುದು ಅಂತ ಹೇಳೇದ. ಹಂಗಂತ ಇದು ಯೋಜನೆಗಳಿಗೆ ಅನುಮತಿ ಕೊಟ್ಟಂಗಲ್ಲ. ಎಲ್ಲಾ ಅನುಮತಿ ಸಿಕ್ಕ ಮ್ಯಾಲೆ ನೀವು ಇದರಗಿಂತ ಹೆಚ್ಚು ನೀರು ಖರ್ಚು ಮಾಡಬಾರದು ಅಂತ ಹೇಳಿದಂಗ ಅಷ್ಟ. ಅಡವಿಯೊಳಗ ಯಾವುದೇ ಗೈರು- ಅರಣ್ಯ ಯೋಜನೆ ಮಾಡಿದರೂ ಸಹ ಅದಕ್ಕ ಮೂರು ಅನುಮತಿ ಬೇಕಾಗತಾವು- ಅರಣ್ಯ, ವನ್ಯಜೀವಿ ಹಾಗೂ ಪರಿಸರ. ಜಲ ವಿದ್ಯುತ್ ಯೋಜನೆ ಸಹಿತ ಈ ಮೂರು ಅನುಮತಿ ಇರಲಾರದೇ ಆರಂಭ ಮಾಡಲಿಕ್ಕೆ ಬರಂಗಿಲ್ಲ. ನಮ್ಮ ತಥಾಕಥಿತ ʻಕುಡಿಯುವ ನೀರಿನʼ ಯೋಜನೆಗೆ ಸಹಿತ ಅರಣ್ಯ ಹಾಗೂ ಪರಿಸರ ಅನುಮತಿ ಸಿಗಬೇಕು. ಮೊನ್ನೆಯಷ್ಟೇ ಕೇಂದ್ರ ವನ್ಯಜೀವಿ ಮಂಡಳಿ ಹುಬ್ಬಳ್ಳಿ- ಅಂಕೋಲಾ ಯೋಜನೆಗೆ ವನ್ಯಜೀವಿ ಅನುಮತಿ ನಿರಾಕರಿಸೇದ. ಇದು ನಮಗೆ ನೆನಪಿರಲಿ.

ಕೇಂದ್ರ ಸರಕಾರದ ಪ್ರಕಾರ ನಾಲ್ಕನೇ ದರ್ಜೆ ಅರಣ್ಯ ಹೊಂದಿರುವ ಭೂತರಾಮನಹಟ್ಟಿ ಪ್ರದೇಶದೊಳಗ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಸ್ಥಾಪಿಸಬಾರದು ಅಂತ ಕೇಂದ್ರ ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಕೊಟ್ಟದ. ಈಗ ಇರುವ ಕಚೇರಿಗಳನ್ನು ಧ್ವಂಸ ಮಾಡರಿ ಅಂತ ಡೆಡಲೈನು ಹಾಕೇದ. ಅಂಥಾದರಾಗ ಜಲವಿದ್ಯುತ್ ಯೋಜನೆ, ಅದರಿಂದ ಅರಣ್ಯ ಮುಳುಗಡೆ, ವನ್ಯಜೀವಿ ಹಾನಿ, ಪರಿಸರ ನಾಶ ಇವಕ್ಕೆಲ್ಲಾ ಕೇಂದ್ರ ಒಪ್ಪಬಹುದೇ? ಸಾಧ್ಯನ ಇಲ್ಲಾ ಅನ್ನೋರು ಕೆಲವರು. ಅನುಮತಿ ಯಾಕೋ ಅದರ ಹಂಗ್ಯಾಕೋ, ಮೋದಿ ಅವರಿದ್ದರೆ ಸಾಕುʼ ಅಂತ ಇನ್ನ ಕೆಲವರು. ಯಾವಾವ ನಾಯಕರಿಗೆ ದೇವರು ಏನೇನು ಬುದ್ಧಿ ಕೊಡತಾನೋ ಹೇಳಲಿಕ್ಕೆ ಬರಂಗಿಲ್ಲ.

ಇನ್ನು ಈ ಮೂರು ಯೋಜನೆಗಳನ್ನ ವಿರೋಧ ಮಾಡತಾ ಇರೋ ಗೋವಾ ಏನು ಭಾಳ ಸಾಚಾ ಅಂತ ತಿಳಕೋಬ್ಯಾಡ್ರಿ. ಅವರು ತಮಗ ಉಳಿಯೋ 70 ಕಿಲೋಮಿಟರ್ ನದಿ ಪಾತ್ರದಾಗ 53 ಯೋಜನೆಗಳನ್ನ ಮಾಡಲಿಕ್ಕೆ ತಯಾರಿ ನಡಸೇದ. ಅದರಾಗ ಎರಡು ಜಲವಿದ್ಯುತ್ ಯೋಜನೆಗಳು. ಅವು ಸಹ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದೊಳಗ ಬರೋವಂಥಾವು. ಕರ್ನಾಟಕದವರು ಜಲವಿದ್ಯುತ್ ಯೋಜನೆ ಮಾಡಿದರ ತಪ್ಪು, ನಾವು ಮಾಡಿದರ ಸರಿ ಅನ್ನೋ ಮನೋಭಾವ ಅವರದು.

ಪರಿಸರ ಅನ್ನೋದು ಯಾವ ಜಿಲ್ಲೆ- ರಾಜ್ಯ- ದೇಶದ ಗಡಿಗೆ ಸೀಮಿತವಾದದ್ದಲ್ಲ. ಅದು ಇಡೀ ಭೂಮಂಡಲಕ್ಕ ಮತ್ತು ಇಡೀ ವಿಶ್ವದ ಜನ- ಪ್ರಾಣಿ- ಪಕ್ಷಿ- ಕೀಟ- ಗಿಡ- ಜಲ- ಇತರ ಕ್ರಿಮಿಗಳ ಸುರಕ್ಷೆಗೆ ಸಂಬಂಧಿಸಿದ್ದು. ಇದನ್ನು ಹಾಳು ಮಾಡಿದರೆ ಎಲ್ಲರ ಸರ್ವನಾಶ ಖಂಡಿತ.

ʻʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ ಅಂತ ಜೇನುಹುಳು ಪ್ರೇಮಿ ನಟ ಮಾರ್ಗನ್ ಫ್ರೀಮನ್ ಹೇಳಿದ್ದು ಎಲ್ಲರಿಗೂ ನೆನಪರಲಿ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...