Homeಮುಖಪುಟಬೇಂದ್ರೆ-125; ಪ್ರತಿಭಟಿಸಿದ ಬೇಂದ್ರೆ ಕಾವ್ಯ : ಬಡವರಬಗ್ಗರ ತುತ್ತಿನ ಚೀಲವ ಮಾತ್ರ ’ಬರಿದೋ ಬರಿದು’

ಬೇಂದ್ರೆ-125; ಪ್ರತಿಭಟಿಸಿದ ಬೇಂದ್ರೆ ಕಾವ್ಯ : ಬಡವರಬಗ್ಗರ ತುತ್ತಿನ ಚೀಲವ ಮಾತ್ರ ’ಬರಿದೋ ಬರಿದು’

ಅರವಿಂದರ ಮತ್ತು ಅವರ ಆಶ್ರಮದ ಬಗೆಗಿನ ಬೇಂದ್ರೆ ಅವರ ಪ್ರೀತಿಯ ಬಗ್ಗೆ ಪುಸ್ತಕಗಳನ್ನೇ ಬರೆಯಲಾಗಿದೆ. ಆದರೆ ಯುದ್ಧ ಹಾಗೂ ವಸಾಹತುಶಾಹಿಯ ಬಗ್ಗೆ ’ನರಬಲಿ’ ಪದ್ಯವನ್ನು ಬರೆದದ್ದಕ್ಕಾಗಿ ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿ, ಆನಂತರ ಮುಗದದಲ್ಲಿ ’ನಜರ್‌ಬಂದಿ’ಯಲ್ಲಿ ಅವರು ಇರಬೇಕಾಗಿ ಬಂದುದನ್ನು ಬಹಳ ಚುಟುಕಾಗಿ ವಿವರಿಸಲಾಗುತ್ತದೆ. ಈ ಶಿಕ್ಷೆಯ ನಂತರ ಅವರಿಗೆ ಯಾವ ಉದ್ಯೋಗವೂ ಸಿಕ್ಕದೆ ವರ್ಷಗಳ ಕಾಲ ಬೇಂದ್ರೆ ಅನಿಶ್ಚಿತವಾದ ಜೀವನ ನಡೆಸಿದರು.

- Advertisement -
- Advertisement -

ನಾನು ಬೆಳೆದದ್ದು ಓದಿದ್ದು ಹುಬ್ಬಳ್ಳಿ-ಧಾರವಾಡದಲ್ಲಿ. ಕರ್ನಾಟಕ ಕಾಲೇಜು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಾವು ಓದುತ್ತಿದ್ದಾಗ ನಮಗೆ ಬೇಂದ್ರೆಯವರ ಬಗ್ಗೆಯಾಗಲಿ ಅವರ ಕಾವ್ಯದ ಬಗ್ಗೆ ಆಗಲಿ ಅಂಥಾ ವಿಶೇಷ ಪ್ರೀತಿಯೇನಿರಲಿಲ್ಲ. ಮುಖ್ಯ ಕಾರಣವೆಂದರೆ ಆ ಹೊತ್ತಿಗಾಗಲೇ ಬೇಂದ್ರೆಯವರು ಅವರ ಪ್ರತಿಭೆಗಿಂತ ಅವರ ವಿಕ್ಷಿಪ್ತತೆಯ ಕಾರಣಕ್ಕೆ ಪ್ರಸಿದ್ಧರಾಗಿದ್ದರು. ಅವರ ಶಿಷ್ಯರ ಗುಂಪು ಅವರ ಕಾವ್ಯವನ್ನು ಆಧ್ಯಾತ್ಮವಾಗಿ ಓದುತ್ತ, ಅವರ ತಾತ್ವಿಕ ಕವನಗಳನ್ನು ಕೆಲವು ಸಾಧಕರಿಗೆ ಮಾತ್ರ ಅರ್ಥವಾಗಬಲ್ಲ ರಹಸ್ಯಮಯ ಪದ ಚಕ್ರವ್ಯೂಹವೆಂದು ಪ್ರಚಾರ ಮಾಡುತ್ತಿದ್ದರು. ಅದು 1970ರ ದಶಕದ ಕಾಲವಾಗಿದ್ದರಿಂದ ಚಳವಳಿಗಳು, ಹೋರಾಟಗಳ ಕಾಲವಾಗಿತ್ತು. ಈ ಸನ್ನಿವೇಶದಲ್ಲಿ ನಮಗೆ ಬೇಂದ್ರೆ ವೈದಿಕ ಸಂಪ್ರದಾಯದ ಪ್ರತಿನಿಧಿಯಾಗಿ ಕಾಣುತ್ತಿದ್ದರು. ಆದರೆ ಹುಕ್ಕೇರಿ ಬಾಳಪ್ಪನವರ ಅದ್ಭುತ ಹಾಡುಗಾರಿಕೆಯಿಂದ, ಶಂಕರ ಮೊಕಾಶಿ ಪುಣೇಕರ್ ಅವರ ಮಾತು, ಭಾಷಣಗಳಿಂದಾಗಿ ನಮ್ಮ ಕೈಗೆ ಎಟುಕದಿದ್ದ ಬೇಂದ್ರೆ ಒಬ್ಬರು ಇದ್ದಾರೆ ಎಂದು ಅನ್ನಿಸುತ್ತಿತ್ತು.

ಹೀಗಾಗಿ ನಾನು ಧಾರವಾಡವನ್ನು ಬಿಟ್ಟು ಶಿವಮೊಗ್ಗೆಗೆ ಬಂದ ಮೇಲೆಯೆ ಈ ನಿಜವಾದ ಬೇಂದ್ರೆಯವರನ್ನು ಆವಿಷ್ಕಾರ ಮಾಡಿಕೊಳ್ಳತೊಡಗಿದ್ದು. ಬೇಂದ್ರೆ ವಿಶ್ವದ ಶ್ರೇಷ್ಠ ಕವಿಗಳಲ್ಲಿ ಒಬ್ಬರು ಎನ್ನುವುದನ್ನು ಕಂಡುಕೊಂಡೆ. ಇದೆಲ್ಲ ಇಲ್ಲಿ ಹೇಳಲು ಕಾರಣವೆಂದರೆ ಇಂದಿನ ತಲೆಮಾರಿನ ಯುವಕ ಯುವತಿಯರೂ ಬೇಂದ್ರೆ ಕಾವ್ಯಕ್ಕೆ ಇಂಥದೇ ಪಯಣ ಮಾಡುತ್ತಿರಬಹುದು. 1932ರಲ್ಲಿ ತಮ್ಮ ಶ್ರೇಷ್ಠ ಸಂಕಲನವಾದ ಗರಿಯನ್ನು ಪ್ರಕಟಿಸಿದ ಬೇಂದ್ರೆ 90 ವರ್ಷಗಳ ನಂತರ ಅದನ್ನು ಓದುವ ತಲೆಮಾರಿಗೆ ಎಷ್ಟು ಪ್ರಸ್ತುತವಾಗಿದ್ದಾರೆ? ಇಂದಿನ ಬದುಕಿಗೆ ಸ್ಪಂದಿಸುವ, ಸಮಕಾಲೀನವೆನ್ನಿಸುವಂಥ ಶಕ್ತಿ ಬೇಂದ್ರೆ ಕಾವ್ಯಕ್ಕೆ ಇದೆಯೆ?

ಬೇಂದ್ರೆ ಕಾವ್ಯದ ಅಲಕ್ಷಿತವಾದ ಗುಣವೆಂದರೆ ಅದರಲ್ಲಿರುವ ತೀವ್ರ ಪ್ರತಿಭಟನಾತ್ಮಕ ಗುಣ. ಇದರಲ್ಲಿ ಉದ್ವೇಗವಿದೆ, ರೊಚ್ಚಿದೆ ಅತ್ಯಂತ ತೀಕ್ಷ್ಣವಾದ ವಿಡಂಬನೆಯ ಶಕ್ತಿಯಿದೆ. ಇದೇನು ವಿಚಿತ್ರವಾದ ಹೇಳಿಕೆ ಎಂದು ಅನ್ನಿಸಿದರೂ ಈ ಗುಣವು ಬ್ರೆಕ್ಟ್‌ನ ಪದ್ಯಗಳಲ್ಲಿ ಕಾಣುವಂತಹದು. ಇದರಲ್ಲಿ ಉದ್ದೇಶಪೂರ್ವಕವಾದ ಉತ್ಪ್ರೇಕ್ಷೆ ಇದೆ. ವಿರೋಧಾಭಾಸದ ಬಳಕೆಯಿದೆ. ಉದಾಹರಣೆಗೆ ತುಂಬಾ ಸರಳವಾದ ಮತ್ತು ಕೆಲವರು ಮಕ್ಕಳ ಪದ್ಯವೆಂದು ತಪ್ಪಾಗಿ ಓದಿಕೊಳ್ಳುವ ’ಕರಿಮರಿ ನಾಯಿ’ ಪದ್ಯವನ್ನು ನೋಡಬಹುದು. ಈ ಪದ್ಯದಲ್ಲಿನ ಪ್ರತಿದ್ವಂದ್ವಿಗಳು ಒಂದು ಕರಿಮರಿ ನಾಯಿ ಮತ್ತು ಭಟ್ಟರು. ಭಟ್ಟರಿಗೆ ಕರಿಮರಿ ನಾಯಿ ಮೈಲಿಗೆ. ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಕೊಚ್ಚಿಹೋಗುವ ಭಯದಿಂದ ಅದು ಮನೆಯೊಳಗೆ ನುಗ್ಗಬಹುದೆಂದು ಅವರಿಗೆ ಭೀತಿ. ಹೀಗಾಗಿ ವೀರಯೋಧನಂತೆ ಕೈಯಲ್ಲಿ ಸೌಟು ಹಿಡಿದು ಬಾಗಿಲಲ್ಲಿ ರಕ್ಷಣೆಗೆ ನಿಂತಿದ್ದಾರೆ! ಈ ವ್ಯಂಗ್ಯ ಚಿತ್ರವನ್ನು ಕಲ್ಪಿಸಿಕೊಂಡು ಓದಿದರೆ ಈ ಕಾಳಗದ ಹಿಂದೆ ಅನೇಕ ಅರ್ಥಗಳು ಹೊಳೆಯುತ್ತವೆ. ಅದಕ್ಕೆ ಪೂರಕವಾಗಿ doggerel ಎಂದು ಕರೆಯಲಾಗುವ ಶೈಲಿಯ ಅಂತ್ಯ ಪ್ರಾಸಗಳಿವೆ. ಮತ್ತು ಕಾಳಗದ ವ್ಯಾಖ್ಯಾನಕಾರರಾದ ಬೇಂದ್ರೆಯವರ ತುಂಟ ದನಿಯಿದೆ.

ಭಪ್ಪರೆ ಭಪ್ಪರೆ ಭಲರೆ! ಭಟ್ಟರೋ
ಕಾಯ್ದರು ಮನೆಯನು ಏನು ದಿಟ್ಟರೋ
ಕುನ್ನಿಯು ಒಳಗೇ ಬಂದೇನೆಂದಿತು;
ಭಟ್ಟರು ಬಂದರೆ ಕೊಂದೇನೆಂದರು

PC : BookBrahma

ಈ ವ್ಯಂಗ್ಯ ವಿಡಂಬನೆಗಳಿಗೆ ಸಾಮಾಜಿಕ ವಿಮರ್ಶೆಯ ಹರಿತವಾದ ಗುಣವು ಸೇರಿಕೊಳ್ಳುವುದು. ಅವರ ಅನೇಕ ಅತ್ಯುತ್ತಮ ಪದ್ಯಗಳಲ್ಲಿ ’ತುತ್ತಿನ ಚೀಲ’ ಇಂದಿಗೂ ಬಡವರ ಬಗ್ಗರ ಬಗೆಗಿನ ಅತ್ಯಂತ ಪ್ರಭಾವಿ ಪದ್ಯವಾಗಿದೆ. ಬೇಂದ್ರೆಯವರ ಸಂವೇದನೆಯ ಗುಣವೆಂದರೆ ಒಂದು ವಾಸ್ತವವನ್ನು ಅತಿಶಯಕ್ಕೆ ಉತ್ಪ್ರೇಕ್ಷೆಗೆ ತೆಗೆದುಕೊಂಡು ಹೋಗಿ ಅದನ್ನು ಶಕ್ತಿಶಾಲಿ ರೂಪಕವನ್ನಾಗಿ ಪರಿವರ್ತಿಸುವುದು. 19ನೇ ಶತಮಾನದ ಔದ್ಯೋಗಿಕ ಕ್ರಾಂತಿಯ ಯುಗವು ತಂದಂಥ ಅಸಮಾನತೆಗಳ ಬಗ್ಗೆ ಇಂದಿಗೂ ನಾವು ಓದುವ ವಿಲಿಯಮ್ ಬ್ಲೇಕ್ ಕವಿಯ ಶೈಲಿಯು ಹೀಗೇ ಇತ್ತು. ಅವನ ಒಂದು ಪದ್ಯದಲ್ಲಿ ಬಾಲಕಾರ್ಮಿಕನಾದ ಹುಡುಗನ ಕನಸಿನಲ್ಲಿ ದೇವದೂತನೊಬ್ಬನು ಬಂದು ’ದುಃಖ ಪಡಬೇಡ ಸ್ವರ್ಗದಲ್ಲಿ ದೇವರು ನಿನ್ನ ಕಷ್ಟಗಳಿಗೆ ಪರಿಹಾರ ನೀಡುತ್ತಾನೆ. ಈಗ ಒಳ್ಳೆಯ ಹುಡುಗನಾಗಿರು’ ಎಂದು ಹೇಳುತ್ತಾನೆ. ಬ್ಲೇಕ್‌ನಿಗೆ ಆ ಕಾಲದ ಫ್ಯಾಕ್ಟರಿಗಳು ಮತ್ತು ಚರ್ಚುಗಳು ‘dark satanic mills’ (ಸೈತಾನನ ಕಪ್ಪು ಕಾರ್ಖಾನೆಗಳು) ಆಗಿ ಕಾಣುತ್ತವೆ. ಇಂಥದೇ ರೂಪಕ ಶಕ್ತಿಯನ್ನು ಬೇಂದ್ರೆಯವರ ಪದ್ಯದಲ್ಲಿ ಕಾಣಬಹುದು.

“ದೈವುಳ್ಳವರಿಗೆ ದಯವೇ ಇಲ್ಲ!
ತಿತ್ತಿರೆ ತುಂಬಿದೆ
ಕೂಳಿನ ಕೋಟೆ
ಬಿಡುಗಣ್ಣವರಿಗೆ
ಕಾಣುವುದಿಲ್ಲ
ಅಮೃತ ತೇಗಿನ
ಮದವಂತಹದು!
ಹಸಿದವ ಬಲ್ಲ
ಹಸಿವೆಯ ಶೂಲಿ”

’ದೈವುಳ್ಳವರು’ ಇಲ್ಲಿ ಶ್ರೀಮಂತರು ಮತ್ತು ಅವರ ಒಡೆತನದ ಕೂಳಿನ ಕೋಟೆ ತುಂಬಿದೆ ಆದರೆ ಬಡವರು ಈ ಕೋಟೆಯನ್ನು ಲಗ್ಗೆ ಹಾಕಿ ಪ್ರವೇಶಿಸಲಾರರು ಎಂದು ಅರ್ಥಕೊಡುತ್ತದೆ. ಆದರೆ ಈ ’ಅನಿಮೇಶರು’ ಪದ್ಯದ ಮುಂದಿನ ಸಾಲಿನಲ್ಲಿ ದೇವರುಗಳೇ ಈ ದೈವುಳ್ಳವರು ಎಂದು ಭಾಸವಾಗುತ್ತದೆ. ಅವರು ಬಿಡುಗಣ್ಣವರು (ಅನಿಮೇಶರು- ರೆಪ್ಪೆ ಮಿಟುಕಿಸದವರು). ಆದರೆ ಅವರಿಗೆ ಬಡವರ ಬವಣೆ ಕಾಣುವುದಿಲ್ಲ. ಏಕೆಂದರೆ ಅವರು ಅಮೃತ ಕುಡಿದ ಮದದಲ್ಲಿದ್ದಾರೆ, ಹಸಿದವರು ಮಾತ್ರ ಹಸಿವಿನ ಶೂಲ/ನೋವು ಅನುಭವಿಸುತ್ತಾರೆ.

ಮನುಷ್ಯ ಜೀವವು ಹಸಿವಿನಿಂದ ಕೂಗಿದರೆ ಅದು “ಮುಗಿಲಿನ ಕಿವಿಯನು/ ಮುಟ್ಟಲೇ ಇಲ್ಲ, ಇಲ್ಲಿ ಭುವಿಯಲ್ಲಿ ಅನ್ನದ ಕೊರತೆಯೇನು ಇಲ್ಲ.

“ಕಿಕ್ಕಿರಿ ತುಂಬಿದೆ
ಭೂಮಿಯ ಕಣಜ
ಕಕ್ಕಸ ಬಿಡುತಿದೆ
ಬೊಕ್ಕಸದೊಡಲು”

ಆದರೆ ಬಡವರ ಬಗ್ಗರ ತುತ್ತಿನ ಚೀಲವು ಮಾತ್ರ ’ಬರಿದೋ ಬರಿದು’. ನನಗಂತೂ ಈ ಸಾಲು ಓದಿದಾಗ ಹಸಿವಿನಿಂದ ಮುಕ್ತಿಯೇ ಇಲ್ಲದ 200 ಮಿಲಿಯನ್ ಭಾರತೀಯರು ಮತ್ತು ಬಹುಪಾಲು ಹೆಗ್ಗಣಗಳ ಪಾಲಾಗುವ ನಮ್ಮ FCIಗಳಲ್ಲಿ ಶೇಖರಿಸಿರುವ ಆಹಾರ ಧಾನ್ಯಗಳ ನೆನಪಾಗುತ್ತದೆ.

ಇದನ್ನೂ ಓದಿ: ಬೇಂದ್ರೆ-125 ವಿಶೇಷ: ಬೇಂದ್ರೆ ಎಂಬ ಧಾರವಾಡೀ ಗಾರುಡಿಗತನ

ಹಾಗಂತ ಈ ಪದ್ಯ ಬಡವರ ಬಗ್ಗೆ ಬರೀ ಕರುಣೆಯ ಅಥವಾ ಅವರು ಅಸಹಾಯಕ ಬಲಿಪಶುಗಳು ಎನ್ನುವ ಚಿತ್ರವನ್ನು ಮಾತ್ರ ಕೊಡುವುದಿಲ್ಲ. “ಬಡವರ ಬಗ್ಗರ ತುತ್ತಿನ ಚೀಲದ ಒಳಗಿನ ಒಳದನಿಯೊಂದು” ಪ್ರತಿಭಟನೆಯ ದನಿಯಾಗಿ ಹೊರಬರುತ್ತಲಿದೆ. ಅದು “ದೇವರದೊಂದು/ ಗೋರಿಯ ಕಟ್ಟಿ, ಧರ್ಮದ ಧೂಪಕೆ ಬೆಂಕಿಯನಿಕ್ಕಿ ನೆಲವನ್ನೆಲ್ಲಾ ತುತ್ತುವನೆಂದು ಗದರುತ್ತಿದೆ. ಇಂಥ ಪ್ರತಿಭಟನೆ ಹಾಗೂ ಬದಲಾವಣೆಯ ಅಪೇಕ್ಷೆಯ ಬಗ್ಗೆ ಬೇಂದ್ರೆಯವರ ಕಾವ್ಯದಲ್ಲಿ ಅನೇಕ ಪ್ರಸ್ತಾಪಗಳಿವೆ.

ಇಷ್ಟೇ ಅದ್ಭುತವಾದ ಪದ್ಯವೆಂದರೆ ’ಭೂಮಿ ತಾಯಿಯ ಚೊಚ್ಚಲ ಮಗ”. ಇವನು ರೈತ. ಅವನ ಬದುಕು ಹೀಗಿದೆ:

“ದಿನವೂ ಸಂಜೆಗೆ
ಬೆವರಿನ ಜಳಕ
ಉಸಿರಿನ ಕೂಳಿಗೆ
ಕಂಬನಿ ನೀರು
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು’

ಸಾವಿನ ಬೆಳಕು ಎಂದು ಬರುವುದೋ ಎಂದು ಕಾಯುವ ಸ್ಥಿತಿಯಾಗಿದೆ ಅವನದು. ’ಕುರುಡು ಕಾಂಚಾಣ’ ಪದ್ಯವಂತೂ ಬೇಂದ್ರೆ ಈ ಪದ್ಯ ಬರೆದ ಕಾಲದಿಂದ ಇಂದಿನ ಜಾಗತೀಕರಣದವರೆಗಿನ ವಿವಿಧ ಸಾಮಾಜಿಕ ಸ್ಥಿತಿಗಳಲ್ಲಿ ಅರ್ಥಪೂರ್ಣವಾಗಿ ಕಂಡಿದೆ. ಈ ಪದ್ಯದ ಜೊತೆಗೆ ’ಅನ್ನಾವತಾರ’ ಪದ್ಯವನ್ನೂ ಓದಬೇಕು. ತಮ್ಮ ಸ್ವಂತದ ಬದುಕಿನಲ್ಲಿ ಬಡತನ, ಮಕ್ಕಳ ಸಾವು, ದುಃಖ ಇವನ್ನೆಲ್ಲ ಅನುಭವಿಸಿದ ಬೇಂದ್ರೆಯವರಿಗೆ ಬದುಕಿನ ವಿಲಕ್ಷಣವಾದ ಅಸಮಾನತೆಗಳು ತೀಕ್ಷ್ಣವಾಗಿ ಕಾಣುತ್ತಿದ್ದವು.

PC : BookBrahma

ಅರವಿಂದರ ಮತ್ತು ಅವರ ಆಶ್ರಮದ ಬಗೆಗಿನ ಬೇಂದ್ರೆ ಅವರ ಪ್ರೀತಿಯ ಬಗ್ಗೆ ಪುಸ್ತಕಗಳನ್ನೇ ಬರೆಯಲಾಗಿದೆ. ಆದರೆ ಯುದ್ಧ ಹಾಗೂ ವಸಾಹತುಶಾಹಿಯ ಬಗ್ಗೆ ’ನರಬಲಿ’ ಪದ್ಯವನ್ನು ಬರೆದದ್ದಕ್ಕಾಗಿ ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿ, ಆನಂತರ ಮುಗದದಲ್ಲಿ ’ನಜರ್‌ಬಂದಿ’ಯಲ್ಲಿ ಅವರು ಇರಬೇಕಾಗಿ ಬಂದುದನ್ನು ಬಹಳ ಚುಟುಕಾಗಿ ವಿವರಿಸಲಾಗುತ್ತದೆ. ಈ ಶಿಕ್ಷೆಯ ನಂತರ ಅವರಿಗೆ ಯಾವ ಉದ್ಯೋಗವೂ ಸಿಕ್ಕದೆ ವರ್ಷಗಳ ಕಾಲ ಬೇಂದ್ರೆ ಅನಿಶ್ಚಿತವಾದ ಜೀವನ ನಡೆಸಿದರು. ಈ ಪದ್ಯದ ಬಗ್ಗೆ ಅವರು ಬರೆದ ಟಿಪ್ಪಣಿಯಲ್ಲಿ “ಪ್ರಾಣಿ ದಯಾ ಸಂಘದವರು ಪಶುಬಲಿಯನ್ನು ನಿಲ್ಲಿಸುತ್ತಿದ್ದಾರೆ, ಯಾವುದಾದರೂ ನರದಯಾ ಸಂಘದವರು ನರಬಲಿಯನ್ನು ನಿಲ್ಲಿಸಲಾರರೆ” ಎಂದು ಕೇಳುತ್ತಾರೆ. ಈ ಪದ್ಯ ಉಗ್ರವಾದ ಯುದ್ಧವಿರೋಧಿ ಪದ್ಯವಾಗಿದೆ. ಕವಿಯ ದನಿಯು ತೀವ್ರ ಆಕ್ರೋಶದಿಂದ ಕೂಡಿದೆ. ರುದ್ರವೂ ಭೀಭತ್ಸವೂ ಆದ ಮಹಾಕಾಳಿಯ ನಂತರ ಬರುವ ಸಾಲುಗಳು ಹೀಗಿವೆ:

“ಇದುವೆ ಕಾಳಿಯ ಪೂಜೆಯು ಶುದ್ಧ
ಇದಕ್ಕೆ ಹುಂಬರು ಎಂಬರು ಯುದ್ಧ !”
ಈ ಪದ್ಯದಲ್ಲೂ ದೇವರುಗಳನ್ನು ಬೇಂದ್ರೆ ತರಾಟೆಗೆ ತೆಗೆದುಕೊಳ್ಳುತ್ತಾರೆ.
“ಅಮರರೆಂಬುವರು ಕೊಳೆಯದ ಹೆಣಗಳೋ?
ಮುಚ್ಚದ ಕಣ್ಗಳು ಮುಚ್ಚಿದ ಕಣ್ಗಳೋ?”

ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ ದೇವರುಗಳನ್ನು ಹೀಗೆ ಛೇಡಿಸಿ ಬೇಂದ್ರೆಯವರ ಸಮಕಾಲೀನರು ಬರೆದಿಲ್ಲ. ಅಲ್ಲದೆ ಈ ಪದ್ಯದಲ್ಲಿ ಮನುಕುಲವು ಪ್ರಗತಿ ಸಾಧಿಸುತ್ತಿದೆ ಎನ್ನುವ ಸಂಕಥನವನ್ನೇ ಪ್ರಬಲವಾಗಿ ನಿರಾಕರಿಸುತ್ತಾರೆ. ಈಗ ಹಿಂದಿನ ಕಾಲದ ಅಶ್ವಮೇಧದ ಬದಲು ನರಮೇಧ ನಡೆಯುತ್ತಿದೆ ಎಂದು ಹೇಳುತ್ತಾರೆ.

’ಗರಿ’ ಮತ್ತು ’ನಾದಲೀಲೆ’ ಸಂಕಲನಗಳಲ್ಲಿ ಬೇಂದ್ರೆ ಶೋಧಿಸುವ ಗಂಡು ಹೆಣ್ಣಿನ ಪ್ರೀತಿಯ ಜಗತ್ತು ಕನ್ನಡ ಕಾವ್ಯದ ಮೇರು ಸಾಧನೆಯಾಗಿದೆ. ಪ್ರೀತಿಯನ್ನು ಹೇಳಿಕೊಳ್ಳುವ, ಹಂಚಿಕೊಳ್ಳುವ ಮತ್ತು ಅನುಭವಿಸುವ ರೀತಿಗಳು ಪ್ರತಿಯೊಂದು ಸಂಸ್ಕೃತಿಗೂ, ಭಾಷೆಗೂ ವಿಶಿಷ್ಟವಾಗಿರುತ್ತವೆ. ಇವನ್ನು ವಿವರಿಸಲಾಗದು. ಬೇಂದ್ರೆ ಬರೆದ ಒಲವಿನ ಪದ್ಯಗಳು ಹೇಗಿವೆಯೆಂದರೆ ಅವನ್ನು ಓದಿದಾಗ ಹೀಗಲ್ಲದೆ ಇನ್ನಾವ ರೀತಿಯಲ್ಲಿಯೂ ಪ್ರೀತಿಸಲಾಗದು ಎಂದು ಅನ್ನಿಸುವುವಂತೆ. ಇದಕ್ಕೆ ಕಾರಣವೆಂದರೆ ಅವರು ಸಂಸ್ಕೃತಿಯ ಆಳದ ನೆನಪುಗಳನ್ನು ತಲುಪಿ, ತಟ್ಟಿ, ಮುಟ್ಟಿ ಬರೆಯುತ್ತಾರೆ. ಅಂದಹಾಗೆ ಬೇಂದ್ರೆ ಕಾವ್ಯದ ಸಖಿಯರು ಬಹುಪಾಲು ಎಲ್ಲರೂ ತಳವರ್ಗದವರು. ಹೊಳೆಯಲ್ಲಿ ಬಟ್ಟೆ ಒಗೆಯುತ್ತ ಹೊಸ ಹರೆಯವೊಂದು ಈಜುತ್ತಿರುವವರನ್ನು ನೋಡುವವಳು, ನನ್ನ ಕುಲ ಡೊಂಕಾದರೆ ನನ್ನ ಪ್ರೀತಿ ಡೊಂಕೇ ಎಂದು ಕೇಳುವವಳು, ಹುಬ್ಬಳ್ಳಿಯವನ ಪ್ರೀತಿಯ ನೆನಪಿನಲ್ಲಿ ಬೀದಿಯಲ್ಲಿ ಗೆಳತಿಯರನ್ನು ಅವನೆಲ್ಲಿ ಎಂದು ಕೇಳುವವಳು – ಇವರಾರೂ ಶಿಕ್ಷಿತ ಮಧ್ಯಮವರ್ಗದವರಲ್ಲ. ಈ ಸಖಿಯರ ಪ್ರೀತಿಯನ್ನು ಸಂಭ್ರಮಿಸುವ ಕಾವ್ಯ ಬೇಂದ್ರೆಯವರದು. ಅವರ ಒಲವಿನ ಪದ್ಯಗಳು ಪಾಬ್ಲೋ ನೆರೂಡಾನ ಪ್ರೇಮಕವನಗಳಿಗಿಂತ ಬಹು ಶ್ರೇಷ್ಠವಾಗಿರುವಂಥವು.

ಪ್ರೊ. ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ಸುಪ್ತಚೇತನವೇ ಮೂಲಶಕ್ತಿ ಎನ್ನುವ ಜೋಸೆಫ್ ಮರ್ಫಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...