1.
ಬದುಕು ನಡೆಯುವುದು
ತನ್ನ ಕಾಲುಗಳ ಮೇಲೆ ಫರಾಜ್,
ಬೇರೆಯವರ ಸಹಾಯದಿಂದ ಸಾಗುವುದು
ಶವಯಾತ್ರೆ ಮಾತ್ರ.
– ಫರಾಜ್ ಅಹ್ಮದ್
2.
ಎಷ್ಟೊಂದು ಜನರಿಗೆ ಪ್ರೀತಿಸುವೆನೆಂದು
ಮಾತು ಕೊಟ್ಟಿದ್ದೀಯ ಫರಾಜ್?
ಪ್ರತಿದಿನ ಹೊಸಬರೊಬ್ಬರು
ನಿನ್ನ ವಿಳಾಸ ಕೇಳುತ್ತಿದ್ದಾರೆ.
– ಫರಾಜ್ ಅಹ್ಮದ್
3.
ಕೇವಲ ದ್ವೇಷವಷ್ಟೇ ಅಲ್ಲ
ಜಗತ್ತಿನ ದುಃಖಕ್ಕೆ ಕಾರಣ ಫರಾಜ್,
ಪ್ರೇಮವೂ ಸಮಾಧಾನಿಗಳಿಗೆ ಕೊಡುತ್ತದೆ
ಬಹಳ ಕಷ್ಟ.
– ಫರಾಜ್ ಅಹ್ಮದ್
4.
ಯಾರು ಯಾಕೆ ಅಳುತ್ತಾರೆ ಗೆಳೆಯ
ಬೇರೆ ಯಾರದೋ ಸಲುವಾಗಿ,
ಎಲ್ಲ ಅಳುತ್ತಿರುವುದು
ತಮ್ಮದೇ ಯಾವುದೋ ಮಾತಿನ ಕಾರಣವಾಗಿ.
– ಸಾಹಿರ್ ಲುಧಿಯಾನ್ವಿ
5.
ತಾನೇ ಸ್ವತಃ ಒಂದು
ಸಮಸ್ಯೆಯಾಗಿರುವಾಗ,
ಬೇರೆ ಯಾವ ಸಮಸ್ಯೆಗಳಿಗೆ ತಾನೇ
ಪರಿಹಾರವಾದೀತು ಯುದ್ಧ?
– ಸಾಹಿರ್ ಲುಧಿಯಾನ್ವಿ
6.
ಅಕಸ್ಮಾತ್ ಬದುಕಿನಲ್ಲಿ
ಮತ್ತೆ ಭೇಟಿಯಾದರೆ,
ವಿಚಾರಿಸುತ್ತೇನೆ ನನ್ನ ಹತಾಶೆಯ ಬಗ್ಗೆ
ನಿನ್ನ ವಿವಶತೆಯನ್ನ.
– ಸಾಹಿರ್ ಲುಧಿಯಾನ್ವಿ
7.
ಬಿರುಗಾಳಿಯ ದೋಣಿ
ಬದುಕಿಸಿತು ನನ್ನ,
ಮುಳುಗಿಸಿಬಿಡುತ್ತಿದ್ದರು ತೀರದ ಜನ
ನನ್ನ ಹಡಗನ್ನ.
– ಮಜ್ರೂಹ್ ಸುಲ್ತಾನ್ಪುರಿ
8.
ನಿನ್ನ ಹೊರತಾಗಿಯೂ ಇದ್ದವು
ಶರಣಾಗುವ ಜಾಗಗಳು, ಮರೆತುಹೋದೆ,
ಹೊರಬಿದ್ದ ಮೇಲೆ ನಿನ್ನ ಸುಂದರ ಸಂಜೆಯಿಂದ
ಎಲ್ಲ ದಾರಿಗಳ ನಾನು, ಮರೆತುಹೋದೆ.
– ಮಜ್ರೂಹ್ ಸುಲ್ತಾನ್ಪುರಿ
9.
ದೂರ ಕುಳಿತಿದ್ದೆ ಆದರೂ ಬಿತ್ತು
ನನ್ನ ಮೇಲೆ ಸಾಕಿಯ ಕಣ್ಣು,
ದಾಹ ನಿಜವಾಗಿದ್ದರೆ ಬಂದೇ ಬರುತ್ತದೆ
ಮಧುಪಾತ್ರೆಯೂ ಹುಡುಕಿಕೊಂಡು.
– ಮಜ್ರೂಹ್ ಸುಲ್ತಾನ್ಪುರಿ
10.
ನಾನು ಸತ್ತಮೇಲೆಯೂ
ತೆರೆದುಕೊಂಡೇ ಇರಲಿ ನನ್ನ ಕಣ್ಣು,
ನಿನಗಾಗಿ ಕಾಯುವ ಹವ್ಯಾಸ
ಬಿಟ್ಟುಹೋಗಿಲ್ಲ ನನ್ನ ಇನ್ನೂ.
– ಫೈಜ್ ಅಹ್ಮದ್ ಫೈಜ್
11.
ಲೆಕ್ಕ ಹಾಕುತ್ತಿದ್ದೆ ಜಗತ್ತು ಕರುಣಿಸಿರುವ
ನೋವುಗಳ ಮತ್ತೆ ಮತ್ತೆ,
ಯಾಕೋ ನೆನಪಾಗುತ್ತಿರುವೆ ನೀನು
ಲೆಕ್ಕವಿಲ್ಲದಷ್ಟು ಬಾರಿ ಮತ್ತೆ ಮತ್ತೆ.
– ಫೈಜ್ ಅಹ್ಮದ್ ಫೈಜ್
12.
ಬಂದು ನೆಲೆಸಿದ ಮೇಲೆ ಹಿಂದೂ ಮುಸಲ್ಮಾನರು
ನಮ್ಮ ಓಣಿಯೊಳಗೆ,
ಮನುಷ್ಯರ ಮುಖಗಳನ್ನು ಕಾಣುವ ತಹತಹ
ತೀವ್ರವಾಯಿತು ಮನದೊಳಗೆ.
– ಕೈಫಿ ಅಝ್ಮಿ
13.
ಒಂದು ಹಿಂಜರಿಕೆ ಮಾತ್ರ
ಮನಸಿನ ಮಾತು ಹೇಳುವಾಗ ನನಗೆ
ನಿನ್ನ ಹೆಸರು ಬಂದೇ ಬರುವದು
ನನ್ನ ಈ ಕಥೆಯೊಳಗೆ.
– ಕೈಫಿ ಅಝ್ಮಿ
14.
ಏನಾಗಿದೆ ನಿನಗೆ, ಅಷ್ಟು ನಗುವಂಥದು
ಯಾವ ನೋವದು ನನ್ನಿಂದ ಬಚ್ಚಿಡುವಂಥದು.
ಕಣ್ಣಂಚಲ್ಲಿ ಹಸಿ, ತುಟಿ ಮೇಲೆ ನಗು
ಏನಾಗಿದೆ ನಿನಗೆ, ಏನೋ ಹಾಡುವಂಥದು.
– ಕೈಫಿ ಅಝ್ಮಿ
15.
ಒಂದಿಷ್ಟು ಸಮಯದಿಂದ
ನಿನ್ನ ನೆನಪಾಗುತ್ತಿಲ್ಲ ಎನ್ನುವುದು ನಿಜವಾದರೂ,
ನಿನ್ನ ಮರೆತುಬಿಟ್ಟಿರುವೆ ಎನ್ನುವುದು ಮಾತ್ರ
ಸಂಪೂರ್ಣ ಸುಳ್ಳು.
– ಫಿರಕ್ ಗೋರಕ್ಪುರಿ
16.
ಬಹಳ ಮೊದಲೇ ಆ ಹೆಜ್ಜೆಗಳ
ಸಂಕೋಚವನ್ನು ಗುರುತಿಸುತ್ತೇನೆ,
ಹೇ ಬದುಕು! ಬಹಳಷ್ಟು ದೂರದಿಂದಲೇ
ನಿನ್ನನ್ನು ಗುರುತಿಸುತ್ತೇನೆ.
– ಫಿರಕ್ ಗೋರಕ್ಪುರಿ
17.
ವೈರಿಯಲ್ಲೂ
ಸ್ವಾಭಿಮಾನದ ನಿರೀಕ್ಷೆ ನನಗೆ,
ತಲೆ ಯಾರದಾದರೇನು
ಕಾಲುಗಳ ಮೇಲೆ ಇಷ್ಟವಾಗುವುದಿಲ್ಲ ನನಗೆ.
– ಜಾವೇದ್ ಅಖ್ತರ್
18.
ಎಲ್ಲರಿಂದಲೂ ಖುಷಿ
ಒಂದು ಹೆಜ್ಜೆ ದೂರ ಇದೆ,
ಪ್ರತಿ ಮನೆಯಲ್ಲೂ ಕೋಣೆ
ಒಂದೇ ಒಂದು ಕಡಿಮೆ ಇದೆ.
– ಜಾವೇದ್ ಅಖ್ತರ್
19.
ಕದ್ದು ತರುತ್ತಿದ್ದೆವು ಕೂಡಲು
ನಾವಿಬ್ಬರೂ ಸಮಯವನ್ನ ಆಗ,
ಈಗ ಭೇಟಿಯಾಗುತ್ತೇವೆ
ಯಾವಾಗಲಾದರೂ ಸಮಯ ಸಿಕ್ಕಾಗ.
– ಜಾವೇದ್ ಅಖ್ತರ್
20.
ಬದುಕುವ ರೀತಿಗಳೇ ವಿಚಿತ್ರ
ಈ ಶಹರದಲ್ಲಿ,
ಮಾತುಗಳಲ್ಲೇನೋ ಭರ್ತಿ ತಮಾಶೆ
ನೋವಿನ ಗಾಯಗಳು ದನಿಯಲ್ಲಿ.
– ಜಾವೇದ್ ಅಖ್ತರ್
21.
ಹೋಗಿ ಹೇಳಿ ಯಾರಾದರೂ
ಜ್ವಾಲೆಗಳಿಗೆ, ಕಿಡಿಗಳಿಗೆ
ಪುರುಸೊತ್ತು ಮಾಡಿಕೊಂಡು,
ಅರಳಿನಿಂತಿವೆ ಹೂಗಳು
ಈ ಸಲ
ಪೂರ್ತಿ ತಯಾರಿ ಮಾಡಿಕೊಂಡು.
– ರಾಹತ್ ಇಂದೂರಿ
22.
ಪ್ರತಿರಾತ್ರಿ
ನಕ್ಷತ್ರಗಳಿಗೆ ತಮ್ಮ ಮೆರೆದಾಟದಲ್ಲಿ
ಅಡಚಣಿಯಾಗುತ್ತದೆ,
ಕತ್ತಲೆಯಾದೊಡನೆ
ತಲೆತಿರುಕ ಚಂದ್ರನ ಸವಾರಿ
ಮನೆಯಿಂದ ಹೊರಗೆ ಬೀಳುತ್ತದೆ.
– ರಾಹತ್ ಇಂದೂರಿ
23.
ನನ್ನ ಚಹರೆಯ ಬದಲಾಗುವ ಬಣ್ಣಗಳನ್ನು
ಜನ ಗಂಭೀರವಾಗಿ ಗಮನಿಸುತ್ತಾರೆ
ನಿನ್ನ ಹೆಸರ ಮುಂದೆ ಮಾಡಿ
ಜನ ನನ್ನ ತಮಾಶೆ ಮಾಡುತ್ತಾರೆ
– ರಾಹತ್ ಇಂದೂರಿ
24.
ಜನ ಮಾತಾಡಿಕೊಳ್ಳುವಂತೆ ನಿನಗೆ ಇನ್ನೂ
ನನ್ನ ಮೇಲಿನ ಮುನಿಸು ಕಡಿಮೆಯಾಗಿಲ್ಲ,
ಆದರೆ ನಿನ್ನ ಕಣ್ಣುಗಳು ಮಾತ್ರ ನನಗೆ
ಬೇರೆ ಏನೋ ಹೇಳುತ್ತಿವೆಯಲ್ಲ.
– ಜನ್ ನಿಸಾರ್ ಅಖ್ತರ್
25.
ನೂರಕ್ಕೆ ನೂರು ನಿಜ
ನನ್ನ ಕವಿತೆಗಳು ಇಡೀ ಜಗತ್ತಿಗಾಗಿ,
ಆದರೆ ಕೆಲವು ಸಾಲುಗಳು ಮಾತ್ರ
ಕೇವಲ ಅವಳಿಗಾಗಿ.
– ಜನ್ ನಿಸಾರ್ ಅಖ್ತರ್
26.
ಇವತ್ತು ಮಾತ್ರ
ನಿನ್ನ ಮುಟ್ಟಿ ಮಾತನಾಡಿಸಿದರೂ
ನೀನು ಸಿಗಲಿಲ್ಲ ನನಗೆ,
ಹಿಂದೊಮ್ಮೆ
ನಿನ್ನ ಭೇಟಿ ಮಾಡುವ ಆಲೋಚನೆಯೇ
ತಬ್ಬಿಬ್ಬು ಮಾಡುತ್ತಿತ್ತು ನನ್ನ !
– ಜನ್ ನಿಸಾರ್ ಅಖ್ತರ್
27.
ಗೊತ್ತಿರಲಿ ನಿಮಗೆ ಇಷ್ಟು
ಪ್ರೀತಿ ಅಷ್ಟು ಸುಲಭವಲ್ಲ
ಬೆಂಕಿಯ ನದಿ ಇದು
ಮುಳುಗಿ ಈಜದೆ ಬೇರೆ ದಾರಿ ಇಲ್ಲ .
– ಜಿಗರ್ ಮೊರಾದಾಬಾದಿ
28.
ಎಲ್ಲ ಕಡೆ ಮೆರೆಯುತ್ತಿವೆ
ಪ್ರೇಮದ ಸಂದೇಶಗಳಾಗಿ,
ನೋಡಿ ಹೇಗಿದೆ ನನಗಿಂತಲೂ
ನನ್ನ ಕಥೆಗಳ ಅದೃಷ್ಟವೇ
ಜಬರ್ದಸ್ತಾಗಿ.
– ಜಿಗರ್ ಮೊರಾದಾಬಾದಿ
29.
ನನ್ನ ಬದುಕೇನೋ ಕಳೆದು ಹೋಯಿತು
ನಿನ್ನ ವಿರಹದ ನೆರಳಲ್ಲಿ,
ನನ್ನ ಸಾವಿಗೂ ಒಂದು ಪ್ರಿಯವಾದ
ಕಾರಣ ಬೇಕಲ್ಲ.
-ಜಿಗರ್ ಮೊರಾದಾಬಾದಿ
ಇದನ್ನೂ ಓದಿ: ಗುಲ್ಜಾರ್ ಅವರ ಪದ್ಯಗಳು

ಚಿದಂಬರ ನರೇಂದ್ರ
ಕವಿ, ಅನುವಾದಕ. ‘ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ‘ಹೂಬಾಣ’, ‘ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.


