ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸುವ ಮಸೂದೆಯನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ಹಿಂದೂ ಮತ ಬ್ಯಾಂಕ್ ಸೆಳೆಯುವ ಹುನ್ನಾರ ಎಂದು ಟೀಕಿಸಿದೆ. ಬಿಜೆಪಿಯ ಇಬ್ಬಂದಿತನದ ಕುರಿತು ಚರ್ಚೆಯಾಗಬೇಕು ಎಂದಿದೆ.
2009ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಅನ್ವಯ ಅನಧಿಕೃತ ದೇವಾಲಯಗಳನ್ನು ತೆರವು ಮಾಡಬೇಕಿದೆ. ಇತ್ತೀಚೆಗೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದ ದೇವಸ್ಥಾನ ತೆರವು ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ರಾಜ್ಯದಲ್ಲಿನ ಎಲ್ಲ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲಾಗುವುದು. ಆದರೆ ಅನಧಿಕೃತವಾಗಿ ಧಾರ್ಮಿಕ ಕಟ್ಟಡಗಳನ್ನು ಇನ್ನು ಮುಂದೆ ನಿರ್ಮಿಸುವಂತಿಲ್ಲ ಎಂದು ‘ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಮಸೂದೆ 2021′ ಹೇಳಿದೆ. ಕೋರ್ಟ್ ತೀರ್ಪು ಬಳಿಕ ಈಗ ಸರ್ಕಾರವು “ಸರ್ಕಾರದ ನಿಯಮಗಳಿಗೆ ಅನುಸಾರ ಇರುವ ಧಾರ್ಮಿಕ ಕಟ್ಟಡಗಳಿದ್ದರೆ ಅವುಗಳನ್ನು ತೆರವುಗೊಳಿಸಬಾರದು. ಸರ್ಕಾರದ ನಿಯಮಗಳಿಗೆ ಒಳಪಡದ ಧಾರ್ಮಿಕ ಕಟ್ಟಡಗಳನ್ನು ತೆರೆವು ಮಾಡಬಹುದು” ಎಂದು ಹೊಸ ಮಸೂದೆಯಲ್ಲಿ ಹೇಳಿದೆ.
ಇದನ್ನೂ ಓದಿ: ನಂಜನಗೂಡಿನ ಪುರಾತನ ದೇವಸ್ಥಾನ ಕೆಡವಿದ ಸರ್ಕಾರದ ವಿರುದ್ದ ಸಿದ್ದರಾಮಯ್ಯ ಆಕ್ರೋಶ
ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರೀಸ್, “ಇದು ಬಿಜೆಪಿಯ ಓಟ್ ಬ್ಯಾಂಕ್ ರಾಜಕಾರಣದ ಭಾಗ. ದೇವಾಲಯವನ್ನು ಉರುಳಿಸುವವರು ಇವರೇ, ಅವುಗಳನ್ನು ರಕ್ಷಿಸುವವರು ಇವರೇ. ಇದು ಮತಬ್ಯಾಂಕ್ ರಾಜಕಾರಣವಲ್ಲದೆ ಮತ್ತೇನು ಅಲ್ಲ. ಈ ವಿಚಾರ ಕುರಿತು ಚರ್ಚೆ ನಡೆಯಬೇಕು” ಎಂದು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನಂಜನಗೂಡಿನ ದೇವಾಲಯ ನೆಮಸಮವಾಗುತ್ತಿದ್ದಂತೆ ರಾಜ್ಯದಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಬಿಜೆಪಿಯ ಹಿಂದೂ ಓಟ್ ಬ್ಯಾಂಕ್ ರಾಜಕಾರಣದ ಭಾಗವಾಗಿರುವ ಸಂಘಟನೆಗಳು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದವು. “ಇಂದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೆ ಈ ಪ್ರಕರಣ ಬೇರೆಯೇ ಸ್ವರೂಪ ಪಡೆಯುತ್ತಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಒಂದು ವಿಚಾರವಾಗಿ ಮಾತನಾಡುತ್ತಾ ಬೆಂಕಿ ಹಚ್ಚುವ ಮಾತನಾಡಿದ್ದರು. ಇಂದು ಏನಾದರೂ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಅದು ಅಕ್ಷರಶಃ ಆಗುತ್ತಿತ್ತು” ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧಮೇಂದ್ರ ಹೇಳಿಕೆ ನೀಡಿದ್ದರು. ಅಲ್ಲದೇ ಗಾಂಧಿಯನ್ನೇ ಬಿಟ್ಟಿಲ್ಲ ನಾವು, ಇನ್ನು ನೀವು ಯಾವ ಲೆಕ್ಕ ಎಂದು ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಾಕಿದ್ದರಿಂದ ಧರ್ಮಂದ್ರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಮೈಸೂರು- ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ, ತನ್ನದೇ ಪಕ್ಷದ ಅಧಿಕಾರದಲ್ಲಿದ್ದರೂ, ಮೈಸೂರು ಜಿಲ್ಲಾಡಳಿತದ ವಿರುದ್ಧ ಹೇಳಿಕೆ ನೀಡಿದ್ದರು. ಹಿಂದೂ ದೇವಾಲಯಗಳ ತೆರವು ಮಾಡಬಾರದು ಎಂದು ಹೇಳಿದ್ದರು. ಇಷ್ಟೇ ಅಲ್ಲದೇ ಬಿಜೆಪಿ ಇತರ ನಾಯಕರು ದೇವಾಲಯ ತೆರವು ವಿರೋಧಿಸಿದ್ದರು. ಹಿಂದೂ ಮತಬ್ಯಾಂಕ್ ರಾಜಕಾರಣ ಮಾಡುವ ಬಿಜೆಪಿ, ಹಿಂದೂಗಳ ದೇವಾಲಯಗಳನ್ನು ತೆರವು ಮಾಡುತ್ತಿದೆ ಎಂದು ಪ್ರತಿಪಕ್ಷಗಳೂ ಟೀಕಿಸಿದ್ದವು.
“ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು. ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ? ಮುಖ್ಯಮಂತ್ರಿಯವರು ನಿಷ್ಪಕ್ಷಪಾತ ತನಿಖೆ ನಡೆಸಿ ಕಾರಣಕರ್ತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು.
ಈ ಎಲ್ಲಾ ಹಿನ್ನೆಲೆಯಲ್ಲಿ ತನ್ನ ಹಿಂದೂ ಮತ ಬ್ಯಾಂಕ್ ಸಿಡಿದೆದ್ದಿದ್ದನ್ನು ಗಮನಿಸಿದ ಸರ್ಕಾರ ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸುವ ಮಸೂದೆಯನ್ನು ಮಂಡಿಸಿದೆ. ಈ ಕುರಿತು ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
‘ನಾನುಗೌರಿ.ಕಾಂ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, “ದೇವಾಲಯಗಳನ್ನು ಒಡೆಯಬೇಕು ಎಂಬ ನಿರ್ಧಾರವನ್ನು ಸರ್ಕಾರ ಈ ಹಿಂದೆ ಎಂದೂ ತೆಗೆದುಕೊಂಡಿಲ್ಲ. ಈಗಲೂ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಹೀಗಿರುವ ಹಿಂದೂ ಮತಗಳ ಧ್ರುವೀಕರಣ ಹೇಗೆ ಸಾಧ್ಯವಾಗುತ್ತದೆ?” ಎಂದು ಕೇಳುತ್ತಾರೆ.
“ಅನೇಕ ಘಟನೆಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹೀಗಾಗಿ ನಂಜನಗೂಡಿನ ಘಟನೆ ನಡೆದಿದೆ. ಈ ರೀತಿಯ ಘಟನೆ ನಡೆದದ್ದು ಹೇಗೆ ಎಂಬುದು ತನಿಖೆಯಾಗಬೇಕು. ಸರ್ಕಾರ ಮಂಡಿಸಿರುವ ಹೊಸ ಮಸೂದೆಯಲ್ಲಿ ಮಂದಿರ, ಮಸೀದಿ, ಚರ್ಚ್ ಎಲ್ಲ ಧಾರ್ಮಿಕ ಕೇಂದ್ರಗಳ ರಕ್ಷಣೆ ಇದೆ. ಹೀಗಾಗಿ ಎಲ್ಲ ಪಕ್ಷಗಳೂ ಸುಮ್ಮನಾಗಿವೆ” ಎನ್ನುತ್ತಾರೆ ರವಿಕುಮಾರ್.
ಈ ವಿಚಾರದ ಕುರಿತು ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, “ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಈ ಕುರಿತು ಸ್ಪಷ್ಟವಾಗಿ ಮಾತನಾಡಿದ್ದಾರೆ. ಸೂಕ್ಷ್ಮ ವಿಚಾರಗಳ ಕುರಿತು ಮಾತನಾಡುವಾಗ ಸ್ಥಳೀಯ ಜನರೊಂದಿಗೆ ಮಾತನಾಡಬೇಕು. ಜನರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದಿದ್ದಾರೆ. ಜನರು ಮತ್ತೊಂದು ದೇವಾಲಯ ಕಟ್ಟಬೇಕೆಂದು ಬಯಸಿದರೆ, ಅದಕ್ಕೆ ಅವಕಾಶ ನೀಡಬೇಕು ಅಲ್ಲವೇ? ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾಗಿದೆ. ಅದು ಚರ್ಚೆ ಆಗಬೇಕಿದೆ” ಎಂದರು.
ಹಿಂದೂ ಮತಗಳ ಮೇಲೆ ಉಭಯ ಪಕ್ಷಗಳು ಕಣ್ಣಿಟ್ಟಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಭಾವನಾತ್ಮಕ ವಿಚಾರಗಳಲ್ಲಿ ಯಾವುದೇ ಪಕ್ಷವೂ ವೈಚಾರಿಕ ನಿಲುವು ತಾಳುವುದು ಕಷ್ಟ. ನ್ಯಾಯಾಂಗದ ನಿಲುವನ್ನು ಸಮರ್ಥಿಸುವುದು ಆಡಳಿತ ಹಾಗೂ ವಿರೋಧ ಪಕ್ಷಗಳೆರಡಕ್ಕೂ ಕಷ್ಟವಾಗುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: ಮೈಸೂರು ಜಿಲ್ಲಾಡಳಿತದ ವಿರುದ್ಧ ಪ್ರತಾಪ್ ಸಿಂಹ ಸಮರ! ಬಿಜೆಪಿ v/s ಬಿಜೆಪಿ?


