Homeಮುಖಪುಟವಿವಾದಾತ್ಮಕ ಕೃಷಿ ಕಾಯ್ದೆಗಳ ಹಿಂದೆ ಮೈಕ್ರೋಸಾಫ್ಟ್, ಅಮೆಜಾನ್ ಕಂಪನಿಗಳ ಲಾಬಿ: ಕುಮಾರ್ ಎಸ್

ವಿವಾದಾತ್ಮಕ ಕೃಷಿ ಕಾಯ್ದೆಗಳ ಹಿಂದೆ ಮೈಕ್ರೋಸಾಫ್ಟ್, ಅಮೆಜಾನ್ ಕಂಪನಿಗಳ ಲಾಬಿ: ಕುಮಾರ್ ಎಸ್

ರೈತನ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ, ವಾಣಿಜ್ಯ ಉದ್ದೇಶಗಳಿಗೆ ಬಳಸುವುದಕ್ಕೆ ಅವಕಾಶ ಮಾಡಿಕೊಡುವ ಅಗ್ರಿಸ್ಟ್ಯಾಕ್‌ ಮೂಲಕ ಸರ್ಕಾರ ಕೃಷಿ ಕ್ಷೇತ್ರ ಮತ್ತು ರೈತನನ್ನು ಬಲಿಕೊಡುತ್ತಿದೆ ಎಂಬ ಟೀಕೆ ತೀವ್ರವಾಗುತ್ತಿದೆ.

- Advertisement -
- Advertisement -

ಒಕ್ಕೂಟ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ 3 ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಅದನ್ನು ವಿರೋಧಿಸಿ 300 ದಿನಗಳಿಂದ ದೆಹಲಿಯ ನಾಲ್ಕೂ ದಿಕ್ಕುಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತನ ಭೂಮಿಯನ್ನು, ಬೆಳೆದ ಬೆಳೆಯನ್ನು ಕಸಿದುಕೊಳ್ಳುವ ಹುನ್ನಾರವಿರುವ ಈ ಕೃಷಿ ಕಾಯ್ದೆಗಳು ಕೇವಲ ರೈತರಿಗಷ್ಟೇ ಅಲ್ಲ, ಅನ್ನವನ್ನು ನಂಬಿರುವ ಎಲ್ಲರಿಗೂ ಅಪಾಯ ತಂದೊಡ್ಡಲಿವೆ ಎಂದು ತಜ್ಞರು, ಚಿಂತಕರೂ ಕಳೆದು ಒಂದು ವರ್ಷದಿಂದ ನಾನಾ ರೀತಿಯಲ್ಲಿ ಸರ್ಕಾರಕ್ಕೆ ತಿಳಿ ಹೇಳುತ್ತಿದ್ದಾರೆ.

ಆದರೂ ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸುವ ನಾಟಕವಾಡಿತೆ ಹೊರತು ಕಾಯ್ದೆಗಳನ್ನು ಹಿಂಪಡೆಯುವ ಸೊಲ್ಲೆತ್ತಲಿಲ್ಲ. ದೆಹಲಿಯಲ್ಲಿ ಲಾಠಿ ಚಾರ್ಜ್‌, ರೈತರ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿದ್ದರಿಂದ ಕಾಯ್ದೆಗಳನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ.

ಈ ನಡುವೆ ರೈತ ಹೋರಾಟವನ್ನು ಪ್ರಾಯೋಜಿತ ಹೋರಾಟವೆಂದು, ಎಡಪಂಥೀಯರ ಸಂಚೆಂದು, ಖಾಲಿಸ್ತಾನಿಗಳ ಹುನ್ನಾರವೆಂದೂ ಸರ್ಕಾರ ಮಾಧ್ಯಮಗಳ ಮೂಲಕ ಹಲವು ಸುಳ್ಳುಸುದ್ದಿಗಳನ್ನು ಹರಿಯಬಿಟ್ಟು, ಹೋರಾಟವನ್ನು ಒಡೆಯುವ ಪ್ರಯತ್ನ ಮಾಡಿತು. ಕೋವಿಡ್‌ ಸೋಂಕನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಪ್ರಯತ್ನವನ್ನೂ ಮಾಡಿತು. ಇಷ್ಟಾಗಿಯೂ ರೈತರ ಹೋರಾಟದ ಬದ್ಧತೆಯಲ್ಲಿ ಒಂದಿನಿತೂ ಬದಲಾಗಿಲ್ಲ. ಸರ್ಕಾರದ ಮೊಂಡುತನದಲ್ಲೂ..

ಸರ್ಕಾರ ಯಾಕೆ ದೇಶದ ರೈತರ ಹಿತವನ್ನು ಬಲಿಕೊಡುವುದಕ್ಕೆ ಇಷ್ಟು ಹಟ ಹಿಡಿದು ಕೂತಿದೆ ಎಂಬ ಪ್ರಶ್ನೆ ಕಾಯ್ದೆ ಜಾರಿಗೆ ಬಂದಾಗಿನಿಂದ ಚರ್ಚೆಯಾಗುತ್ತಿದೆ. ಮೊದಮೊದಲು ರೈತರ ಆಕ್ರೋಶಕ್ಕೆ, ರೈತ ಪರ ಕಾಳಜಿ ಇರುವವರ ಅನುಮಾನಕ್ಕೆ ಗುರಿಯಾಗಿದ್ದು ಅಂಬಾನಿಯ ರಿಲಯನ್ಸ್‌ ಮತ್ತು ಅದಾನಿಯ ಫಾರ್ಚ್ಯೂನ್‌ ಕಂಪನಿಗಳು. ರೊಚ್ಚಿಗೆದ್ದ ರೈತರು ರಿಲಯನ್ಸ್‌ ಕಂಪನಿಗಳ ಉತ್ಪನ್ನಗಳನ್ನು ಬಾಯ್ಕಾಟ್‌ ಮಾಡಿದರು, ಮೊಬೈಲ್‌ ಟವರ್‌ಗಳನ್ನು ಕಿತ್ತರು. ಕೃಷಿ ಕಾಯ್ದೆಗಳು ಜಾರಿಗೆ ಬರುವ ಕೆಲವೇ ದಿನಗಳ ಮೊದಲು ದೊಡ್ಡ ಪ್ರಮಾಣದ ದಾಸ್ತಾನು ಸಂಗ್ರಹಗಾರರಗಳನ್ನು ನಿರ್ಮಿಸಿದ್ದ ಅದಾನಿ ಕಂಪನಿ, ಕಾಂಟ್ರ್ಯಾಕ್ಟ್‌ ಫಾರ್ಮಿಂಗ್‌ಗೆ ತಯಾರಿ ನಡೆಸುತ್ತಿದ್ದ ರಿಲಯನ್ಸ್‌ ಕಂಪನಿಗಳು ಸಹಜವಾಗಿಯೇ ರೈತರ ಆಕ್ರೋಶದ ಕೇಂದ್ರವಾದರು. ಆದರೆ ಕಳೆದ ಮೂರು ತಿಂಗಳುಗಳಿಂದ ಹೊರಬರುತ್ತಿರುವ ಒಂದೊಂದು ಸುದ್ದಿಯೂ ಕಾಯ್ದೆಗಳ ಜಾರಿಗೆ ಹೊಸ ಆಯಾಮವನ್ನೇ ತೆರೆದಿಡುತ್ತಿವೆ. ಕೇವಲ ಭಾರತೀಯ ಕಾರ್ಪೊರೇಟ್‌ ಶಕ್ತಿಗಳಷ್ಟೇ ಈ ಕಾಯ್ದೆಗಳ ಹಿಂದಿಲ್ಲ, ಜಗತ್ತಿನ ಪ್ರಮುಖ ಟೆಕ್‌ ಸಂಸ್ಥೆಗಳು ಇದರಲ್ಲಿ ಶಾಮೀಲು ಎಂಬ ಅಂಶವನ್ನು ಹೊರಗೆಡಹುತ್ತಿವೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಮೊದಲ ಅವಧಿಗೆ ಅಧಿಕಾರಕ್ಕೆ ಬಂದಾಗಲೇ ಅಮೆರಿಕದ ಮೂರು ದೊಡ್ಡ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಅಗ್ರಿಸ್ಟ್ಯಾಕ್‌ ಎಂಬ ಯೋಜನೆಯಡಿ ಈ ಒಪ್ಪಂದ ನಡೆದಿತ್ತು. ಅವತ್ತಿಗೆ ಭಾರತದಲ್ಲಿ ಆಹಾರ ಭದ್ರತೆಯನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಲಾಗಿತ್ತು. ಈ ಒಪ್ಪಂದವಾಗುವಾಗ ಮೊಬೈಲ್‌ ಅಪ್ಲಿಕೇಷನ್‌ಗಳು ಮತ್ತು ಬೆಳೆ ಫಸಲು, ಮಣ್ಣಿನ ಗುಣ, ಭೂ ಹಿಡುವಳಿ ಇತ್ಯಾದಿ ಮಾಹಿತಿಗಳನ್ನು ಆಧರಿಸಿ ಸಿದ್ಧಪಡಿಸಿದ ಸಾಧನಗಳು ರೈತರು ಹೆಚ್ಚು ಫಸಲು ಹೊಂದುವುದಕ್ಕೆ ಸಾಧ್ಯವಿದೆ, ಈ ನಿಟ್ಟಿನಲ್ಲಿ ಖಾಸಗಿ ವಲಯ ನೆರವಾಗಲಿದೆ ಎಂದು ಮೋದಿ ನಂಬಿದ್ದರಂತೆ!

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆ ಚರ್ಚೆ ನಡೆಸುತ್ತಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್

ವಾಸ್ತವಾದಲ್ಲಿ ಅಗ್ರಿಸ್ಟ್ಯಾಕ್‌ ಏನು?

ಇದೊಂದು ವೇದಿಕೆ. ರೈತ ಮತ್ತು ಅವನ ಕೃಷಿ ಚಟುವಟಿಕೆಯ ಎಲ್ಲ ಮಾಹಿತಿಗಳನ್ನು ಒಂದೆಡೆ ಕಲೆ ಹಾಕುವ ವ್ಯವಸ್ಥೆ. ಇಲ್ಲಿ ರೈತನ ಆರ್ಥಿಕ ಸ್ಥಿತಿಗತಿ ಮತ್ತು ಕೃಷಿ ಚಟುವಟಿಕೆ, ಅಂದರೆ, ಬೀಜ, ಬೆಳೆ, ಬೆಳೆ ವಿನ್ಯಾಸ, ಮಣ್ಣಿನ ಫಲವತ್ತತೆ, ವಿಮೆ, ಹವಾಮಾನದ ವಿನ್ಯಾಸ ಇತ್ಯಾದಿ ಮಾಹಿತಿಗಳನ್ನು ಈ ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಮಾಹಿತಿಯನ್ನು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ಮತ್ತು ಡೇಟಾ ಅನಾಲಿಸ್‌ ಮೂಲಕ ವಿಶ್ಲೇಷಿಸಿ, ಉತ್ತಮ ಇಳುವರಿಗೆ ಇರುವ ಸವಾಲು ಮತ್ತು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲಾಗುವುದು. ಒಪ್ಪಂದದಂತೆ ಸರ್ಕಾರಕ್ಕೆ ಈ ಪರಿಹಾರ ಸೂತ್ರಗಳ ನೀಡುವ ಮೂಲಕ ಕಾರ್ಪೊರೇಟ್‌ ಕಂಪನಿಗಳು ಸರ್ಕಾರಕ್ಕೆ ನೆರವಾಗುವುದು, ಯೋಜನೆಯ ಉದ್ದೇಶ.

 

ಅಮೆರಿಕದ ಮೈಕ್ರೋಸಾಫ್ಟ್‌, ಅಮೆಜಾನ್‌ ದೈತ್ಯ ಕಂಪನಿಗಳ ಜೊತೆಗೆ ಭಾರತದ ಮುಕೇಶ್‌ ಅಂಬಾನಿ ಒಡೆತನದ ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್‌, ತಂಬಾಕು ಉತ್ಪನ್ನಗಳಿಗೆ ಹೆಸರಾದ ಐಟಿಸಿ ಲಿಮಿಟೆಡ್ ಸಂಸ್ಥೆಗಳು ಈ ಯೋಜನೆಯಲ್ಲಿ ಪ್ರಮುಖ ಪಾಲುದಾರರು. 130 ಕೋಟಿ ಜನರಿರುವ ಈ ದೇಶದಲ್ಲಿ, 5ನೇ ಒಂದು ಭಾಗದಷ್ಟು ಆರ್ಥಿಕ ಕೊಡುಗೆ ನೀಡುವ ಕೃಷಿ ಕ್ಷೇತ್ರವನ್ನು ತಂತ್ರಜ್ಞಾನ ಕ್ರಾಂತಿಯ ಮೂಲಕ ಇನ್ನಷ್ಟು ಸಮೃದ್ಧಗೊಳಿಸಬಹುದು, ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದು ತಗ್ಗಿಸಬಹುದು, ಗ್ರಾಮೀಣ ಆರ್ಥಿಕತೆ ಉತ್ತಮಗೊಳಿಸಬಹುದು. ಎಂದೆಲ್ಲಾ ಕೇಂದ್ರ ಸರ್ಕಾರ ಈ ಯೋಜನೆಯ ಬಗ್ಗೆ ಕೊಂಡಾಡಿತ್ತು.

ಟೆಕ್‌ ಕಂಪನಿಗಳು ಹೇಳಿರುವುದು ನಿಜವೇ ಆದರೆ 2025ರ ಹೊತ್ತಿಗೆ 24 ಬಿಲಿಯನ್‌ ಡಾಲರ್‌ ಅಂದರೆ 1.77 ಲಕ್ಷ ಕೋಟಿ ರೂ.ಗಳಷ್ಟು ಆದಾಯ ತರಬಹುದಾದ ಉದ್ಯಮವಾಗಬಹುದು ಎಂದು ಅರ್ನ್ಸ್ಟ್‌ ಮತ್ತು ಯಂಗ್‌ ಸಂಸ್ಥೆ ಅಂದಾಜು ಮಾಡಿದೆ. ಪ್ರತಿ ವರ್ಷದ 1 ಟ್ರಿಲಿಯನ್‌ ಡಾಲರ್‌ಗಳಷ್ಟು ಚಿಲ್ಲರೆ ವಹಿವಾಟು ಇರುವ ಭಾರತದಲ್ಲಿ ದವಸ ಧಾನ್ಯಗಳ ಮಾರುಕಟ್ಟೆ ಅತಿ ದೊಡ್ಡ ಜಾಲವಾಗಬಹುದು ಎಂದು ಮನಗಂಡ ಎಲ್ಲ ಕಾರ್ಪೋರೇಟ್‌ ಕಂಪನಿಗಳು ಮೋದಿ ಸರ್ಕಾರ ಸೃಷ್ಟಿಸಿದ ಅವಕಾಶವನ್ನು ಬಾಚಿಕೊಂಡಿದ್ದಾರೆ.

ಕಳೆದ ಏಳು ವರ್ಷಗಳಿಂದ ಹಂತ ಹಂತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿರುವ ಯೋಜನೆಯ ಭಾಗವಾಗಿಯೇ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಹಾಗಾಗಿಯೇ ಕಾಯ್ದೆಯಲ್ಲಿ ಮುಕ್ತ ಮಾರುಕಟ್ಟೆ, ಕಾಂಟ್ರ್ಯಾಕ್ಟ್‌ ಫಾರ್ಮಿಂಗ್‌ಗೆ, ಆನ್‌ಲೈನ್‌ ಮಾರುಕಟ್ಟೆಗೆ ಹೆಚ್ಚು ಒತ್ತು ನೀಡಲಾಗಿದೆ. ಖಾಸಗಿಯವರ ಪಾಲ್ಗೊಳ್ಳುವಿಕೆಗೆ ಮುಕ್ತ ಅವಕಾಶ ನೀಡಿರುವ ಈ ಕಾಯ್ದೆಗಳು ಯಾವುದೇ ರೀತಿಯಲ್ಲಿ ರೈತನಿಗೆ ಭದ್ರತೆಯನ್ನು ಒದಗಿಸುವ ಸಾಧ್ಯತೆಯನ್ನೇ ತೋರಿಲ್ಲ. ಬದಲಿಗೆ ಸಬ್ಸಿಡಿ ಕಡಿಮೆ ಮಾಡಲಾಗಿದೆ, ಗೊಬ್ಬರ ದರ ಹೆಚ್ಚಿಸಲಾಗಿದೆ, ಎಂಎಸ್‌ಪಿ ವಿಷಯದಲ್ಲಿ ಕಳ್ಳಾಟವಾಡುತ್ತಿರುವುದನ್ನು ನೋಡುತ್ತಿದ್ದೇವೆ. ಕೃಷಿ ಮತ್ತು ಕೃಷಿಕನ್ನು ಉದ್ಧಾರ ಮಾಡುವುದೇ ಉದ್ದೇಶವಾದರೆ, ಕೊಟ್ಟು ಕಸಿಯುವ ವಂಚಕ ನಡೆಯನ್ನು ಸರ್ಕಾರ ಯಾಕೆ ಅನುಸರಿಸುತ್ತದೆ!

ಕೃಷಿ
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತ ಹೋರಾಟ

ನಿಮಗೆ ಗೊತ್ತಿರಲಿ, 12 ಕೋಟಿ ಸಣ್ಣ-ಮಧ್ಯಮ ಗಾತ್ರದ ಭೂಹಿಡುವಳಿದಾರರ ಪೈಕಿ ಈಗಾಗಲೇ ಈ ಖಾಸಗಿ ಕಂಪನಿಗಳು 5 ಕೋಟಿ ರೈತ ಮಾಹಿತಿಯನ್ನು ಸರ್ಕಾರದ ಮೂಲಕ ಸಂಗ್ರಹಿಸಿವೆ ಎನ್ನಲಾಗುತ್ತಿದೆ. ವಿದೇಶಿ ಕಾರ್ಪೋರೇಟ್‌ ದೈತ್ಯರ ಜೊತೆಗೆ ಭಾರತದ ಅಗ್ರಿಬಜಾರ್ ಟೆಕ್ನಾಲಜಿ, ಇಎಸ್‌ಆರ್‌ಐ ಇಂಡಿಯಾ ಟೆಕ್ನಾಲಜೀಸ್‌, ಬಾಬಾ ರಾಮ್‌ದೇವ್‌ ಅವರ ಪತಂಜಲಿ ಆರ್ಗ್ಯಾನಿಕ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ಮತ್ತು ನಿಂಜಾಕಾರ್ಟ್‌ ಕೂಡ ಈ ಯೋಜನೆಯಲ್ಲಿ ಭಾಗಿಯಾಗಿರುವ ಸಂಸ್ಥೆಗಳು. ಸರ್ಕಾರ ಖಾಸಗಿ ಪಾಲುದಾರಿಕೆಯೊಂದಿಗೆ ದೊಡ್ಡ ಕ್ರಾಂತಿ ಮಾಡುವ ಭ್ರಮೆಯನ್ನಂತು ಬಿತ್ತಿದೆ. ಆದರೆ ಯಶಸ್ಸು ಎಷ್ಟರ ಮಟ್ಟಿಗೆ ಸಾಧ್ಯ? ಈ ಪ್ರಶ್ನೆಯನ್ನೇ ಕೇಳಬಾರದೇನೊ ಎನ್ನಿಸುವಂತೆ ಸರ್ಕಾರ ಕಾರ್ಪೋರೇಟ್‌ ಕಂಪನಿಗಳ ಪರವಾಗಿ ನಿಂತಿದೆ ಎಂಬುದನ್ನು ನೋಡುತ್ತಲೇ ಇದ್ದೇವೆ.

ಈಗ ರೈತನ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ, ವಾಣಿಜ್ಯ ಉದ್ದೇಶಗಳಿಗೆ ಬಳಸುವುದಕ್ಕೆ ಅವಕಾಶ ಮಾಡಿಕೊಡುವ ಅಗ್ರಿಸ್ಟ್ಯಾಕ್‌ ಮೂಲಕ ಸರ್ಕಾರ ಕೃಷಿ ಕ್ಷೇತ್ರ ಮತ್ತು ರೈತನನ್ನು ಬಲಿಕೊಡುತ್ತಿದೆ ಎಂಬ ಟೀಕೆ ತೀವ್ರವಾಗುತ್ತಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ಹೊತ್ತಲ್ಲಿ, ರೈತರ ಬಗ್ಗೆ ಯಾವ ರೀತಿಯ ಕಾಳಜಿಯನ್ನು ವ್ಯಕ್ತಪಡಿಸಿದ ಸರ್ಕಾರ, ಖಾಸಗಿ ಕಂಪನಿಗಳ ಜೊತೆಗೆ ಹೊಸ ಯೋಜನೆಯ ಜಾರಿಗೆ ತರಾತುರಿಯಿಂದ ಸಜ್ಜಾಗುತ್ತಿರುವುದನ್ನು ನೋಡಿದರೆ, ಇದು ಹಲವು ದಿನಗಳ ವ್ಯವಸ್ಥಿತ ಯೋಜನೆಯಾಗಿತ್ತು ಎಂದೇ ಅನ್ನಿಸುತ್ತದೆ.

ನೋಡಿ, ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಖಾಸಗಿ ಮಾಹಿತಿ ರಕ್ಷಣಾ ಮಸೂದೆ ಅಂಗೀಕಾರವಾಗಿಲ್ಲ. ಎಲ್ಲ ರೀತಿಯ ಡಿಜಿಟಲ್‌ ಮಾಹಿತಿಯನ್ನು ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ಸರ್ಕಾರ ಈ ಕಾಯ್ದೆ ಜಾರಿಗೆ ಬಂದರೆ ತಮ್ಮ ಕೈ ಕಟ್ಟಿಹಾಕುತ್ತದೆ ಎಂದು ಸ್ಪಷ್ಟವಾಗಿ ತಿಳಿದಿದೆ. ಕೃಷಿ ವಿಷಯದಲ್ಲೂ ರೈತನ ಮಾಹಿತಿಯೇ ಅತಿ ದೊಡ್ಡ ಸಂಪತ್ತಾಗಿರುವುದರಿಂದ ಈ ಕಾಯ್ದೆಯನ್ನು ಇನ್ನು ನನೆಗುದಿಗೆ ಬಿದ್ದಿರುವಂತೆ ನೋಡಿಕೊಂಡಿದೆ. ಅಗ್ರಿಸ್ಟ್ಯಾಕ್‌ ಮೂಲಕ ರೈತರ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಲಾಗುತ್ತದೆ. ಅಂದರೆ ರೈತನ ಹೆಸರು, ವಿಳಾಸ ಇತ್ಯಾದಿಗಳ ಜೊತೆಗೆ ಎಷ್ಟು ಭೂಮಿಯಿದೆ, ಎಷ್ಟು ಸಾಲವಿದೆ, ಹಣಕಾಸಿನ ಸ್ಥಿತಿ ಇತ್ಯಾದಿ ವಿವರಗಳನ್ನು ಸಂಗ್ರಹಿಸುತ್ತದೆ. ಈ ಮಾಹಿತಿಯನ್ನು ರೈತನಿಗೆ ಸಾಲ ಕೊಡುವ ಬ್ಯಾಂಕ್‌ಗಳಿಗೆ ನೀಡಲಾಗುತ್ತದೆ. ಅಂದ ಮೇಲೆ ಖಾಸಗಿತನ ಇಲ್ಲಿ ಗಾಳಿಗೆ ತೂರಿದಂತಾಯಿತಲ್ಲವೆ. ಖಾಸಗಿ ಮಾಹಿತಿ ರಕ್ಷಣೆಯ ಕಾನೂನು ಇದ್ದಿದ್ದರೆ ಸರ್ಕಾರ ಇಂತಹ ನಡೆಗಳಿಗೆ ಅವಕಾಶವಿರುತ್ತಿರಲಿಲ್ಲ.

ಒಂದೆಡೆ ಖಾಸಗಿತನದ ಪ್ರಶ್ನೆ ಕಾಡುತ್ತಿರುವಾಗಲೇ ದೇಶದಲ್ಲಿರುವ 14 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಭೂಹೀನ ರೈತರು ಈ ಯೋಜನೆಯಿಂದ ಹೊರಗೆ ಉಳಿಯುವ ಆತಂಕವೂ ಕಾಡುತ್ತಿದೆ. ಸರ್ಕಾರದ ಯಾವುದೇ ಯೋಜನೆ ಎಲ್ಲರನ್ನೂ ಒಳಗೊಳ್ಳುವ ಮೂಲ ಆಶಯದೊಂದಿಗೆ ಸಿದ್ಧವಾಗಬೇಕು ಮತ್ತು ಜಾರಿಯಾಗಬೇಕು. ದೊಡ್ಡ ಸಂಖ್ಯೆಯ ಜನ ಹೀಗೆ ಹೊರಗುಳಿಯುವಂತೆ ಮಾಡುವುದೇ ಜನವಿರೋಧಿಯಾದ ನಡೆಯಾಗುತ್ತದೆ. ಉಳ್ಳವರ ಹಿತಾಸಕ್ತಿ ಕಾಯುವ ಯೋಜನೆಗಳಿಗೆ ಮಾತ್ರ ಇಂತಹ ಕುರುಡುತನ ಇರುತ್ತದೆ. ಈ ದುರುದ್ದೇಶದ ಕುರುಡುತನವನ್ನು ಪ್ರಶ್ನಿಸಿಯೇ ರೈತರು ದೆಹಲಿ ಗಡಿಯಲ್ಲಿ ಕೂತು ಧಿಕ್ಕರಿಸುತ್ತಿದ್ದಾರೆ. ಈ ಸರ್ಕಾರ ಆ ಕೂಗಿಗೆ ಕಿವುಡಾಗಿ ಕೂತಿದೆ.

ದೇಶವ್ಯಾಪಿ ಹೋರಾಟ, ಟೀಕೆಗಳ ನಡುವೆಯೂ ಕಳೆದ ಏಪ್ರಿಲ್‌ ತಿಂಗಳಲ್ಲಿ ಮೈಕ್ರೋಸಾಫ್ಟ್‌ ಸಂಸ್ಥೆಯೊಂದಿಗೆ ತಿಳಿವಳಿಕೆ ಪತ್ರಿಕಕ್ಕೆ ಸಹಿ ಹಾಕಿದ್ದು ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ 6ರಾಜ್ಯಗಳ100 ಹಳ್ಳಿಗಳಲ್ಲಿ ಪ್ರಾಯೋಗಿಕ ಯೋಜನೆ ಜಾರಿಯಾಗಿದೆ. ಇತ್ತ ಈ ಯೋಜನೆಗೆ ಕಾನೂನು ಶಾಸನದ ಚೌಕಟ್ಟು ತರಲು ‘ಇಂಡಿಯಾ ಡಿಜಿಟಲ್‌ ಎಕೊಸಿಸ್ಟಮ್‌ ಆಫ್‌ ಅಗ್ರಿಕಲ್ಚರ್‌’ ಎಂಬ ಕಾರ್ಯವಿಧಾನವೊಂದನ್ನು ಅಂತಿಮಗೊಳಿಸುವುದಕ್ಕೆ ಸಿದ್ಧವಾಗಿದೆ. ಆದರೆ ರೈತರು, ಸಂಘಟನೆಗಳು, ಕೃಷಿತಜ್ಞರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿದೆ, ಅಭಿಪ್ರಾಯ ಸಂಗ್ರಹಿಸದೆ ನಡೆಯುತ್ತಿರುವ ಈ ಯೋಜನಾ ತಯಾರಿಗಳ ಬಗ್ಗೆ ಟೀಕೆ ಕೇಳಿ ಬಂದಿವೆ. 55 ಸಂಘಟನೆಗಳು, ರೈತರ ಮೂಲಭೂತ ಹಕ್ಕು, ಖಾಸಗಿತನಕ್ಕೆ ಈ ಯೋಜನೆ ಧಕ್ಕೆ ಉಂಟು ಮಾಡಲಿದೆ, ಕೃಷಿ ಕ್ಷೇತ್ರಕ್ಕೆ ಅಪಾಯ ತಂದೊಡ್ಡಲಿವೆ ಎಂದು ಪತ್ರವನ್ನು ಬರೆದಿವೆ.

ಇಷ್ಟಾಗಿಯೂ ಕೇಂದ್ರ ಸರ್ಕಾರ ತನ್ನ ರೈತ ಕಾಳಜಿ, ಕೃಷಿ ಪರ ನಿಲುವು ರೈತರ ನೆಲೆಯಲ್ಲಿಅಲ್ಲ, ಕಾರ್ಪೊರೇಟ್‌ ಕಂಪನಿಗಳ ನೆಲೆಯಲ್ಲಿ ಎಂಬುದನ್ನು ಸ್ಪಷ್ಟಪಡಿಸುವಂತೆ ನಡೆದುಕೊಳ್ಳುತ್ತಲೇ ಇದೆ. ನಿಜವಾದ ರೈತ ಕಾಳಜಿ ಇದ್ದಿದ್ದರೆ, ರೈತರನ್ನುಚಳಿ,ಮಳೆಗೆ ಬೀದಿಯಲ್ಲಿ ಕಾಲ ಕಳೆಯುವಂತೆ ಮಾಡಿ, ಕೃಷಿ ಅಭಿವೃದ್ಧಿ ಮಾಡುತ್ತೇವೆ ಎಂಬ ಸೋಗಿನಲ್ಲಿ ಕಾರ್ಪೋರೇಟ್‌ ಕಂಪನಿಗಳ ಜೊತೆಗೆ ಕೈ ಜೋಡಿಸುತ್ತಿರಲಿಲ್ಲ.

  • ಕುಮಾರ್ ಎಸ್

ಕೃಪೆ: ಅನ್ನದಋಣ.ಕಾಂ


ಇದನ್ನೂ ಓದಿ: ಕೃಷಿ ಕಾಯ್ದೆಗಳ ಜಾರಿಗೆ ಒಂದು ವರ್ಷ; ನಿಲ್ಲದ ಪ್ರತಿಭಟನೆ; ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಚುನಾವಣೆಗಳ ಮೇಲೆ ಪ್ರಭಾವ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...