Homeಕರ್ನಾಟಕಹೊಸ ಮಂತ್ರಿಮಂಡಲ ಹಳೆಯ ಅಸಮತೋಲನ: ಎ ನಾರಾಯಣ

ಹೊಸ ಮಂತ್ರಿಮಂಡಲ ಹಳೆಯ ಅಸಮತೋಲನ: ಎ ನಾರಾಯಣ

- Advertisement -
- Advertisement -

ಭಾರತೀಯ ಜನತಾ ಪಕ್ಷದ ದೆಹಲಿ ದರ್ಬಾರ್‌ನವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಬದಲಿಸಿದ್ದು ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ. ಹೊಸ ಮುಖ್ಯಮಂತ್ರಿಯವರ ಹೊಸ ಮಂತ್ರಿಮಂಡಲ ನೋಡಿದರೆ ಆಡಳಿತಕ್ಕೆ ಹೊಸ ರೂಪ ನೀಡಿ ಚುನಾವಣೆಗೆ ತಯಾರಿ ನಡೆಸುವುದಕ್ಕಿಂತ ಮೊದಲು, ಇರುವ ಸರಕಾರವನ್ನು ಚುನಾವಣೆ ಬರುವತನಕ ಉಳಿಸಿಕೊಳ್ಳುವ ಚಿಂತೆಯೇ ಬಿಜೆಪಿಗೆ ಪ್ರಧಾನವಾಗಿ ಕಾಡುತ್ತಿದೆ ಅನ್ನಿಸುತ್ತದೆ.

ಹೊಸ ಮಂತ್ರಿಮಂಡಲದ ಸಾಮಾಜಿಕ ಚರ್ಯೆ, ಪ್ರಾದೇಶಿಕ ಚಹರೆ ಇತ್ಯಾದಿಗಳ ವಿಚಾರಕ್ಕೆ ಮತ್ತೆ ಬರೋಣ. ಮೊದಲಿಗೆ ಗಮನಿಸಬೇಕಾದದ್ದು ಏನೆಂದರೆ, ಮುಖ್ಯಮಂತ್ರಿಯನ್ನು ಬದಲಿಸುವಾಗಲೂ, ಮಂತ್ರಿಮಂಡಲ ರಚಿಸುವಾಗಲೂ ಕರ್ನಾಟಕದ ಮಟ್ಟಿಗೆ ಬಿಜೆಪಿಯ ಪ್ರಬಲ ಹೈಕಮಾಂಡ್‌ನ ಆಟ ಪೂರ್ತಿ ನಡೆಯಲಿಲ್ಲ ಎನ್ನುವುದು. ಮೊದಲಿಗೆ ತಮಗೆ ಬೇಕಾದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಕರ್ನಾಟಕದ ಆಡಳಿತವನ್ನು ಸಂಪೂರ್ಣ ದೆಹಲಿಯ ನಿಯಂತ್ರಣಕ್ಕೆ ತೆಗೆದುಕೊಂಡು, ಇಲ್ಲಿನ ರಾಜಕೀಯವನ್ನು ಹಿಂದುತ್ವದಲ್ಲಿ ಅದ್ದಿ ಓಟಿನ ಹೊಸ ಫಸಲು ಪಡೆಯಬೇಕು ಎನ್ನುವುದು ಬಿಜೆಪಿಯ ಹೈಕಮಾಂಡ್‌ನವರ ಲೆಕ್ಕಾಚಾರ ಇದ್ದಂತೆ ಇತ್ತು. ಪಕ್ಷದ ರಾಜ್ಯ ಅಧ್ಯಕ್ಷರ ಸೋರಿಕೆಯಾದ ಫೋನ್ ಸಂಭಾಷಣೆ ಇದನ್ನೇ ತಾನೇ ಹೇಳಿದ್ದು. ದೆಹಲಿಯಿಂದ ಮುಖ್ಯಮಂತ್ರಿಯೊಬ್ಬರು ಬರುತ್ತಾರೆಂದೂ, ಮಂತ್ರಿಮಂಡಲದಲ್ಲಿ ’ಹಳಬರ್‍ಯಾರೂ’ ಇರುವುದಿಲ್ಲವೆಂದೂ ಆ ಸಂಭಾಷಣೆಯ ಸಾರವಾಗಿತ್ತು. ಆ ಸಂಭಾಷಣೆ ತನ್ನದಲ್ಲ ಅಂತ ಅವರು ಹೇಳಿದ್ದನ್ನು ನಂಬುವಷ್ಟು ಕರ್ನಾಟಕದ ಜನ ಪೆದ್ದರಾಗಿದ್ದರೆ ಬಿಜೆಪಿಯ ವರಿಷ್ಠರಿಗೆ ಕರ್ನಾಟಕದಲ್ಲಿ ತಾವಂದದ್ದನ್ನೆಲ್ಲಾ ಮಾಡಿ ಕೈತೊಳೆದುಕೊಳ್ಳಲು ಇಷ್ಟೊಂದು ಕಷ್ಟ ಆಗುತ್ತಿರಲಿಲ್ಲ.

ಕೊನೆಗೀಗ ಆಗಿದ್ದೇನೆಂದರೆ, ವರಿಷ್ಠರಿಗೆ ತಾವು ಅಂದುಕೊಂಡ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಲು ಆಗಿಲ್ಲ. ಯಡಿಯೂರಪ್ಪನವರನ್ನು ಪೂರ್ತಿ ಎದುರುಹಾಕಿಕೊಂಡು ಹೊಸ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಲು ಹೈಕಮಾಂಡ್‌ನವರಿಗೆ ಧೈರ್ಯ ಸಾಲಲಿಲ್ಲ. ಹಾಗೆಯೇ ಈಗ ಮಂತ್ರಿಮಂಡಲದ ವಿಚಾರದಲ್ಲೂ ಕೂಡ. ಬೇಕಾದವರನ್ನು ಮಂತ್ರಿ ಮಾಡಿ ಉಳಿದವರನ್ನು ತೆಪ್ಪಗಿರುವಂತೆ ಮಾಡಿಬಿಡುತ್ತೇವೆ ಎನ್ನುವ ಹೈಕಮಾಂಡ್‌ನ ನೀತಿ ಕರ್ನಾಟಕದ ಮಟ್ಟಿಗೆ ಕೆಲಸಕ್ಕೆ ಬರಲಿಲ್ಲ ಅಂತಲೇ ಹೇಳಬೇಕು. ಹೊಸ ಮುಖ್ಯಮಂತ್ರಿಯೇನೋ ’ಯಡಿಯೂರಪ್ಪನವರ’ ಜನ ಎಂದಾದರೂ ಅವರನ್ನು ಬೇಕಾದಹಾಗೆ ದುಡಿಸಿಕೊಳ್ಳುವುದು ಹೈಕಮಾಂಡ್‌ನವರಿಗೆ ಕಷ್ಟವಾಗದು. ಆದರೆ, ಹೊಸ ಮಂತ್ರಿಮಂಡಲವೊಂದನ್ನು ರಚಿಸಿ ಕರ್ನಾಟಕದಲ್ಲೊಂದು ಹೊಸ ಪ್ರಯೋಗ ಮಾಡಿಬಿಡುತ್ತೇವೆ ಎಂದು ಹೊರಟ ನಿರೀಕ್ಷೆ ಹುಸಿಯಾದಂತೆ ಕಾಣುತ್ತದೆ. ಯಡಿಯೂರಪ್ಪನವರ ಸಂಪುಟದಲ್ಲಿದ್ದ ಏಳು ಸಚಿವರನ್ನು ಕೈಬಿಡಲಾಗಿದೆ ಎನ್ನುವುದನ್ನು ಬಿಟ್ಟರೆ, ಬಹುತೇಕ ಎಲ್ಲವೂ ಹಳೆಯ ಜಾಡಿನಲ್ಲೇ ಇದೆ. ಹದಿನೆಂಟು ಮಂದಿ ಹಳಬರ ಖಾತೆ ಕೂಡ ಅಭಾದಿತವಾಗಿ ಮುಂದುವರಿದಿದೆ. ಬಹುಪಾಲು ಸ್ಥಾನಗಳು ಪ್ರಬಲ ಜಾತಿಗಳ ಪಾಲಾಗಿದೆ. ಮುಂದಿನ ಚುನಾವಣೆಯವರೆಗೆ ಸರಕಾರ ಉಳಿಸಲು ಯಾವ ರೀತಿಯ ಮಂತ್ರಿಮಂಡಲ ರಚಿಸಬೇಕಿತ್ತೋ ಅಂತಹದ್ದೊಂದು ಮಂತ್ರಿಮಂಡಲವನ್ನೀಗ ರಚಿಸಲಾಗಿದೆ.

ಮಂತ್ರಿಮಂಡಲಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಬಿಡಬೇಕು ಮತ್ತು ಯಾರಿಗೆ ಯಾವ ಖಾತೆ ಇರಬೇಕು ಎನ್ನುವಲ್ಲಿ ದೊಡ್ಡ ಮಟ್ಟದ ಚೌಕಾಸಿ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಈ ಚೌಕಾಸಿ ಈ ಸರಕಾರವನ್ನು ನಿಯಂತ್ರಿಸುವ ಮೂರು ಶಕ್ತಿಗಳ ಕಡೆಯಿಂದ ಆಗಿರುವಂತಿದೆ. ಈ ಮೂರು ಶಕ್ತಿಗಳೆಂದರೆ ಒಂದು ಹೈಕಮಾಂಡ್, ಇನ್ನೊಂದು ಆರ್‌ಎಸ್‌ಎಸ್ ಪ್ರಣೀತ ಪಕ್ಕಾ ಬಲಪಂಥೀಯ ಗುಂಪು, ಮತ್ತೊಂದು ಯಡಿಯೂರಪ್ಪ ಮತ್ತು ಅವರ ಕುಟುಂಬ/ಆಪ್ತರ ಬಣ. ಇದರ ಜತೆಗೆ ಕಾಂಗ್ರೆಸ್ ಮತ್ತು ಜನತಾ ದಳಗಳಿಂದ ಖರೀದಿಸಿ ತಂದ ಶಾಸಕರ ಮತ್ತೊಂದು ಬಣ. ಹೊಸ ಮಂತ್ರಿ ಮಂಡಲದಲ್ಲಿ ಈ ಎಲ್ಲಾ ಬಣಗಳನ್ನು ಸಂತೃಪ್ತಿಪಡಿಸಲು ಹೊರಟಿರುವುದರಿಂದ ಪ್ರಾದೇಶಿಕ ಸಮತೋಲನ ಇಲ್ಲ ಎನ್ನುವ ಒಂದು ವಾದ ಇದೆ. ಸುಮಾರು 13 ಜಿಲ್ಲೆಗಳಿಗೆ ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯವೇ ಇಲ್ಲ ಎನ್ನುವುದು ಎದ್ದುಕಾಣುವ ಅಂಶ. ಬಹುಶಃ ಇತ್ತೀಚೆಗಿನ ವರ್ಷಗಳಲ್ಲಿಯೇ ಪ್ರಾದೇಶಿಕವಾಗಿ ಇಷ್ಟೊಂದು ಅಸಮಾನತೆಯಿಂದ ಕೂಡಿದ ಮಂತ್ರಿಮಂಡಲವೊಂದು ಇರಲೇ ಇಲ್ಲ ಎನ್ನಬಹುದು. ಆದರೆ ಮಂತ್ರಿಮಂಡಲದಲ್ಲಿ ಪ್ರಾದೇಶಿಕ ಅಸಮತೋಲನ ಇದೆ ಎನ್ನುವುದು ಬಿಜೆಪಿಗೆ ರಾಜಕೀಯವಾಗಿ ದೊಡ್ಡ ನಷ್ಟವನ್ನೇನೂ ಉಂಟುಮಾಡಲಾರದು. ಅಂದರೆ, ಒಂದು ಜಿಲ್ಲೆಯಲ್ಲಿ ಒಬ್ಬ ಮಂತ್ರಿ ಇದ್ದಾನೆ ಎನ್ನುವ ಕಾರಣಕ್ಕೆ ಹೆಚ್ಚು ಓಟುಗಳು ಬರಬಹುದು ಅಥವಾ ಒಂದು ಜಿಲ್ಲೆಯಿಂದ ಯಾವುದೇ ಮಂತ್ರಿ ಇಲ್ಲ ಎನ್ನುವ ಕಾರಣಕ್ಕೆ ಅಲ್ಲಿಂದ ಬರುವ ಓಟುಗಳ ಸಂಖ್ಯೆ ಕಡಿಮೆಯಾಗಬಹುದು ಎನ್ನುವ ರೀತಿಯಲ್ಲಿ ಚುನಾವಣಾ ರಾಜಕೀಯ ಇಲ್ಲ ಎನ್ನುವ ಕಾರಣಕ್ಕೆ ಇಂತಹದ್ದೊಂದು ಅಸಮತೋಲನದ ಬಗ್ಗೆ ಬಿಜೆಪಿ ದೊಡ್ಡಮಟ್ಟಿಗೆ ತಲೆಕೆಡಿಸಿಕೊಳ್ಳಲಿಕ್ಕಿಲ್ಲ.

ಉಳಿದಂತೆ ಜಾತಿವಾರು, ಉಪಜಾತಿವಾರು ಲೆಕ್ಕಾಚಾರಗಳೆಲ್ಲಾ ಯಥಾಪ್ರಕಾರ ಮುಂದುವರಿದಂತೆ ಕಾಣುತ್ತವೆ. ಈ ಹಂಚಿಕೆಯನ್ನು ಕೂಡಾ ಚುನಾವಣೆಯ ಲೆಕ್ಕಚಾರದಲ್ಲೇ ಮಾಡಲಾಗಿದೆ. ಲಿಂಗಾಯತರು ಸಿಂಹಪಾಲು ಪಡೆದಿದ್ದಾರೆ. ಮುಖ್ಯಮಂತ್ರಿಯೂ ಲಿಂಗಾಯತರೇ. ಲಿಂಗಾಯತರ ಬೆಂಬಲ ಇಲ್ಲದೆ ಹೋದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡೇ ಮತ್ತೆ ಲಿಂಗಾಯತರೊಬ್ಬರನ್ನು ಮುಖ್ಯಮಂತ್ರಿ ಮಾಡಿರುವುದು. ಆ ಜಾತಿಯನ್ನು ಮತ್ತು ಅದರ ಪ್ರಮುಖ ಉಪಜಾತಿಗಳನ್ನೆಲ್ಲ ವಿಶೇಷವಾಗಿ ಓಲೈಸಿಕೊಳ್ಳಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ. ಒಕ್ಕಲಿಗರ ಮತವನ್ನು ಎಷ್ಟು ಸಾಧ್ಯವಾಗುತ್ತದೋ ಅಷ್ಟು ಉಳಿಸಿಕೊಳ್ಳಬೇಕು ಮತ್ತು ಹೊಸದಾಗಿ ಸೃಷ್ಟಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಒಕ್ಕಲಿಗ ಸಮುದಾಯದವರಿಗೆ ಎಲ್ಲಾ ಒತ್ತಡಗಳ ನಡುವೆ ಎಷ್ಟು ಸ್ಥಳಗಳನ್ನು ನೀಡಬಹುದೋ ಅಷ್ಟು ಸ್ಥಾನಗಳನ್ನು ನೀಡಲಾಗಿದೆ.

ಒಂದರ್ಥದಲ್ಲಿ, ಖರೀದಿತ ಶಾಶಕರ ಪೈಕಿ ಎಲ್ಲಾ ವರ್ಗಗಳಿಗೆ ಸೇರಿದವರೂ ಇದ್ದ ಕಾರಣ ಅವರನ್ನು
ಸೇರಿಸಿಕೊಂಡು ಆಯಕಟ್ಟಿನ ಸ್ಥಾನ ನೀಡುವುದು ಸುಲಭವೇ ಆಗಿದೆ ಎನ್ನಿಸುತ್ತದೆ. ಹಾಗೆ ಎಲ್ಲಾ ಸೇರಿದರೆ, ಮುಖ್ಯಮಂತ್ರಿಗಳೂ ಸೇರಿದಂತೆ 10 ಲಿಂಗಾಯತರು, 07 ಒಕ್ಕಲಿಗರು, 02 ಬ್ರಾಹ್ಮಣರು ಸೇರಿ ಪ್ರಬಲ ಜಾತಿಯವರಿಗೆ ಒಟ್ಟು 19 ಮಂತ್ರಿ ಸ್ಥಾನಗಳು. ಅಂದರೆ, ಮೂರು ಜಾತಿಗಳಿಗೆ ಶೇ.65 ರಷ್ಟು ಸ್ಥಾನಗಳು. ಉಳಿದ ಎಲ್ಲಾ ಸಮುದಾಯಗಳಿಗೆ ಸೇರಿ 11 ಸ್ಥಾನಗಳು (ಶೇ.35). ಎಂಬಲ್ಲಿಗೆ ಪ್ರಾದೇಶಿಕ ಅಸಮತೋಲನದ ಜತೆಗೆ ಮಂತ್ರಿಮಂಡಲದ ಸಾಮಾಜಿಕ ಸಮತೋಲನವೂ ದುತ್ತೆಂದು ಕಣ್ಣಮುಂದೆ ನಿಲ್ಲುತ್ತದೆ. ಅಷ್ಟೇ ಅಲ್ಲ, ದೊಡ್ಡ ಖಾತೆಗಳಲ್ಲೇ ಪ್ರಭಾವಿ ಖಾತೆಗಳು ಅನ್ನಿಸಿಕೊಂಡ ಗೃಹ ಖಾತೆ, ಕಂದಾಯ ಖಾತೆ, ಬೃಹತ್ ಕೈಗಾರಿಕಾ ಖಾತೆ, ಕೃಷಿ ಖಾತೆ ಇತ್ಯಾದಿಗಳೆಲ್ಲವೂ ಪ್ರಬಲ ಜಾತಿಯವರ ಕೈಯ್ಯಲ್ಲೇ ಇದೆ.

PC : ETV Bharat

ಗೃಹ ಖಾತೆಯನ್ನು ಪಡೆದವರು ಒಕ್ಕಲಿಗ ಎನ್ನುವ ನೆಲೆಯಲ್ಲಿ ಪ್ರಬಲಜಾತಿಯೊಂದನ್ನು ಪ್ರತಿನಿಧಿಸಿದರೆ, ಸಂಘದ ಅಂಗಣದಲ್ಲಿ ಬೆಳೆದವರು ಎನ್ನುವ ಕಾರಣಕ್ಕೆ ತೀವ್ರ ಹಿಂದುತ್ವದ ಪ್ರತಿನಿಧಿಯಾಗಿಯೂ ಅವರು ಸ್ಥಾನ ಪಡೆದಿದ್ದಾರೆ. ಲೋಕೋಪಯೋಗಿ ಮತ್ತು ಬೃಹತ್ ಕೈಗಾರಿಕಾ ಖಾತೆಗಳನ್ನು ಪಡೆದವರು ಲಿಂಗಾಯತರು ಮಾತ್ರವಲ್ಲ, ಪ್ರಬಲವಾಗಿ ತಮ್ಮ ಹಕ್ಕು ಪ್ರತಿಪಾದಿಸುವ ಲಿಂಗಾಯತರ ಉಪಪಂಗಡಕ್ಕೆ ಸೇರಿದವರು ಎನ್ನುವುದು ಮುಖ್ಯವಾಗುತ್ತದೆ. ಜಾತಿಯ ಜತೆಗೆ ದೊಡ್ಡದಾಗಿ ಧ್ವನಿ ಎತ್ತಬಲ್ಲವರತ್ತ ಕರ್ನಾಟಕದಲ್ಲಿ ಅಧಿಕಾರ ಪ್ರವಹಿಸುತ್ತದೆ ಅಂತ ಮತ್ತೊಮ್ಮೆ ಸಾಬೀತಾಗಿದೆ. ಪ್ರಬಲ ಜಾತಿಗಳಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಆ ಜಾತಿಗಳ ಮತ ಬರುವುದಿಲ್ಲವೆಂದೂ, ದುರ್ಬಲ/ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯ ನೀಡದಿದ್ದರೂ ಅವರ ಮತಗಳು ಬಂದೇಬರುತ್ತವೆ ಎಂದೂ ಬಿಜೆಪಿಗೆ ತಿಳಿದಿದೆ.

ಮಂತ್ರಿಮಂಡಲ ರಚನೆಗೆ ಸಂಬಂಧಿಸಿದಂತೆ ಇತ್ತೀಚೆಗಿನ ದಶಕಗಳಲ್ಲಿ ಕಂಡ ಒಂದೇ ಒಂದು ವಿಶೇಷ ಎಂದರೆ ಅದು ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಅವರು ತೆಗೆದುಕೊಂಡ ಒಂದು ನಿಲುವು. ಅವರು ರಚಿಸಿದ ಮೊದಲ ಮಂತ್ರಿಮಂಡಲದಲ್ಲಿ ತಮ್ಮ ಜಾತಿಗೆ ಸೇರಿದ ಯಾರನ್ನೂ ಮಂತ್ರಿ ಮಾಡಿರಲಿಲ್ಲ. ಅದಕ್ಕೆ ಅವರು ನೀಡಿದ ಕಾರಣ ಏನೆಂದರೆ, ಮುಖ್ಯಮಂತ್ರಿಯನ್ನೇ ಪಡೆದ ಜಾತಿಗೆ ರಾಜಕೀಯವಾಗಿ ಮತ್ತೂ ಹೆಚ್ಚಿನ ಪ್ರಾತಿನಿಧ್ಯ ಬೇಕು ಎನ್ನುವುದು ಸರಿಯಲ್ಲವೆಂದು. ಅದು ಒಂದು ಕ್ರಾಂತಿಕಾರಿ ನಿಲುವು. ಅದು ಮುಂದಿನ ಎಲ್ಲಾ ಮುಖ್ಯಮಂತ್ರಿಗಳಿಗೂ ಮಾದರಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ. ಉಳಿದವರಿಗೆ ಮಾದರಿಯಾಗುವುದು ಬಿಡಿ. ಸ್ವತಹ ಸಿದ್ದರಾಮಯ್ಯನವರಿಗೂ ಈ ನೈತಿಕ ನಿಲುವಿಗೆ ಬದ್ಧರಾಗಿ ಬಹುಕಾಲ ಉಳಿಯಲು ಸಾಧ್ಯವಾಗಲಿಲ್ಲ. ಎರಡನೆಯ ಬಾರಿ ಮಂತ್ರಿಮಂಡಲ ವಿಸ್ತರಣೆ ಮಾಡುವಾಗ ಅವರ ಜಾತಿಯವರನ್ನೂ ಸಿದ್ದರಾಮಯ್ಯ ಮಂತ್ರಿಮಂಡಲಕ್ಕೆ ಸೇರಿಸಿಕೊಂಡರು. ಭಾರತದಲ್ಲಿ ಮತ್ತು ಭಾರತದ ತನುಜಾತೆಯಾದ ಕರ್ನಾಟಕದಲ್ಲಿ ಯಾವತ್ತಿದ್ದರೂ ರಾಜಕೀಯ ಅಧಿಕಾರ ಎನ್ನುವುದು ಪ್ರವಹಿಸುವುದು ಜಾತಿಯ ಗಟಾರಗಳ ಮೂಲಕವೇ ಅಲ್ಲವೇ. ಈ ಎಲ್ಲದರ ನಡುವೆ ಮಂತ್ರಿ ಪದವಿ ಸಿಗದೇ ಹೋದರೆ ಸದಾ ತಂಟೆ ಮಾಡುವ ಒಂದಷ್ಟು ಮಂದಿಯನ್ನು ಹೊರಗಿಡಲಾಗಿದೆ. ಇವರು ಕರ್ನಾಟಕದ ಜನತೆಯನ್ನು ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ರಂಜಿಸಲಿದ್ದಾರೆ ಎನ್ನುವುದು ಅಷ್ಟೇ ಕುತೂಹಲದ ವಿಷಯ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು


ಇದನ್ನೂ ಓದಿ : ಶಿವರಾಮ ಕಾರಂತ್ ಬಡಾವಣೆ ಎಂಬ ‘ಅಭಿವೃದ್ಧಿ’ ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...