ಕೇರಳದಲ್ಲಿ ನಡೆದ ರಾಜ್ಯ ಮಟ್ಟದ ರಾಮಾಯಣ ರಸಪ್ರಶ್ನೆಯಲ್ಲಿ ವಿಜೇತರಾದ ಐವರು ವಿದ್ಯಾರ್ಥಿಗಳಲ್ಲಿ ಇಸ್ಲಾಮಿಕ್ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಾದ ಮುಹಮ್ಮದ್ ಬಾಸಿತ್ ಎಂ. ಮತ್ತು ಮುಹಮ್ಮದ್ ಜಾಬಿರ್ ಪಿ.ಕೆ. ಕೂಡಾ ಸ್ಥಾನ ಪಡೆದು ದೇಶದ ಗಮನ ಸೆಳೆದಿದ್ದಾರೆ. ಈ ಇಬ್ಬರೂ ರಾಜ್ಯದ ಮರ್ಕಝ್ ವಲಾಂಚೇರಿಯ ಕೆ.ಕೆ.ಎಚ್.ಎಂ. ಇಸ್ಲಾಮಿಕ್ ಮತ್ತು ಆರ್ಟ್ಸ್ ಕಾಲೇಜಿನ ಇಸ್ಲಾಮಿಕ್ ಅಧ್ಯಯನ ಕೋರ್ಸ್ (ವಾಫಿ)ನ ವಿದ್ಯಾರ್ಥಿಗಳಾಗಿದ್ದಾರೆ.
ರಾಮಾಯಣದ ಆಳವಾದ ಅಧ್ಯಯನದ ಆಧಾರದ ಮೇಲೆ ಜುಲೈ 23 ರಿಂದ ಜುಲೈ 25 ರ ನಡುವೆ ಕೇರಳದ ಪ್ರಕಾಶನ ಸಂಸ್ಥೆ ಡಿ.ಸಿ. ಬುಕ್ಸ್ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿತ್ತು. ತಮ್ಮ ಕಾಲೇಜಿನಲ್ಲಿ ಅಧ್ಯಯನದ ಭಾಗವಾಗಿ ರಾಮಾಯಣವನ್ನು ಓದಿಕೊಂಡಿದ್ದ ಜಾಬೀರ್ ಮತ್ತು ಬಾಸಿತ್ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಇತರ ವಿದ್ಯಾರ್ಥಿಗಳೆಂದರೆ ನವನೀತ್ ಗೋಪನ್, ಅಭಿರಾಮ್ ಎಂಪಿ ಮತ್ತು ಗೀತು ಕೃಷ್ಣನ್.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ಮಾತನಾಡಿದ ಧರ್ಮಶಾಸ್ತ್ರ ಅಧ್ಯಯನದ ಹಿರಿಯ ವಿದ್ಯಾರ್ಥಿಯಾಗಿರುವ ಜಾಬೀರ್, “ಎಲ್ಲಾ ಧರ್ಮಗಳು ಮಾನವೀಯತೆಯ ಶಾಂತಿಯುತ ಜೀವನಕ್ಕಾಗಿ ಮಾಡಲ್ಪಟ್ಟಿವೆ. ಆದರೆ ಅವುಗಳ ಸುತ್ತಲಿನ ಎಲ್ಲಾ ಇತರ ಉದ್ವಿಗ್ನತೆಗಳು ಮಾನವ ನಿರ್ಮಿತ” ಎಂದು ಹೇಳಿದ್ದಾರೆ.
“ನಾಡಿನಲ್ಲಿ ಉತ್ತಮ ಆಡಳಿತ ಮತ್ತು ನ್ಯಾಯವನ್ನು ಹೇಗೆ ಜಾರಿಗೆ ತರಬಹುದು ಎಂಬುದನ್ನು ರಾಮಾಯಣ ವಿವರಿಸುತ್ತದೆ. ರಾಮಾಯಣವು ರಾಮನನ್ನು ಆದರ್ಶ ರಾಜನೆಂದು ತೋರಿಸುತ್ತದೆ ಮತ್ತು ದೇಶದಲ್ಲಿ ಉತ್ತಮ ಆಡಳಿತ, ನ್ಯಾಯ, ಸದ್ಗುಣ ಮತ್ತು ಕರ್ತವ್ಯಗಳನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ತೋರಿಸುತ್ತದೆ. ಇದು ಜಗತ್ತಿನಲ್ಲಿ ಆದರ್ಶಪ್ರಾಯವಾಗಿ ನಡೆಯಬೇಕು. ಪವಿತ್ರ ಗ್ರಂಥದಲ್ಲಿ ದ್ವೇಷದ ಉಲ್ಲೇಖವಿಲ್ಲ. ಯಾವುದೇ ಧರ್ಮವು ದ್ವೇಷವನ್ನು ಉತ್ತೇಜಿಸುವುದಿಲ್ಲ” ಎಂದು ಜಾಬೀರ್ ಹೇಳಿದ್ದಾರೆ.
ಇದನ್ನೂ ಓದಿ: ನೆಲದ ಸೌಹಾರ್ದಕ್ಕೆ ಸರಣಿ ಕೊಲೆಗಳ ಕೊಡಲಿಯೇಟು; ಸಾಂಸ್ಕೃತಿಕ ಕ್ರಾಂತಿಗೆ ಓಗೊಡಬೇಕಿದೆ ಯುವಜನತೆ
“ತಮ್ಮ ಅಧ್ಯಯನದ ಭಾಗವಾಗಿ ವಿದ್ಯಾರ್ಥಿಗಳು ಎಲ್ಲಾ ಧರ್ಮಗಳ ಬಗ್ಗೆ ಕಲಿಯುತ್ತಾರೆ. ಹಾಗಾಗಿ ಧರ್ಮಗಳ ಪುಸ್ತಕಗಳನ್ನು ನೇರವಾಗಿ ಓದಿ ಅರ್ಥ ಮಾಡಿಕೊಳ್ಳಬಹುದು. ನಮ್ಮಲ್ಲಿ ಹೆಚ್ಚಿನವರು ನೇರವಾಗಿ ಓದುವ ಮತ್ತು ಅರ್ಥಮಾಡಿಕೊಳ್ಳುವ ಮೂಲಕ ಅವುಗಳನ್ನು ಕಲಿಯುತ್ತಾರೆ. ನಮ್ಮ ಕಾಲೇಜಿನ ಗ್ರಂಥಾಲಯವು ಎಲ್ಲಾ ಧಾರ್ಮಿಕ ಪವಿತ್ರ ಪುಸ್ತಕಗಳನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.
ವಾಫಿ ಕೋರ್ಸ್ ವಿದ್ಯಾರ್ಥಿಗಳು ಇಸ್ಲಾಮಿಕ್ ಅಧ್ಯಯನಗಳೊಂದಿಗೆ ತಮ್ಮ ಪದವಿ ಅಧ್ಯಯನವನ್ನು ನಡೆಸುತ್ತಾರೆ. ಈ ಕೋರ್ಸ್ನ ಪ್ರಮಾಣಪತ್ರ ಪಡೆಯಬೇಕೆಂದಿದ್ದರೆ ನಾವು ವಿಶ್ವವಿದ್ಯಾಲಯದ ಅನುಮೋದಿತ ಪದವಿಯನ್ನು ಹೊಂದಿರಬೇಕು. ಅದರ ಹೊರತಾಗಿ ನಾವು ಇತರ ಎಲ್ಲಾ ಧರ್ಮಗಳು ಮತ್ತು ಸಂಸ್ಕೃತಿಗಳ ಬಗ್ಗೆ ಕಲಿಯಬೇಕಾಗಿದೆ. ನಮ್ಮ ದೇಶವನ್ನು ವಿಶಾಲ ಮನಸ್ಸಿನ ರೀತಿಯಲ್ಲಿ ತಿಳಿದುಕೊಳ್ಳಲು ಮತ್ತು ಉತ್ತಮ ನಾಗರಿಕರಾಗಲು ನಮಗೆ ಇಲ್ಲಿ ಕಲಿಸಲಾಗುತ್ತದೆ ಎಂದು ಜಾಬಿರ್ ಹೇಳಿದ್ದಾರೆ.
ಮಕ್ಕಳ ನಿಯತಕಾಲಿಕಗಳಲ್ಲಿ ಪ್ರಕಟವಾಗುವ ರಾಮಾಯಣ ಚಿತ್ರಕಥೆಗಳು ಮತ್ತು ಸಣ್ಣ ಕಥೆಗಳನ್ನು ಓದಿದ ಕಾರಣದಿಂದ ಬಾಲ್ಯದಿಂದಲೂ ರಾಮಾಯಣವನ್ನು ಕಲಿಯಲು ಆಸಕ್ತಿ ಹೊಂದಿದ್ದಾಗಿ ರಾಮಾಯಣ ಸ್ಪರ್ಧೆಯಲ್ಲಿ ವಿಜೇತರಾದ ಮತ್ತೊಬ್ಬ ವಿದ್ಯಾರ್ಥಿ ಬಾಸಿತ್ ಹೇಳುತ್ತಾರೆ.
ಇದನ್ನೂ ಓದಿ: ಮೂರೂವರೆ ವರ್ಷದಲ್ಲಿ 752 ಕೋಮು ಪ್ರಕರಣಗಳನ್ನು ಕಂಡ ’ಸೌಹಾರ್ದ ಕರ್ನಾಟಕ’
“ನಾನು ವಾಫಿ ಕೋರ್ಸ್ಗೆ ಬಂದಾಗ ಇಲ್ಲಿ ಎಲ್ಲಾ ಧಾರ್ಮಿಕ ಪವಿತ್ರ ಪುಸ್ತಕಗಳು ಇದ್ದವು. ಅವರೆಲ್ಲವೂ ಜ್ಞಾನದ ಆಗರಗಳಾಗಿದ್ದು, ರಾಮಾಯಣವು ಹಿಂದೂ ಧಾರ್ಮಿಕ ಜ್ಞಾನದ ಆಗರವಾಗಿದೆ” ಎಂದು ಅವರು ಹೇಳಿದ್ದಾರೆ. ಜಾಬೀರ್ ಮತ್ತು ಬಾಸಿತ್ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಧರ್ಮದ ಮೂಲಕ ಶಾಂತಿಯನ್ನು ಹರಡಲು ಆಶಿಸುವುದಾಗಿ ಹೇಳಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.


