Homeಮುಖಪುಟಪ್ರಧಾನಿ ಮೋದಿ ಹೇಳಿದ್ದು 2022ರ ಹೊತ್ತಿಗೆ ಪ್ರತಿಯೊಬ್ಬರಿಗೂ ಪಕ್ಕಾ ಮನೆ: ಕೊಟ್ಟಿದ್ದು ಕೇವಲ ಬಾವುಟ!

ಪ್ರಧಾನಿ ಮೋದಿ ಹೇಳಿದ್ದು 2022ರ ಹೊತ್ತಿಗೆ ಪ್ರತಿಯೊಬ್ಬರಿಗೂ ಪಕ್ಕಾ ಮನೆ: ಕೊಟ್ಟಿದ್ದು ಕೇವಲ ಬಾವುಟ!

"ಇದುವರೆಗೂ ರಾಜಕಾರಣಿಗಳು ಸ್ವಂತ ಮನೆ ಪಡೆಯುವುದನ್ನು ಮಾತ್ರ ಕೇಳಿದ್ದೇವೆ. ಈಗ, ಬಡವರು ತಮ್ಮ ಸ್ವಂತ ಮನೆಗಳನ್ನು ಪಡೆಯುವ ಬಗ್ಗೆ ನಾವು ಕೇಳುತ್ತಿದ್ದೇವೆ” ಎಂದು ಮೋದಿ ಹೇಳಿದ್ದರು.

- Advertisement -
- Advertisement -

ಭಾರತ ಸ್ವಾತಂತ್ರ್ಯ ಗಳಿಸಿದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಚರ್ಚೆಯಲ್ಲಿದೆ. ಲಕ್ಷಾಂತರ ಜನರ ವಿರೋಚಿತ ಹೋರಾಟದ ಫಲವಾಗಿ ಬ್ರಿಟಿಷ್ ವಸಾಹತುಶಾಹಿಯಿಂದ ವಿಮೋಚನೆಗೊಂಡ ನಾವು ಸ್ವತಂತ್ರ ರಾಷ್ಟ್ರದ ಅಸ್ತಿತ್ವ ಪಡೆದಿದ್ದೇವೆ. ಆ ನಂತರ ದೇಶವು ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೈದಿದ್ದೇವೆ. ಆದರೂ ಎಲ್ಲರಿಗೂ ಶಿಕ್ಷಣ ಮತ್ತು ಉದ್ಯೋಗ, ಆರೋಗ್ಯ ಮತ್ತು ವಸತಿ ಹಾಗು ಆತ್ಮಗೌರವದಿಂದ ಬದುಕಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಆ ಮೂಲಕ ಜನರು ರಾಷ್ಟ್ರಭಕ್ತಿಯನ್ನು ಪ್ರದರ್ಶನ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅದಕ್ಕಾಗಿ ತ್ರಿವರ್ಣ ಧ್ವಜಗಳನ್ನು ಮಾರಲು ರಾಜ್ಯ ಬಿಜೆಪಿ ಸರ್ಕಾರಗಳು ಮುಂದಾಗಿವೆ. ಅದರೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ವಾಸಿಸಲು ಕನಿಷ್ಠ ಮನೆ ಇಲ್ಲದವರು ಏನು ಮಾಡಬೇಕು? ಅವರು ಎಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎಂಬ ಪ್ರಶ್ನೆ ಎದ್ದಿದೆ.

2018ರ ಆಗಸ್ಟ್ 23ರಂದು ಗುಜರಾತ್‌ನಲ್ಲಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು “ನೀವು ನನಗೆ ಆರ್ಶೀವಾದ ಮಾಡಿದರೆ ನಾನು ಈ ಕನಸನ್ನು ಪೂರ್ಣಗೊಳಿಸುತ್ತೇನೆ. 2022ಕ್ಕೆ ನಮ್ಮ ದೇಶ ಸ್ವಾತಂತ್ರ್ಯ ಪಡೆದು 75 ವರ್ಷವಾಗುತ್ತದೆ. ಗೋವಿಂದ್ ಗುರುರಂತಹ ಮಹಾಪುರುಷರು ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ್ದರ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗುತ್ತಿದೆ. ಅಂತಹ ಸಂದರ್ಭದಲ್ಲಿ ಹಿಂದೂಸ್ತಾನದ ಒಂದು ಕುಟುಂಬವೂ ಸಹ ಸ್ವಂತ ಪಕ್ಕಾ ಮನೆಯಿಲ್ಲದೆ ವಾಸಿಸಬಾರದು ಎಂದು ನಾನು ಸಂಕಲ್ಪ ಮಾಡುತ್ತೇನೆ, ವ್ರತ ಮಾಡುತ್ತೇನೆ. ಪಕ್ಕಾ ಮನೆ, ನಲ್ಲಿ ನೀರು, ಗ್ಯಾಸ್ ಕನೆಕ್ಷನ್, ವಿದ್ಯುತ್, ಎಲ್‌ಇಡಿ, ಶೌಚಾಲಯ ಇರುವಂತೆ ಮಾಡುವುದು ನನ್ನ ಕನಸಾಗಿದೆ” ಎಂದು ಹೇಳಿದ್ದರು.

ರಾಜಸ್ಥಾನದಲ್ಲಿಯೂ ಸಹ ಮಾತನಾಡಿದ ಮೋದಿಯವರು ಅಧೇ ಭರವಸೆಯನ್ನು ಪುನಾರಾವರ್ತಿಸಿದ್ದರು. ಅದರ  ವಿಡಿಯೋವನ್ನು ಈ ಕೆಳಗೆ ನೋಡಬಹುದು.

ಮುಂದುವರೆದು “ಇದುವರೆಗೂ ರಾಜಕಾರಣಿಗಳು ಸ್ವಂತ ಮನೆ ಪಡೆಯುವುದನ್ನು ಮಾತ್ರ ಕೇಳಿದ್ದೇವೆ. ಈಗ, ಬಡವರು ತಮ್ಮ ಸ್ವಂತ ಮನೆಗಳನ್ನು ಪಡೆಯುವ ಬಗ್ಗೆ ನಾವು ಕೇಳುತ್ತಿದ್ದೇವೆ”ಎಂದು ಮೋದಿ ಗುಜರಾತ್‌ನ ವಲ್ಸಾದ್ ಪಟ್ಟಣದ ಜುಜ್ವಾ ಗ್ರಾಮದಲ್ಲಿ ಸಭೆಯೊಂದರಲ್ಲಿ ಹೇಳಿದ್ದರು.

ಮಾತ್ರವಲ್ಲದೆ ಲಕ್ನೋದಲ್ಲಿ, ಚಂಢೀಗಡದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಸಹ ಅವರು ಇದೇ ಭರವಸೆಯನ್ನು ನೀಡಿದ್ದರು. 2022ರ ಒಳಗೆ ದೇಶದ ಪ್ರತಿಯೊಂದು ಕುಟುಂಬಕ್ಕೂ ಮನೆ ನೀಡುವುದಾಗಿ ಘೋಷಿಸಿದ್ದರು. ನಗರ ಪ್ರದೇಶಗಳಲ್ಲಿ 54 ಲಕ್ಷ ಮನೆಗಳ ಅಗತ್ಯವಿದೆ, ಗ್ರಾಮೀಣ ಭಾಗದಲ್ಲಿ 5 ಕೋಟಿಗೂ ಅತಿ ಹೆಚ್ಚು ಮನೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಈ ಕೆಳಗಿನ ವಿಡಿಯೋದಲ್ಲಿ 2.24ರ ನಿಮಿಷದ ಭಾಷಣದಲ್ಲಿ ಅದನ್ನು ನೋಡಬಹುದು.

ಪ್ರಧಾನಿಯವರು ಹೇಳಿದಂತೆ ಅಮೃತ ಮಹೋತ್ಸವ ಬಂದೇ ಬಿಟ್ಟಿದೆ. 2022ರ ಸ್ವಾತಂತ್ರ್ಯ ದಿನಾಚರಣೆಯೂ ಬಂದಿದೆ. ಆದರೆ ಈ ದೇಶದ ಎಲ್ಲರಿಗೂ ಪಕ್ಕಾ ಮನೆ ಸಿಕ್ಕಿವೆಯೇ ಎಂದರೆ ನಿರಾಶೆಯಾಗುತ್ತದೆ. ಏಕೆಂದರೆ ದೇಶದಲ್ಲಿ ಕೋಟ್ಯಾಂತರ ಜನ ಇನ್ನೂ ಮನೆ ಇಲ್ಲದೆ ಬೀದಿ ಬದಿಯಲ್ಲಿ ಜೀವನ ದೂಡುತ್ತಿದ್ದಾರೆ. ಆದರೆ ಮೋದಿ ಅದರ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಎಂದು ಮತ್ತೊಂದು ಟಾಸ್ಕ್ ಕೊಟ್ಟಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಡೆದ ವಸತಿರಹಿತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 39.21 ಲಕ್ಷ ಜನರಿಗೆ ವಾಸಿಸಲು ಸೂರಿಲ್ಲ. 21.78 ಲಕ್ಷ ಗ್ರಾಮೀಣ ಭಾಗದ ಜನರು ವಸತಿ ವಂಚಿತರಾದರೆ, 18.17 ಲಕ್ಷ ಜನರು ನಗರ ಭಾಗಗಳಲ್ಲಿ ಸೂರು ವಂಚಿತರಾಗಿದ್ದಾರೆ.

ಕಳೆದ ವರ್ಷ ವಿಧಾನ ಪರಿಷತ್‌ನಲ್ಲಿ ಸದಸ್ಯ ವಿಜಯ್ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಸತಿ ಸಚಿವ ವಿ.ಸೋಮಣ್ಣನವರು, “ರಾಜ್ಯದ ಕೇವಲ ನಗರ ಪ್ರದೇಶಗಳಲ್ಲಿಯೇ 14,15,121 ಜನರು ವಸತಿಗಾಗಿ ಅರ್ಜಿ ಸಲ್ಲಿಸಿದ್ದಾರೆ” ಎಂದು ಉತ್ತರಿಸಿದ್ದರು. ಗ್ರಾಮೀಣ ಪ್ರದೇಶದಲ್ಲಿ 18,71,691 ಮನೆಗಳ ಬೇಡಿಕೆಯಿದೆ ಎಂದು ಅವರು ಅಂಕಿ ಅಂಶಗಳನ್ನು ನೀಡಿದ್ದರು.

ಚಾಮರಾಜನಗರ, ಬೀದರ್ ಜಿಲ್ಲೆಗಳಲ್ಲಿ ಮನೆಗಳಿಗಾಗಿ ಅತಿ ಹೆಚ್ಚು ಅರ್ಜಿಗಳು ಬಂದಿವೆ, ಜಿಪಿಎಸ್ ಮೂಲಕ ನಿವೇಶನಗಳನ್ನು ಪತ್ತೆ ಹಚ್ಚಲಾಗಿದೆ ಎಂಬ ವರದಿಗಳು ಪ್ರಕಟವಾಗುತ್ತಲೇ ಇವೆ. ಇವೆಲ್ಲವೂ ರಾಜ್ಯದಲ್ಲಿ ವಸತಿ ರಹಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅಭಿವೃದ್ದಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿರುವ ಕರ್ನಾಟಕದ ಪರಿಸ್ಥಿತಿಯೇ ಇಷ್ಟು ಕೆಟ್ಟದಿರಬೇಕಾದರೆ ಇನ್ನು ಒಟ್ಟಾರೆ ಭಾರತದ ಪರಿಸ್ಥಿತಿ ಎಷ್ಟು ಕೆಟ್ಟದಾಗಿರಬೇಕು ಅಲ್ಲವೇ?

ಉದ್ಯೋಗ ಸಿಗದ ಕಾರಣಕ್ಕೆ ನಗರ ಪ್ರದೇಶಗಳಿಗೆ ವಲಸೆ ಹೋಗಿ ಅಲ್ಲಿ ನೆಲೆ ಸಿಗದೆ ಸ್ಲಂಗಳಲ್ಲಿ ವಾಸಿಸುತ್ತಿರುವ ಜನರ ಲೆಕ್ಕ ಅಷ್ಟು ಸುಲಭಕ್ಕೆ ಸಿಗುವುದಿಲ್ಲ. ನಗರ ಪ್ರದೇ‍ಶಗಳಲ್ಲಿ ನೂರಾರು ವರ್ಷಗಳಿಂದ ಸ್ಲಂಗಳಲ್ಲಿ ವಾಸಿಸುತ್ತ ದುಡಿಯುತ್ತಿರುವ ಜನರು ಸಣ್ಣ ಸಣ್ಣ ಗುಡಿಸಲುಗಳನ್ನ ಹಾಕಿಕೊಂಡು ವಾಸಿಸುತ್ತಿದ್ದಾರೆ. ಆದರೆ ಅಂತಹ 90% ಜನರು ವಾಸಿಸುವ ಮನೆಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಅವರನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಅಲ್ಲಿಂದ ಎತ್ತಂಗಡಿ ಮಾಡಬಹುದು ಎನ್ನುವ ಆತಂಕದಲ್ಲಿ ದಿನದೂಡುತ್ತಿದ್ದಾರೆ.

ಇನ್ನು ಮಹಾನಗರಗಳಲ್ಲಿ ದುಡಿಯಲು ಬಂದವರು ಚಿಕ್ಕ ಪುಟ್ಟ ಬಾಡಿಗೆ ಮನೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಜೀವನಪೂರ್ತಿ ದಿನದೂಡುತ್ತಿದ್ದಾರೆ. ಇನ್ನು ಮನೆ ಇಲ್ಲದ ನಿರ್ಗತಿಕರು, ಭಿಕ್ಷುಕರು ಇವರೆಲ್ಲರೂ ತ್ರಿವರ್ಣ ಧ್ವಜ ಹಾರಿಸಬೇಕು ಸರಿ, ಆದರೆ ಅವರ ಪರಿಸ್ಥಿತಿಗಳು ಬದಲಾಗುವುದು ಯಾವಾಗ?

ಜನರ ಸಮಸ್ಯೆಗಳನ್ನು ಮರೆಮಾಚುವ ಹುನ್ನಾರ- ಸಿರಿಮನೆ ನಾಗರಾಜ್

ದೇಶದಲ್ಲಿ ಕೋಟ್ಯಾನುಕೋಟಿ ಕುಟುಂಬಗಳಿಗೆ ಮನೆಗಳಿಲ್ಲ. ಇದ್ದ ಬದ್ದ ಮನೆಗಳನ್ನು ಅನಧಿಕೃತ ಎಂದು ಅಧಿಕಾರಿಗಳು ಪೊಲೀಸ್ ಪಹರೆಯಲ್ಲಿ ಬುಲ್ಡೋಜರ್ ಮೂಲಕ ನೆಲಸಮ ಮಾಡುತ್ತಿದ್ದಾರೆ. ಸರ್ಕಾರಿ ನಿವೇಶನಗಳಲ್ಲಿ ಗುಡಿಸಲು ಹಾಕಿಕೊಂಡು ಬದಕುತ್ತಿರುವವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡುತ್ತೇವೆ ಎಂದು ಭಾಷಣ ಮಾಡುತ್ತಿದ್ದಾರೆ ಹೊರತು ಇದುವರೆಗೂ ಸಮರ್ಪಕವಾಗಿ ಜನರಿಗೆ ಮನೆಗಳ ಹಸ್ತಾಂತರ ಮಾಡಿಲ್ಲ. ಈ ಮಳೆಗಾಲದಲ್ಲಿ ಅಲ್ಲಿನ ಜನರ ಪರಿಸ್ಥಿತಿ ಹೇಳಲು ಅಸಾಧ್ಯ. ಆ ಬಡಜನರು ಯಾವ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಪ್ರಶ್ನಿಸುತ್ತಾರೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪರವಾಗಿ ದಶಕಗಳಿಂದ ಹೋರಾಡುತ್ತಿರುವ ಹಿರಿಯ ಹೋರಾಟಗಾರ ಸಿರಿಮನೆ ನಾಗರಾಜ್.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಹಿಂದೆ ಆಳಿದ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳಿಗಾಗಲಿ, ಈಗ ಆಳುತ್ತಿರುವ ಬಿಜೆಪಿ ಪಕ್ಷಕ್ಕಾಗಲಿ ಬಡಜನರಿಗೆ ಕನಿಷ್ಠ ಸೂರು ಒದಗಿಸುವ ಯೋಗ್ಯತೆ ಇಲ್ಲ. ಬದಲಿಗೆ ಹರ್‌ ಘರ್‌ ಪೆ ತಿಂರಂಗ ಎಂಬ ನಕಲಿ ಘೋಷಣೆಗಳನ್ನು ಹೇಳಿ ಜನರನ್ನು ಮರಳು ಮಾಡುತ್ತಿದ್ದಾರೆ. ಇದೊಂದು ಅಪ್ಪಟ ಜನದ್ರೋಹದ ಕೆಲಸವಾಗಿದೆ. ಇಂತಹ ಪೊಳ್ಳು ಯೋಜನೆಗಳ ಬದಲಿಗೆ ಜನರಿಗೆ ನೆತ್ತಿಯ ಮೇಲೆ ಸೂರು, ದುಡಿದು ಬದುಕಲು ತುಂಡು ಭೂಮಿ ನೀಡಿ ಘನತೆಯಿಂದ ಬದಕುವ ಹಕ್ಕು ನೀಡಬೇಕೆಂದು ಒತ್ತಾಯಿಸಬೇಕು” ಎಂದರು.

ಮೋದಿ ಸರ್ಕಾರ ಈ ತಂತ್ರದ ಮೂಲಕ ದಿನನಿತ್ಯದ ಸಮಸ್ಯೆ, ಬವಣೆಗಳಿಂದ ಜನಸಾಮಾನ್ಯರ ಗಮನವನ್ನು ಬೇರೆಕಡೆ ತಿರುಗಿಸುತ್ತಿದೆ. ಆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಾನು ಬಗೆದ ದ್ರೋಹದ ಕತೆಯನ್ನು ಮರೆಮಾಚಿ, ತಾವೇ ದೊಡ್ಡ ದೇಶಪ್ರೇಮಿಗಳೆಂದು ಬಿಂಬಿಸಿಕೊಳ್ಳುತ್ತಿದೆ. ಅದು ಇಡೀ ಸ್ವಾತಂತ್ರ್ಯ ಚಳವಳಿಯನ್ನೂ ಈಗಲೂ ಅಲ್ಲಗಳೆಯುತ್ತ ಅದರ ಧೀರೋದಾತ್ತ ಚರಿತ್ರೆಯನ್ನು ಅಳಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಪ್ರಸ್ತುತಗೊಳಿಸಲು ಬಿಜೆಪಿ ತಾನು ನಡೆಸುತ್ತಿರುವ ಪ್ರಯತ್ನದ ಭಾಗವಾಗಿ, ಸ್ವಾತಂತ್ರ್ಯ ಚಳವಳಿಯ ಅವಿಭಾಜ್ಯ ಭಾಗವೇ ಆಗಿರುವ ಖಾದಿಯನ್ನೂ ಕೊಲ್ಲಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ದೇಶಾದ್ಯಂತ ಪ್ರಜ್ಞಾವಂತರು ಎಷ್ಟು ಮನವಿ ಮಾಡಿದರೂ ಕೇಳದೆ ಖಾದಿಯ ಮೇಲೆ ಜಿಎಸ್‌ಟಿ ತೆರಿಗೆ ಹಾಕಿದೆ. ಅದಕ್ಕೋಸ್ಕರವೇ ಪಾಲಿಯೆಸ್ಟರ್ ಧ್ವಜಕ್ಕೆ ಅನುಮತಿ ನೀಡಿದೆ. ಸಂವಿಧಾನದ ವಿಧಿಗೆ ವಿರುದ್ಧವಾಗಿ, ಖಾದಿಯ ಬದಲು ಪಾಲಿಯೆಸ್ಟರ್ ಬಟ್ಟೆಯ ಧ್ವಜಗಳಿಗೆ ಅನುಮತಿ ನೀಡುವ ಮೂಲಕ ಅಂಬಾನಿಯ ಪಾಲಿಯೆಸ್ಟರ್ ಬಟ್ಟೆ ಉದ್ಯಮಕ್ಕೆ ಸಾವಿರಾರು ಕೋಟಿ ರೂಪಾಯಿಗಳ ದಿಡೀರ್ ಲಾಭ ಮಾಡಿಕೊಡಲು ಹವಣಿಸುತ್ತಿದೆ ಎಂದು ಸಹ ಸಿರಿಮನೆ ನಾಗರಾಜ್ ಆರೋಪಿಸಿದ್ದಾರೆ.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಐತಿಹಾಸಿಕ ಸಂದರ್ಭದಲ್ಲಿ ಇದುವರೆಗೆ ಆಗಿರುವ ಸಾಧನೆಗಳು ಮತ್ತು ಮುಂದೆ ಮಾಡಬೇಕಿರುವ ಕಾರ್ಯಕ್ರಮಗಳನ್ನು ಸರ್ಕಾರ ಘೋಷಿಸಬೇಕು. ಆ ಮೂಲಕ ದೇಶವಾಸಿಗಳ ಕಲ್ಯಾಣಕ್ಕೆ ಪಣ ತೊಡಬೇಕು. ಆದರೆ ಮೋದಿ ಸರ್ಕಾರ ಕೇವಲ ಹೆಸರು ಬದಲಾವಣೆ, ಕೆಲಸಕ್ಕೆ ಬಾರದ ಹೊಸ ಘೋಷಣೆಗಳಲ್ಲಿ ಮುಳುಗಿದೆ. ಆ ಪಟ್ಟಿಗೆ ಹೊಸ ಸೇರ್ಪಡೆ ಪ್ರತಿ ಮನೆಗಳಲ್ಲಿ ತ್ರಿವರ್ಣ ಧ್ವಜ ಆಗಿದೆ.

ಇದನ್ನೂ ಓದಿ: ದೊರೆಸ್ವಾಮಿ ಮತ್ತು ಬಡಜನರ ಭೂಮಿ-ವಸತಿ ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬರಿ ಬೊಗಳೆ ಬಿಡೋದೇ ಆಯ್ತು ಈ ಸರ್ಕಾರದ್ದು ಜನ ನಮ್ಮ ಕೆಲಸದ ಬಗ್ಗೆ ಮಾತಾಡಬೇಕೆ ಹೊರತು ನಾವು ನಮ್ಮ ಬಗ್ಗೆ ಸುಳ್ಳು ಪುಗೊಕೊಂಡು ತಿರುಗಬಾರದು, ಹೆಂಡತಿ, ಮಕ್ಕಳು, ಸಂಸಾರ ಗೊತ್ತಿದ್ರೆ ಅಲ್ವೇ ಸೂರಿನ ಬೆಲೆ ಗೊತ್ತಾಗೋದು ಉಂಡಾಡಿ ಗುಂಡರಿಗೆಲ್ಲಿ ಅರ್ಥ ಆಗುತ್ತೆ 🤣🤣🤣ಈ ಸರ್ಕಾರ ತಂದಿದ್ದಕ್ಕೆ ಎಕ್ಕಡಕ್ಕೆ ಹೇಸಿಗೆ ಹಚ್ಚಿ ಹೊಡ್ಕೊಳಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...