ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿಖಿಲ್ ಗುಪ್ತಾ ಅಮೆರಿಕದ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಭಾರತೀಯ ಪ್ರಜೆಯಾದ ನಿಖಿಲ್ ಗುಪ್ತಾ, ನ್ಯೂಯಾರ್ಕ್ನಲ್ಲಿ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮ್ಯಾನ್ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಗಳು ಹೇಳಿವೆ.
ಪನ್ನುನ್ ಹತ್ಯೆಗಾಗಿ 1,00,000 ಡಾಲರ್ ಹಣ ನೀಡುವುದಾಗಿ ಒಪ್ಪಿಕೊಂಡಿದ್ದ ಮತ್ತು ಅದರಲ್ಲಿ 15,000 ಡಾಲರ್ ಅನ್ನು ಮುಂಗಡವಾಗಿ ಪಾವತಿಸಿದ್ದ ಆರೋಪ ಈತನ ಮೇಲಿದೆ.
ಗುಪ್ತಾ ಹಂತಕನೆಂದು ಭಾವಿಸಿ ಸಂಪರ್ಕಿಸಿದ್ದು ಅಸಲಿಗೆ ಅಮೆರಿಕದ ರಹಸ್ಯ ಪೊಲೀಸ್ ಅಧಿಕಾರಿಯಾಗಿದ್ದರಿಂದ ಈ ಸಂಚು ವಿಫಲವಾಯಿತು ಎನ್ನಲಾಗಿದೆ. ಈ ತಪ್ಪೊಪ್ಪಿಗೆಯ ಹಿನ್ನೆಲೆಯಲ್ಲಿ ಆತನಿಗೆ ಗರಿಷ್ಠ 40 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ಈ ಸಂಚಿನಲ್ಲಿ ಭಾರತದ ಮಾಜಿ ಗುಪ್ತಚರ ಅಧಿಕಾರಿ ವಿಕಾಸ್ ಯಾದವ್ ನಿರ್ದೇಶನ ನೀಡಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಆರೋಪಿಸಿದೆ.
ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿರುವ, ನಿಷೇಧಿತ ‘ಸಿಖ್ಸ್ ಫಾರ್ ಜಸ್ಟಿಸ್’ (ಎಸ್ಎಫ್ಜೆ) ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ನ್ಯೂಯಾರ್ಕ್ನಲ್ಲಿ ಸಂಚು ರೂಪಿಸಲಾಗಿತ್ತು ಎಂದು ಅಮೆರಿಕ ಆರೋಪ ಮಾಡಿದೆ. ಈ ಪ್ರಕರಣದಲ್ಲಿ ಹತ್ಯೆಗೆ ಸುಪಾರಿ, ಸಂಚು ಮತ್ತು ಹಣದ ಒಪ್ಪಂದ ಮಾಡಿಕೊಂಡ ಆರೋಪ ನಿಖಿಲ್ ಗುಪ್ತಾ ಮೇಲಿದೆ.
ಭಾರತದ ಗುಪ್ತಚರ ಸಂಸ್ಥೆಯ ಮಾಜಿ ಅಧಿಕಾರಿ ಎನ್ನಲಾದ ವಿಕಾಸ್ ಯಾದವ್ ಪರವಾಗಿ ಈ ಹತ್ಯೆಯನ್ನು ಕಾರ್ಯಗತಗೊಳಿಸಲು ಮಧ್ಯವರ್ತಿಯಾಗಿ ಕೆಲಸ ಮಾಡಿದ ಆರೋಪ ನಿಖಿಲ್ ಗುಪ್ತಾ ವಿರುದ್ದ ಮಾಡಲಾಗಿದೆ. ಗುಪ್ತಾಗೆ ಪನ್ನುನ್ ಹತ್ಯೆಯ ನಿರ್ದೇಶನ ನೀಡಿದ್ದು ಇವರೇ ಎಂಬುವುದು ಅಮೆರಿಕದ ವಾದ.
ನಿಖಿಲ್ ಗುಪ್ತಾ ಹಂತಕನೆಂದು ಭಾವಿಸಿ ಒಬ್ಬ ವ್ಯಕ್ತಿಯನ್ನು ಸಂಪರ್ಕಿಸಿದ್ದ. ಆದರೆ ಆ ವ್ಯಕ್ತಿ ಅಮೆರಿಕದ ಮಾದಕದ್ರವ್ಯ ಜಾರಿ ಸಂಸ್ಥೆಯ (ಡಿಇಎ) ರಹಸ್ಯ ಏಜೆಂಟ್ ಆಗಿದ್ದರು. ಈ ಕಾರಣದಿಂದ ಇಡೀ ಸಂಚು ಅಮೆರಿಕದ ಅಧಿಕಾರಿಗಳಿಗೆ ಮೊದಲೇ ತಿಳಿಯಿತು ಎನ್ನಲಾಗಿದೆ.
ಭಾರತ ಸರ್ಕಾರವು ಈ ಸಂಚಿನಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದೆ. ಆದರೆ, ಅಮೆರಿಕ ನೀಡಿದ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದೆ
ಪ್ರಸ್ತುತ ನಿಖಿಲ್ ಗುಪ್ತಾ ತಪ್ಪೊಪ್ಪಿಕೊಂಡಿರುವುದರಿಂದ ಆತನಿಗೆ ಸುಮಾರು 40 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಅಮೆರಿಕದ ಎಫ್ಬಿಐ ವಿಕಾಸ್ ಯಾದವ್ ವಿರುದ್ಧ ‘ವಾಂಟೆಡ್’ ನೋಟಿಸ್ ಜಾರಿ ಮಾಡಿದೆ.


