Homeಅಂತರಾಷ್ಟ್ರೀಯಶಿಂಜೊ ಅಬೆ ಹತ್ಯೆ; ಹಿಂತಿರುಗಿ ನೋಡಿದಾಗ..

ಶಿಂಜೊ ಅಬೆ ಹತ್ಯೆ; ಹಿಂತಿರುಗಿ ನೋಡಿದಾಗ..

- Advertisement -
- Advertisement -

ಜುಲೈ 8, 2022ರಂದು ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ನರ ಎಂಬ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಜಪಾನಿನಲ್ಲಿ ರಾಜ್ಯಸಭೆಗೆ ಸಮನಾದ ಹೌಸ್ ಆಫ್ ಕೌನ್ಸಿಲರ್ಸ್ ಚುನಾವಣೆಯಲ್ಲಿ ಅವರು ತನ್ನ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಪಿ) ಪರ ಪ್ರಚಾರ ಮಾಡುತ್ತಿದ್ದಾಗ, ಅವರ ಹಿಂಬದಿಯಿಂದ ಮತ್ತು ಅತೀ ಹತ್ತಿರದಿಂದ ಗುಂಡು ಹಾರಿಸಲಾಗಿತ್ತು. ಅವರನ್ನು ನರ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಲ್ಲಿ ಅಸುನೀಗಿದರು. ನಿಗದಿಯಾಗಿದ್ದಂತೆ ಚುನಾವಣೆಯು ಜುಲೈ 10ರಂದು ನಡೆಯಿತು.

ಅವರ ಹತ್ಯೆಗೆ ಬಳಸಲಾದ ಬಂದೂಕು ಮನೆಯಲ್ಲೇ ತಯಾರಿಸಿದ್ದಾಗಿತ್ತು. ಎರಡು ಉದ್ದವಾದ ಕೊಳವೆಗಳನ್ನು ಕಪ್ಪು ಟೇಪಿನಿಂದ ಜೋಡಿಸಲಾಗಿತ್ತು. ಈ ಅಸ್ತ್ರವು ಒಟ್ಟಾರೆಯಾಗಿ ಸುಮಾರು 40 ಸೆಂಟಿಮೀಟರ್ ಉದ್ದ ಮತ್ತು 20 ಸೆಂಟಿಮೀಟರ್ ಅಗಲವಿತ್ತು. ಹೆಚ್ಚುಕಡಿಮೆ ಅದು ವಯಸ್ಕರು ಬಳಸುವ ಪಿಸ್ತೂಲಿನ ಗಾತ್ರದಲ್ಲಿತ್ತು. ಹತ್ಯೆಯ ಆರೋಪಿ ತೆತ್ಸುಯ ಯಮಗಮಿ ಎಂಬವನನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ. ಆತನ ಮನೆಯನ್ನು ಶೋಧಿಸಿದಾಗ ಬಂದೂಕಿನಂತಹ ಹಲವು ವಸ್ತುಗಳು ಪತ್ತೆಯಾದವು.

ಯಮಗಮಿ ಜಪಾನಿನ ನೌಕಾ ಆತ್ಮರಕ್ಷಣಾ ದಳದ ಒಬ್ಬ ಮಾಜಿ ನಾವಿಕ. ದಕ್ಷಿಣ ಕೊರಿಯಾ ಮೂಲದ ನವಯುಗದ ಕ್ರೈಸ್ತ ಧಾರ್ಮಿಕ ಚಳವಳಿಯಾದ ಯುನಿಫಿಕೇಶನ್ ಚರ್ಚ್ ಜಪಾನಿನಾದ್ಯಂತ ಹರಡುವುದರಲ್ಲಿ ಶಿಂಜೋ ಅಬೆ ಅವರ ಪಾತ್ರದ ಬಗ್ಗೆ ತಾನು ಕೋಪ ಹೊಂದಿರುವುದಾಗಿ ಯಮಗಮಿ ತನಿಖೆದಳಕ್ಕೆ ತಿಳಿಸಿದ್ದಾನೆ. ಆತನ ತಾಯಿ ಈ ಚರ್ಚಿನ ಸದಸ್ಯೆಯಾಗಿದ್ದು, ಆಕೆ ಅದಕ್ಕೆ ದೇಣಿಗೆಗಳನ್ನು ನೀಡುತ್ತಿದ್ದುದರಿಂದ, ಚರ್ಚ್ ಆಕೆಯನ್ನು ದಿವಾಳಿ ಮಾಡಿದೆ ಎಂದು ಆತ ಆರೋಪಿಸಿದ್ದಾನೆ. ಶಿಂಜೋ ಅಬೆ ಈ ಗುಂಪಿಗೆ ಹತ್ತಿರವಾಗಿದ್ದರು ಎಂದು ಆತ ನಂಬಿದ್ದರೂ, ಈ ಆರೋಪಕ್ಕೆ ಯಾವುದೇ ಆಧಾರ ಇರುವಂತೆ ಕಾಣುವುದಿಲ್ಲ.

ಶಿಂಜೋ ಅಬೆ ಜಪಾನಿನ ಇತಿಹಾಸದಲ್ಲಿಯೇ ಅತ್ಯಂತ ದೀರ್ಘ ಕಾಲ ಪ್ರಧಾನಿಯಾಗಿದ್ದ ವ್ಯಕ್ತಿ. ಅಷ್ಟು ಕಾಲ ಅಧಿಕಾರದಲ್ಲಿದ್ದ ಇನ್ನೊಬ್ಬ ಪ್ರಧಾನಿ ಎಂದರೆ, 1960ರ ದಶಕದಲ್ಲಿದ್ದ ಐಸಾಕು ಸ್ಯಾಟೊ ಮಾತ್ರ. ಇತ್ತೀಚಿನ ಎಲ್ಲಾ ಪ್ರಧಾನಿಗಳು ಹೆಚ್ಚೆಂದರೆ, ಒಂದು ಅವಧಿಗೆ ಮಾತ್ರ ಇದ್ದರು. ಅಬೆ ಎರಡು ಅವಧಿಯಲ್ಲಿ ನಾಲ್ಕು ಬಾರಿ ಪ್ರಧಾನಿಯಾಗಿದ್ದರು. ಮೊದಲ ಅವಧಿಯಲ್ಲಿ, 2006ರಲ್ಲಿ ಒಂದು ವರ್ಷ ಮತ್ತು ಎರಡನೆಯ ಅವಧಿಯಲ್ಲಿ 2012ರಿಂದ 2020ರ ತನಕ.

ಶಿಂಜೋ ಅಬೆಯನ್ನು ಇಪ್ಪತ್ತೊಂದನೇ ಶತಮಾನದ ಹೊಸತಲೆಮಾರಿನ ಅತಿಪೌರುಷದ ಸರ್ವಾಧಿಕಾರಿ ನಾಯಕರಲ್ಲಿ ಒಬ್ಬರೆಂದು ಕೆಲವೊಮ್ಮೆ ಪರಿಗಣಿಸಲಾಗುತ್ತದೆ. ಅವರ ಮೊದಲ ಅವಧಿ ಅದಾಗಲೇ ವಿವಾದಾಸ್ಪದವಾಗಿತ್ತು. ಮೊದಲಿಗೆ ಅವರು “ದೇಶಪ್ರೇಮ ಮತ್ತು ಸ್ವಂತ ಊರಿನ ಪ್ರೇಮವನ್ನು ಉತ್ತೇಜಿಸುವ” ಉದ್ದೇಶ ಹೊಂದಿದ್ದ ಮಸೂದೆಯೊಂದನ್ನು ಮುಂದಿಟ್ಟರು. ಅದು- ಜಪಾನ್ ಹಿಂದೆ ಮಾಡಿದ್ದ ತಪ್ಪುಗಳನ್ನು ಕಾಣಿಸುವ- ದೇಶದ ಇತಿಹಾಸದ ಕೆಲವು ಭಾಗಗಳನ್ನು ಅಳಿಸಿಹಾಕಿ, ಹೆಮ್ಮೆ- ಸಾಂಪ್ರದಾಯಿಕ ಶಿಂಟೋ ಮೌಲ್ಯಗಳನ್ನು ಬೆಳೆಸುವ, ಸಾಮ್ರಾಜ್ಯಶಾಹಿ ಪರಂಪರೆಯ ಕುರಿತು ಹೆಮ್ಮೆಯನ್ನು ಉತ್ತೇಜಿಸುವ ಕಾರ್ಯಕ್ಕೆ ಅಡಿಪಾಯ ಹಾಕುವ ಉದ್ದೇಶ ಹೊಂದಿತ್ತು.

ಎರಡನೆಯದಾಗಿ, ಮಹಿಳೆಯರು ಜಪಾನಿನ ಸಾಮ್ರಾಜ್ಞೆಯಾಗುವ ಅವಕಾಶ ಒದಗಿಸುವ ತಿದ್ದುಪಡಿಯನ್ನು ಅಬೆ ವಿರೋಧಿಸಿದರು. ಈ ನಿಲುವುಗಳು ಅಬೆಯ ಜನಪ್ರಿಯತೆಯನ್ನು ಕುಸಿಯುವಂತೆ ಮಾಡಿ ಅವರ ಪಕ್ಷ ಎಲ್‌ಡಿಪಿ ಮುಂದಿನ ಚುನಾವಣೆಯಲ್ಲಿ ಸೋಲುವಂತಾಯಿತು. ಹಾಗಾಗಿ ಅವರ ಪ್ರಧಾನಿ ಹುದ್ದೆ ಒಂದು ವರ್ಷ ಮಾತ್ರಕ್ಕೇ ಸೀಮಿತವಾಯಿತು.

ಅವರ ಎರಡನೇ ಮತ್ತು ದೀರ್ಘ ಅಧಿಕಾರಾವಧಿಯು 2012ರಲ್ಲಿ ಆರಂಭವಾಯಿತು. ಆವರು ಸಾಂಪ್ರದಾಯಿಕತೆ ಮತ್ತು ರಾಷ್ಟ್ರದ ಹೆಮ್ಮೆ ಎಂಬ ತಳಹದಿಯಲ್ಲಿಯೇ ಮುಂದುವರಿದರು. ಅವರ ಸಾಂಪ್ರದಾಯಿಕತೆಯಲ್ಲಿ ಇತಿಹಾಸವನ್ನು ತಿದ್ದಿಬರೆಯುವುದು ಸೇರಿತ್ತು. ಅಂದರೆ, ಜಪಾನಿನ ಸಾಮ್ರಾಜ್ಯಶಾಹಿಯು ಚೀನ ಮತ್ತು ಕೊರಿಯಾದ ಮೇಲೆ ನಡೆಸಿದ ಯುದ್ಧಗಳು, ಆ ಕಾಲದಲ್ಲಿ ನಡೆಸಿದ ಭೀಕರ ಯುದ್ಧಾಪರಾಧಗಳನ್ನು ನಿರಾಕರಿಸುವುದು, ಮರೆಯುವುದು ಆಥವಾ ಅವುಗಳನ್ನು ಸಂಭ್ರಮಿಸುವುದು ಕೂಡಾ ಸೇರಿತ್ತು.

ಅವರ ನಾಲ್ಕನೇ ಮತ್ತು ಕೊನೆಯ ಅವಧಿಯಲ್ಲಿ- ಹೋಲಿಕೆಯಲ್ಲಿ ಚಿಕ್ಕದೆನಿಸುವಂತಿದ್ದರೂ- ಹಲವಾರು ಹಗರಣಗಳು ಅವರಿಗೆ ಹೊಡೆತ ನೀಡಿದವು. ಇವುಗಳಲ್ಲಿ ಸಂಬಂಧಿಕರು ಮತ್ತು ಸಂಬಂಧಿಕರಿಗೆ ವಿಶೇಷ ಉಪಕಾರ ಮಾಡಿದ್ದು, ಪಶ್ಚಿಮ ಜಪಾನಿನ ಕುರೊಕವದ ಪ್ರವಾಹ ಸಂತ್ರಸ್ತರ ಬಗ್ಗೆ ಅಸಡ್ಡೆ ತೋರಿದ್ದು ಇತ್ಯಾದಿ ಸೇರಿವೆ. ಇವೆಲ್ಲವೂ ಅಧಿಕಾರ ಕೊನೆಗೊಳಿಸುವಷ್ಟು ದೊಡ್ಡದಲ್ಲದಿದ್ದರೂ, ಅವರ ಜನಪ್ರಿಯತೆ ಏರುವ ಬದಲು ಕುಸಿಯಲು ಕಾರಣವಾದವು. ಜೊತೆಗೆ ಅದೇ ತಿಂಗಳು ಆರೋಗ್ಯವೂ ಕೆಟ್ಟ ಕಾರಣದಿಂದ ಸೆಪ್ಟೆಂಬರ್ 2020ರಲ್ಲಿ ಅವರು ಪ್ರಧಾನಿ ಹುದ್ದೆಯಿಂದ ನಿವೃತ್ತಿ ಪಡೆದರು.

ಅಬೆಯ ಅರ್ಥಶಾಸ್ತ್ರ

ಪ್ರಧಾನಿಯಾಗಿರುವಷ್ಟು ಕಾಲ ಅಬೆ, ತನ್ನ ಧೋರಣೆಗಳ (ಅಬೆಯಾನಿಕ್ಸ್) ಮೂಲಕ ದೊಡ್ಡ ಉದ್ದಿಮೆಗಳ ಹಿತಾಸಕ್ತಿಗಳಿಗೆ ನೆರವಾದರು. ಅವರು ತನ್ನ ಅರ್ಥನೀತಿಯು ಮೂರು ಬಾಣಗಳ ಮೇಲೆ ನಿಂತಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಅವೆಂದರೆ- ಹೆಚ್ಚಿನ ಸಾಲ, ಆರ್ಥಿಕತೆಯನ್ನು ಉತ್ತೇಜಿಸಲು ಹೆಚ್ಚಿನ ಸರಕಾರಿ ವೆಚ್ಚ ಮತ್ತು ರಾಚನಿಕ ಸುಧಾರಣೆ. ಒಂದೊಂದು ಬಾಣವನ್ನು ಮುರಿಯಬಹುದು; ಮೂರು ಬಾಣಗಳನ್ನು ಜೊತೆಯಾಗಿ ಮುರಿಯಲಾಗದು ಎಂಬ ಹಳೆಯ ಜಪಾನಿ ಕತೆಯಿಂದ ಈ ಬಾಣಗಳನ್ನು ಎತ್ತಿಕೊಂಡದ್ದು.

ಅಬೆ ಅಧಿಕಾರಕ್ಕೆ ಬಂದಾಗ ಯಾವೆಲ್ಲ ರಾಚನಿಕ ಸುಧಾರಣೆಗಳು ಬೇಕು ಎಂಬ ಬಗ್ಗೆ ಅವರ ಪಕ್ಷದ ಸದಸ್ಯರಲ್ಲಿ ಒಮ್ಮತವಿರಲಿಲ್ಲ. ಯಾವೆಲ್ಲಾ ತೆರಿಗೆಗಳನ್ನು ಕಡಿತಗೊಳಿಸಬೇಕು, ಯಾವೆಲ್ಲಾ ಸರಕಾರಿ ವೆಚ್ಚಗಳನ್ನು ಕಡಿತಗೊಳಿಸಬೇಕು ಎಂಬ ಬಗ್ಗೆಯೂ ಒಮ್ಮತವಿರಲಿಲ್ಲ. ಅದರ ನಂತರ, ಅಬೆಯ ಅರ್ಥಶಾಸ್ತ್ರವೇ ಅರ್ಥಕಳೆದುಕೊಂಡಿತು. ಅದು ನೀತಿ ನಿರೂಪಣೆಯ ಬದ್ಧತೆಯನ್ನು ಉಳಿಸಿಕೊಳ್ಳಲಿಲ್ಲ ಬದಲಿಗೆ ತಮ್ಮ ಐಡಿಯಾಗಳ ಸರಕನ್ನು ಜನರಿಗೆ ಮಾರುವುದಕ್ಕೆ ದಾರಿಯಾಯಿತು.

ತೆತ್ಸುಯ ಯಮಗಮಿ

ಅಬೆ ತಾನು ಪ್ರಧಾನಿಯಾಗಿರುವಷ್ಟು ಕಾಲ ಪರಮಾಣು ಶಕ್ತಿಯ ಪರವಾಗಿದ್ದರು. ಅಧಿಕಾರಕ್ಕೆ ಬರುವುದಕ್ಕೆ ಒಂದು ವರ್ಷ ಮೊದಲು ನಡೆದ ಫುಕುಶಿಮ ಅಣು ದುರಂತದ ಹೊರತಾಗಿಯೂ ಅವರು, ಅಣು ಶಕ್ತಿಗೆ ಬದಲಾಗಿ ಜಪಾನಿಗೆ ಬೇರೆ ದಾರಿಯಿಲ್ಲ ಎಂಬ ತನ್ನ ವಾದವನ್ನು ಮುಂದುವರಿಸಿದರು. ಫುಕುಶಿಮ ದುರಂತದ ನಂತರ ಜಪಾನಿನಲ್ಲಿ ಅಣುವಿರೋಧಿ ಭಾವನೆ ಎಷ್ಟು ಪ್ರಬಲವಾಗಿದೆಯೆಂದರೆ, ಅವರಿಗೆ ತಮ್ಮ ಧೋರಣೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಸಂವಿಧಾನದ ಪರಿಚ್ಛೇದ 9

ಅಬೆಯ ಅತ್ಯಂತ ವಿವಾದಾಸ್ಪದ ಕ್ರಮ ಎಂದರೆ, ಜಪಾನಿನ ಸಂವಿಧಾನದ 9ನೇ ಪರಿಚ್ಛೇದದ ಮರುವ್ಯಾಖ್ಯಾನಕ್ಕೆ ಹೊರಟದ್ದು. ಈ ಪರಿಚ್ಛೇದವು ಎರಡನೇ ಮಹಾಯುದ್ಧೋತ್ತರ ಸಂವಿಧಾನದ ಭಾಗವಾಗಿದ್ದು, ಯುದ್ಧವನ್ನು ಕಾನೂನುಬಾಹಿರಗೊಳಿಸುತ್ತದೆ. ’ಸಾಮೂಹಿಕ’ ಸ್ವರಕ್ಷಣೆಗೆ ವಿಶೇಷ ಅವಕಾಶ ಮಾಡಿಕೊಡುವ ಹೊಸ ವ್ಯಾಖ್ಯಾನವೊಂದನ್ನು ಅಬೆ ಪ್ರಸ್ತಾಪಿಸಿದ್ದರು. ಅದರ ಅರ್ಥ ಎಂದರೆ, ಜಪಾನಿನ ಮಿತ್ರ ರಾಷ್ಟ್ರವೊಂದರ ಮೇಲೆ ದಾಳಿ ನಡೆದಾಗ ಜಪಾನ್, ’ಸ್ವರಕ್ಷಣೆಯ ನೆಲೆಯಲ್ಲಿ’ ಯುದ್ಧ ಪ್ರವೇಶಿಸಬಹುದು ಎಂದಾಗಿದೆ. ಇದು ಜಪಾನನ್ನು ಮತ್ತೆ ಒಂದು ಮಿಲಿಟರಿ ಶಕ್ತಿಯಾಗಿ ಬೆಳೆಸುವುದಕ್ಕೆ ಮೊದಲ ಹೆಜ್ಜೆ ಎಂಬಂತೆ ಕಾಣಲಾಗುತ್ತದೆ. ಈ ಹೊಸ ವ್ಯಾಖ್ಯಾನಕ್ಕೆ ಭಾರೀ ವಿರೋಧ ಬಂದಾಗ ಅಬೆ, 9ನೇ ಪರಿಚ್ಛೇದದ ತಿದ್ದುಪಡಿಗೆ ಸಾರ್ವತ್ರಿಕ ಜನಮತಗಣನೆಯ ಬೇಡಿಕೆ ಮುಂದಿಟ್ಟರು. ಅದು ಈ ತನಕ ಅನುಷ್ಟಾನಕ್ಕೆ ಬಂದಿಲ್ಲ.

ಕ್ವಾಡ್ ಒಪ್ಪಂದ

ಅಬೆಯ ಆಡಳಿತದ ಆತ್ಯಂತ ಗಮನಾರ್ಹ ಅಂಶ ಎಂದರೆ, ಮಿಲಿಟರೀಕರಣದ ವಿರುದ್ಧ ಜಪಾನಿನ ಐತಿಹಾಸಿಕವಾದ ನೀತಿಗೆ ವಿರುದ್ಧವಾಗಿ ನಿಂತದ್ದು. ಎರಡನೇ ಜಾಗತಿಕ ಯುದ್ಧದ ನಂತರ ಜಪಾನ್ ಈ ಪ್ರದೇಶದಲ್ಲೇ ಅತ್ಯಂತ ತಟಸ್ಥ ನೀತಿಯ ದೇಶವಾಗಿ ಪ್ರಸಿದ್ಧಿ ಪಡೆದಿದೆ. ಅಬೆ ಇದನ್ನು ಸ್ವಲ್ಪ ಮಟ್ಟಿಗಾದರೂ ಬದಲಿಸಲು ಬಯಸಿದ್ದರು.

ಭಾರತದಲ್ಲಿರುವ ನಮಗೆ, ಜಪಾನ್, ಭಾರತ, ಆಸ್ಟ್ರೇಲಿಯಾ ಮತ್ತು ಯುಎಸ್‌ಎ ನಡುವೆ ಸಮನ್ವಯಿತ ವ್ಯೂಹಾತ್ಮಕ ಭದ್ರತಾ ಮಾತುಕತೆಗೆ 2007ರಲ್ಲಿ ಜಪಾನ್ ಮಾಡಿದ್ದ ಪ್ರಯತ್ನಗಳ ಬಗ್ಗೆ ಗೊತ್ತಿದೆ. ಕ್ವಾಡ್ (QUAD- ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್), ಹಲವು ಅಡೆತಡೆಗಳ ಹೊರತಾಗಿಯೂ ಯುಎಸ್‌ಎಯ ಮಿಲಿಟರಿ ಮೈತ್ರಿಕೂಟದ ಪೌರ್ವಾತ್ಯ ವಿಸ್ತರಣೆಯ ಭಾಗವಾಗುವ ಎಲ್ಲಾ ಆಶಯಗಳನ್ನು ಹೊಂದಿತ್ತು. ಅದರ ಸ್ಥಾಪನೆಗೆ ಚೀನಾದ ವಿರೋಧದ ಕಾರಣದಿಂದಾಗಿ ಈ ಪ್ರಸ್ತಾಪದಲ್ಲಿ ಚೀನಾದ ಉಲ್ಲೇಖವನ್ನು ಮರೆಮಾಚಲು ಯತ್ನಿಸಿದ್ದ ಜಪಾನ್, ನಂತರ ಈ ಪ್ರಸ್ತಾಪವನ್ನೇ ನೆನೆಗುದಿಗೆ ತಳ್ಳಿ ಸುಮ್ಮನೇ ಕುಳಿತಿತ್ತು. ಅದಕ್ಕೆ ಮತ್ತೆ ಜೀವ ಬಂದದ್ದು ಒಂದು ದಶಕದ ನಂತರ- ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆವರ ಚೀನಾ ವಿರೋಧಿ ಧೋರಣೆಯನ್ನು ಜಪಾನ್ ಬಂಡವಾಳ ಮಾಡಿಕೊಂಡಾಗ. ಈ ನಿಟ್ಟಿನಲ್ಲಿ ಶಿಂಜೋ ಅಬೆಯ ನಿಲುವು ಯುಎಸ್‌ಎಯ ಹಿತಾಸಕ್ತಿಗಳಿಗೆ ಅನುಗುಣವಾಗಿಯೇ ಇತ್ತು. ಕೆಲವರು ಕಾಡ್‌ಅನ್ನು ಏಷ್ಯಾದ ನ್ಯಾಟೋ ಎಂದು ಕರೆದಿದ್ದಾರೆ. ಇದರ ಪ್ರಕಾರ ಜಪಾನ್ ಯುಎಸ್‌ಎಯ ಸೇನಾನೆಲೆಗಳಿಗೆ; ಬಹುಶಃ ಪರಮಾಣು ಅಸ್ತ್ರಗಳಿಗೂ ಆಶ್ರಯ ನೀಡಬಹುದು.

ಈ ಪ್ರದೇಶದಲ್ಲಿ ಭಾರತ ಮತ್ತು ಜಪಾನಿನ ಸಾಮೂಹಿಕ ಪ್ರಭಾವವನ್ನು ವಿಸ್ತರಿಸುವ ಮಾತುಕತೆಗಳೂ ನಡೆದಿದ್ದವು. ಆಫ್ರಿಕಾದಲ್ಲಿ ಮೈತ್ರಿಕೂಟದ ಜಾಲವನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತೂ ಮಾತುಕತೆಗಳು ನಡೆದಿದ್ದವು. ಆದರೆ, ಈ ಮಾತುಕತೆಗಳು ಪ್ರಗತಿ ಕಾಣಲಿಲ್ಲ.

ಅಬೆಯ ನಂತರ

ನಂತರದ ಚುನಾವಣೆಯಲ್ಲಿ ಶಿಂಜೋ ಆಬೆಯ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯು ಮೂರನೇ ಒಂದರಷ್ಟು ಜನಮತ ಪಡೆದು, ಡಯಟ್‌ನ (ಸಂಸತ್ತು) 248 ಸ್ಥಾನಗಳಲ್ಲಿ 119 ಸ್ಥಾನಗಳನ್ನು ಗೆದ್ದಿತು. ಇದು ಡಯಟ್‌ನಲ್ಲಿ ಈ ಪಕ್ಷವನ್ನು ಅತೀ ದೊಡ್ಡ ಪಕ್ಷವನ್ನಾಗಿ ಮಾಡಿದೆ. ಇದೊಂದು ಪ್ರಬಲವಾದ ಬದಲಾವಣೆಯೇನಲ್ಲ. ಆದುದರಿಂದ, ಚುನಾವಣೆಯ ಫಲಿತಾಂಶವನ್ನು ಅಬೆಯ ಹತ್ಯೆಯ ಜೊತೆಗೆ ತಳಕುಹಾಕಲು ಯಾವುದೇ ಕಾರಣಗಳಿಲ್ಲ. ಅಬೆ ಬಿಟ್ಟುಹೋದ ಪರಂಪರೆ ಸಂಕೀರ್ಣವಾಗಿದೆ. ಅವರ ಮಿಲಿಟರಿ ಮತ್ತು ಆರ್ಥಿಕ ಧೋರಣೆಗಳು ಈಗಾಗಲೇ ನೆಲೆಯೂರಿರುವ ಪ್ರವೃತ್ತಿಯ ಪರಿಣಾಮಗಳಾಗಿವೆ. ಆಡಳಿತದ ಕುರಿತು ಅವರ ’ಅಬೆನಾಮಿಕ್ಸ್’ ಹಾದಿಯು ಈಗಾಗಲೇ ಅವರ ಬೆಂಬಲಿಗರ ನಡುವೆಯೂ ಬಹುಮಟ್ಟಿಗೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಪ್ರಧಾನಿಯಾಗಿ ಅವರ ದೀರ್ಘಕಾಲದ ಆಡಳಿತವನ್ನು ಸ್ಥಿರತೆಯ ಕಾಲಘಟ್ಟ ಎಂದು ಕಾಣಬಹುದಾದರೂ, ಜಪಾನಿನ ಮಟ್ಟಿಗೆ ಅದು ಕ್ಷಣಿಕವೇ. ಸಂಪ್ರದಾಯವಾದಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ- ಶಿಂಜೋ ಅಬೆ ಇದ್ದರೂ, ಇಲ್ಲದಿದ್ದರೂ ಅಧಿಕಾರದಲ್ಲಿ ಮುಂದುವರಿದಿದೆ.

ಕಿಶೋರ್ ಗೋವಿಂದ
ಕನ್ನಡಕ್ಕೆ; ನಿಖಿಲ್ ಕೋಲ್ಪೆ


ಇದನ್ನೂ ಓದಿ: ಇಸ್ರೇಲ್‌ನ ಅತೀ ದೊಡ್ಡ ಬಂದರು ‘ಅದಾನಿ ಗ್ರೂಪ್’ ವಶಕ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...