Homeಅಂಕಣಗಳುಪ್ರತಾಪ ಸಿಮ್ಮ ’ಆರೆಸೆಸ್ ಆಳ ಮತ್ತು ಅಗಲ’ ಓದಿದ್ರಾ?

ಪ್ರತಾಪ ಸಿಮ್ಮ ’ಆರೆಸೆಸ್ ಆಳ ಮತ್ತು ಅಗಲ’ ಓದಿದ್ರಾ?

- Advertisement -
- Advertisement -

ದೇವನೂರ ಮಹದೇವರು ಸದ್ಯದ ಸರಕಾರ ನಡೆಸಿದ ಪಠ್ಯ ಪರಿಷ್ಕರಣೆ ಹಗರಣದ ಹಿನ್ನೆಲೆಯಲ್ಲಿ ’ನನ್ನ ಕಥನದ ಭಾಗವನ್ನು ಪಠ್ಯದಲ್ಲಿ ಸೇರಿಸದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ, ಸೇರಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಸಜ್ಜನನಿಗೆ ಬಂದ ಸಿಟ್ಟನ್ನು ಗ್ರಹಿಸಿದ ಉಳಿದ ಲೇಖಕರು ತಮ್ಮ ಕಥೆ-ಲೇಖನ-ಪದ್ಯಗಳನ್ನು ಪಠ್ಯದಿಂದ ಕೈಬಿಡಿ ಎಂಬ ಹೇಳಿಕೆ ಕೊಟ್ಟರು. ಇದರಿಂದ ಬೆಚ್ಚಿದ ಆರೆಸ್ಸೆಸ್ಸಿಗರು ದೇವನೂರರ ಮೇಲೆಯೇ ದಾಳಿ ಮಾಡಿದರು. ಅದರಲ್ಲಿ ಮುಖ್ಯವಾಗಿ ಪ್ರತಾಪ ಸಿಮ್ಮ, ’ದೇವನೂರರು ಕತೆ ಲೇಖನ ಬರೆದು ಹದಿನೈದು ವರ್ಷಗಳಾಗಿವೆ’, ಅಂದರೆ ಅವರು ಒಂದು ರೀತಿ ನಿವೃತ್ತ ಲೇಖಕರು ಎಂಬಂತೆ ಮಾತನಾಡಿದರು. ಅಲ್ಲಿಗೆ ಪ್ರತಾಪ ಸಿಮ್ಮ ದೇವನೂರನ್ನ ಓದಿಕೊಂಡಿದ್ದಾರೆ ಎಂದಾಯ್ತು. ಹದಿನೈದು ವರ್ಷದಿಂದ ಏನನ್ನೂ ಬರೆದಿಲ್ಲ ಎಂದು ದೂರಿದ ಪ್ರತಾಪ ಸಿಮ್ಮಗೆ ದೇವನೂರರು “ಆರೆಸೆಸ್ಸ್ ಆಳ ಮತ್ತು ಅಗಲ” ಬರೆದು ಮುಖಕ್ಕೆ ಹಿಡಿದಿದ್ದಾರೆ. ಈಗ ಸಿಮ್ಮ ಅದನ್ನ ಓದಿ ತಮ್ಮ ಬೌದ್ಧಿಕ ದಾರಿದ್ರ್ಯವನ್ನ ನೀಗಿಕೊಳ್ಳಬಹುದು. ಸಾಮಾನ್ಯವಾಗಿ ಶ್ರೇಷ್ಠ ಪತ್ರಕರ್ತನ ಗುಣ ಯಾವುದೆಂದರೆ ಆತ ಪೂರ್ವಗ್ರಹವಿಲ್ಲದವನಾಗಿರುತ್ತಾನೆ. ಸತ್ಯ ಸಂಗತಿಯ ಪ್ರತಿಪಾದನೆಯೇ ಆತನ ಗುರಿಯಾಗಿರಬೇಕು. ಅದಕ್ಕಾಗಿ ಆತ ಯಾವ ತ್ಯಾಗಕ್ಕಾದರೂ ಸಿದ್ಧನಾಗಿರುತ್ತಾನೆ. ಹೊಟ್ಟೆಪಾಡಿಗೆ ಏನನ್ನಾದ್ರೂ ಮಾಡಲು ಅಥವಾ ಯಾರನ್ನಾದರೂ ದೂಶಿಸಿ ಬಲಿಕೊಡಲು ತಯಾರಿರುವುದಿಲ್ಲ. ಅಂತ ಸಂದರ್ಭ ಬಂದರೆ ವೃತ್ತಿಯ ಘನತೆಗಾಗಿ ಹಿಂದೆ ಸರಿಯುತ್ತಾನೆ ಬಂಢ ಬಾಳನ್ನು ಬದುಕುವುದಿಲ್ಲವಂತಲ್ಲಾ, ಥೂತ್ತೇರಿ.

*****

ಈ ಪ್ರತಾಪ ಸಿಮ್ಮನ್ನ ಸೃಷ್ಟಿ ಮಾಡಿದ್ದು ದೇವೇಗೌಡರಂತಲ್ಲಾ ನಿಜವೆ? ಆಗ ದೇವೇಗೌಡರು ಸಿದ್ದರಾಮಯ್ಯನನ್ನ ಟೀಕಿಸಿದರೆ ಅದಕ್ಕೆ ಉತ್ತರ ಕೊಡುತ್ತಿದ್ದವರು ವಿಶ್ವನಾಥ. ಗೌಡರು ಸಿದ್ದು ಟೀಕಿಸಿದರೆ ವಿಶ್ವನಾಥ ಕೊಡುವ ಉತ್ತರದಿಂದ ಕೆರಳುತ್ತಿದ್ದ ಗೌಡರು ವಿಶ್ವನಾಥರ ಹುಟ್ಟಡಗಿಸಲು ತೀರ್ಮಾನಿಸಿದರಂತಲ್ಲಾ. ಆಗ ಲೋಕಸಭೆ ಚುನಾವಣೆ ಬಂದೇಬಿಟ್ಟಿತು. ಆರೆಸೆಸ್ಸಿಗರೆಲ್ಲಾ ಸೇರಿ ಪ್ರತಾಪ ಸಿಮ್ಮನ್ನ ಲೋಕಸಭೆ ಕ್ಯಾಂಡೇಟ್ ಮಾಡಿದರು. ದೇವೇಗೌಡರು ಪ್ರಬಲ ಅಭ್ಯರ್ಥಿ ಹಾಕಿದರೆ ಸಿಮ್ಮ ಎಗರಿ ಹೋಗುತ್ತಿದ್ದರು. ಆದರೆ ವಿಶ್ವನಾಥ್ ತೆಗೆಯುವ ಸಂಕಲ್ಪ ಮಾಡಿದ್ದ ಗೌಡರು ಠೇವಣಿ ಉಳಿಸಿಕೊಳ್ಳಲು ಹೋರಾಡುವಂತಹ ವ್ಯಕ್ತಿಯನ್ನ ಕ್ಯಾಂಡಿಡೇಟ್ ಮಾಡಿದರು. ಸಹಜವಾಗಿ ದಳದ ಓಟು ಬಿಜೆಪಿ ಪಾಲಾಗಿ ಅರ್ಧರಾತ್ರಿಯಲ್ಲಿ ನರಸಿಮ್ಮ ಕಾಣಿಸಿಕೊಂಡಂತೆ ಪ್ರತಾಪ ಸಿಮ್ಮನ ಉದ್ಭವವಾಯ್ತಲ್ಲಾ. ದೇವೇಗೌಡರ ಪಾಪಪ್ರಜ್ಞೆ ಕೆಲಸ ಮಾಡಿದ್ದರಿಂದ ಮುಂದೆ ವಿಶ್ವನಾಥರನ್ನ
ಪಾರ್ಟಿಯ ಪ್ರೆಸಿಡೆಂಟ್ ಮಾಡಿದರು. ಅಲ್ಲೂ ನಿಲ್ಲದ ವಿಶ್ವನಾಥ ಬಿಜೆಪಿಯಲ್ಲಿದ್ದರೂ ಆತ್ಮಸಾಕ್ಷಿಯಂತೆ ಮಾತನಾಡುತ್ತಿದ್ದಾರೆ. ಪಾಪ ಸಿದ್ದರಾಮಯ್ಯರಲ್ಲಿ ಉಪಕಾರ ಸ್ಮರಣೆಯಿದ್ದರೆ ವಿಶ್ವನಾಥರನ್ನ ಕೈ ಹಿಡಿದಿದ್ದರೆ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಸದ್ಯ ವಿಶ್ವನಾಥ ಸಿಮ್ಮನಂತಾಗಿಲ್ಲ. ಈಗಲೂ ಗೌಡರು ಮೈಸೂರಿನ ವಿಷಯದಲ್ಲಿ ಮನಸು ಮಾಡಿದರೆ, ಈ ಪೇಪರ್ ಸಿಮ್ಮನನ್ನ ಆರೆಸ್ಸೆಸ್ ಬೈಠಕ್‌ಗೆ ಸೀಮಿತಗೊಳಿಸಬಹುದಂತಲ್ಲಾ, ಥೂತ್ತೇರಿ.

******

ದೇವೇಗೌಡರ ದಳದ ವಿಷಯದಲ್ಲಿ ಜ್ಞಾನೋದಯವಾಗಿರುವ ಕಾಂಗೈ ಪಡೆ ಗೌಡರನ್ನ ಟೀಕಿಸದಂತೆ ಪಿಸುಮಾತಿನ ಚರ್ಚೆ ಮಾಡಿದರಂತಲ್ಲಾ. ಹಾಗೆ ನೋಡಿದರೆ ದೇವೇಗೌಡರು ಕಮ್ಯುನಿಟಿ ನಾಯಕರು, ಅವರಾದ ಮೇಲೆ ಅವರ ಮಗ ಜನಾಂಗದ ಲೀಡರು. ಜನಾಂಗದ ಲೀಡರಾಗಲು ಡಿ.ಕೆ ಶಿವಕುಮಾರ್ ಇನ್ನ ಕಷ್ಟಪಡಬೇಕಿದೆ, ಹಾಗಾಗಿ ಗೌಡರನ್ನ ಟೀಕಿಸುವ ಸಿದ್ದು ಪಡೆಯ ನಡವಳಿಕೆ ಅವರಿಗೂ ಇಷ್ಟವಿಲ್ಲ. ಮುಂದಿನ ರಾಜಾಕಾರಣ ಹೇಗೋ ಏನೋ ಸಿದ್ದರಾಮಯ್ಯ ನನ್ನ ಬದಿಗೆ ಸರಿಸಿ ಬೇರೆಯವರನ್ನ ಮುಖ್ಯಮಂತ್ರಿ ಮಾಡಲು ಮುಂದಾದರೆ, ನಮ್ಮ ಸಹಕಾರ ಇರುತ್ತದೆ ಎಂದು ಗೌಡರೇನಾದರೂ ಹೇಳುವ ಪ್ರಮೇಯ ಬಂದರೆ, ಅವರ ಮನೆ ಬಾಗಿಲಿಗೆ ಹೋಗಿ ಬೆಲ್ಲು ಒತ್ತುವ ಸ್ಥಿತಿ ಡಿ.ಕೆ.ಶಿಗೆ ಒದಗಿಬರಬಹುದು. ಇದೆಲ್ಲವನ್ನ ಗ್ರಹಿಸಿರುವ ಕಾಂಗ್ರೆಸ್ ಗೌಡರ ಕುಟುಂಬದ ಟೀಕೆಗೆ ಕಡಿವಾಣ ಹಾಕಿದೆಯಂತಲ್ಲಾ. ಸಾಮಾನ್ಯ ಮನುಷ್ಯರ ಮನಸ್ಸನ್ನು ಗ್ರಹಿಸಿದ್ದಾರೆ ಅವರು ತಮ್ಮ ಜನಾಂಗದ ನಾಯಕನನ್ನ ಇಷ್ಟಪಡುತ್ತಾರೆ. ನಾಯಕನ ಬಗೆಗಿನ ಟೀಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಸಿದ್ದರಾಮಯ್ಯನವರ ಟೀಕೆ ಜನಾಂಗದ ಲೀಡರುಗಳಿಗೆ ತಲುಪುವುದರ ಬದಲು ಜನಾಂಗವನ್ನೇ ತಲುಪಿದರೆ ಅದು ಡಿ.ಕೆ.ಶಿಗೆ ಕೊಡುವ ಹೊಡೆತವಾಗುತ್ತದಂತಲ್ಲಾ. ಇಂತಹ ಸಾಮಾನ್ಯ ತಿಳಿವಳಿಕೆ ಕಾಂಗ್ರೆಸ್ಸಿಗರಲ್ಲಿ ಮೂಡದಿದ್ದರೆ ತಮ್ಮ ವಿರೋಧಿಗಳನ್ನು ಸೋಲಿಸಲು ಕುಮಾರಣ್ಣ ಹಿಂದಿನಂತೆ ಬಿಜೆಪಿಗಳ ಜೊತೆಯಲ್ಲೂ ಕೈ ಜೋಡಿಸುವ ಅಪಾಯವಿದೆಯಂತಲ್ಲಾ, ಥೂತ್ತೇರಿ.

******

ಇದುವರೆಗೂ ಕರ್ನಾಟಕದಲ್ಲಿ ಬಿಜೆಪಿಗಳಿಂದ ನಡೆದ ಯಾವುದೇ ಪ್ರಮಾದಗಳಿಗೂ ಬಿಜೆಪಿಗಳು ಕ್ಷಮೆಯಾಚಿಸಿಲ್ಲ. ತಮ್ಮ ಪಾರ್ಟಿ ಜನರ ಮೂರ್ಖ ಹೇಳಿಕೆಗಳನ್ನ ಖಂಡಿಸಿಲ್ಲವಂತಲ್ಲಾ. ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ನಡೆದ ’ಜೊತೆಗಿರುವನು ಚಂದಿರ’ ನಾಟಕವನ್ನ ಮಧ್ಯದಲ್ಲೇ ತಡೆದು ಭರತ ಮಾತೆಯ ಘೋಷಣೆ ಕೂಗಿದ ಕೃತ್ಯವನ್ನ ನಾಡಿನ ನಾಟಕಪ್ರಿಯ ಜನಗಳು ಒಕ್ಕೊರಲಿಂದ ಖಂಡಿಸಿದರೂ ಬಿಜೆಪಿಗಳು ಬಾಯಿಬಿಟ್ಟಿಲ್ಲ. ಅಷ್ಟಕ್ಕೂ ಈ ನಾಟಕ ಇದಕ್ಕೂ ಮೊದಲೆ ಶಿವಮೊಗ್ಗದಲ್ಲಿ ಪ್ರದರ್ಶನಗೊಂಡಿತ್ತು. ಆದರೆ ಆನವಟ್ಟಿಯ ಕೆಲ ಅಜ್ಞಾನಿಗಳು ನಾಟಕದೊಳಗಿನ ತಿರುಳನ್ನು ಗ್ರಹಿಸದೆ ಹೋದರಂತಲ್ಲಾ. ಪ್ರೇಕ್ಷಕರು ಮತ್ತು ಪಾತ್ರಧಾರಿಗಳು ಭಾವನಾತ್ಮಕವಾಗಿ ಸ್ಪಂದಿಸಿ ಆರ್ದ್ರತೆಯಿಂದ ಕಂಬನಿ ಮಿಡಿಯುವ ಸಮಯಕ್ಕೆ ಮೂವರು ಬಂದು “ನಾಟಕ ನಿಂತಿದೆ ಮನೆಗೆ ಹೋಗಿ” ಎಂದಕೂಡಲೇ ನೂರಾರು ಜನ ಪ್ರೇಕ್ಷಕರು ಸುಮ್ಮನೆ ಎದ್ದು ಹೋಗಿದ್ದಾರೆಂದರೆ ಈ ಸಮಾಜಕ್ಕೆ ಯಾವುದೋ ಅರ್ಥೈಸಲಾಗದ ಗರಬಡಿದಿದೆ. ಕೇವಲ ಮೂರು ಜನ ನೂರಾರು ಜನ ಪ್ರೇಕ್ಷಕರನ್ನ ಓಡಿಸುತ್ತಾರೆಂದರೆ ಖಂಡುಗ ಹಾಲನ್ನು ಹಾಳುಮಾಡುವ ಶಕ್ತಿ ಒಂದು ತೊಟ್ಟು ವಿಷಕ್ಕಿದೆ ಎಂದಾಯ್ತು. ಯಾತಕ್ಕಾಗಿ ನಾಟಕ ನಿಲ್ಲಿಸಬೇಕು ಎಂದು ಯಾರು ಕೇಳಲಿಲ್ಲ. ನಾವ್ಯಾಕೆ ನಾಟಕ ನಿಲ್ಲಿಸಬೇಕು ಎಂದು ಯಾರು ಕೇಳಿಲ್ಲ. ನಾವ್ಯಾಕೆ ನಾಟಕ ಮುಂದುವರಿಸಬಾರದೆಂದು ಪಾತ್ರಧಾರಿಗಳೂ ಕೇಳಿಲ್ಲ ಎಂದಾರೆ ಈ ನಾಡಿಗೆ ಕೇಡುಗಾಲ ವಕ್ಕರಿಸಿದೆ. ಕೇಡುಗಾಲ ಅಂದರೆ ಪುಸ್ತಕವನ್ನ ಓದದೆ ನಿಷೇಧಿಸುವುದು, ನಾಟಕವನ್ನ ನೋಡದೆ ತಡೆಯುವುದು, ಇಂತಹ ಸರಣಿ ಘಟನೆಗಳು ನಡೆಯುವುದೇ ಕೇಡುಗಾಲವಂತಲ್ಲಾ, ಥೂತ್ತೇರಿ.

******

ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಬೃಹಸ್ಪತಿಗಳು ಪಠ್ಯಕ್ಕೆ ಹಿಂದೂ ಹತ್ಯಾಕಾಂಡ ಸೇರಲಿ ಎಂಬ ಶಿಫಾರಸ್ಸು ಮಾಡಿದ್ದಾರಂತಲ್ಲಾ. ನಿಜಕ್ಕೂ ಇದು ಒಳ್ಳೆಯ ಶಿಫಾರಸ್ಸು. ಹಾಗೆಯೇ ಈ ದೇಶದಲ್ಲಿ ನಡೆದ ದಲಿತ ಹತ್ಯಾಕಾಂಡಗಳು ಸೇರುವುದು ಒಳ್ಳೆಯದು. ಮುಖ್ಯವಾಗಿ ಬೆಲ್ಜಿ ಮತ್ತು ಪಿಪ್ರಾದಲ್ಲಿ ನಡೆದ ದಲಿತ ದಹನ ಸೇರಲೇಬೇಕು. ಏಕೆಂದರೆ ಬೆಲ್ಜಿಯಲ್ಲಿ ದಲಿತರ ಕೇರಿಗೆ ಬೆಂಕಿ ಹಚ್ಚಿದಾಗ ಒಂದು ಮಗು ಗುಡಿಸಲಿನಿಂದ ತಪ್ಪಿಸಿಕೊಂಡು ಓಡಿಬರುತ್ತದೆ. ಬೆಂಕಿ ಹಚ್ಚಿದವನೊಬ್ಬ ಆ ಮಗುವನ್ನು ಹಿಡಿದು ಮತ್ತೆ ಬೆಂಕಿಗೆ ಎಸೆಯುತ್ತಾನೆ. ನಮ್ಮ ನಾಡಿನಲ್ಲೇ ಜನತಾದಳ ಅಧಿಕಾರದಲ್ಲಿದ್ದಾಗ ಕಂಬಾಲಪಲ್ಲಿಯಲ್ಲಿ ದಲಿತರ ಗುಡಿಸಲಿಗೆ ಬೆಂಕಿಹಚ್ಚಿ ಅವರನ್ನ ಬೇಯಿಸಲಾಯ್ತು. ದಲಿತರನ್ನ ಸುಟ್ಟ ವಾಸನೆ ಮುಗಿಲಿಗೆಲ್ಲಾ ಹರಡಿತ್ತು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ನ್ಯಾಯಾಲಯ ಅಪರಾಧಿಗಳನ್ನ ಖುಲಾಸೆ ಮಾಡಿತು. ಪಠ್ಯಪುಸ್ತಕಗಳಲ್ಲಿ ತಾರತಮ್ಯ ಇರಬಾರದು. ಅದರಲ್ಲಿ ಗೋಧ್ರಾ ರೈಲಿನ ಅಗ್ನಿಯೂ ಇರಬೇಕು. ಗುಜರಾತಿನ ನರಮೇಧವೂ ಇರಬೇಕು. ಪ್ರಧಾನವಾಗಿ ಅಸ್ಪೃಶ್ಯತೆ ಕಾರಣಕ್ಕೆ ಹಿಂದೂಗಳು ನಾವೆಲ್ಲಾ ಒಂದೇ ಎನ್ನುತ್ತ ಹಿಂದೂಗಳನ್ನೆ ಕೊಂದಿರುವ ಇತಿಹಾಸದ ಸೇರ್ಪಡೆ ಇರಲೇಬೇಕು. ಮುಖ್ಯವಾಗಿ ಜಲಿಯನ್‌ವಾಲಾಬಾಗ್ ಹತ್ಯಾಕಾಂಡ, ಕಿತ್ತೂರ ಚೆನ್ನಮ್ಮನನ್ನ ಸಾಯಿಸಿದ್ದು, ಸಂಗೊಳ್ಳಿರಾಯಣ್ಣನನ್ನ ನೇತುಹಾಕಿದ್ದೆಲ್ಲಾ ಅಲ್ಲದೆ ಇತ್ತೀಚಿನ ಮುಸ್ಲಿಂ ಮತ್ತು ದಲಿತರ ಹತ್ಯಾಕಾಂಡಗಳು ಇರಲೇಬೇಕಾಗುತ್ತದೆ ಎಂದು ಇತಿಹಾಸ ತಜ್ಞರು ತಮ್ಮ ಹತಾರ ತೆಗೆಯತೊಡಗಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅದೃಶ್ಯ ಮತದಾರರಿಗೆ ಮೋದಿ ಹೆದರುತ್ತಾರೆ, ಅದಕ್ಕಾಗಿಯೇ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

0
'ಲೋಕಸಭೆ ಚುನಾವಣೆಯ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಶ್ಯ ಮತದಾರರ ಭಯವಿದೆ, ಅದಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ' ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ...