Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-5: ಗೊಬ್ಬರೋತ್ಪಾದಕ ಗೆದ್ದಲುಗಳಿಗೊಂದು ಸಲಾಂ

ಹುತ್ತಗಳು ನೆಲಕ್ಕೆ ಮಳೆ ನೀರಿಂಗಿಸುವ ಅತ್ಯುತ್ತಮ ದಾರಿ.. ನಮ್ಮ ತೋಟದಲ್ಲಿ ಈ ಪಾಟಿ ಗೆದ್ದಲು ಇಲ್ಲದಿದ್ದರೆ ನಾವು ಆರಾಮವಾಗಿ ತೋಟ ಮಾಡಲು ಆಗುತ್ತಲೇ ಇರಲಿಲ್ಲ.

- Advertisement -
- Advertisement -

ನೀಟಾಗಿ ತೋಟ ಇಡುವುದೆಂದರೆ ಸಕಲ ಸಾವಯವ ವಸ್ತುಗಳನ್ನು ಅಲ್ಲಲ್ಲಿ ಗುಡ್ಡೆ ಹಾಕಿ ಸುಟ್ಟು, ತೋಟದ ಬದುಗಳನ್ನೆಲ್ಲಾ ಗುಡಿಸಿ ಅಂದವಾಗಿ ಕಾಣುವಂತೆ ಇಟ್ಟುಕೊಳ್ಳುವುದು ಎಂದು ನಂಬಿದ್ದ ನಮ್ಮಪ್ಪ ಹಾಗೇ ಇಟ್ಟುಕೊಂಡಿದ್ದರು. “ಇವರ ಅಪ್ಪ ಎಷ್ಟು ಅಚ್ಚುಕಟ್ಟಾಗಿ ತೋಟ ಇಟ್ಟುಕೊಂಡಿದ್ದರು, ನಡುಮನೆಯಂಥಾ ತೋಟವನ್ನು ಈ ಮನುಷ್ಯ ತಿಪ್ಪೆ ಗುಂಡಿ ಮಾಡಿ ಗಬ್ಬೆಬ್ಬಿಸಿದ್ದಾನೆ, ಇವನ ಪ್ರಯೋಗಕ್ಕಷ್ಟು ಬೆಂಕಿ ಹಾಕ, ಅಡವಾಗಿ ಸಂಬಳ ಬರುತ್ತೆ ಏನೇನಾದರು ಮಾಡಂಗಾಗುತ್ತೆ..” ಇತ್ಯಾದಿ ಬೈಗುಳಗಳನ್ನು ನಮ್ಮ ತೋಟದ ದಾರಿಯಲ್ಲಿ ಸಾಗುವ ಜನರು ಬಿತ್ತರಿಸುವಾಗ, ನಾನು ಬೇಲಿ ಸಾಲಲ್ಲಿ ಕೂತು ಆಲಿಸಿದ್ದೇನೆ. ಇದು ನನ್ನ ಭಾಗ್ಯ ಎಂದೇ ತಿಳಿದಿದ್ದೇನೆ. ಏಕೆಂದರೆ ಹಾಗೆ ಬೈದವರೇ ನಮ್ಮ ತೋಟವನ್ನು ಅನುಸರಿಸಿ ದಾರಿಗೆ ಬಂದಿದ್ದಾರೆ.

ಅವರ ಈ ಅಂಬೋಣಕ್ಕೆ ಕಾರಣವೂ ಇತ್ತು. ಮೊದಲು ನಾವು ತೋಟದ ಉಳುಮೆ ಬಿಟ್ಟಾಗ ಎಲ್ಲಾ ತೋಟದ ಉಳಿಕೆಯನ್ನು ಮರದ ಬುಡದಲ್ಲೆ ರಾಶಿಯಾಗುವಂತೆ ಬಿಟ್ಟ ಪರಿಣಾಮ ಅತಿಯಾಗಿ ಸೆದಾಲು ಉಂಟಾಯಿತು. ಅದರ ಮಧ್ಯದಲ್ಲಿ ಅನಗತ್ಯ ತರಾವರಿ ಗಿಡಗಳನ್ನು ಬೆಳೆಯಲು ಬಿಟ್ಟ ಕಾರಣ ತೋಟ ಕಾಡಿನ ಸ್ವರೂಪಕ್ಕೆ ತಲುಪಿತ್ತು. ನಡುಮನೆಯಂತಿದ್ದ ತೋಟವೀಗ ಒಡೆಯರಿಲ್ಲದೆ ರಜ ತುಂಬಿದ ತೋಟವಾಗಿ ಅವರಿಗೆ ಕಾಣತೊಡಗಿತ್ತು. ಕಾಲ ಕಳೆದಂತೆ ನಮಗೂ ಅದರ ಬಿಸಿ ತಟ್ಟಿತು. ತೋಟದೊಳಗೆ ಕೆಲಸ ಮಾಡುವುದು ಕಷ್ಟವಾಯಿತು. ಹುಳು ಹುಪ್ಪಡಿ ಮತ್ತು ಆಕಸ್ಮಿಕ ಬೆಂಕಿಯ ಭಯಗಳು ಸೇರಿಕೊಂಡು ನಮ್ಮನ್ನು ಎಚ್ಚರಿಸಿದವು.

ನಾವೀಗ ತೋಟದ ಉಳಿಕೆಯನ್ನು ನೆಲಕ್ಕೆ ವ್ಯವಸ್ಥಿತವಾಗಿ ಹೊದಿಸುತ್ತೇವೆ. ಅತಿ ಹೆಚ್ಚಾದ ಸಾವಯವ ಉಳಿಕೆಯನ್ನು ಬುಡದಿಂದ ತೆಗೆದು ಕಡಗಿಗೆ ಹಾಕುತ್ತೇವೆ. ಈ ಎಲ್ಲ ಉಳಿಕೆ ನೆಲದ ಸಂಪರ್ಕಕ್ಕೆ ಬರುವ ಕಾರಣ ಗೆದ್ದಲು ಆಯಾ ವರ್ಷದ ಉಳಿಕೆಯನ್ನು ಆಯಾ ವರ್ಷವೇ ತಿಂದು ಮಣ್ಣು ಮಾಡುತ್ತವೆ. ಅನಗತ್ಯ ಗಿಡಗಳನ್ನು ಕಿತ್ತುಹಾಕಿ ತಿರುಗಾಡಲು ಅನುಕೂಲ ಮಾಡಿಕೊಳ್ಳುತ್ತೇವೆ.

ಈಗ ತೋಟ ನೋಡಿದವರು ಮೊದಲಿನಂತೆ ಬೈಯ್ಯದೆ ಒಪ್ಪುವುದಕ್ಕೆ ಮನಸ್ಸು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ತಾವೂ ಬೆಳೆಗಳ ಉಳಿಕೆಗಳನ್ನು ಸುಡುವುದನ್ನು ನಿಲ್ಲಿಸಿ ಗೆದ್ದಲಿಗೆ ಉಣಿಸುತ್ತಿದ್ದಾರೆ. ಈಗವರಿಗೆ ಗೊತ್ತಾಗಿದೆ ಸುಟ್ಟರೆ ಸಿಕ್ಕುವುದು ಬೂದಿಯೆಂದು, ತೋಟ ಸುಡುಗಾಡಾಗುವುದೆಂದು. ತೋಟ ಸ್ವಲ್ಪ ಅಸ್ತವ್ಯಸ್ತವಾಗಿದ್ದರೂ ಪರವಾಗಿಲ್ಲವೆಂಬ ತಿಳುವಳಿಕೆ ಅವರಿಗೀಗ ಬಂದಿದೆ.

ಕೆಲವರು ಇಂಥ ಸಾವಯವ ಉಳಿಕೆಗಳನ್ನು ಪುಡಿಮಾಡಲು ದೊಡ್ಡ ಮಿಷನ್‌ ತಂದು ಪ್ರಯತ್ನಿಸಿದರು. ಹೀಗೆ ಮಾಡದಿದ್ದರೆ ತೆಂಗಿನ ಎಡಮಟ್ಟೆ, ಕುರಂಬಳೆ, ಮಟ್ಟೆ ಇತ್ಯಾದಿಗಳು ಕರಗುವುದಿಲ್ಲವೆಂಬುದು ಇವರ ಅಂಬೋಣವಾಗಿತ್ತು. ಆದರೆ ಇದು ಬಲು ಖರ್ಚಿನ, ಅತಿ ಶ್ರಮದ ಬಾಬ್ತು. ನಿಜ, ಎಡಮಟ್ಟೆಗಳು ಬೇಗ ಕರಗುವುದಿಲ್ಲ, ಅದಕ್ಕೆ ನಾವು ಈ ಎಡಮಟ್ಟೆಗಳನ್ನು ಬೇಲಿ ಸಾಲಲ್ಲಿ ವ್ಯವಸ್ಥಿತವಾಗಿ ಒಟ್ಟುತ್ತೇವೆ. ಅವು ಅಲ್ಲಿ ನಿಧಾನವಾಗಿ ಗೆದ್ದಲು ಪಾಲಾಗಿ ಗೊಬ್ಬರವಾಗುತ್ತದೆ. ಬೆಟ್ಟಕ್ಕೆ ಕಲ್ಲು ಹೊರುವುದು ತಪ್ಪುತ್ತದೆ. ತೋಟದೊಳಗೇ ಗೊಬ್ಬರ ಉತ್ಪಾದನೆಯಾಗಿ ಮೇಲೆ ಫಲ ಪಲ್ಲವಿಸುವ ವಿಸ್ಮಯವಿದು.

ಈಗ ನಮ್ಮ ತೋಟದ ಸುತ್ತಮುತ್ತಲ ರೈತರಿಗೆ ಸುಡುವುದರ ನೋವು ಮತ್ತು ಸಾವು ಅರ್ಥವಾಗಿದೆ. ಅವರು ಸುಡುತ್ತಿದ್ದುದು ಕೇವಲ ತೆಂಗಿನ ಉಳಿಕೆಗಳಷ್ಟೇ ಅಲ್ಲ, ನಮಗೆ ಉಪಕಾರಿಯಾದ ಗೆದ್ದಲನ್ನು ಇನ್ನಿತರ ಜೀವಿಗಳನ್ನು ಎಂಬ ಅರಿವು ಉಂಟಾಗಿದೆ. ಅದಕ್ಕೀಗ ಅವರು ಬೆಂಕಿಬೊಮ್ಮರ ಸ್ಥಾನಕ್ಕೆ ರಾಜಿನಾಮೆ ಬಿಸಾಕಿದ್ದಾರೆ. ಗೆದ್ದಲು ಸಂಭ್ರಮದಿಂದ ತೋಟಕ್ಕೆ ಗೊಬ್ಬರ ಉತ್ಪಾದಿಸಿ ಕೊಡುತ್ತಿವೆ. ಅವುಗಳಿಗೆ ಸಲಾಂ ಹೇಳಲು ಬೇರೆ ಕಾರಣ ಇನ್ನೇನು ಬೇಕು? ಆದರೂ ಮುಳ್ಳು ಇನ್ನಿತರ ಕಸಗಳನ್ನು ಸುಡುವುದು ಮುಂದುವರಿದಿದೆ. ಏನನ್ನೂ ಸುಡುವ ಅಗತ್ಯವಿಲ್ಲ, ಬಂಡೆಯೇ ದಿನಪತ್ತಿನ ಮೇಲೆ ಕರಗುತ್ತದೆ ಎಂದರೆ ಇದ್ಯಾವ ಲೆಕ್ಕ?

ಎಷ್ಟೋ ಜನ ಗೆದ್ದಲು ಎಂದರೆ ಸಾವು ಎಂದು ತಿಳಿಯುತ್ತಾರೆ. ಗೆದ್ದಲು ಎಂದರೆ ಹುತ್ತದತ್ತ ಇವರ ಚಿತ್ತ ಹರಿಯುತ್ತದೆ, ಹಾವುಗಳು ಇವರನ್ನು ಸುತ್ತಿಕೊಳ್ಳುತ್ತವೆ, ಗೆದ್ದಲು ಎಂದರೆ ನಾಶ ಎಂದೆ ಇವರ ಸ್ವಷ್ಟ ನಿಲುವು. ಆದರೆ ವಾಸ್ತವವೇ ಬೇರೆ. ಹುತ್ತಗಳು ನೆಲಕ್ಕೆ ಮಳೆ ನೀರಿಂಗಿಸುವ ಅತ್ಯುತ್ತಮ ದಾರಿಗಳೆಂದು ಅವರಿಗೆ ಗೊತ್ತಿಲ್ಲ. ನಿಮ್ಮ ಹೊಲ ತೋಟಗಳಲ್ಲಿ ಗೆದ್ದಲು ಒಣಗಿದ ಎಲೆ, ಗರಿ, ತೊಗಟೆ ಮುಂತಾದ ಪದಾರ್ಥಗಳನ್ನು ತಿಂದು ಬದುಕುತ್ತವೆ. ಇದರಿಂದ ಯಾರಿಗೂ ಯಾವ ತೊಂದರೆಯೂ ಇಲ್ಲ. ಇವುಗಳನ್ನು ಆಜನ್ಮ ವೈರಿಗಳೆಂದು ಭಾವಿಸುವುದು ತಪ್ಪು. ಅನೇಕರಿಗೆ ತಮ್ಮ ವೈರಿ ಯಾರೆಂದು ತಿಳಿಯುವುದೇ ಇಲ್ಲ, ತಮ್ಮ ಮಿತ್ರರನ್ನೇ ವೈರಿಗಳೆಂದು ತಿಳಿದು ಸುಟ್ಟು ಹಾಕುತ್ತಾರೆ. ನಮ್ಮ ತೋಟದಲ್ಲಿ ಈ ಪಾಟಿ ಗೆದ್ದಲು ಇಲ್ಲದಿದ್ದರೆ ನಾವು ಆರಾಮವಾಗಿ ತೋಟ ಮಾಡಲು ಆಗುತ್ತಲೇ ಇರಲಿಲ್ಲ. ಕಡಿಮೆ ಖರ್ಚು ಒಳ್ಳೆ ಫಸಲು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ. ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ತೋಟವನ್ನು ಸುಡುಗಾಡು ಮಾಡದೆ ಕಾಯುವ ಕಾಡು ಮಾಡುವ ಸಂದೇಶದೊಂದಿಗೆ ಕೃಷಿಯ ಸಂತೋಷ ಸಾರುವ ಸುಂದರ ಲೇಖನ.
    ಧನ್ಯವಾದಗಳು ಬಿಳಿಗೆರೆ ಸರ್ ಮತ್ತು ಗೌರಿ.ಕಾಮ್

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...