Homeಅಂಕಣಗಳುನೂರರ ನೋಟ: ಸಾಕಿನ್ನು ನಿರಂಕುಶಪ್ರಭುತ್ವ ರೈತರ ಬೇಡಿಕೆಗಳನ್ನು ಪೂರೈಸಿ, ಗೌರವಿಸಿ

ನೂರರ ನೋಟ: ಸಾಕಿನ್ನು ನಿರಂಕುಶಪ್ರಭುತ್ವ ರೈತರ ಬೇಡಿಕೆಗಳನ್ನು ಪೂರೈಸಿ, ಗೌರವಿಸಿ

- Advertisement -
- Advertisement -

ಮೋದಿಯವರ ನಿರಂಕುಶಪ್ರಭುತ್ವ ಕೊರೊನಾವನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಂಡು, ತನ್ನನ್ನು ವಿರೋಧಿಸುವವರನ್ನು ದಮನ ಮಾಡಲು ತೊಡಗಿದೆ. ಪ್ರಜೆಗಳ ಹಕ್ಕುಗಳನ್ನು ಕಸಿಯಲು ತೊಡಗಿದೆ. ತೋರಿಕೆಯ ತಿದ್ದುಪಡಿಗಳನ್ನು ತಂದು ಭ್ರಮೆ ಉಂಟುಮಾಡುತ್ತದೆ. ಈ ಮೂಲಕ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತ ಸಮೂಹದ ಭವಿಷ್ಯವನ್ನೇ ಹಾಳು ಮಾಡುವ ಕಾರ್ಯದಲ್ಲಿ ತೊಡಗಿದೆ. ಮೋದಿ ಸರ್ಕಾರ ರೈತರ ಹಿತಾಸಕ್ತಿಗೆ ಧಕ್ಕೆ ತರುವ ಕಾಯ್ದೆಯನ್ನು ಯಾವ ಅಡೆತಡೆ ಇಲ್ಲದೆ ಅಂಗೀಕಾರ ಪಡೆಯಬಹುದೆಂದು ಭಾವಿಸಿತ್ತು. ಈಗ ಸರ್ಕಾರಕ್ಕೆ ಮನವರಿಕೆಯಾಗಿದೆ ತಾನು ಅಂದುಕೊಂಡಷ್ಟು ಸುಲಭವಾಗಿ ರೈತ ವಿರೋಧಿ ಕಾನೂನನ್ನು ಜಾರಿಗೆ ತರುವುದು ಆಗದ ಕೆಲಸ ಎಂದು. ’ಸ್ವಾವಲಂಬಿ ರೈತರನ್ನು ನಿರ್ನಾಮ ಮಾಡಿ ಅವರನ್ನು ಎಂಎನ್‌ಸಿಗಳಿಗೆ ಶರಣಾಗುವಂತೆ ಮಾಡುವುದು ಮೋದಿಯವರ ಉದ್ದೇಶವಾಗಿತ್ತು’ ಎನ್ನುತ್ತಾರೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ರೈತ ಮುಖಂಡರು.

ಕಳೆದ 15 ವರ್ಷಗಳಿಂದಲೂ ರೈತರು ಈ ಸುಧಾರಣೆಗಳಿಗಾಗಿ ಹೋರಾಡಿದ್ದಲ್ಲ. ರೈತರ ಹಿತರಕ್ಷಣೆಗಾಗಿ ಸುಧಾರಣೆ ಕೇಳುತ್ತಿದ್ದೆವೇ ಹೊರತು ಈ ಕರಾಳ ಶಾಸನದ ಜಾರಿಗಾಗಲ್ಲ. ನಾವು ಬೆಳೆದ ಬೆಲೆಗೆ ನ್ಯಾಯಯುತ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ರೈತರ ಆತ್ಮಹತ್ಯೆ ತಡೆಗಟ್ಟಲು ಸುಧಾರಣೆಗಳಾಗುತ್ತಿಲ್ಲ. WTO ಷರತ್ತುಗಳನ್ನು ನಮ್ಮ ಮೇಲೆ ಹೊರೆಸಲು ಈ ಮಸೂದೆ ಜಾರಿಗೆ ತಂದಿರುವುದಲ್ಲವೇ?

ಜನರ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸಿ, ಅವರ ಬವಣೆಯನ್ನು ಪರಿಹರಿಸುವ ಸಲುವಾಗಿ ಮಂಡಿಸಲಾದ ಮಸೂದೆಯನ್ನು ಗಂಭೀರವಾಗಿ ಪರಗಣಿಸಿ, ಗಂಟೆಗಟ್ಟಲೆ ವಿಶ್ಲೇಷಣೆಗೆ ಒಳಪಡಿಸುವ, ಆನಂತರ ಮಸೂದೆಯ ಪರಿಶೀಲನೆಗಾಗಿ ಸೆಲೆಕ್ಟ್ ಕಮಿಟಿಗೆ ವಹಿಸುವ ಸತ್‌ಸಂಪ್ರದಾಯ ಇತ್ತು. ಇದರಿಂದ ದೋಷರಹಿತವಾದ ಎಲ್ಲರಿಗೂ ಒಪ್ಪಿಗೆಯಾಗುವ ಕಾನೂನು ಜಾರಿಗೆ ಬರುತ್ತಿತ್ತು. ವರ್ಷದಲ್ಲಿ 60-90 ದಿವಸಗಳ ಕಾಲ ಕೂರುತ್ತಿದ್ದ ಲೋಕಸಭೆ ಈಗ ವರ್ಷದಲ್ಲಿ ಹತ್ತು, ಹದಿನೈದು ದಿನಗಳಿಗೆ ಸೀಮಿತವಾಗಿದೆ. ಈ ಕಾಟಾಚಾರದ ಲೋಕಸಭೆ ನಮಗೆ ಬೇಕೆ? ಪಾರ್ಲಿಮೆಂಟಿನ ಕಲಾಪದಲ್ಲಿ ಭಾಗವಹಿಸುವ ಕೆಲ ಮಂತ್ರಿಗಳು ಮಾತನಾಡುವ ಧಾಟಿ ಅಸಹ್ಯಕರವಾಗಿರುತ್ತದೆ. ಉತ್ತಮ ಅಭಿರುಚಿಯ ಅಭಾವ ಎದ್ದು ಕಾಣುತ್ತದೆ. ಸಂಯಮ ರಹಿತವಾದ ಈ ಮಾತಿನ ವೈಖರಿ ವಾಕರಿಕೆ ಹುಟ್ಟಿಸುವಂಥದ್ದು. ವಿರೋಧ ಪಕ್ಷಗಳ ಕಠಿಣ ಮಾತುಗಳಿಗೆ ಸಹನೆ ಕಳೆದುಕೊಳ್ಳುವ ಆಡಳಿತ ಪಕ್ಷದ ಶಾಸಕರು ಮಂತ್ರಿಗಳು ತಲಹರಟೆ ಮಾತುಗಳನ್ನಾಡುತ್ತಾರೆ.

ಎಂಪಿಗಳಿಗೆ ಮತ್ತು ಎಂಎಲ್‌ಎಗಳಿಗೆ ತಮ್ಮ ತಮ್ಮ ಶಾಸನಸಭೆಗಳಲ್ಲಿ ತಮ್ಮ ಮನಬಂದಂತೆ ಮಾತನಾಡುವ ಅಧಿಕಾರವನ್ನು ನಮ್ಮ ರಾಜ್ಯಾಂಗ ಒದಗಿಸಿದೆ. ಈ ವಾಕ್‌ಸ್ವಾತಂತ್ರ್ಯವನ್ನು ಕ್ರಿಮಿನಲ್ ಅಥವಾ ಸಿವಿಲ್ ನ್ಯಾಯಾಲಯಗಳು ಪ್ರಶ್ನಿಸುವಂತಿಲ್ಲ. ಪ್ರಜೆಗೂ ವಾಕ್‌ಸ್ವಾತಂತ್ರ್ಯವನ್ನು ನೀಡಿರುವ ರಾಜ್ಯಾಂಗ, ಪ್ರಜೆ ಮಾತನಾಡುವಾಗ ಇತರರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರುವಂತೆ ಮಾತನಾಡುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಜೆಯ ಮಾತನಾಡುವ ಹಕ್ಕನ್ನು ಶಾಸನಾಂಗ ಬ್ರೀಚ್ ಆಫ್ ಪ್ರಿವಿಲೆಜ್ ನೆಪ ಒಡ್ಡಿ ಮೊಟಕುಗೊಳಿಸುವುದಕ್ಕೆ ಸಂವಿಧಾನದಲ್ಲಿ ಎಡೆಯಿಲ್ಲ. ಇದರಂತೆಯೇ ಪ್ರಜೆಯ ವಾಕ್‌ಸ್ವಾತಂತ್ರ್ಯವನ್ನು ನ್ಯಾಯಾಲಯವಾಗಲಿ, ಪ್ರಾಸಿಕ್ಯೂಶನ್‌ನವರಾಗಲಿ ಪ್ರಶ್ನಿಸುವ ಅಧಿಕಾರ ಇಲ್ಲ.

ಕೇಂದ್ರ ಸರ್ಕಾರದ ಈ ವರ್ಷದ ಹಣಕಾಸಿನ ಪರಿಸ್ಥಿತಿ ತಿಳಿಯಬೇಕು. ಆರ್ಥಿಕ ಸ್ಥಿತಿ ಬಹಳ ಬಿಗಡಾಯಿಸಿದೆ. ಹಣಕಾಸಿನ ಸಚಿವಾಲಯದ ಮಾತನ್ನು ನಂಬುವುದಾದರೆ ಆಹಾರ ಧಾನ್ಯಗಳನ್ನು ಕೊಳ್ಳಲು ಸರ್ಕಾರದ ಬಳಿ ಹಣವಿಲ್ಲ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಈಗಾಗಲೇ ಕೊಟ್ಟಿರುವ ಸಾಲದ ಮೊತ್ತ 2.65 ಲಕ್ಷ ಕೋಟಿ ರೂ. ಅಂದರೆ 2014ರಿಂದ ಈಚೆಗೆ ಈ ಸಾಲ ಶೇಕಡ 190ರಷ್ಟು ಅಧಿಕವಾಗಿದೆ. ಆದರೆ ಜನರಿಗೆ ಆಹಾರ ಒದಗಿಸುವುದು ಕಾನೂನುರೀತ್ಯಾ ಸರ್ಕಾರದ ಜವಬ್ದಾರಿ. ಹಣದ ಕೊರತೆ ಇದೆ ಎಂದು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ. ಈ ಕಾಯ್ದೆಗಳಿಂದ ಸರ್ಕಾರದ ಬದ್ಧ ಜವಾಬ್ದಾರಿಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ, ಖಾಸಗಿಯವರಿಗೆ ವಹಿಸಿಕೊಡಲು ಬರುವುದೇ? ಗಂಭೀರವಾಗಿ ವಿಚಾರ ಮಾಡಬೇಕಾದ ಜಟಿಲ ಪ್ರಶ್ನೆ ಇದು.

ಪಾರ್ಲಿಮೆಂಟ್ ಈಗ ದುರ್ಬಲವಾಗಿದೆ. ಸರ್ಕಾರ ಪಾರ್ಲಿಮೆಂಟ್‌ನ್ನು ಕಡೆಗಣಿಸುತ್ತಿದೆ. ಚರ್ಚೆ, ಪ್ರಶ್ನೋತ್ತರ ಮಸೂದೆಯನ್ನು ಸೆಲೆಕ್ಟ್ ಕಮಿಟಿಗೆ ಒಪ್ಪಿಸುವುದು, ಮತ ಎಣಿಕೆ ಎಲ್ಲಕ್ಕೂ ವಿದಾಯ ಹೇಳಿದೆ. ಆದ್ದರಿಂದ ಜನರ ನಿಜವಾದ ಪಾರ್ಲಿಮೆಂಟ್ ಅಸ್ತಿತ್ವಕ್ಕೆ ಬರಬೇಕಾಗಿದೆ. ಆ ಕೆಲಸ ಈಗಾಗಲೇ ಪಂಜಾಬ್, ಹರಿಯಾಣ ರೈತರಿಂದ ಆರಂಭವಾಗಿದೆ. ರೈತರಿಂದ ಪ್ರಾರಂಭವಾಗಿರುವ ಈ ಜನತಾ ಪಾರ್ಲಿಮೆಂಟ್ ವಿಸ್ತಾರಗೊಳ್ಳಬೇಕಾಗಿದೆ. ಕಾರ್ಮಿಕರು, ನಿರುದ್ಯೋಗಿಗಳು, ವಲಸೆ ಕಾರ್ಮಿಕರು, ದಲಿತರು ಜಾಗೃತ ನಾಗರಿಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮೂಲಕ ನಿರಂಕುಶಪ್ರಭುತ್ವವನ್ನು ಎದುರಿಸುವ ಇಚ್ಛೆಯುಳ್ಳ ಎಲ್ಲರೂ ಕೂಡಿಕೊಂಡು ಒಂದು ವಿಸ್ತರಿತ ಜನತಾ ಪಾರ್ಲಿಮೆಂಟ್ ಒಂದನ್ನು ತುರ್ತಾಗಿ ಅಸ್ತಿತ್ವಕ್ಕೆ ತರಬೇಕಾಗಿದೆ. ಜಮೀನು ಮತ್ತು ವ್ಯವಸಾಯ ಕ್ಷೇತ್ರಗಳನ್ನು ರೈತರಿಗೇ ಬಿಟ್ಟುಕೊಟ್ಟು, ವಿಚಿತ್ರ ರೀತಿಯ ಸುಧಾರಣೆಗಳನ್ನು ನುಸುಳಿಸುವ ಸರ್ಕಾರದ ಉಸಾಬರಿಯನ್ನೇ ಕೈ ಬಿಡಬೇಕೆಂದು ಎಚ್ಚರಿಕೆ ನೀಡಬೇಕಾಗಿದೆ. ಆ ಕಾರಣದಿಂದಲೆ ರೈತರಿಗೂ ಸರ್ಕಾರಕ್ಕೂ ಮನಸ್ತಾಪ ಏರ್ಪಟ್ಟಿರುವುದು.

ಸರ್ವೋಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ, ಒಂದು ಸಮಿತಿ ರಚಿಸುವ ಮೂಲಕ ರೈತರ ಬೇಡಿಕೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಡಿ ಎಂದು ಮೋದಿ ಸರ್ಕಾರಕ್ಕೆ ಸಲಹೆಕೊಟ್ಟಿದೆ. ಸಮಿತಿ ರಚಿಸುವುದರಿಂದ ಈ ಜಟಿಲ ಪ್ರಶ್ನೆ ಬಗೆಹರಿಯುವಂತೆ ಕಾಣುತ್ತಿಲ್ಲ. ರೈತರು ಮತ್ತು ಸರ್ಕಾರದ ಉದ್ದೇಶಗಳೇ ಬೇರೆಯಾಗಿರುವುದರಿಂದ ಸಮಿತಿ ಹೇಗೆ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ? ಸರ್ಕಾರ ಈ ಶಾಸನಗಳಲ್ಲಿ ಕೆಲವು ತಿದ್ದುಪಡಿಗಳನ್ನು ಈಗಾಗಲೇ ಸೂಚಿಸಿದೆ, ಆದರೆ ಇದಕ್ಕೆ ರೈತರು ವಿರೋಧ ತೋರಿಸಿದ್ದಾರೆ. ಸರ್ಕಾರಕ್ಕೆ ಇದು ಅರಿವಾಗಿದೆ. ಪರಿಸ್ಥಿತಿ ಹೀಗಿರುವಾಗ ಯಾವ ಸಮಿತಿ ತಾನೇ ಈ ಸಮಸ್ಯೆಯನ್ನು ಬಗೆಹರಿಸಬಲ್ಲದು? ಸರ್ಕಾರ ತನ್ನ ನಿಲುವನ್ನು ಬದಲಾಯಿಸುವುದೊಂದೇ ಇರುವ ರಾಜಮಾರ್ಗ. ಆರ್‌ಎಸ್‌ಎಸ್‌ನ ಭಾರತ ಕಿಸಾನ್ ಸಂಘ ತಾನು ರೈತರ ಪರ ಎಂದು ಘೋಷಣೆ ಮಾಡಿ, ಇಂತಹ ಘೋರ ಕಾನೂನುಗಳನ್ನು ರಚಿಸುತ್ತಿರುವುದನ್ನು ವಿರೋಧ ಮಾಡದೆ ಇರುವುದು ಪ್ರಪಂಚಕ್ಕೇ ಗೊತ್ತಿದೆ.

ಮೋದಿಯವರ ಸರ್ಕಾರ, ಜಮೀನು, ವ್ಯವಸಾಯ ಮತ್ತು ಮಾರುಕಟ್ಟೆಗೆ ಸಂಬಂಧಪಟ್ಟಂತೆ 3 ಕರಾಳ ಕಾನೂನುಗಳನ್ನು ಆರ್ಡಿನೈಸ್ ಮುಖಾಂತರ ಜಾರಿಗೆ ತಂದು, ಆ ನಂತರ ಪಾರ್ಲಿಮೆಂಟಲ್ಲಿ ಕಾನೂನುಕಟ್ಟಲೆಗಳನ್ನು ಧಿಕ್ಕರಿಸಿ, ಇವನ್ನು ಕಾನೂನುಗಳಾಗಿ ಪರಿವರ್ತಿಸಿತು. ವ್ಯವಸಾಯ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳ ವಶ ಮಾಡುವುದು, ರೈತರನ್ನು ಕೂಲಿಗಳಾಗಿ ಮಾರ್ಪಡಿಸಿ ತಮಗೆ ಬೇಕಾದ ಬೆಳೆ ಬೆಳೆದುಕೊಡಲು ಈ ಕಾನೂನುಗಳಲ್ಲಿ ಪರೋಕ್ಷವಾಗಿ ಅವಕಾಶ ಮಾಡಿಕೊಡಲಾಗಿದೆ. ರೈತರ ಹಿತದೃಷ್ಟಿಯಿಂದ ರಚಿಸುವ ಮಾರ್ಕೆಟ್ ಯಾರ್ಡ್‌ಗಳನ್ನೂ ಮುಚ್ಚಿಸುವುದು, ರೈತರು ಕೂಲಿಯಾಳುಗಳನ್ನಾಗಿಸಿ, ಅವರು ಬೆಳೆದ ಬೆಳೆಯನ್ನೆಲ್ಲ ವಶಕ್ಕೆ ತೆಗೆದುಕೊಳ್ಳುವುದು, ರೈಲ್ವೆ ನಿಲ್ದಾಣಗಳ ಸಮೀಪ ಗೋಡೌನ್‌ಗಳನ್ನು ಮಾಡಿಕೊಂಡು ಗೂಡ್ಸ್ ರೈಲಿನ ಮೂಲಕ ಅವುಗಳನ್ನು ತಮಗೆ ಬೇಕಾದಂತೆ ಮಾರುಕಟ್ಟೆ ಇರುವ ಸ್ಥಳಗಳಿಗೆ ರವಾನಿಸುವುದು, ಅವುಗಳನ್ನು ದುಬಾರಿ ಬೆಲೆಗೆ ಮಾರಿಕೊಳ್ಳುವುದು ಇವಕ್ಕೆಲ್ಲಾ ಅವಕಾಶ ಕಲ್ಪಿಸುವುದಕ್ಕೋಸ್ಕರ ಮಾಡಿರುವ ಕಾನೂನುಗಳನ್ನು ಹಿಂಪಡೆಯುವುದರ ಮೂಲಕ ಈ ದೇಶದ ರೈತರನ್ನು ಸರ್ಕಾರ ಗೌರವಿಸಬೇಕಿದೆ.


ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...