Homeಅಂಕಣಗಳುನೂರರ ನೋಟ: ಸಾಕಿನ್ನು ನಿರಂಕುಶಪ್ರಭುತ್ವ ರೈತರ ಬೇಡಿಕೆಗಳನ್ನು ಪೂರೈಸಿ, ಗೌರವಿಸಿ

ನೂರರ ನೋಟ: ಸಾಕಿನ್ನು ನಿರಂಕುಶಪ್ರಭುತ್ವ ರೈತರ ಬೇಡಿಕೆಗಳನ್ನು ಪೂರೈಸಿ, ಗೌರವಿಸಿ

- Advertisement -
- Advertisement -

ಮೋದಿಯವರ ನಿರಂಕುಶಪ್ರಭುತ್ವ ಕೊರೊನಾವನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಂಡು, ತನ್ನನ್ನು ವಿರೋಧಿಸುವವರನ್ನು ದಮನ ಮಾಡಲು ತೊಡಗಿದೆ. ಪ್ರಜೆಗಳ ಹಕ್ಕುಗಳನ್ನು ಕಸಿಯಲು ತೊಡಗಿದೆ. ತೋರಿಕೆಯ ತಿದ್ದುಪಡಿಗಳನ್ನು ತಂದು ಭ್ರಮೆ ಉಂಟುಮಾಡುತ್ತದೆ. ಈ ಮೂಲಕ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತ ಸಮೂಹದ ಭವಿಷ್ಯವನ್ನೇ ಹಾಳು ಮಾಡುವ ಕಾರ್ಯದಲ್ಲಿ ತೊಡಗಿದೆ. ಮೋದಿ ಸರ್ಕಾರ ರೈತರ ಹಿತಾಸಕ್ತಿಗೆ ಧಕ್ಕೆ ತರುವ ಕಾಯ್ದೆಯನ್ನು ಯಾವ ಅಡೆತಡೆ ಇಲ್ಲದೆ ಅಂಗೀಕಾರ ಪಡೆಯಬಹುದೆಂದು ಭಾವಿಸಿತ್ತು. ಈಗ ಸರ್ಕಾರಕ್ಕೆ ಮನವರಿಕೆಯಾಗಿದೆ ತಾನು ಅಂದುಕೊಂಡಷ್ಟು ಸುಲಭವಾಗಿ ರೈತ ವಿರೋಧಿ ಕಾನೂನನ್ನು ಜಾರಿಗೆ ತರುವುದು ಆಗದ ಕೆಲಸ ಎಂದು. ’ಸ್ವಾವಲಂಬಿ ರೈತರನ್ನು ನಿರ್ನಾಮ ಮಾಡಿ ಅವರನ್ನು ಎಂಎನ್‌ಸಿಗಳಿಗೆ ಶರಣಾಗುವಂತೆ ಮಾಡುವುದು ಮೋದಿಯವರ ಉದ್ದೇಶವಾಗಿತ್ತು’ ಎನ್ನುತ್ತಾರೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ರೈತ ಮುಖಂಡರು.

ಕಳೆದ 15 ವರ್ಷಗಳಿಂದಲೂ ರೈತರು ಈ ಸುಧಾರಣೆಗಳಿಗಾಗಿ ಹೋರಾಡಿದ್ದಲ್ಲ. ರೈತರ ಹಿತರಕ್ಷಣೆಗಾಗಿ ಸುಧಾರಣೆ ಕೇಳುತ್ತಿದ್ದೆವೇ ಹೊರತು ಈ ಕರಾಳ ಶಾಸನದ ಜಾರಿಗಾಗಲ್ಲ. ನಾವು ಬೆಳೆದ ಬೆಲೆಗೆ ನ್ಯಾಯಯುತ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ರೈತರ ಆತ್ಮಹತ್ಯೆ ತಡೆಗಟ್ಟಲು ಸುಧಾರಣೆಗಳಾಗುತ್ತಿಲ್ಲ. WTO ಷರತ್ತುಗಳನ್ನು ನಮ್ಮ ಮೇಲೆ ಹೊರೆಸಲು ಈ ಮಸೂದೆ ಜಾರಿಗೆ ತಂದಿರುವುದಲ್ಲವೇ?

ಜನರ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸಿ, ಅವರ ಬವಣೆಯನ್ನು ಪರಿಹರಿಸುವ ಸಲುವಾಗಿ ಮಂಡಿಸಲಾದ ಮಸೂದೆಯನ್ನು ಗಂಭೀರವಾಗಿ ಪರಗಣಿಸಿ, ಗಂಟೆಗಟ್ಟಲೆ ವಿಶ್ಲೇಷಣೆಗೆ ಒಳಪಡಿಸುವ, ಆನಂತರ ಮಸೂದೆಯ ಪರಿಶೀಲನೆಗಾಗಿ ಸೆಲೆಕ್ಟ್ ಕಮಿಟಿಗೆ ವಹಿಸುವ ಸತ್‌ಸಂಪ್ರದಾಯ ಇತ್ತು. ಇದರಿಂದ ದೋಷರಹಿತವಾದ ಎಲ್ಲರಿಗೂ ಒಪ್ಪಿಗೆಯಾಗುವ ಕಾನೂನು ಜಾರಿಗೆ ಬರುತ್ತಿತ್ತು. ವರ್ಷದಲ್ಲಿ 60-90 ದಿವಸಗಳ ಕಾಲ ಕೂರುತ್ತಿದ್ದ ಲೋಕಸಭೆ ಈಗ ವರ್ಷದಲ್ಲಿ ಹತ್ತು, ಹದಿನೈದು ದಿನಗಳಿಗೆ ಸೀಮಿತವಾಗಿದೆ. ಈ ಕಾಟಾಚಾರದ ಲೋಕಸಭೆ ನಮಗೆ ಬೇಕೆ? ಪಾರ್ಲಿಮೆಂಟಿನ ಕಲಾಪದಲ್ಲಿ ಭಾಗವಹಿಸುವ ಕೆಲ ಮಂತ್ರಿಗಳು ಮಾತನಾಡುವ ಧಾಟಿ ಅಸಹ್ಯಕರವಾಗಿರುತ್ತದೆ. ಉತ್ತಮ ಅಭಿರುಚಿಯ ಅಭಾವ ಎದ್ದು ಕಾಣುತ್ತದೆ. ಸಂಯಮ ರಹಿತವಾದ ಈ ಮಾತಿನ ವೈಖರಿ ವಾಕರಿಕೆ ಹುಟ್ಟಿಸುವಂಥದ್ದು. ವಿರೋಧ ಪಕ್ಷಗಳ ಕಠಿಣ ಮಾತುಗಳಿಗೆ ಸಹನೆ ಕಳೆದುಕೊಳ್ಳುವ ಆಡಳಿತ ಪಕ್ಷದ ಶಾಸಕರು ಮಂತ್ರಿಗಳು ತಲಹರಟೆ ಮಾತುಗಳನ್ನಾಡುತ್ತಾರೆ.

ಎಂಪಿಗಳಿಗೆ ಮತ್ತು ಎಂಎಲ್‌ಎಗಳಿಗೆ ತಮ್ಮ ತಮ್ಮ ಶಾಸನಸಭೆಗಳಲ್ಲಿ ತಮ್ಮ ಮನಬಂದಂತೆ ಮಾತನಾಡುವ ಅಧಿಕಾರವನ್ನು ನಮ್ಮ ರಾಜ್ಯಾಂಗ ಒದಗಿಸಿದೆ. ಈ ವಾಕ್‌ಸ್ವಾತಂತ್ರ್ಯವನ್ನು ಕ್ರಿಮಿನಲ್ ಅಥವಾ ಸಿವಿಲ್ ನ್ಯಾಯಾಲಯಗಳು ಪ್ರಶ್ನಿಸುವಂತಿಲ್ಲ. ಪ್ರಜೆಗೂ ವಾಕ್‌ಸ್ವಾತಂತ್ರ್ಯವನ್ನು ನೀಡಿರುವ ರಾಜ್ಯಾಂಗ, ಪ್ರಜೆ ಮಾತನಾಡುವಾಗ ಇತರರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರುವಂತೆ ಮಾತನಾಡುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಜೆಯ ಮಾತನಾಡುವ ಹಕ್ಕನ್ನು ಶಾಸನಾಂಗ ಬ್ರೀಚ್ ಆಫ್ ಪ್ರಿವಿಲೆಜ್ ನೆಪ ಒಡ್ಡಿ ಮೊಟಕುಗೊಳಿಸುವುದಕ್ಕೆ ಸಂವಿಧಾನದಲ್ಲಿ ಎಡೆಯಿಲ್ಲ. ಇದರಂತೆಯೇ ಪ್ರಜೆಯ ವಾಕ್‌ಸ್ವಾತಂತ್ರ್ಯವನ್ನು ನ್ಯಾಯಾಲಯವಾಗಲಿ, ಪ್ರಾಸಿಕ್ಯೂಶನ್‌ನವರಾಗಲಿ ಪ್ರಶ್ನಿಸುವ ಅಧಿಕಾರ ಇಲ್ಲ.

ಕೇಂದ್ರ ಸರ್ಕಾರದ ಈ ವರ್ಷದ ಹಣಕಾಸಿನ ಪರಿಸ್ಥಿತಿ ತಿಳಿಯಬೇಕು. ಆರ್ಥಿಕ ಸ್ಥಿತಿ ಬಹಳ ಬಿಗಡಾಯಿಸಿದೆ. ಹಣಕಾಸಿನ ಸಚಿವಾಲಯದ ಮಾತನ್ನು ನಂಬುವುದಾದರೆ ಆಹಾರ ಧಾನ್ಯಗಳನ್ನು ಕೊಳ್ಳಲು ಸರ್ಕಾರದ ಬಳಿ ಹಣವಿಲ್ಲ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಈಗಾಗಲೇ ಕೊಟ್ಟಿರುವ ಸಾಲದ ಮೊತ್ತ 2.65 ಲಕ್ಷ ಕೋಟಿ ರೂ. ಅಂದರೆ 2014ರಿಂದ ಈಚೆಗೆ ಈ ಸಾಲ ಶೇಕಡ 190ರಷ್ಟು ಅಧಿಕವಾಗಿದೆ. ಆದರೆ ಜನರಿಗೆ ಆಹಾರ ಒದಗಿಸುವುದು ಕಾನೂನುರೀತ್ಯಾ ಸರ್ಕಾರದ ಜವಬ್ದಾರಿ. ಹಣದ ಕೊರತೆ ಇದೆ ಎಂದು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ. ಈ ಕಾಯ್ದೆಗಳಿಂದ ಸರ್ಕಾರದ ಬದ್ಧ ಜವಾಬ್ದಾರಿಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ, ಖಾಸಗಿಯವರಿಗೆ ವಹಿಸಿಕೊಡಲು ಬರುವುದೇ? ಗಂಭೀರವಾಗಿ ವಿಚಾರ ಮಾಡಬೇಕಾದ ಜಟಿಲ ಪ್ರಶ್ನೆ ಇದು.

ಪಾರ್ಲಿಮೆಂಟ್ ಈಗ ದುರ್ಬಲವಾಗಿದೆ. ಸರ್ಕಾರ ಪಾರ್ಲಿಮೆಂಟ್‌ನ್ನು ಕಡೆಗಣಿಸುತ್ತಿದೆ. ಚರ್ಚೆ, ಪ್ರಶ್ನೋತ್ತರ ಮಸೂದೆಯನ್ನು ಸೆಲೆಕ್ಟ್ ಕಮಿಟಿಗೆ ಒಪ್ಪಿಸುವುದು, ಮತ ಎಣಿಕೆ ಎಲ್ಲಕ್ಕೂ ವಿದಾಯ ಹೇಳಿದೆ. ಆದ್ದರಿಂದ ಜನರ ನಿಜವಾದ ಪಾರ್ಲಿಮೆಂಟ್ ಅಸ್ತಿತ್ವಕ್ಕೆ ಬರಬೇಕಾಗಿದೆ. ಆ ಕೆಲಸ ಈಗಾಗಲೇ ಪಂಜಾಬ್, ಹರಿಯಾಣ ರೈತರಿಂದ ಆರಂಭವಾಗಿದೆ. ರೈತರಿಂದ ಪ್ರಾರಂಭವಾಗಿರುವ ಈ ಜನತಾ ಪಾರ್ಲಿಮೆಂಟ್ ವಿಸ್ತಾರಗೊಳ್ಳಬೇಕಾಗಿದೆ. ಕಾರ್ಮಿಕರು, ನಿರುದ್ಯೋಗಿಗಳು, ವಲಸೆ ಕಾರ್ಮಿಕರು, ದಲಿತರು ಜಾಗೃತ ನಾಗರಿಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮೂಲಕ ನಿರಂಕುಶಪ್ರಭುತ್ವವನ್ನು ಎದುರಿಸುವ ಇಚ್ಛೆಯುಳ್ಳ ಎಲ್ಲರೂ ಕೂಡಿಕೊಂಡು ಒಂದು ವಿಸ್ತರಿತ ಜನತಾ ಪಾರ್ಲಿಮೆಂಟ್ ಒಂದನ್ನು ತುರ್ತಾಗಿ ಅಸ್ತಿತ್ವಕ್ಕೆ ತರಬೇಕಾಗಿದೆ. ಜಮೀನು ಮತ್ತು ವ್ಯವಸಾಯ ಕ್ಷೇತ್ರಗಳನ್ನು ರೈತರಿಗೇ ಬಿಟ್ಟುಕೊಟ್ಟು, ವಿಚಿತ್ರ ರೀತಿಯ ಸುಧಾರಣೆಗಳನ್ನು ನುಸುಳಿಸುವ ಸರ್ಕಾರದ ಉಸಾಬರಿಯನ್ನೇ ಕೈ ಬಿಡಬೇಕೆಂದು ಎಚ್ಚರಿಕೆ ನೀಡಬೇಕಾಗಿದೆ. ಆ ಕಾರಣದಿಂದಲೆ ರೈತರಿಗೂ ಸರ್ಕಾರಕ್ಕೂ ಮನಸ್ತಾಪ ಏರ್ಪಟ್ಟಿರುವುದು.

ಸರ್ವೋಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ, ಒಂದು ಸಮಿತಿ ರಚಿಸುವ ಮೂಲಕ ರೈತರ ಬೇಡಿಕೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಡಿ ಎಂದು ಮೋದಿ ಸರ್ಕಾರಕ್ಕೆ ಸಲಹೆಕೊಟ್ಟಿದೆ. ಸಮಿತಿ ರಚಿಸುವುದರಿಂದ ಈ ಜಟಿಲ ಪ್ರಶ್ನೆ ಬಗೆಹರಿಯುವಂತೆ ಕಾಣುತ್ತಿಲ್ಲ. ರೈತರು ಮತ್ತು ಸರ್ಕಾರದ ಉದ್ದೇಶಗಳೇ ಬೇರೆಯಾಗಿರುವುದರಿಂದ ಸಮಿತಿ ಹೇಗೆ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ? ಸರ್ಕಾರ ಈ ಶಾಸನಗಳಲ್ಲಿ ಕೆಲವು ತಿದ್ದುಪಡಿಗಳನ್ನು ಈಗಾಗಲೇ ಸೂಚಿಸಿದೆ, ಆದರೆ ಇದಕ್ಕೆ ರೈತರು ವಿರೋಧ ತೋರಿಸಿದ್ದಾರೆ. ಸರ್ಕಾರಕ್ಕೆ ಇದು ಅರಿವಾಗಿದೆ. ಪರಿಸ್ಥಿತಿ ಹೀಗಿರುವಾಗ ಯಾವ ಸಮಿತಿ ತಾನೇ ಈ ಸಮಸ್ಯೆಯನ್ನು ಬಗೆಹರಿಸಬಲ್ಲದು? ಸರ್ಕಾರ ತನ್ನ ನಿಲುವನ್ನು ಬದಲಾಯಿಸುವುದೊಂದೇ ಇರುವ ರಾಜಮಾರ್ಗ. ಆರ್‌ಎಸ್‌ಎಸ್‌ನ ಭಾರತ ಕಿಸಾನ್ ಸಂಘ ತಾನು ರೈತರ ಪರ ಎಂದು ಘೋಷಣೆ ಮಾಡಿ, ಇಂತಹ ಘೋರ ಕಾನೂನುಗಳನ್ನು ರಚಿಸುತ್ತಿರುವುದನ್ನು ವಿರೋಧ ಮಾಡದೆ ಇರುವುದು ಪ್ರಪಂಚಕ್ಕೇ ಗೊತ್ತಿದೆ.

ಮೋದಿಯವರ ಸರ್ಕಾರ, ಜಮೀನು, ವ್ಯವಸಾಯ ಮತ್ತು ಮಾರುಕಟ್ಟೆಗೆ ಸಂಬಂಧಪಟ್ಟಂತೆ 3 ಕರಾಳ ಕಾನೂನುಗಳನ್ನು ಆರ್ಡಿನೈಸ್ ಮುಖಾಂತರ ಜಾರಿಗೆ ತಂದು, ಆ ನಂತರ ಪಾರ್ಲಿಮೆಂಟಲ್ಲಿ ಕಾನೂನುಕಟ್ಟಲೆಗಳನ್ನು ಧಿಕ್ಕರಿಸಿ, ಇವನ್ನು ಕಾನೂನುಗಳಾಗಿ ಪರಿವರ್ತಿಸಿತು. ವ್ಯವಸಾಯ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳ ವಶ ಮಾಡುವುದು, ರೈತರನ್ನು ಕೂಲಿಗಳಾಗಿ ಮಾರ್ಪಡಿಸಿ ತಮಗೆ ಬೇಕಾದ ಬೆಳೆ ಬೆಳೆದುಕೊಡಲು ಈ ಕಾನೂನುಗಳಲ್ಲಿ ಪರೋಕ್ಷವಾಗಿ ಅವಕಾಶ ಮಾಡಿಕೊಡಲಾಗಿದೆ. ರೈತರ ಹಿತದೃಷ್ಟಿಯಿಂದ ರಚಿಸುವ ಮಾರ್ಕೆಟ್ ಯಾರ್ಡ್‌ಗಳನ್ನೂ ಮುಚ್ಚಿಸುವುದು, ರೈತರು ಕೂಲಿಯಾಳುಗಳನ್ನಾಗಿಸಿ, ಅವರು ಬೆಳೆದ ಬೆಳೆಯನ್ನೆಲ್ಲ ವಶಕ್ಕೆ ತೆಗೆದುಕೊಳ್ಳುವುದು, ರೈಲ್ವೆ ನಿಲ್ದಾಣಗಳ ಸಮೀಪ ಗೋಡೌನ್‌ಗಳನ್ನು ಮಾಡಿಕೊಂಡು ಗೂಡ್ಸ್ ರೈಲಿನ ಮೂಲಕ ಅವುಗಳನ್ನು ತಮಗೆ ಬೇಕಾದಂತೆ ಮಾರುಕಟ್ಟೆ ಇರುವ ಸ್ಥಳಗಳಿಗೆ ರವಾನಿಸುವುದು, ಅವುಗಳನ್ನು ದುಬಾರಿ ಬೆಲೆಗೆ ಮಾರಿಕೊಳ್ಳುವುದು ಇವಕ್ಕೆಲ್ಲಾ ಅವಕಾಶ ಕಲ್ಪಿಸುವುದಕ್ಕೋಸ್ಕರ ಮಾಡಿರುವ ಕಾನೂನುಗಳನ್ನು ಹಿಂಪಡೆಯುವುದರ ಮೂಲಕ ಈ ದೇಶದ ರೈತರನ್ನು ಸರ್ಕಾರ ಗೌರವಿಸಬೇಕಿದೆ.


ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...