Homeಅಂಕಣಗಳುಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

- Advertisement -
- Advertisement -

“ನಾನು ನಾನಲ್ಲ. ನನ್ನ ಹೆಸರೂ ನನ್ನದಲ್ಲ. ನನ್ನ ತಂದೆ-ತಾಯಿ ನನ್ನನ್ನು ಹೆತ್ತವರಲ್ಲ. ನನ್ನ ತಮ್ಮ ಮತ್ತು ತಂಗಿ ನನ್ನ ಒಡಹುಟ್ಟಿದವರಲ್ಲ. ನಾನಾಡುವ ಭಾಷೆ ನನ್ನ ಮಾತೃಭಾಷೆಯಲ್ಲ. ನಾನು ಪಾಲಿಸುವ ಧರ್ಮ ನನ್ನದಲ್ಲ. ನಾನು ವಾಸಿಸುವ ದೇಶ ನನ್ನ ದೇಶವಲ್ಲ. ಅಂದರೆ ನಾನು ಯಾರೆಂದು ನೀವು ಭಾವಿಸಿದ್ದೀರೋ ಆತ ನಾನಲ್ಲ. ನಾನು ನಿಜವಾಗಲೂ ಯಾರೆಂದು ಹೇಳಬೇಕೆಂಬ ಆಶೆ ನನಗೆ; ಆದರೆ ನನ್ನ ಬದುಕಿನ ಪರಿಸ್ಥಿತಿ ನಾನು ನಿಜ ಹೇಳದಂತೆ ತಡೆಯುತ್ತಿದೆ….”

ಇಂತಹ ಪರಿಸ್ಥಿತಿಯಲ್ಲಿರುವ ಒಬ್ಬ ಮನುಷ್ಯನ ಬದುಕು ಹೇಗಿರಬಹುದೆಂದು ತೋರಿಸಿರುವ ಫ್ರೆಂಚ್ ನಿರ್ದೇಶಕ ರಾಡು ಮಹೈಲಿಯಾನು ಅವರ ‘Live and become’ (ಬದುಕು ಮತ್ತು ಬೆಳೆ) ಎಂಬ ಅದ್ಭುತ ಸಿನಿಮಾವನ್ನು ಮೊನ್ನೆ ನೋಡಿದೆ.

ನಮ್ಮಲ್ಲಿ ಬಹಳಷ್ಟು ಜನ ಯಹೂದಿಯರೆಲ್ಲ ಬಿಳಿಯರು ಎಂದು ನಂಬಿದ್ದಾರೆ. ಆದರೆ ಆಫ್ರಿಕಾದ ಇಥಿಯೋಪಿಯಾದಲ್ಲೂ ಕಪ್ಪು ಬಣ್ಣದ ಯಹೂದಿಯರಿದ್ದರು. ಐತಿಹ್ಯದ ಪ್ರಕಾರ ಇಸ್ರೇಲಿನ ರಾಜ ಸಾಲೊಮನ್ ಮತ್ತು ಇಥಿಯೋಪಿಯಾದಲ್ಲಿದ್ದ ಶೀಬಾ ಸಾಮ್ರಾಜ್ಯದ ರಾಣಿಗೆ ಜನಿಸಿದ ಪುತ್ರ ಮನೆಲಿಕ್‌ನ ವಂಶಜರು ಈ ಕಪ್ಪು ಯಹೂದಿಗಳು.

ಎಂಭತ್ತರ ದಶಕದಲ್ಲಿ ಇಥಿಯೋಪಿಯಾದ ಮೇಲೆ ಕ್ಷಾಮ ಮತ್ತು ಆಂತರಿಕ ಯುದ್ಧ ಜೊತೆಜೊತೆಗೆ ದಾಳಿ ಇಟ್ಟಾಗ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆಯ ಸೂಡಾನ್ ದೇಶಕ್ಕೆ ವಲಸೆ ಹೋಗಿ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸಲಾರಂಭಿಸಿದರು. ಅವರಲ್ಲಿ ಯಹೂದಿಯರೂ ಇದ್ದರು. ಅದೇ ಹೊತ್ತಿಗೆ ಜಗತ್ತಿನಾದ್ಯಂತ ಚದುರಿಹೋಗಿದ್ದ ಯಹೂದಿಗಳಿಗೆ ಇಸ್ರೇಲ್ ತನ್ನ ಬಾಗಿಲನ್ನು ತೆರೆಯಿತಲ್ಲದೆ, ಇಥಿಯೋಪಿಯಾದಲ್ಲಿದ್ದ ಯಹೂದಿಯರನ್ನು ಇಸ್ರೇಲಿಗೆ ಹೊತ್ತೊಯ್ಯಲು ’ಅಪರೇಷನ್ ಮೋಸಸ್’ ಎಂಬ ಗುಪ್ತ ಕಾರ್ಯಾಚರಣೆಯನ್ನು ಕೈಗೊಂಡಿತು.

‘Live and become’ಚಿತ್ರದ ಕತೆ ಪ್ರಾರಂಭವಾಗುವುದೇ ಸೂಡಾನ್‌ನಲ್ಲಿನ ಒಂದು ನಿರಾಶ್ರಿತರ ಶಿಬಿರದಲ್ಲಿ. ಭವಿಷ್ಯವೇ ಇಲ್ಲದಂತಹ ಆ ಶಿಬಿರದಲ್ಲಿ ಒಂದು ದಿನ ಯಹೂದಿ ತಾಯಿಯೊಬ್ಬಳ ಮಗ ಅವಳ ಮಡಿಲಲ್ಲೇ ಕೊನೆಯುಸಿರೆಳೆಯುತ್ತಾನೆ. ಅವಳ ದುಃಖವನ್ನು ಕ್ರಿಶ್ಚಿಯನ್ ತಾಯಿಯೊಬ್ಬಳು ದೂರದಿಂದಲೇ ಗಮನಿಸುತ್ತಾಳೆ. ಅದೇ ದಿನ ರಾತ್ರಿ ಹಲವು ಯಹೂದಿಯರನ್ನು ಇಸ್ರೇಲಿಗೆ ಸಾಗಿಸಲು ಲಾರಿಗಳು ಬಂದಾಗ ಆ ಯಹೂದಿ ತಾಯಿ ಲಾರಿಯನ್ನೇರಲು ಜನರ ಸಾಲಿನಲ್ಲಿ ನಿಲ್ಲುತ್ತಾಳೆ. ಆ ಕ್ಷಣ ಕ್ರಿಶ್ಚಿಯನ್ ತಾಯಿಗೆ ಒಂದು ಪರಿಹಾರದ ಸೂತ್ರ ಹೊಳೆಯುತ್ತದೆ. ನಿದ್ರಿಸುತ್ತಿರುವ ತನ್ನ ಕ್ರಿಶ್ಚಿಯನ್ ಮಗನನ್ನು ಎದ್ದೇಳಿಸಿ ಸಾಲುಗಟ್ಟಿ ನಿಂತಿರುವ ಜನರತ್ತ ಬೊಟ್ಟು ಮಾಡಿ “ಹೋಗು” ಎಂದು ಆದೇಶಿಸುತ್ತಾಳೆ. ತನ್ನ ತಾಯಿಯೇ ತನ್ನನ್ನು ಓಡಿಸುತ್ತಿದ್ದಾಳೆ ಎಂದು ಭಾವಿಸುವ ಮಗ ಕಣ್ಣೀರಿಡುತ್ತಾನೆ. ಆದರೆ ಆಕೆ ಕರಗುವುದಿಲ್ಲ “ಹೋಗು, ಬದುಕು ಮತ್ತು ಬೆಳೆ” ಎಂದು ಆತನನ್ನು ದೂಡುತ್ತಾಳೆ. ವಿಧಿ ಇಲ್ಲದೆ ಆತ ಹೋಗುತ್ತಾನೆ. ತನ್ನ ಮಗನನ್ನು ಕಳೆದುಕೊಂಡಿರುವ ಯಹೂದಿ ತಾಯಿಯ ಕೈ ಹಿಡಿಯುತ್ತಾನೆ. ಆಕೆಗೆ ಗೊತ್ತಾಗುತ್ತದೆ: ನರಕ ಸದೃಶವಾಗಿರುವ ಶಿಬಿರದಿಂದ ತನ್ನ ಮಗನನ್ನು ಪಾರು ಮಾಡಲು ಕ್ರಿಶ್ಚಿಯನ್ ತಾಯಿ ತನ್ನೊಂದಿಗೆ ತನ್ನ ಪುತ್ರನನ್ನು ಗುಪ್ತವಾಗಿ ಸಾಗಿಸಲು ಇಚ್ಛಿಸುತ್ತಿದ್ದಾಳೆಂದು. ಆ ಹುಡುಗ ತೀರಿಕೊಂಡಿರುವ ತನ್ನ ಮಗನ ವಯಸ್ಸಿನನೇ ಆದ್ದರಿಂದ ಈತನೇ ತನ್ನ ಮಗ ಎಂದು ಅಧಿಕಾರಿಗಳಿಗೆ ಹೇಳಿ ಅವನನ್ನು ತನ್ನೊಂದಿಗೆ ಇಸ್ರೇಲಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ತನ್ನ ಮಗನ ಹೆಸರಾದ ಸಾಲೊಮನ್ ಹೆಸರನ್ನೇ ಈ ಹುಡುಗನಿಗೂ ಇಡುತ್ತಾಳೆ. ತನ್ನ ವಂಶದ ಮತ್ತು ಸಮುದಾಯದ ಪ್ರಮುಖರ ಹೆಸರನ್ನೆಲ್ಲ ಆತನಿಗೆ ಮನವರಿಕೆ ಮಾಡಿಕೊಟ್ಟು “ಎಂದೂ ನೀನು ನಿಜವಾಗಲೂ ಯಾರು ಎಂಬುದನ್ನು ಯಾರಿಗೂ ಹೇಳಬೇಡ” ಎಂದು ಹೇಳಿ ಕ್ಷಯರೋಗದಿಂದ ಸಾಯುತ್ತಾಳೆ.

ಹೊಸ ಹೆಸರು, ಹೊಸ ದೇಶ, ಹೊಸ ಪರಿಸರದಲ್ಲಿ ಬಾಲಕ ಏಕಾಂಗಿಯಾಗುತ್ತಾನೆ. ಆತನನ್ನು ದಾಖಲಿಸಿರುವ ಶಾಲೆಯಿಂದ ಓಡಿಹೋಗಲು ಯತ್ನಿಸುತ್ತಾನೆ, ಇತರೆ ಹುಡುಗರೊಂದಿಗೆ ಬಡಿದಾಡುತ್ತಾನೆ. ಆಹಾರವನ್ನು ತ್ಯಜಿಸಿ ಮೌನವಾಗಿ ಪ್ರತಿಭಟಿಸುತ್ತಾನೆ. ಕೊನೆಗೆ ಅವನನ್ನು ನಿಯಂತ್ರಿಸಲು ಆಗದೇ. ಇಬ್ಬರು ಮಕ್ಕಳನ್ನು ಹೊಂದಿರುವ ಬಿಳಿ ಯಹೂದಿ ದಂಪತಿಗಳಿಗೆ ಅಧಿಕಾರಿಗಳು ಅವನನ್ನು ದತ್ತು ನೀಡುತ್ತಾರೆ. ಅವರ ಮನೆಯಲ್ಲೂ ಬಾಲಕ ತನ್ನ ಬಂಡಾಯವನ್ನು ಮುಂದುವರೆಸುತ್ತಾನೆ. ಆದರೆ ಆ ದಂಪತಿಗಳು ಆತನನ್ನು ನಿಜವಾಗಲೂ ಪ್ರೀತಿಸುತ್ತಾರೆ. ಜನಾಂಗೀಯ ದ್ವೇಷಿಗಳಿಂದ ಅವನನ್ನು ರಕ್ಷಿಸುತ್ತಾರೆ. ತಾವು ನಾಸ್ತಿಕರಾದರೂ ಬಾಲಕನಿಗೆ ಯಹೂದಿ ಸಂಪ್ರದಾಯದಲ್ಲಿ ನಂಬಿಕೆ ಇದೆ ಎಂದು ಭಾವಿಸಿ ಆತನನ್ನು ಧಾರ್ಮಿಕ ಶಾಲೆಗೂ ದಾಖಲಿಸುತ್ತಾರೆ. ಪ್ರೀತಿಯಿಂದಲೇ ಬಾಲಕನ ಬಂಡಾಯವನ್ನು ಮುರಿಯುತ್ತಾರೆ. ತನ್ನನ್ನು ಹೆತ್ತ ತಾಯಿಗೆ ಹಂಬಲಿಸುತ್ತಲೇ, ತನ್ನನ್ನು ರಕ್ಷಿಸಿದ ತಾಯಿ ನೀಡಿದ ಎಚ್ಚರಿಕೆಯನ್ನು ಮರೆಯದೇ ತನ್ನನ್ನು ಸಾಕಿಸಲಹುತ್ತಿರುವ ತಾಯಿಗೆ ಹತ್ತಿರವಾಗುತ್ತಾನೆ.

PC: myCANAL

ಹೊಸ ದೇಶದ ಭಾಷೆ ಮತ್ತು ತನ್ನ ದತ್ತು ಸಂಸಾರದ ಫ್ರೆಂಚ್ ಭಾಷೆಗಳನ್ನು ಕಲಿಯುತ್ತಾನೆ. ಯಹೂದಿ ಸಂಪ್ರದಾಯಗಳನ್ನು ಪಾಲಿಸುತ್ತಾನೆ. ಇಸ್ರೇಲಿನಲ್ಲಿ ವಾಸಿಸುವ ಹಕ್ಕು ತನ್ನಂತಹ ಕಪ್ಪು ಯಹೂದಿಯರಿಗೂ ಇದೆ ಎಂದು ಪ್ರತಿಭಟಿಸುತ್ತಾನೆ, ವಿಧಿ ಇಲ್ಲದೆ ತಾನಿರುವ ಸಂದರ್ಭಕ್ಕೆ ಹೊಂದುಕೊಳ್ಳುತ್ತಾನೆ. ಆದರೆ ಅವನ ಆಳದಲ್ಲಿ ತನ್ನ ಬದುಕೇ ಒಂದು ದೊಡ್ಡ ಸುಳ್ಳು ಎಂಬ ನೋವು ಕಾಡುತ್ತಲೇ ಇರುತ್ತದೆ; ಹೆತ್ತ ತಾಯಿಯ ನೆನಪು ಮರುಕಳಿಸುತ್ತಿರುತ್ತದೆ.

ಆತ ಹದಿಹರೆಯದವನಾದಾಗ ಬಿಳಿ ಯಹೂದಿ ಯುವತಿಯೊಬ್ಬಳು ಅವನನ್ನು ಪ್ರೇಮಿಸಲಾರಂಭಿಸುತ್ತಾಳೆ. ಇಸ್ರೇಲ್ ಸರ್ಕಾರದ ನಿಯಮದ ಪ್ರಕಾರ ಆ ಹಂತದಲ್ಲಿ ಆತ ಸೈನ್ಯವನ್ನು ಸೇರಬೇಕು. ಚಿಕ್ಕವನಿದ್ದಾಗಲೇ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿರುವ ಅವನಿಗೆ ಸೈನ್ಯವನ್ನು ಸೇರಲು ಇಷ್ಟವಿಲ್ಲ. ಅತ್ತ ತನ್ನನ್ನು ಪ್ರೀತಿಸುತ್ತಿರುವ ಹುಡುಗಿಗೆ ತನ್ನ ಬಗ್ಗೆ ಸತ್ಯವನ್ನೂ ಹೇಳಲಾಗದೆ, ಇತ್ತ ಸೈನ್ಯಕ್ಕೆ ಸೇರಿ ಬಂದೂಕು ಹಿಡಿಯಲೂ ಆಗದೆ ಆತ ಫ್ರಾನ್ಸ್ ದೇಶಕ್ಕೆ ಪಲಾಯನ ಮಾಡುತ್ತಾನೆ. ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಡಾಕ್ಟರ್ ಆಗುತ್ತಾನೆ. ’ಗಡಿಗಳಿಲ್ಲದ ವೈದ್ಯರು’ ಎಂಬ ಸರ್ಕಾರೇತರ ಸಂಘಟನೆಯನ್ನು ಸೇರಿ ಯುದ್ಧ ಪೀಡಿತ ಪ್ರದೇಶಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಾನೆ. ಆದರೂ ಯುದ್ಧದ ಹಿಂಸೆ ಅವನನ್ನು ಬಸವಳಿಸುತ್ತದೆ. ಅನಾರೋಗ್ಯದಿಂದ ಹತ್ತು ವರ್ಷಗಳ ನಂತರ ಇಸ್ರೇಲಿಗೆ ವಾಪಸ್ ಬರುತ್ತಾನೆ. ಅಲ್ಲಿ ಅವನ ಹುಡುಗಿ ಆತನಿಗಾಗಿ ಕಾದಿರುತ್ತಾಳೆ. ತನ್ನ ತಂದೆ-ತಾಯಿಯ ವಿರೋಧದ ನಡುವೆಯೂ ಆಕೆ ಅವನನ್ನು ಮದುವೆಯಾಗುತ್ತಾಳೆ. ತಮ್ಮ ಮೊದಲನೆ ರಾತ್ರಿ ತನ್ನ ಹೆಂಡತಿಗಾದರೂ ತನ್ನ ಬಗ್ಗೆ ಸತ್ಯವನ್ನು ಹೇಳಬೇಕೆಂದು ಆತ ಪ್ರಯತ್ನಿಸುತ್ತಾನೆ. ಆದರೆ ಅವಳ ನಿಷ್ಕಳಂಕ ಪ್ರೀತಿ ಅವನ ಬಾಯಿ ಕಟ್ಟಿಹಾಕುತ್ತದೆ.

ಅವರಿಬ್ಬರ ಹೊಸ ಬದುಕು ನೆಮ್ಮದಿಯಿಂದ ಸಾಗುತ್ತದೆ. ಆದರೆ ಯಾವಾಗ ಆಕೆ ಗರ್ಭಿಣಿಯಾಗುತ್ತಾಳೋ ಆಗ ಆತನಿಂದ ಸುಳ್ಳನ್ನು ಮುಂದುವರಿಸಲಾಗುವುದಿಲ್ಲ. ಸತ್ಯ ಹೊರಬರುತ್ತದೆ. ತನ್ನ ಹೆಸರು ಸಾಲೊಮನ್ ಅಲ್ಲ, ತಾನು ಯಹೂದಿ ಅಲ್ಲ, ತಾನು ಇಸ್ರೇಲಿ ಅಲ್ಲ ಎಂದು ಹೇಳಿದಾಗ ಆಕೆ ಕಣ್ಣೀರಿಡುತ್ತಾಳೆ. ತಾನು ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನು ತ್ಯಜಿಸಿದ್ದು ಇಂಥವನಿಗಾಗಿಯೇ ಎಂದು ಕುಪಿತಳಾಗುತ್ತಾಳೆ. ಅವನನ್ನು ತೊರೆದುಹೋಗುತ್ತಾಳೆ.

ಆಗ ಆತನ ನೆರವಿಗೆ ಬರುವುದು ಅವನನ್ನು ಪ್ರೀತಿಯಿಂದ ಸಾಕಿಸಲುಹಿದ ತಾಯಿ. ಆತ ಬೇಕೆಂತಲೇ ಸುಳ್ಳು ಹೇಳಲಿಲ್ಲ, ಬದಲಾಗಿ ಆತ ಇದ್ದ ಸಂದರ್ಭ ಹಾಗಿತ್ತು ಎಂದು ತಾಯಿ ಮನವರಿಕೆ ಮಾಡಿಕೊಟ್ಟ ನಂತರ ಹೆಂಡತಿ ಆತನಲ್ಲಿಗೆ ವಾಪಸ್ ಬರುತ್ತಾಳೆ. ಹಾಗೆ ಬರುವಾಗ “ನಿನಗಾಗಿ ಮೂವರು ತಾಯಂದಿರು ಅದೆಷ್ಟು ಪ್ರೀತಿ ತೋರಿದರು” ಎಂದು ಉದ್ಗಾರವೆತ್ತುತ್ತಾಳೆ ಮತ್ತು ಆತ ತನ್ನ ಹೆತ್ತ ತಾಯಿಯನ್ನು ಹುಡುಕಬೇಕು ಎಂದು ಹೇಳುತ್ತಾಳೆ. ಅವರಿಗೊಬ್ಬ ಮಗ ಜನಿಸಿದಾಗ ಸಾಲೊಮನ್ ಆಫ್ರಿಕಾದ ನಿರಾಶ್ರಿತರ ಶಿಬಿರದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆಗ ಓರ್ವ ಮುದುಕಿ ಆತನ ಕಣ್ಣಿಗೆ ಬೀಳುತ್ತಾಳೆ, “ಅಮ್ಮಾ ಎಂದು ಆಕೆಯನ್ನು ಆಪ್ಪಿಕೊಳ್ಳುತ್ತಾನೆ. ಆಕೆಯ ಆಕ್ರಂದನದೊಂದಿಗೆ ಚಿತ್ರ ಮುಗಿಯುತ್ತದೆ.

ಈ ಜಗತ್ತಿನಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಅದೆಷ್ಟು ಜನ ಏನೇನನ್ನು ಮಾಡಿಲ್ಲ. ಅದೆಷ್ಟೋ ಜನ ಪ್ರಾಣರಕ್ಷಣೆಗಾಗಿ ಇತರರನ್ನು ಕೊಂದಿದ್ದಾರೆ, ಉಪವಾಸದಿಂದ ಸಾಯಬಾರದೆಂದು ಇತರೆ ಮನುಷ್ಯರ ಮಾಂಸವನ್ನು ತಿಂದು ಬದುಕಿದ್ದಾರೆ, ಮೂತ್ರವನ್ನು ಕುಡಿದು ತಮ್ಮ ಪ್ರಾಣ ಹೋಗದಂತೆ ನೋಡಿಕೊಂಡಿದ್ದಾರೆ, ನೂರಾರು ಸುಳ್ಳು ಹೇಳಿದ್ದಾರೆ. ತಮ್ಮನ್ನು ನಂಬಿರುವವರಿಗೇ ದ್ರೋಹ ಬಗೆದಿದ್ದಾರೆ.

‘Live and become’ ನ ನಾಯಕ ಕೂಡ ತನ್ನ ಪ್ರಾಣರಕ್ಷಣೆಗೆ ಸುಳ್ಳು ಹೇಳಿದ್ದಾನೆ. ತನ್ನ ಗುಟ್ಟು ರಟ್ಟಾಗದಂತೆ ಪ್ರತಿಕ್ಷಣ ಎಚ್ಚರಿಕೆ ವಹಿಸಿದ್ದಾನೆ. ಆದರೆ ಪ್ರೀತಿಗೆ ಆ ಸುಳ್ಳನ್ನು ಹೊರಗೆಡಹುವ ಮತ್ತು ಆ ಸುಳ್ಳನ್ನು ಮೀರಿ ಬದುಕುವ ಶಕ್ತಿ ಇದೆ ಎಂದು ಚಿತ್ರ ತೋರಿಸುತ್ತದೆ.

ಪ್ರೀತಿಯೇ ಹೆತ್ತ ತಾಯಿ ಅವನನ್ನು ದೂರ ಕಳುಹಿಸುವಂತೆ ಮಾಡುತ್ತದೆ. ಪ್ರೀತಿಯೇ ಮತ್ತೋರ್ವ ತಾಯಿ ಅವನನ್ನು ರಕ್ಷಿಸುವಂತೆ ಮಾಡುತ್ತದೆ. ಪ್ರೀತಿಯೇ ಮೂರನೆ ತಾಯಿ ಅವನನ್ನು ಸಾಕಿಸಲಹುವಂತೆ ನೋಡಿಕೊಳ್ಳುತ್ತದೆ. ಪ್ರೀತಿಯೇ ಅವನ ಹೆಂಡತಿ ಅವನನ್ನು ಸ್ವೀಕರಿಸುವಂತೆ ಮಾಡುತ್ತದೆ. ದೇಶ, ಭಾಷೆ, ಧರ್ಮ, ಬಣ್ಣದಂತಹ ಗಡಿಗಳನ್ನು ಗುರುತಿಸದ ಪ್ರೀತಿಗೆ ಇರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಇದು ಆಗಸ್ಟ್ 05, 2009ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಮರುಪ್ರಕಟಣೆ


ಇದನ್ನೂ ಓದಿ: ಗೌರಿ ಕಾರ್ನರ್; ’ಮಾತಿ ಮಾಯ್’ ಸಿನಿಮಾ: ತಾಯಿಯ ಸಂಕಟವನ್ನು ಪಿಶಾಚಿಯ ಕೂಗೆಂದರೆ;

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...