ದೇಶದಾದ್ಯಂತ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದ್ದಂತೆ ದೇಶದ ಹಲವು ರಾಜ್ಯಗಳು ಕೊರೊನಾ ಕಾರಣಕ್ಕೆ ಹೇರಲ್ಪಟ್ಟಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸುತ್ತಿವೆ. ಅದರಂತೆ ರಾಜ್ಯದಲ್ಲೂ ಮೊದಲ ಹಂತದ ಅನ್ಲಾಕ್ ಪ್ರಕ್ರಿಯೆ ಕಳೆದ ವಾರವೆ ಪ್ರಾರಂಭವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಲಾಗಿದೆ. ಈಗ ಎರಡನೇ ಹಂತದ ಅನ್ಲಾಕ್ ಮಾಡಲು ಸರ್ಕಾರ ಮುಂದಾಗಿದೆ.
ಜೂನ್ 21 ರಿಂದ ಅನ್ಲಾಕ್ 2.0 ಜಾರಿಯಾಗಲಿದ್ದು, ಕೆಲವು ಕ್ಷೇತ್ರಗಳಿಗೆ ವಿನಾಯಿತಿ ಸಿಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2 ನೇ ಹಂತದ ಲಾಕ್ಡೌನ್ ಸಡಿಲಿಕೆಯಲ್ಲಿ ಯಾವುದಕ್ಕೆಲ್ಲಾ ಅನುಮತಿ ಇರುತ್ತದೆ ಮತ್ತು ಯಾವುದಕ್ಕೆಲ್ಲಾ ನಿರ್ಬಂಧ ಎಂಬುದನ್ನು ಇನ್ನಷ್ಟೆ ತಿಳಿಯಬೇಕಿದೆ. ಸೋಮವಾರದಿಂದ ಅನ್ಲಾಕ್ 2.O ಜಾರಿ ಹಿನ್ನಲೆ, ಅಂದಿನಿಂದ ಕರ್ನಾಟಕ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಸ್ ಮತ್ತು ಮೆಟ್ರೋ ಸಂಚಾರದ ಬಗ್ಗೆ ಇಂದಿನ ಸಿಎಂ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಜೂನ್ 21 ರಿಂದ ಅನ್ಲಾಕ್ 2.O ಜಾರಿಯಾದರೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ ಓಡಾಟವಿರುತ್ತದೆ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 1500-2000 ಬಸ್ಗಳು ಓಡಾಟ ನಡೆಸಲಿವೆ. ಕೊರೋನಾ ಭೀತಿಯಿಂದಾಗಿ ಬಿಎಂಟಿಸಿ ಎಸಿ ವೋಲ್ವೋ ಬಸ್ಸುಗಳ ಸಂಚಾರ ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: 7 ವರ್ಷಗಳ ದುರಾಡಳಿತ, ಏಳಬೇಕೀಗ ಭಾರತ: ಡಾ. ಎಚ್ ವಿ ವಾಸು
ಬಸ್ಸುಗಳಲ್ಲಿ 50% ದಷ್ಟು ಪ್ರಯಾಣಿಕರಿಗೆ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎನ್ನಾಗಿದೆ. ಬಸ್ಸುಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ ಇರಲಿದ್ದು, ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ಇಲ್ಲ. ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಬ್ದಾರಿ ಪೊಲೀಸ್ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ ನೀಡಲಾಗಿದೆ.
ಇದರ ಜೊತೆಗೆ ಜೂನ್ 21ರಿಂದ ಕೆಎಸ್ಆರ್ಟಿಸಿ ಬಸ್ಗಳನ್ನು ರಸ್ತೆಗಿಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದಲ್ಲಿ ಒಟ್ಟು 8 ಸಾವಿರ ಕೆಎಸ್ಆರ್ಟಿಸಿ ಬಸ್ಸುಗಳಿದ್ದು, ಅದ್ರಲ್ಲಿ 2500 ರಿಂದ 3000 ಸಾವಿರ ಬಸ್ಸುಗಳನ್ನು ಮಾತ್ರ ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದೆ ಎಂದು ವರದಿಯಾಗಿದೆ.
ಅತೀ ಹೆಚ್ಚು ಸೋಂಕು ಇರುವ ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಬಸ್ ಓಡಾಟ ಇರುವುದಿಲ್ಲ. ಸದ್ಯ ಹೊರ ರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಮಾಡುವ ಸಾಧ್ಯತೆ ಕಡಿಮೆ ಇದೆ. ಎಸಿ, ಸ್ಲೀಪರ್ ಬಸ್ಸುಗಳನ್ನು ರಸ್ತೆಗಿಳಿಸದಿರಲು ತೀರ್ಮಾನ ಮಾಡಲಾಗಿದೆ. ಕೆಎಸ್ ಆರ್ ಟಿಸಿ ಬಸ್ಗಳಲ್ಲಿಯೂ ಬಿಎಂಟಿಸಿಯಂತೆ 50% ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ‘ಎಲ್ಕೆಜಿ ಮಗು’ ಎಂದು ಅಪಹಾಸ್ಯ ಮಾಡಿದ್ದಕ್ಕೆ ದೇಶದ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಹೇಳಿದ್ದೇನು?