Homeಕರೋನಾ ತಲ್ಲಣ7 ವರ್ಷಗಳ ದುರಾಡಳಿತ, ಏಳಬೇಕೀಗ ಭಾರತ: ಡಾ. ಎಚ್ ವಿ ವಾಸು

7 ವರ್ಷಗಳ ದುರಾಡಳಿತ, ಏಳಬೇಕೀಗ ಭಾರತ: ಡಾ. ಎಚ್ ವಿ ವಾಸು

- Advertisement -
- Advertisement -

ಮೇ ತಿಂಗಳ ಕೊನೆಯ ವಾರದ ಸಂಚಿಕೆಯಲ್ಲಿ ನರೇಂದ್ರ ಮೋದಿ ಸರ್ಕಾರದ 7 ವರ್ಷಗಳ ಸಾಧನೆ ಅಥವಾ
ವೈಫಲ್ಯದ ಕುರಿತು ಬರೆಯಬೇಕಿತ್ತು. ಆದರೆ ಸಂಪಾದಕರು ಕೊರೊನಾ ನಿರ್ವಹಣೆಯ ವೈಫಲ್ಯ ಮತ್ತು ಕೊರೊನಾ, ಕಪ್ಪು ಫಂಗಸ್ ಹಾಗೂ ವ್ಯಾಕ್ಸೀನ್ ಕುರಿತ ವೈಜ್ಞಾನಿಕ ಸಂಗತಿಗಳನ್ನು ಜನರಿಗೆ ತಲುಪಿಸುವುದು ನಮ್ಮ ಆದ್ಯತೆಯಾಗಿರಬೇಕೆಂದು ಭಾವಿಸಿದರು. ಜೊತೆಗೆ ಈ 7 ವರ್ಷಗಳಲ್ಲಿ ಮೋದಿ ಸರ್ಕಾರದ ಕುರಿತು ನ್ಯಾಯಪಥ ಮತ್ತು ಗೌರಿ ಲಂಕೇಶ್ ಪತ್ರಿಕೆಯಲ್ಲಿ ನಿರಂತರವಾಗಿ ಬರೆಯಲಾಗಿದೆ. ಹೌದು, ಬಹುತೇಕ ಟೀಕೆಗಳನ್ನೇ ಮಾಡಲಾಗಿದೆ. ಮತ್ತೆ ಅದನ್ನೇ ಪುನರಾವರ್ತಿಸುವುದರಿಂದ ಬೋರ್ ಹೊಡೆಯುವುದಲ್ಲದೇ ಮತ್ತೇನೂ ಪ್ರಯೋಜನವಿಲ್ಲ.

ನರೇಂದ್ರ ಮೋದಿ ಸರ್ಕಾರದ ಕುರಿತು ನಿಮ್ಮ ಅನಿಸಿಕೆಗಳು ಒನ್ ಸೈಡೆಡ್ ಅಂತ ಕೆಲವರು ಹೇಳುತ್ತಾರೆ. ಹೌದು ಅದರಲ್ಲೇನೂ ಸಂದೇಹವಿಲ್ಲ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಯ ಕೆಲಸ ಆಡಳಿತ ಪಕ್ಷವನ್ನು ಪ್ರಶ್ನಿಸುವುದಾಗಿರಬೇಕು, ಹಾಗಾಗಿ ಹೀಗೆ ಎಂದು ಹೇಳಿದರೂ ಕ್ಲೀಷೆಯಾದೀತು. ಯಾವ ಪರಂಪರೆಯನ್ನು ಈ ಪತ್ರಿಕೆಯು ಪ್ರತಿನಿಧಿಸುತ್ತದೋ ಅದು ಇದುವರೆಗೆ ಅತ್ಯಂತ ಹೆಚ್ಚು ಟೀಕಿಸಿರುವುದು ಕಾಂಗ್ರೆಸ್ ಪಕ್ಷದ ಸರ್ಕಾರಗಳನ್ನು, ಬೇಕಾದರೆ ನಮ್ಮೆಲ್ಲಾ ಹಳೆಯ ಸಂಚಿಕೆಗಳನ್ನು ನೋಡಿ ಎಂದೂ ಹೇಳಹೋಗುವುದಿಲ್ಲ. ಇಂತಹ ಸಮಜಾಯಿಷಿಗಳಿಂದ ಹೆಚ್ಚೇನೂ ಪ್ರಯೋಜನವಾಗದು. ಏಕೆಂದರೆ ಈ ರೀತಿಯ ಪ್ರಶ್ನೆ ಕೇಳುವವರಲ್ಲಿ ಆ ಪ್ರಮಾಣದ ಕುರುಡುತನ ಆವರಿಸಿದೆ.

ಕೆಲವೊಮ್ಮೆ ಒನ್‌ಸೈಡೆಡ್ ಆಗಿ ನಿಲ್ಲುವುದರ ಅಗತ್ಯವಿರುತ್ತದೆ. ಸತ್ಯ, ನ್ಯಾಯ ಹಾಗೂ ಮಾನವೀಯತೆಯ ಪರ ಒನ್‌ಸೈಡೆಡ್ ಆಗಿ. ಆದರೆ ನರೇಂದ್ರ ಮೋದಿಯವರ ವಿರುದ್ಧ ಎಂದರೆ ಕಾಂಗ್ರೆಸ್ ಪರ, ಬಿಜೆಪಿಯ ಪರ ಎಂದರೆ ಹಿಂದುಗಳ ವಿರುದ್ಧ ಎಂಬಂತೆ ಹೇಳುವವರ ಜೊತೆಯೇ ಸಮಸ್ಯೆ. ಇಂದಿರಾಗಾಂಧಿಯವರನ್ನು ನಖಶಿಖಾಂತ ವಿರೋಧಿಸಿದವರಲ್ಲಿ ಕೆಲವರನ್ನು ಬಿಟ್ಟರೆ ಬಹುತೇಕರು ನರೇಂದ್ರ ಮೋದಿಯವರ ವಿರುದ್ಧ ಇದ್ದಾರೆ ಎಂಬುದು ಅವರಿಗೆ ಕಾಣುವುದಿಲ್ಲ. ಜೀವನವಿಡೀ ಕಾಂಗ್ರೆಸ್ಸನ್ನು ವಿರೋಧಿಸಿಕೊಂಡು ಬಂದ ಕೆಲವರು ತಮ್ಮ ಕಡೆಗಾಲದಲ್ಲಿ ಅದನ್ನು ಬೆಂಬಲಿಸುತ್ತಿರುವುದೇಕೆ ಎಂಬುದೂ ಗೊತ್ತಾಗುವುದಿಲ್ಲ. ನರೇಂದ್ರ ಮೋದಿ ಹಾಗೂ ಬಿಜೆಪಿಗಳು ಕಾಂಗ್ರೆಸ್ ಹಾಗೂ ಇಂದಿರಾಗಾಂಧಿಯ ಮುಂದುವರಿಕೆ ಎಂದು ಭಾವಿಸಲೂ ಕಾರಣಗಳಿವೆ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದಲ್ಲಿ ಹಿಂದೂಗಳ ಪರ ನಿಲ್ಲುವುದು ಎಂದರೆ ಅದು ಬಿಜೆಪಿ, ಆರೆಸ್ಸೆಸ್ಸಿನ ವಿರುದ್ಧ ನಿಲ್ಲುವುದು ಎಂಬುದಂತೂ ಅಂಥವರಿಗೆ ಅರ್ಥವಾಗುವುದು ಇನ್ನೂ ಕಷ್ಟ. ಏಕೆಂದರೆ ಅವರು ಕುರುಡುತನದಿಂದ ಅಥವಾ ಹಠದಿಂದ ವಾದಕ್ಕಷ್ಟೇ ನಿಂತಿರುತ್ತಾರೆ. ಚರ್ಚೆಗೆ, ಸಂವಾದಕ್ಕೆ ಅಲ್ಲ.

ಅದೇನೇ ಇರಲಿ, ಈ 7 ವರ್ಷಗಳ ಬಿಜೆಪಿ ಫುಲ್ ಮೆಜಾರಿಟಿ ಸರ್ಕಾರದ ಕುರಿತಂತೆ ಬರೆಯುತ್ತಾ ಮತ್ತೆ ನಕಾರಾತ್ಮಕ ಸಂಗತಿಗಳನ್ನು ಬರೆಯಲು ಅಷ್ಟು ಉತ್ಸಾಹ ಹುಟ್ಟುತ್ತಿಲ್ಲ. ಹಾಗಾಗಿ ಈಗ ಒಂದಷ್ಟು ಸಕಾರಾತ್ಮಕ ಸಂಗತಿಗಳ ಕುರಿತು ಬರೆದು, ಪಾಸಿಟಿವಿಟಿ ಹೆಚ್ಚಿಸಲು ಈ ಲೇಖನದಲ್ಲಿ ಆದ್ಯತೆ ಕೊಡಲಾಗಿದೆ.

ಸಕಾರಾತ್ಮಕ ಸಂಗತಿ ಏನೆಂದರೆ ಮೋದಿಯವರಿಗೆ ಸುಳ್ಳು ಹೇಳುವುದು ಸುಸ್ತು ತರುತ್ತಿದೆ. ಅವರಿಗೆ ತಮ್ಮ ಮಾತುಗಳು ಸೋಲುತ್ತಿರುವುದರ ಅರಿವಾಗುತ್ತಿದೆ. ಅದಕ್ಕೆ ನಿನ್ನೆಯ (ಜೂನ್ 7ರ) ಭಾಷಣವೇ ಸಾಕ್ಷಿ. ಅದರಲ್ಲಿ ಸತ್ವವಾಗಲೀ, ಉತ್ಸಾಹವಾಗಲೀ ಇಲ್ಲದೇ ಮೋದಿಯವರು ಆ ಭಾಷಣ ಮಾಡಲು ಬೇಕಾದ ಶಕ್ತಿ ಸಂಚಯ ಮಾಡಿಕೊಳ್ಳುತ್ತಾ ಸುಸ್ತಾಗುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಸುಸ್ತು ಏಕೆ ಆಗುತ್ತಿದೆ?

ಸುಳ್ಳುಗಳನ್ನು ಹೇಳುತ್ತಿರುವುದು ಅವರಿಗೇ ಗೊತ್ತಿದ್ದರೂ, ಅವರೇ ನಂಬಿಕೊಂಡು ಹೋದಷ್ಟು ದಿನ ಸುಸ್ತೆನಿಸುವುದಿಲ್ಲ; ಅದಕ್ಕಿಂತ ಹೆಚ್ಚಾಗಿ ಮಿಕ್ಕವರಿಗೆ ಅದು ಸುಳ್ಳೆಂದು ಗೊತ್ತಾಗುತ್ತಿದೆ ಎಂದು ಗೊತ್ತಾದಾಗ ಕಷ್ಟವಾಗುತ್ತದೆ. ಮುಖ್ಯವಾಗಿ ಸದರಿ ಭಾಷಣದಲ್ಲಿ ರಾಜ್ಯಗಳ ಮೇಲೆ ಮೋದಿಯವರು ಮುಗಿಬಿದ್ದ ರೀತಿಯು ಅವರಿಗೆ ಅತೀವ ಸುಸ್ತು ತಂದಂತೆ ಕಂಡಿತು. ಏಕೆಂದರೆ ವ್ಯಾಕ್ಸಿನ್ ಒಳಗೊಂಡಂತೆ ಕೋವಿಡ್ ನಿಯಂತ್ರಣದ ಬಹುತೇಕ ಸಂಗತಿಗಳನ್ನು ಸಂಪೂರ್ಣ ಕೇಂದ್ರೀಕರಿಸಿದ್ದ ಒಕ್ಕೂಟ ಸರ್ಕಾರವು, ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದಿದ್ದಾಗ ಮಾತ್ರ ರಾಜ್ಯಗಳ ತಲೆ ಮೇಲೆ ಹಾಕಲು ಶುರು ಮಾಡಿತ್ತು. ರಾಜ್ಯಗಳು ಆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರ ಜೊತೆಗೆ ಒಕ್ಕೂಟ ಸರ್ಕಾರದ ಮೇಲೆ ಒಂದೇ ಸಮನೆ ಒತ್ತಡ ನಿರ್ಮಿಸಿದ್ದವು.

ನಮಗೆ ಅವಕಾಶ ಕೊಡಿ, ಅಧಿಕಾರ ಕೊಡಿ, ಅನುದಾನ ಕೊಡಿ ಎಂಬುದು ಅವರ ಬೇಡಿಕೆಯಾಗಿತ್ತು. ಇದರಿಂದ ವ್ಯಾಕ್ಸೀನ್ ಕುರಿತಂತೆ ಕಳೆದ ಜುಲೈನಿಂದ ಮೋದಿ ಸರ್ಕಾರವು ಸತತವಾಗಿ ಹೇಳುತ್ತಾ ಬಂದ ಸುಳ್ಳುಗಳೆಲ್ಲವೂ ಬಯಲಾಗಿದ್ದವು. ಈಗ ಲೀಡರ್ ಬದಲಾದ ಸುಪ್ರೀಂಕೋರ್ಟಿನಿಂದ ಒಂದೇ ಸಮನೆ ಮೊಟಕಿಸಿಕೊಳ್ಳಬೇಕಾಗಿ ಬಂದಿದೆ. ಗಂಗೆಯಲ್ಲಿ ತೇಲಿಹೋದ ಶವಗಳು, ದೇಶದ ಕೋಟಿಗಟ್ಟಲೆ ಕುಟುಂಬಗಳ ಕಣ್ಣೀರು, ಕುಸಿಯುತ್ತಿರುವ ಆರ್ಥಿಕತೆ ಇವೆಲ್ಲವೂ ಸಾಮಾನ್ಯ ಜನರಲ್ಲಿ ಆಕ್ರೋಶ ಹುಟ್ಟಿಸಲು ಶುರು ಮಾಡಿವೆ ಎಂಬುದು ಎಂಥವರಿಗೂ ಗೊತ್ತಾಗುತ್ತದೆ. ಎಲ್ಲಾ ಗೊತ್ತಿರುವ ಬಿಜೆಪಿ ಸರ್ಕಾರಕ್ಕೆ ಗೊತ್ತಾಗುವುದಿಲ್ಲವೇ? ಹೀಗಾಗಿ ಏನೋ ಒಂದು ವೇಷ ಬದಲಾವಣೆಯ ಅಗತ್ಯವಿತ್ತು. ಹಿಂದಿನ ಸಾರಿಯಂತೆ ನಿರ್ಮಲಾ ಸೀತಾರಾಮನ್ ಅವರನ್ನೋ ಅಥವಾ ಹರ್ಷವರ್ಧನ್‌ರನ್ನೋ ಫೀಲ್ಡಿಗೆ ಇಳಿಸಿದರೆ ಪ್ರಯೋಜನವಿಲ್ಲ. ಖುದ್ದಾಗಿ ಖಾವಂದರೇ ಬರಬೇಕಾಯಿತು, ಬಹು ಕಷ್ಟದ ಕೆಲಸವದಾಗಿತ್ತು.

ಆದರೆ ಅಂತಹ ತೇಪೆದಾರಿಕೆಯ ಸಂದರ್ಭದಲ್ಲೂ ವಿಪರೀತ ಸುಳ್ಳುಗಳನ್ನು ಹೇಳಬೇಕಾಗಿ ಬಂದಿದ್ದು ಬತ್ತಳಿಕೆಯಲ್ಲಿ ಬಾಣಗಳೆಲ್ಲಾ ಖಾಲಿಯಾಗಿರುವುದರ ಸೂಚಕವಾಗಿತ್ತು. ರಾಜ್ಯಗಳಿಗೆ ಅಧಿಕಾರ ಕೊಡಬೇಕು ಎಂಬ ಒತ್ತಾಯ ಕೇಳಿಬಂದಿದ್ದರಿಂದ ಕೊಟ್ಟಿದ್ದೆವು, ಅವರು ಹಾಳು ಮಾಡಿದ್ದರು, ನಾವೀಗ ಸರಿ ಮಾಡಲು ಮತ್ತೆ ಮರಳಿ ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದೇವೆ ಎಂಬ ಹುಸಿ ಪೋಸು ಕೊಟ್ಟರು. ಅವರ ದುರಂತ ಅದಲ್ಲ; ಈಗಲೂ ವ್ಯಾಕ್ಸೀನ್ ಕೊರತೆಯನ್ನು ಸರಿ ಮಾಡಿಕೊಳ್ಳುವುದು ಸುಲಭ ಸಾಧ್ಯವಿಲ್ಲ ಎಂಬುದು ಎಲ್ಲರಿಗಿಂತ ಚೆನ್ನಾಗಿ ಅವರಿಗೇ ಗೊತ್ತಿದೆ. ಈ ಅರಿವು ಸುಸ್ತು ಮಾಡಿಸುತ್ತದೆ. ಅಷ್ಟರ ಮೇಲೆ 70 ವರ್ಷ ಮಾಡದೇ ಇದ್ದುದನ್ನು ೫ ವರ್ಷಗಳಲ್ಲಿ ಮಾಡಿದ್ದೇವೆಂಬ ಇನ್ನೂ ದೊಡ್ಡ ಹುಸಿ ಕ್ಲೇಮು ಬೇರೆ ಮಾಡುವಾಗ ಉಸಿರು ಹಿಡಿಯುತ್ತದೆ. ಅದೇ ನಿನ್ನೆ ಮೋದಿಯವರಿಗೆ ಆಗಿದ್ದು. ಈ ಭಾಷಣ ಮುಗಿಸಿದ ಕೆಲವೇ ಗಂಟೆಗಳಲ್ಲಿ ’ದಿ ಹಿಂದೂ’ ಪತ್ರಿಕೆಯು ಅದರಲ್ಲಿನ ಪ್ರಮುಖ ಕ್ಲೇಮನ್ನು ಸುಳ್ಳೆಂದು ಫ್ಯಾಕ್ಟ್ ಚೆಕ್ ಮಾಡಿಬಿಡುತ್ತದೆ. ಸುಳ್ಳನ್ನು ಪತ್ತೆ ಹಚ್ಚುವುದು ಒಂದರ್ಧ ಜನರಿಗೆ ಸಾಧ್ಯವಾಗದೇ ಇರಬಹುದು; ಆದರೆ ಈಗ ಸತ್ಯ ಮಾತಾಡಲು ಧೈರ್ಯ ಪಡೆದುಕೊಂಡಿರುವವರು ಹೆಚ್ಚುತ್ತಿದ್ದಾರೆ.

ಬದಲಾದ ಇನ್ನೊಂದು ಸಂದರ್ಭವೂ ಇದೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳ ನಂತರ ರಾಜ್ಯ ಸರ್ಕಾರಗಳ ಧೈರ್ಯ ಹೆಚ್ಚಲಿದೆ. ದೊಡ್ಡ ರಾಜ್ಯಗಳ ಪೈಕಿ ಪ.ಬಂಗಾಳ, ಜಾರ್ಖಂಡ್, ಪಂಜಾಬ್, ರಾಜಸ್ತಾನ, ಮಹಾರಾಷ್ಟ್ರ, ಛತ್ತೀಸ್‌ಗಢ, ಕೇರಳ, ತಮಿಳುನಾಡುಗಳಲ್ಲಿ ಬಿಜೆಪಿ ವಿರೋಧಿ ಸರ್ಕಾರಗಳಿವೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಒರಿಸ್ಸಾಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿವೆ. ದೊಡ್ಡ ರಾಜ್ಯಗಳ ಪೈಕಿ ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಅಸ್ಸಾಂ, ಕರ್ನಾಟಕ, ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿಯೂ, ಬಿಹಾರದಲ್ಲಿ ಅವರ ಕೂಟದ ಸರ್ಕಾರಗಳೂ ಇವೆ. ದೆಹಲಿ ಪುಟ್ಟದಾದರೂ ಮಹತ್ವದ ರಾಜ್ಯವಾಗಿದ್ದು, ಬಿಜೆಪಿಯ ವಿರುದ್ಧ ದನಿಯೆತ್ತುವ ಪಕ್ಷ ಅಧಿಕಾರದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಗೆ ಎರಡು ರೀತಿಯ ಅನನುಕೂಲವಿದೆ. ರಾಜ್ಯಗಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದಿದ್ದರೆ ಬಿಜೆಪಿಯೇತರ ಸರ್ಕಾರಗಳಿಂದ ವಿರೋಧ; ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರಗಳು ಜನಪ್ರಿಯತೆ ಕಳೆದುಕೊಳ್ಳುವ ಸಾಧ್ಯತೆ.

ಅಂದರೆ ಮೋದಿ ಸರ್ಕಾರವು ಕಳೆದ 7 ವರ್ಷಗಳಲ್ಲಿ ಎಂದೂ ಇಲ್ಲದಿರುವ ಪ್ರಮಾಣದ ಸವಾಲನ್ನು ಎದುರಿಸುತ್ತಿದೆ. ಮೋದಿಯವರ ಭಾಷಣದ ಸುಸ್ತಿನ ಮೂಲ ಅಲ್ಲಿದೆ. ಇದಕ್ಕಿಂತ ಹೆಚ್ಚಾಗಿ ಸದ್ಯದಲ್ಲೇ ಕಾಡಲಿರುವ ದೊಡ್ಡ ಸಮಸ್ಯೆಯಿದೆ. ಅದು ದೇಶವು ಎದುರಿಸಲಿರುವ ಆರ್ಥಿಕ ಬಿಕ್ಕಟ್ಟಿನದ್ದು. ಮೊದಲನೇ ಲಾಕ್‌ಡೌನ್‌ನಲ್ಲಿ ನೆಪಮಾತ್ರಕ್ಕೆ ಒಂದು ಪ್ಯಾಕೇಜ್ ಇತ್ತು; ಈ ಸಾರಿ ಅದೂ ಇಲ್ಲ. ದೇಶದ ಗಣನೀಯ ಪ್ರಮಾಣದ ಆರ್ಥಿಕತೆಯನ್ನು ಲಾಕ್‌ಡೌನ್‌ನಿಂದ ಸ್ತಬ್ಧಗೊಳಿಸಿದ ನಂತರ ಅದಕ್ಕೊಂದು ಆರ್ಥಿಕ ಪುನಶ್ಚೇತನದ ಪ್ಯಾಕೇಜ್ ಬೇಕೆಂಬುದು ಎಕನಾಮಿಕ್ಸ್‌ನ ಬೇಸಿಕ್ ಪಾಠವಲ್ಲವೇ? 2020ರ ಮಾರ್ಚ್ ಕೊನೆಯ ಭಾಗದಲ್ಲಿ ಪ್ರಪಂಚದ ಮಟ್ಟದಲ್ಲಿ ಹೆಸರು ಮಾಡಿರುವ (ಮುಕ್ತ ಮಾರುಕಟ್ಟೆಯನ್ನು ಒಪ್ಪಿರುವ) ಕನಿಷ್ಠ 7 ಅರ್ಥಶಾಸ್ತ್ರಜ್ಞರು ಜನರ ಕೈಗೆ ಉದಾರವಾಗಿ ಹಣ ನೀಡಿ, ಅದೊಂದೇ ಉಳಿದಿರುವ ದಾರಿ ಎಂದರು. ಅದನ್ನು ಆಗಲೂ ಮಾಡಲಿಲ್ಲ; ಈಗಲೂ ಮಾಡುತ್ತಿಲ್ಲ.

ಈ ಸರ್ಕಾರಕ್ಕೆ ಆರ್ಥಿಕ ಸಲಹೆ ಕೊಡುವವರು ಯಾರೂ ಇದ್ದಂತಿಲ್ಲ. ಜನರ ಕೈಯ್ಯಲ್ಲಿ ಹಣ ಓಡಾಡದೇ ಇದ್ದರೆ, ಕೊಳ್ಳುವ ಶಕ್ತಿ ಉಳಿದುಕೊಳ್ಳದೇ ಇದ್ದರೆ ತಳಮಟ್ಟದ ಜನರು ಮಾತ್ರವೇ ಅಲ್ಲ, ಅಲ್ಲಿಂದ ಒಂದು ಸರಣಿಯೋಪಾದಿಯಲ್ಲಿ ಮೇಲಿನ ಸ್ತರದ ಜನರಲ್ಲೂ ಆರ್ಥಿಕತೆ ಬೆಳೆಯುವುದು ಸಾಧ್ಯವೇ ಇಲ್ಲ. ಆದರೆ ಈ ಸರ್ಕಾರದ ನೀತಿಯು ಮೊದಲಿಂದಲೂ ಹಣವು ಕೆಲವರಲ್ಲಿ (ಅದರಲ್ಲೂ ಬೆರಳೆಣಿಕೆಯ ಉದ್ದಿಮೆಪತಿಗಳ ಕೈಯ್ಯಲ್ಲಿ ಹಾಗೂ ಎಲ್ಲಾ ಪಕ್ಷಗಳಿಂದ ವಲಸೆ ಬಂದು ಬಿಜೆಪಿಯಲ್ಲಿ ಕೂಡಿಕೊಂಡಿರುವ ಭ್ರಷ್ಟರಲ್ಲಿ) ಮಾತ್ರ ಸಂಪತ್ತು ಶೇಖರಣೆ ಮಾಡುವುದೇ ಆಗಿದೆ. ಇದರ ಫಲವಾಗಿ ದೇಶದ ಜಿಡಿಪಿಯು -7.3%ಗಿಳಿದಿದೆ. ಇದರ ಪರಿಣಾಮವು ದೇಶದ ಮೇಲೆ ಏನಿರಬಹುದು?

ಯಾವುದೇ ಫ್ಯಾಸಿಸ್ಟ್ ಪಕ್ಷವು (ಒಂದೆರಡು ಅಪವಾದಗಳನ್ನು ಹೊರತುಪಡಿಸಿ) ದೀರ್ಘಕಾಲ ಉಳಿಯುವುದಿಲ್ಲ; ಹೋಗುತ್ತದೆ ಎಂಬುದು ಇತಿಹಾಸ ತೋರುವ ಸತ್ಯ. ಆದರೆ ತೊಲಗುವ ಮುಂಚೆ ಅಲ್ಲೊಂದು ನರಮೇಧ ನಡೆಸಿ ಹೋಗುತ್ತದೆ. ಅಂತಹದೊಂದು ನಡೆಯದೇ ಇದನ್ನು ಸೋಲಿಸುವುದು ಹೇಗೆ ಎಂಬುದಷ್ಟೇ ಕಾಳಜಿ. ಈಗ ದೇಶದಲ್ಲಿ ನರಮೇಧವೊಂದು ನಡೆದುಹೋಗಿದೆ. ಕೆಲವು ಲಕ್ಷ ಸಾವುಗಳ ಲೆಕ್ಕ ಇದೆ; ಹಲವು ಲಕ್ಷ ಸಾವುಗಳ ಲೆಕ್ಕವೂ ಇಲ್ಲ.

ಇದಿಲ್ಲಿಗೆ ನಿಲ್ಲುತ್ತದೆಯಾ?
ಹೇಳಲಾಗದು. ಏಕೆಂದರೆ ಮೋದಿ ಸರ್ಕಾರದ ವೈಫಲ್ಯಗಳಾಚೆಗೂ ಅವರ ಬಳಿಯಿರುವ ಸುಳ್ಳಿನ ಫ್ಯಾಕ್ಟರಿ ಮತ್ತು ಅದನ್ನು ದೇಶದ ಮೂಲೆ ಮೂಲೆಗೂ ಹಂಚಲು ಗುತ್ತಿಗೆ ತೆಗೆದುಕೊಂಡಿರುವ ಡೀಲರ್‌ಗಳ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಲಾಗದು. ಜೊತೆಗೆ ಈ ದೇಶ ವಿರೋಧಿ ಶಕ್ತಿಯನ್ನು ಜನಸಾಮಾನ್ಯರ ಕಣ್ಣಿನಲ್ಲಿ ವ್ಯವಸ್ಥಿತವಾಗಿ ಎಕ್ಸ್‌ಪೋಸ್ ಮಾಡಲಾಗದ ವೈಫಲ್ಯವೂ ಎದ್ದು ಕಾಣುತ್ತಿದೆ. ಪರ್ಯಾಯದ ಭರವಸೆ ಮೂಡಿಸದ ವಿರೋಧ ಪಕ್ಷಗಳು, ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಸಮಸ್ಯೆಯು ಬಹುದೊಡ್ಡ ತೊಡಕಾಗಿದೆ. ಮೋದಿಯಲ್ಲದಿದ್ದರೆ ಯಾರು ಎಂಬ ಪ್ರಶ್ನೆ ಎದುರಾದರೆ ಅವರ ವಿರೋಧಿಗಳೂ ತಡಕಾಡುತ್ತಾರೆ. ಏಕೆಂದರೆ ಮೋದಿಯ ಒಂದು ಬೃಹತ್ ಹುಸಿ ಇಮೇಜನ್ನು ಕಟ್ಟಿ ನಿಲ್ಲಿಸಲಾಗಿದೆ. ಅದಕ್ಕೆದುರು ಯಾರು ಎಂಬ ಪ್ರಶ್ನೆಗೆ ಇಷ್ಟು ಬೃಹತ್ ವೈಫಲ್ಯದ ನಂತರವೂ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬಲ್ಲ ಉತ್ತರವೇಕಿಲ್ಲ?

ಏಕೆಂದರೆ ಪ್ರಶ್ನೆಯಲ್ಲೇ ತಪ್ಪಿದೆ ಎಂದು ಹೇಳಲಾಗುತ್ತಿಲ್ಲ. ಮೊದಲನೆಯದಾಗಿ ಮೋದಿಯೇ ಪರ್ಯಾಯವಾಗಿರಲಿಲ್ಲ. ಹಿಂದೆ ಇದ್ದ ವ್ಯವಸ್ಥೆಯಲ್ಲಿ ಅಪಾರ ದೋಷಗಳಿದ್ದವು.
ಆದರೆ ಹಿಂದಿನೆಲ್ಲಾ ದೋಷಗಳ ವಿರಾಟ್ ರೂಪವೇ ಮೋದಿ ಮತ್ತು ಆರೆಸ್ಸೆಸ್ಸು. ಹಾಗಾಗಿಯೇ ಈ ಸರ್ಕಾರಕ್ಕಿಂತ ಹಿಂದಿನ ಎಲ್ಲಾ ಸರ್ಕಾರಗಳೂ ಈಗ ಸಭ್ಯರ ರೀತಿ, ಧರ್ಮಾತ್ಮರ ರೀತಿ, ದಕ್ಷರ ರೀತಿ ಕಾಣುತ್ತಿದ್ದಾರೆ.

ಇನ್ನು ಎರಡನೆಯದಾಗಿ, 70 ವರ್ಷಗಳ ಪ್ರಶ್ನೆ. 70 ವರ್ಷಗಳಲ್ಲಿ 50 ವರ್ಷ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದರೆ, 22 ವರ್ಷ ಬಿಜೆಪಿಯು ಅಂಗವಾಗಿದ್ದ ಸರ್ಕಾರಗಳಿದ್ದವು. 2 ವರ್ಷ ಬಿಜೆಪಿ ಇರದಿದ್ದ ಆದರೆ, ಕಾಂಗ್ರೆಸ್ ಪಕ್ಷವು ಹೊರಗಿನಿಂದ ಬೆಂಬಲ ಕೊಟ್ಟಿದ್ದ ಸರ್ಕಾರಗಳಿದ್ದವು. ತಮ್ಮ 50 ವರ್ಷಗಳಲ್ಲಿ ದೇಶದಲ್ಲಾದ ಸಾಧನೆಯನ್ನೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಏಕಿದೆಯೆಂದರೆ ಅವುಗಳಲ್ಲಿ ಮೂರು ಬಗೆಯ ಸಾಧನೆಗಳಿವೆ. ಒಂದು, ಸಹಜವಾಗಿ ಒಂದು ಸಮಾಜದ ಗತಿಯಲ್ಲಾಗುವ ಸಾಧನೆಗಳು. ಎರಡು, ನೆಹರೂ ಗಾಂಧಿ ಕುಟುಂಬವೂ ಸೇರಿದಂತೆ ಕೆಲವು ಪ್ರಮುಖ ನಾಯಕರುಗಳ ಆಲೋಚನೆಗಳಿಂದ ಆದ ಸಾಧನೆಗಳು. ಮೂರನೆಯದ್ದೇ ಮುಖ್ಯವಾದುದು- ಜನರ ಮತ್ತು ಜನಾಂದೋಲನಗಳ ಒತ್ತಾಸೆಯಿಂದ ಆದ ಸಾಧನೆಗಳು. ಇವೆಲ್ಲವೂ ಸೇರಿಯೇ ದೇಶ. ಆ ದೇಶವನ್ನು ತಾನು ಪ್ರತಿನಿಧಿಸುತ್ತೇನೆ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಬಹುತೇಕ ಪಕ್ಷಗಳಿಲ್ಲ.

ಈಗಿನ ಸವಾಲು ಇಷ್ಟೇ. ಈಗ ಎದುರಾಗಲಿರುವ ಬಿಕ್ಕಟ್ಟನ್ನು ತನ್ನ ಪ್ರೊಪಗಾಂಡಾ ಯಂತ್ರಾಂಗದ ಮೂಲಕ ಸಾಮಾಜಿಕ ಬಿಕ್ಕಟ್ಟಾಗಿ ಪರಿವರ್ತಿಸಿ, ಇನ್ನೊಂದು ಭೀಕರ ಸ್ಥಿತಿಯನ್ನೂ ನಿರ್ಮಾಣ ಮಾಡಿ ಅಧಿಕಾರದಲ್ಲಿ ಮುಂದುವರೆಯುವ ಸಾಧ್ಯತೆ ಈಗಲೂ ಬಿಜೆಪಿ ಮತ್ತು ಆರೆಸ್ಸೆಸ್ಸಿಗಿದೆ. ಇದುವರೆಗಿನ 7 ವರ್ಷಗಳಲ್ಲಿ ಮೋದಿ ಸರ್ಕಾರದ ನಾಯಕತ್ವ ಈಗಿನಷ್ಟು ದುರ್ಬಲವಾಗಿ ಎಂದೂ ಇರಲಿಲ್ಲ. ವಿಪರೀತ ಸ್ಟಿರಾಯ್ಡ್ ಪಡೆದುಕೊಂಡೂ ಶೇ.50ರಷ್ಟು ಆಕ್ಸಿಜನ್ ಸ್ಯಾಚುರೇಷನ್‌ನೊಂದಿಗೆ ಏಗುತ್ತಿದೆ. ಈ ಸಕಾರಾತ್ಮಕವಾದ ಸ್ಥಿತಿಯನ್ನು ಬಳಸಿಕೊಂಡು ದೇಶವನ್ನು ಉಳಿಸಿಕೊಳ್ಳುವ ಸವಾಲನ್ನು ನಾವು ತೆಗೆದುಕೊಳ್ಳಬೇಕಷ್ಟೇ.

ಡಾ.ವಾಸು ಎಚ್.ವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...