ಕೇಂದ್ರ ಸರ್ಕಾರ ಈ ವರ್ಷ ನಡೆಸುವ ರಾಷ್ಟ್ರೀಯ ಜನಗಣತಿ ಜೊತೆಜೊತೆಗೆ ಜಾತಿ ಗಣತಿಯನ್ನೂ ನಡೆಸಬೇಕು. ಆ ಮೂಲಕ, ಎಲ್ಲ ಜಾತಿ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಡಾ. ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಒತ್ತಾಯಿಸಿದ್ದು, ‘ರಾಜ್ಯ ಸಚಿವ ಸಂಪುಟದಲ್ಲಿಯೂ ಸಹ ಈ ಬಗ್ಗೆ ನಿರ್ಣಯ ಕೈಗೊಂಡು, ಉಭಯ ಸದನಗಳಲ್ಲಿ ನಿರ್ಣಯ ಅಂಗೀಕರಿಸುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ, “ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ರಾಷ್ಟ್ರೀಯ ಜನಗಣತಿ 2021ರಲ್ಲಿ ನಡೆಯಬೇಕಾಗಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕದ ಕಾರಣ ನಡೆಸಲಾಗಲಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ್ದು, 2025ರಲ್ಲಿ ಜನಗಣತಿ ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದೆ. ಈ ರಾಷ್ಟ್ರೀಯ ಜನಗಣತಿ ಜೊತೆಯಲ್ಲೇ ಜಾತಿ ಕಲಂ ಸೇರಿಸಬೇಕು. ದೇಶದಾದ್ಯಂತ ಎಲ್ಲ ಜಾತಿ, ಉಪಜಾತಿಗಳ ಸಮಗ್ರ ಸಮೀಕ್ಷೆ ನಡೆಸಬೇಕೆನ್ನುವುದು ನಮ್ಮ ಒತ್ತಾಯ” ಎಂದರು.
“ರಾಜ್ಯ ಸರ್ಕಾರ ಕೂಡ ಈ ಕುರಿತು ಸಚಿವ ಸಂಪುಟ ಸಭರಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಬೇಕೆನ್ನುವುದು ನಮ್ಮ ಬೇಡಿಕೆ. ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲೂ ಸಹ ನಿರ್ಣಯ ಅಂಗೀಕರಿಸಿ ಒತ್ತಡ ಹೇರಬೇಕು. ಇದನ್ನು ಸಾಧಿಸಲು ನಾವು ಪ್ರತಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಜಾಥಾ ಹಾಗೂ ವಿಚಾರಣ ಸಂಕಿರಣ ಆಯೋಜಿಸಲು ನಿರ್ಧರಿಸಿದ್ದೇವೆ” ಎಂದು ಮಾಹಿತಿ ನೀಡಿದ್ದೇವೆ.
“ಕೊನೆಯದಾಗಿ ದೇಶದಲ್ಲಿ ಜಾತಿಗಣತಿ ನಡೆದಿದ್ದು 1931ರಲ್ಲಿ; ಈ 94 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ 100 ಕೋಟಿಗಿಂತಲೂ ಹೆಚ್ಚಾಗಿದ್ದು, ಇಲ್ಲೀವರೆಗೆ ನೂರಾರು ಅತಿ ಹಿಂದುಳಿದ ಸಮುದಾಯಗಳ ವಿವರ ದೊರೆತಿಲ್ಲ. ಅವರೆಲ್ಲಾ ಅವಕಾಶ ವಂಚಿತರಾಗಿದ್ದಾರೆ” ಎಂದು ವಿವರಿಸಿದರು.
“ಈ ಹಿಂದುಳಿದ ಸಮುದಾಯಗಳ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆಯೆಂದರೆ, ಇದರಲ್ಲಿ ಮುಕ್ಕಾಲು ಪಾಲು ಜನರು ಪ್ರೌಢಶಿಕ್ಷಣವನ್ನೇ ಪಡೆದುಕೊಳ್ಳಲಾಗಿಲ್ಲ. ಉದಾಹರಣೆಗೆ, ಕರ್ನಾಟಕದಲ್ಲಿ 102 ಜಾತಿಗಳನ್ನು ಹಿಂದುಳಿದ ಸಮುದಾಯಗಳ ಪಟ್ಟಿಯ ಪ್ರವರ್ಗ -1ರಲ್ಲಿ ಸೇರಿಸಲಾಗಿದೆ. ಇನ್ನುಳಿದ 95 ಜಾತಿಗಳು ಪ್ರವರ್ಗ- 2(ಎ)ರಲ್ಲಿ ಒಳಗೊಂಡಿವೆ. ಅಧ್ಯಯನವೊಂದರ ಪ್ರಕಾರ, ಇವುಗಳಲ್ಲಿ 97 ಜಾತಿಗಳಿಗೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿಯೂ ಸರ್ಕಾರದಲ್ಲಿ ಅಟೆಂಡರ್ ಹುದ್ದೆಯನ್ನೂ ಕೂಡಾ ಪಡೆದುಕೊಳ್ಳಲು ಆಗಿಲ್ಲ” ಎಂದು ಹೇಳಿದರು.
‘ಜನಗಣತಿ ಜೊತೆಗೆ ಜಾತಿಗಣತಿಯೂ ಆಗಬೇಕು; ದೇಶದಲ್ಲಿ ಶೋಷಿತರು ಮತ್ತು ತಳ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಬೇಕಾದರೆ, ಅವರ ಬದುಕಿನಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕಾದರೆ ಜಾತಿಗಣತಿ ಅನಿವಾರ್ಯ. ಈಗಿನ ಡಿಜಿಟಲ್ ಯುಗದಲ್ಲಿ ಜಾತಿಗಣತಿಗೆ ಪ್ರತ್ಯೇಕ ಖರ್ಚು ಬೇಕಾಗಿಲ್ಲ. ಬಾಬಾ ಸಾಹೇಬರ ಆಶಯದ ಸಾಮಾಜಿಕ ನ್ಯಾಯ ಜಾರಿಯಾಗಬೇಕಾದರೆ ಮೊದಲು ಜಾತಿಗಣತಿ ಆಗಬೇಕು” ಎಂದರು.
“ಹಿಂದುಳಿದ ಸಮುದಾಯಕ್ಕೆ ಸೇರಿದ ಜಾತಿಗಳು ಒಟ್ಟು ಜನಸಂಖ್ಯೆಯ ಶೇಕಡಾ 54ರಷ್ಟಿದ್ದರೂ, ಅವುಗಳಿಗೆ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗಬೇಕಾದ ಅವಕಾಶ ಸಿಕ್ಕಿಲ್ಲ. ಈ ಬಗೆಯ ತಾರತಮ್ಯದಿಂದ ಜನತಂತ್ರದ ಮೂಲ ಆಶಯವಾದ ಸಮಸಮಾಜದ ನಿರ್ಮಾಣ ಅಸಾಧ್ಯ. ಜಾತಿ, ಉಪಜಾತಿಗಳ ಸಮೀಕ್ಷೆ ನಡೆಸಿ, ಅವುಗಳ ಸ್ಥಿತಿಗತಿಗಳಿಗೆ ತಕ್ಕಂತೆ ಅವಕಾಶಗಳನ್ನು ಒದಗಿಸುವುದೇ ಈ ಸಮಸ್ಯೆಗೆ ಪರಿಹಾರ. ಇದನ್ನು ಮನಗಂಡ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ 2015ರಲ್ಲಿ ಜಾತಿಗಣತಿ ನಡೆಸುವ ಕಾರ್ಯವನ್ನು ಹಿಂದುಳಿದ ಆಯೋಗಕ್ಕೆ ವಹಿಸಿತು. ಆ ಮೂಲಕ ಕರ್ನಾಟಕ, ಜಾತಿಗಣತಿ ಕೈಗೆತ್ತಿಕೊಂಡ ಮೊಟ್ಟಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು” ಎಂದರು.
ಕಾಂತರಾಜು ಆಯೋಗದ ವರದಿ ಅಪ್ರಸ್ತುತ
“ತಾಂತ್ರಿಕ ಕಾರಣಗಳಿಂದಾಗಿ ಎಚ್ ಕಾಂತರಾಜ್ ನೇತೃತ್ವದ ಆಯೋಗ 2018ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಲಿಲ್ಲ. ಬಳಿಕ ಬಂದ ಸರ್ಕಾರಗಳು ವಿವಿಧ ಕಾರಣಗಳಿಗಾಗಿ ವರದಿಯನ್ನು ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿದ ಪ್ರಯತ್ನದ ಫಲವಾಗಿ ಕೆ. ಜಯಪ್ರಕಾಶ್ ಹೆಗಡೆ ನೇತೃತ್ವದ ಅಯೋಗ ವರದಿಯನ್ನು 2023ರ ಫೆಬ್ರವರಿಯಲ್ಲಿ ಸಲ್ಲಿಸಿತು. ಆದರೆ, ವರದಿಯು ಸುಮಾರು ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ದತ್ತಾಂಶ ಪ್ರಸ್ತುತ ಜನಸಂಖ್ಯೆಗೆ ಅಪ್ರಸ್ತುತವಾಗಿದೆ” ಎಂದು ಶಿವಣ್ಣ ಪ್ರತಿಪಾದಿಸಿದರು.
ಜಾತಿ ಆಧಾರಿತ ದೇಶದಲ್ಲಿ ಜಾತಿಗಣತಿ ಅನಿವಾರ್ಯ: ಡಾ.ಬಂಜಗೆರೆ ಜಯಪ್ರಕಾಶ್
ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, “ಭಾರತ ಜಾತಿ ಸಮುದಾಯ ಆಧಾರಿತ ದೇಶವಾಗಿದ್ದು, ಸಂವಿಧಾನದತ್ತ ಸವಲತ್ತುಗಳನ್ನು ಜಾತಿ ಆಧಾರದಲ್ಲೇ ನೀಡಲಾಗುತ್ತಿದೆ. ಆದ್ದರಿಂದ, ಜನಗಣತಿ ಜೊತೆಯಲ್ಲಿ ಜಾತಿಗಣತಿಯನ್ನೂ ನಡೆಸಬೇಕು” ಎಂದು ಒತ್ತಾಯಿಸಿದರು.
“1931 ರಲ್ಲಿ ಬ್ರಿಟಿಷ್ ಆಡಳಿತ ಮೊದಲ ಬಾರಿಗೆ ಜಾತಿಗಣತಿ ನಡೆಸಿದ್ದರು; ಈಗ ಸರ್ಕಾರಗಳು ಸವಲತ್ತು ಕೊಡುತ್ತಿರುವುದು ಅದೇ ದತ್ತಾಂಶದ ಆಧಾರದಲ್ಲಿ. ಇಷ್ಟು ವರ್ಷಗಳು ಕಳೆದರೂ ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ಇನ್ನೂ ನಿರ್ಧರಿಸಿಲ್ಲ. ವಾಸ್ತವವಾಗಿ ನಮ್ಮ ಸಂವಿಧಾನವೇ ಜಾತಿ ಗುಂಪುಗಳಿಗೆ ಸವಲತ್ತು ನೀಡುತ್ತಿದೆ; ಯಾವ ಆಧಾರದಲ್ಲಿ ಸವಲತ್ತುಗಳನ್ನು ನೀಡುತ್ತಿದ್ದೀರ ಎಂದು ಸುಪ್ರೀಂ ಕೋರ್ಟ್ ಜಾತಿ ದತ್ತಾಂಶಗಳನ್ನು ಕೇಳಿದೆ. ಆದರೂ ಸರ್ಕಾರಗಳು ಕ್ರಮ ತೆಗೆದುಕೊಂಡಿಲ್ಲ” ಎಂದರು.
“ಮನಮೋಹನ್ ಸಿಂಗ್ ಅವಧಿಯಲ್ಲಿ ಪ್ರತ್ಯೇಕವಾಗಿ ಜಾತಿಗಣತಿ ನಡೆಸಿದ್ದರು. ಅದನ್ನು ನರೇಗಾ ಮತ್ತು ಬಿಪಿಎಲ್ ಯೋಜನೆ ಜಾರಿಗೆ ಬಳಸಿದ್ದರು. ಆದರೆ, ಆ ಮಾಹಿತಿಯನ್ನು ಈಗ ಬಹಿರಂಗಪಡಿಸಿಲ್ಲ. 2015 ರಲ್ಲಿ ಸಿದ್ದರಾಮಯ್ಯ ಸರ್ಕಾರ ಕಾಂತರಾಜು ಆಯೋಗದ ಮೂಲಕ ವರದಿ ಮಾಡಿಸಿತ್ತು; ಈಗ ಅದಕ್ಕೆ 10 ವರ್ಷ ಕಳೆದು ಹೋಗಿದೆ. ಆ ವರದಿಯನ್ನು ಈಗ ಅಧಿಕೃತ ಎಂದು ಬಳಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದ ಜನಗಣತಿ ಬಾಕಿ ಇದ್ದು, ಕೇಂದ್ರ ಸರ್ಕಾರವೇ ಈಗ ಉಪಜಾತಿಗಳ ಸಹಿತ ಜಾತಿಗಣತಿ ನಡೆಸಬೇಕು” ಎಂದು ಆಗ್ರಹಿಸಿದರು.
“ಒಳ ಮೀಸಲಾತಿ ನೀಡಲು ಜಾತಿ ಸಮೀಕ್ಷೆ ಅನಿವಾರ್ಯ; ಕೆಲವರು 2(ಎ) ಕ್ಯಾಟಗರಿಯಲ್ಲಿ ನಮ್ಮನ್ನು ಸೇರಿಸಿ ಎಂದು ಕೇಳಿಕೊಂಡಿದ್ದಾರೆ. ಮೀಸಲಾತಿ ನೀಡುವ ಸಂದರ್ಭದಲ್ಲಿ ನ್ಯಾಯಾಲಯಗಳ ಮುಂದೆ ಸರ್ಕಾರಕ್ಕೆ ಉತ್ತರ ಕೊಡಲು ಜಾತಿ ಸಮೀಕ್ಷೆ ಅನುಕೂಲ ಆಗುತ್ತದೆ. ಇಷ್ಟೆಲ್ಲಾ ಗೊತ್ತಿದ್ದೂ ಸರ್ಕಾರ ಜಾತಿಗಣತಿಗೆ ಮೀನಾಮೇಷ ಎಣಿಸುತ್ತಿರುವುದು ಯಾಕೆ? ಬಿಹಾರ ಸರ್ಕಾರ ಮಾಡಿರುವ ಗಣತಿಯಿಂದ ಸಾಕಷ್ಟು ಅನುಕೂಲ ಆಗಿದೆ” ಎಂದು ಹೇಳಿದರು.
“ಮಾಹಿತಿಗಳ ಪ್ರಕಾರ, 97 ಜಾತಿಗಳು ಇನ್ನೂ ಕೂಡ ಸರ್ಕಾರಿ ಅಟೆಂಡರ್ ಪೋಸ್ಟ್ ಕೂಡ ಪಡೆದಿಲ್ಲ, ಸಾಮಾಜಿಕ ನ್ಯಾಯಕ್ಕಾಗಿ ನಾವು ಮಾಡಿಕೊಂಡಿರುವ ವ್ಯವಸ್ಥೆಯೇ ಜಾತಿ. ಆದ್ದರಿಂದ ಜನಗಣತಿ ಸಂದರ್ಭದಲ್ಲೇ ಜಾತಿ ಮತ್ತು ಉಪಜಾತಿ ಕಲಂ ಸೇರಿಸಬೇಕು. ಏಕೆಂದರೆ, ಹಲವು ಜಾತಿಗಳು ಒಳ ಮೀಸಲಾತಿ ಕೇಳುತ್ತಿವೆ.
ಈ ವೇದಿಕೆ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾವೇಶ ಹಾಗೂ ವಿಚಾರಣಾ ಸಂಕಿರಣ ನಡೆಸಲು ತೀರ್ಮಾನ ಮಾಡಿದ್ದೇವೆ” ಎಂದರು.
ಕಾಂತರಾಜು ಆಯೋಗದ ವರದಿ ಔಟ್ ಡೇಟೆಡ್
“ಜಾತಿ ಆಧಾರಿತ ಭಾರತದಲ್ಲಿ ಜಾತಿಗಣತಿ ನಡೆಸದೆ ಇರುವ ಹಿಂದಿನ ಹುನ್ನಾರ ಏನು? ಬ್ರಿಟಿಷ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ್ದನ್ನು ಈಗಿನ ಸರ್ಕಾರಗಳು ಮಾಡುತ್ತಿಲ್ಲ ಯಾಕೆ? ಐದು ವರ್ಷದ ಹಿಂದೆ ನಾವು ವರದಿ ಬಿಡುಗಡೆಗೆ ಒತ್ತಡ ಹೇರಿದ್ದೇವೆ. ಆದರೆ ಈಗ ವರದಿ ಬಿಡುಗಡೆಗೆ ಸಮಯ ಸರಿದು ಹೋಗಿದೆ ಎಂದು ಎನಿಸುತ್ತಿದೆ. ಕೇಂದ್ರ ಸರ್ಕಾರ ಜಾತಿಗಣತಿ ಮಾಡದೆ ಇದ್ದಲ್ಲಿ, ರಾಜ್ಯ ಸರ್ಕಾರವೇ ಅದನ್ನು ಮಾಡಲಿ” ಎಂದರು.
ಆರ್ಥಿಕ ತಜ್ಞರಾದ ಕೃಷ್ಣರಾಜ್ ಮಾತನಾಡಿ, “ಆರ್ಥಿಕ ತಜ್ಞನಾಗಿ ನಾನು ಜಾತಿಗಣತಿ ಮಹತ್ವದ ಬಗ್ಗೆ ಮಾತನಾಡುತ್ತೇನೆ. ಭಾರತ ಈಗ ಆರ್ಥಿಕವಾಗಿ ಸದೃಢವಾಗುತ್ತಿದೆ; ದೇಶದ ಜಿಡಿಪಿ ಕೂಡ ಬೆಳೆಯುತ್ತಿದೆ. ಯಾವದೇ ದೇಶ ಆರ್ಥಿಕ ನೀತಿ ಮಾಡುವಾಗ ದತ್ತಾಂಶ ಮುಖ್ಯ ಆಗಿರುತ್ತದೆ. ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ ಆಗುತ್ತಿದೆಯೇ ಎಂಬುದನ್ನು ನಾವು ನೋಡಬೇಕು” ಎಂದರು.
“ಮನಮೋಹನ್ ಸಿಂಗ್ ಅವರು ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಇಟ್ಟುಕೊಂಡಿದ್ದರು. ಭಾರತದಲ್ಲಿ ಸಂಪನ್ಮೂಲ ಹಂಚಿಕೆಯಲ್ಲಿ ಅಸಮಾನತೆ ಇದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಹೇಳಿವೆ. ದೇಶದ ಕೆಲವೇ ವ್ಯಕ್ತಿಗಳ ಬಳಿ ಬಹಳಷ್ಟು ಸಂಪತ್ತಿದೆ; ಕೇಂದ್ರ ಸರ್ಕಾರ ವಿಕಸಿತ ಭಾರತ ಮಾಡುತ್ತೇವೆ ಎಂದು ಘೋಷಿಸಿದೆ. ಅದು ಯಾರನ್ನೆಲ್ಲಾ ಒಳಗೊಂಡಿದೆ ಎಂಬುದು ಮುಖ್ಯವಾಗುತ್ತದೆ. ಆದ್ದರಿಂದ, ಎಲ್ಲರನ್ನೂ ಒಳಗೊಳ್ಳಬೇಕಾದರೆ ಜಾತಿಗಣತಿ ಅನಿವಾರ್ಯ” ಎಂದು ಹೇಳಿದರು.
ಇದನ್ನೂ ಓದಿ; ‘ಮುಂದಾದರೂ ನಮ್ಮ ನೋವು ಅರ್ಥವಾಗಲಿ..’; ಎಚ್ಡಿಕೆ ವಿರುದ್ಧ ಅಸಮಾಧಾನ ಹೊರಹಾಕಿದ ಜೆಡಿಎಸ್ ಶಾಸಕ


