ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಹಿನ್ನೆಲೆ ಇಂದು (ಫೆ.5, ಗುರುವಾರ) ಲೋಕಸಭೆ ಕಲಾಪ ಹಲವು ಬಾರಿ ಮುಂದೂಡಿಕೆಯಾಯಿತು. ಆದರೂ, ಗದ್ದಲ ಕಡಿಮೆಯಾಗದ ಕಾರಣ ಅಂತಿಮವಾಗಿ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಒಂದು ದಿನದ ಮಟ್ಟಿಗೆ, ಅಂದರೆ ನಾಳೆಗೆ (ಫೆ.6, ಶುಕ್ರವಾರ) ಮಂದೂಡಿದರು.
ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ, ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ವಿಶೇಷವಾಗಿ, ವಿಪಕ್ಷಗಳ ಎಂಟು ಸಂಸದರ ಅಮಾನತು, ರಾಹುಲ್ ಗಾಂಧಿಯವರಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ಪ್ರತಿಭಟಿಸಿದರು.
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಪುಸ್ತಕದ ಅಂಶಗಳನ್ನು ಉಲ್ಲೇಖಿಸಲು ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಗೆ ಅವಕಾಶ ನೀಡದಿರುವುದನ್ನು ಖಂಡಿಸಿದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಸದಸ್ಯರು ರೈತರ ಹಿತಾಸಕ್ತಿ ಕಾಪಾಡುವಂತೆ ಒತ್ತಾಯಿಸಿದರು. ಗದ್ದಲ ಹೆಚ್ಚಾದ ಕಾರಣ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.
12 ಗಂಟೆಗೆ ಮತ್ತೆ ಸದನ ಪ್ರಾರಂಭವಾಯಿತು, ಪ್ರತಿಪಕ್ಷ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು ಬುಧವಾರದ (ಫೆ.4) ಘಟನೆಗಳನ್ನು ಉಲ್ಲೇಖಿಸಿ ಪ್ರತಿಪಕ್ಷಗಳ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕಿದ್ದ ಸಂದರ್ಭದಲ್ಲಿ ಪ್ರತಿಪಕ್ಷದ ಮಹಿಳಾ ಸದಸ್ಯರು ಆಡಳಿತ ಪಕ್ಷದ ಆಸನಗಳ ಬಳಿ ನುಗ್ಗಿದ್ದು ಸಂಸದೀಯ ವ್ಯವಸ್ಥೆಗೆ ಮಾಡಿದ “ಅಪಮಾನ” ಎಂದು ಅವರು ಟೀಕಿಸಿದರು.
“ಸದನವು ಚರ್ಚೆ ಮತ್ತು ಸಂವಾದಕ್ಕಾಗಿ ಇದೆಯೇ ಹೊರತು, ಘೋಷಣೆಗಳನ್ನು ಕೂಗಲು ಅಲ್ಲ” ಎಂದು ಬಿರ್ಲಾ ಅವರು ಪ್ರತಿಪಕ್ಷ ಸದಸ್ಯರನ್ನು ಉದ್ದೇಶಿಸಿ ಹೇಳಿದರು. ಸಂಸತ್ತಿನ ಘನತೆಯನ್ನು ಕಾಪಾಡುವುದು ಎಲ್ಲ ಸದಸ್ಯರ ಜವಾಬ್ದಾರಿ ಎಂದರು.
ಗದ್ದಲದ ನಡುವೆಯೇ ಸ್ಪೀಕರ್ ಪ್ರಶ್ನೋತ್ತರ ಅವಧಿಯನ್ನು ನಡೆಸಲು ಪ್ರಯತ್ನಿಸಿದರು. ಕೇವಲ ಐದು ನಿಮಿಷಗಳ ಕಾಲ ನಡೆದ ಈ ಅವಧಿಯಲ್ಲಿ ಒಂದೇ ಒಂದು ಪ್ರಶ್ನೆ ಮತ್ತು ಅದರ ಉಪಪ್ರಶ್ನೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು.
ಈ ನಡುವೆ ಪ್ರತಿಪಕ್ಷದ ಸದಸ್ಯರು ಪ್ಲಕಾರ್ಡ್ಗಳನ್ನು ಪ್ರದರ್ಶಿಸುತ್ತಾ ಸದನದ ಬಾವಿಗೆ ಇಳಿದು ಪ್ರತಿಭಟನೆ ಮುಂದುವರಿಸಿದ ಕಾರಣ, ಸ್ಪೀಕರ್ ಸದನವನ್ನು ನಡೆಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.
ಮಧ್ಯಾಹ್ನ 2 ಗಂಟೆಗೆ ಸದನ ಸೇರಿದಾಗ ಸರ್ಕಾರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಮಂಡಿಸಿತು. ಗದ್ದಲದ ನಡುವೆಯೇ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯ ಉತ್ತರ ಇಲ್ಲದೆ ನಿರ್ಣಯ ಅಂಗೀಕಾರವಾಯಿತು.
ವಿರೋಧ ಪಕ್ಷದ ಸಂಸದರು ಪ್ರಧಾನಿ ನರೇಂದ್ರ ಮೋದಿಯವರ ಆಸನದ ಬಳಿ ಹೋಗಿ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಇದ್ದ ಕಾರಣ, ಸುರಕ್ಷತೆಯ ದೃಷ್ಟಿಯಿಂದ ಪ್ರಧಾನಿಯವರು ಸದನಕ್ಕೆ ಬರದಂತೆ ಸೂಚಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
ಗದ್ದಲದ ನಡುವೆ ಸದನವನ್ನು ನಡೆಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ ಸ್ಪೀಕರ್, ಕಲಾಪವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.
ರಾಜ್ಯಸಭೆಯಲ್ಲಿ ಮೋದಿ ಭಾಷಣ
ಲೋಕಸಭೆಯಲ್ಲಿ ಗದ್ದಲವಿದ್ದರೂ, ಪ್ರಧಾನಿ ಮೋದಿಯವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರ ನೀಡಿದರು. ಈ ವೇಳೆ ಅವರು ಕಾಂಗ್ರೆಸ್ ಆಡಳಿತದ ಹಳೆಯ ತಪ್ಪುಗಳನ್ನು ಟೀಕಿಸಿದರು ಮತ್ತು ಭಾರತದ ಆರ್ಥಿಕ ಪ್ರಗತಿಯನ್ನು ಸಮರ್ಥಿಸಿಕೊಂಡರು.


