‘ಪಕ್ಷಪಾತ’ದ ಆರೋಪ ಹೊರಿಸಿ ವಿಪಕ್ಷಗಳು ‘ಅವಿಶ್ವಾಸ ನೋಟಿಸ್’ ನೀಡಿರುವ ಹಿನ್ನೆಲೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಲಾಪದಿಂದ ದೂರ ಉಳಿದಿದ್ದಾರೆ. ಬುಧವಾರ (ಫೆ.11) ಸ್ಪೀಕರ್ ಪೀಠದಲ್ಲಿ ಹಿರಿಯ ಬಿಜೆಪಿ ಸಂಸದರಾದ ಪಿ.ಸಿ ಮೋಹನ್ ಮತ್ತು ಜಗದಾಂಬಿಕಾ ಪಾಲ್ ಕುಳಿತಿರುವುದು ಕಂಡು ಬಂತು.
ಬಜೆಟ್ ಅಧಿವೇಶನದ ಎರಡನೇ ಭಾಗದ ಮೊದಲ ದಿನವಾದ ಮಾರ್ಚ್ 9ರಂದು ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಅಲ್ಲಿಯವರೆಗೆ ‘ನೈತಿಕ ಹೊಣೆ ಹೊತ್ತು’ ಸದನಕ್ಕೆ ಹಾಜರಾಗದಿರಲು ಸ್ಪೀಕರ್ ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಅವಿಶ್ವಾಸ ನೋಟಿಸ್ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸದನದ ಪ್ರಧಾನ ಕಾರ್ಯದರ್ಶಿಗೆ ಸ್ಪೀಕರ್ ನಿರ್ದೇಶನ ನೀಡಿದ್ದಾರೆ. ನೋಟಿಸ್ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆಯೆಂದು ಲೋಕಸಭಾ ಸಚಿವಾಲಯ ತಿಳಿಸಿದೆ. ಅದನ್ನು ಸರಿಪಡಿಸಿದ ನಂತರ ಮಾರ್ಚ್ 9ರಂದು ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಗಳು ಉಲ್ಲೇಖಿಸಿವೆ.
ಕಾಂಗ್ರೆಸ್ ನೇತೃತ್ವದ ಅವಿಶ್ವಾಸ ನಿರ್ಣಯದ ನೋಟಿಸ್ ಅನ್ನು ಮಂಗಳವಾರ (ಫೆ.10) ಲೋಕಸಭೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ವಿಪಕ್ಷಗಳ 118 ಸಂಸದರು ಸಹಿ ಹಾಕಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ‘ಪಕ್ಷಪಾತ’ ಮಾಡುತ್ತಿದ್ದಾರೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎನ್ನುವುದು ವಿಪಕ್ಷಗಳ ಪ್ರಮುಖ ಆರೋಪವಾಗಿದೆ.
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ
ಗದ್ದಲದ ನಡುವೆಯೇ ಬುಧವಾರ (ಫೆ.11) ವಿಪಕ್ಷ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು “ಸಂಪೂರ್ಣ ಶರಣಾಗತಿ” ಎಂದು ಕರೆದು, ಇದರಿಂದ ಭಾರತದ ಇಂಧನ ಭದ್ರತೆ ಮತ್ತು ದತ್ತಾಂಶದ ಮೇಲೆ ಪೆಟ್ಟು ಬೀಳಲಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಮಾತನಾಡುವಾಗ ಸಚಿವರಾದ ಕಿರಣ್ ರಿಜಿಜು, ಪ್ರಲ್ಹಾದ್ ಜೋಶಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಮಧ್ಯಪ್ರವೇಶಿಸಿ, ಹಲವು ವಿಷಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ಪೀಠದಲ್ಲಿದ್ದ ಜಗದಾಂಬಿಕ ಪಾಲ್ ಕೂಡ ಕೆಲ ವಿಷಯಗಳನ್ನು ಉಲ್ಲೇಖಿಸಲು ರಾಹುಲ್ ಗಾಂಧಿಗೆ ಅವಕಾಶ ನಿರಾಕರಿಸಿದರು.
ಗದ್ದಲದ ನಡುವೆಯೇ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು ‘ಕೈಗಾರಿಕಾ ಸಂಬಂಧಗಳ ಸಂಹಿತೆ (ತಿದ್ದುಪಡಿ) ವಿಧೇಯಕ, 2026’ ಅನ್ನು ಸದನದಲ್ಲಿ ಮಂಡಿಸಿದರು.
8 ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಮತ್ತು ವಿವಿಧ ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಿರೋಧ ಪಕ್ಷದ ಸದಸ್ಯರು ಇಂದೂ ಕೂಡ ಸದನದ ಬಾವಿಗಿಳಿದು ಪ್ರತಿಭಟಿಸಿದರು.


