ಅಲೋಪತಿ ಮತ್ತು ಅಲೋಪತಿ ವೈದ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ವೈದ್ಯರ ಆಕ್ರೋಶಕ್ಕೆ ಕಾರಣವಾಗಿದ್ದ ಬಾಬಾ ರಾಮ್ದೇವ್ ಅವರಿಂದ ಮಧ್ಯಪ್ರದೇಶ ಸರ್ಕಾರ ರಾಜ್ಯದಲ್ಲಿ ಕೊರೊನಾವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಲಹೆ ಪಡೆದಿದೆ.
ಪ್ರಾಣಾಯಾಮ ಮತ್ತು ಆಯುರ್ವೇದ ಔಷಧಿಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೊರೊನಾ ಸೋಂಕನ್ನು ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ 52 ಜಿಲ್ಲೆಗಳ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದ ವಿಡಿಯೋ ಕಾನ್ಫರೆನ್ಸ್ನಲ್ಲಿ ಬಾಬಾ ರಾಮದೇವ್, “ಒಬ್ಬ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದರೇ, ಕೊರೊನಾ ಯಾವುದೇ ಹಾನಿ ಮಾಡಲಾರದು ಅವರು. ಆಯುರ್ವೇದ ಔಷಧಿಗಳ ಬಳಕೆ ಮತ್ತು ಪ್ರಾಣಾಯಾಮಗಳನ್ನು ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ” ಎಮದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬಾಬಾ ರಾಮ್ದೇವ್ ವಿರುದ್ಧ ಕಪ್ಪು ರಿಬ್ಬನ್ ಧರಿಸಿ ಪ್ರತಿಭಟನೆಗೆ ಮುಂದಾದ ವೈದ್ಯರು
ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ, ಮುಖ್ಯ ಕಾರ್ಯದರ್ಶಿ ಇಕ್ಬಾಲ್ ಸಿಂಗ್ ಬೈನ್ಸ್, ಪೊಲೀಸ್ ಮಹಾನಿರ್ದೇಶಕ ವಿವೇಕ್ ಜೋಹ್ರಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಮೊಹಮ್ಮದ್ ಸುಲೇಮಾನ್ ಸಭೆಯಲ್ಲಿ ಉಪಸ್ಥಿತರಿದ್ದರು, ವಿಡಿಯೋ ಕಾನ್ಫರೆನ್ಸ್ನಲ್ಲಿ ಕೊರೊನಾ ಎದುರಿಸಲು ಆಯುರ್ವೇದ ಔಷಧಿಗಳು ಮತ್ತು ಪ್ರಾಣಾಯಾಮಗಳ ಬಳಕೆಯ ಬಗ್ಗೆ ಬಾಬಾ ರಾಮದೇವ್ ಆರೋಗ್ಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಬಾಬಾ ರಾಮದೇವ್ ಗಿಡಮೂಲಿಕೆಗಳಾದ ಅಶ್ವಗಂಧ ( withania somnifera) ಮತ್ತು ಗಿಲೋಯ್ (tinospora cordifolia ) ಸೋಂಕಿನ ಸರಪಳಿ ಮುರಿಯಲು ಪರಿಣಾಮಕಾರಿ ಎಂದು ಹೇಳಿದ್ದಾರೆ. ಜೊತೆಗೆ ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಇವುಗಳ ಬಳಕೆಯು ಉತ್ತಮ ಫಲಿತಾಂಶಗಳನ್ನು ನೀಡಿದೆ” ಎಂದು ಹೇಳಿದ್ದಾರೆ.
ಉಸಿರಾಟದ ವ್ಯಾಯಾಮಕ್ಕೆ ಸಂಬಂಧಿಸಿದಂತೆ, ಸೋಂಕನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗುವ 6 ಬಗೆಯ ಪ್ರಾಣಾಯಾಮಗಳನ್ನು ಪಟ್ಟಿ ಮಾಡಿ ನೀಡಿದ್ದಾರೆ. ಕೊರೊನಾ ರೋಗಿಗಳು ಪ್ರಾಣಾಯಾಮವನ್ನೂ ಮಾಡಬಹುದು. ಇದು ತ್ವರಿತ ಪರಿಹಾರ ನೀಡುತ್ತದೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.
ಮಧ್ಯಪ್ರದೇಶ ರಾಜ್ಯದಲ್ಲಿ ಸುಮಾರು 2 ಕೋಟಿ ಜನರಿಗೆ ಕಷಾಯದ ಸಿರಪ್ ಪ್ಯಾಕೆಟ್ಗಳನ್ನು ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಅಧಿಕಾರಿಗಳಿಗೆ ಸಹ ಕಷಾಯದ ಸಿರಪ್ ನೀಡಲಾಗುತ್ತಿದೆ. ಆಯುರ್ವೇದ ಔಷಧಿಗಳ ಬಳಕೆ ಮತ್ತು ಪ್ರಾಣಾಯಾಮವು ರೋಗದ ವಿರುದ್ಧದ ಯುದ್ಧವನ್ನು ಗೆಲ್ಲುವಲ್ಲಿ ಬಹಳ ಸಹಾಯ ಮಾಡುತ್ತದೆ ಎಂದು ರಾಜ್ಯದಲ್ಲಿ ಆಯುರ್ವೇದ ಔಷಧಿಗಳ ವಿತರಣೆಯ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿವರಿಸಿದ್ದಾರೆ.
“ಏಳು ಆಯುರ್ವೇದ ತಜ್ಞರ ತಂಡವು ಕೊರೊನಾಗೆ ಚಿಕಿತ್ಸೆ ನೀಡುವಲ್ಲಿ ಆಯುರ್ವೇದ ಔಷಧಿಗಳ ಕುರಿತು 19 ಜಿಲ್ಲೆಗಳಲ್ಲಿ ಕ್ಲಿನಿಕಲ್ ಪ್ರಯೋಗವನ್ನು ನಡೆಸುತ್ತಿದೆ. ನಾವು ಸಂಶೋಧನಾ ಪ್ರಬಂಧವನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ ಮತ್ತು ಈಗಾಗಲೇ ಅದಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದೇವೆ ”ಎಂದು ಆಯುಷ್ ಇಲಾಖೆ ಕಾರ್ಯದರ್ಶಿ ಎಂ.ಕೆ ಡಾ.ಅಗ್ರಾವಾಲ್ ತಿಳಿಸಿದ್ದಾರೆ.
ಅಲೋಪಥಿ ಚಿಕಿತ್ಸೆಯ ಕುರಿತು ಬಾಬಾ ರಾಮ್ದೇವ್ ಹೇಳಿಕೆ ದೇಶಾದ್ಯಂತ ವೈದ್ಯ ಸಮೂಹದಲ್ಲಿ ಆಕ್ರೋಶವನ್ನು ಹುಟ್ಟಿಸಿತ್ತು. ಬಾಬಾ ರಾಮ್ ದೇವ್ ಅವರ ಇಂಗ್ಲೀಷ್ ಮೆಡಿಸಿನ್ ಎಂಬ ಆಧುನಿಕ ವೈದ್ಯ ಪದ್ಧತಿ ಬೋಗಸ್ ಹೇಳಿಕೆಗೆ ದೇಶಾದ್ಯಂತ ನೂರಾರು ಸಂಖ್ಯೆಯ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ನಡೆಸಿದ್ದರು. ಭಾರತೀಯ ವೈದ್ಯಕೀಯ ಸಂಘ ರಾಮ್ದೇವ್ ವಿರುದ್ಧ 1,000 ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದೆ.
ಇದನ್ನೂ ಓದಿ: ಬಾಬಾ ರಾಮದೇವ್ ವಿರುದ್ಧ 1,000 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್