ದೇವಸ್ಥಾನಕ್ಕೆ ತಮ್ಮ ಸಂಪೂರ್ಣ ಭೂಮಿಯನ್ನು ನೀಡಲು ನಿರಾಕರಿಸಿದ ಕಾರಣ ಕುಟುಂಬವೊಂದನ್ನು ಸಮುದಾಯದಿಂದ ಬಹಿಷ್ಕರಿಸಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. ಯಾವುದೇ ಮದುವೆ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಅವರನ್ನು ನಿಷೇಧಿಸಲಾಗಿದೆ.
ಗುನಾದ ಶಿವಾಜಿ ನಗರದಲ್ಲಿ ವಾಸಿಸುತ್ತಿರುವ ಈ ಕುಟುಂಬ ಮತ್ತೆ ಸಮುದಾಯಕ್ಕೆ ಮರಳಲು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅದಕ್ಕಾಗಿ ಗೋಮೂತ್ರ ಕುಡಿಯಲೇಬೇಕು, ತಮ್ಮ ಪೇಟವನ್ನು ಕಾಲಿನ ಬಳಿ ಇಡಬೇಕು, ಗಂಡಸರು ಗಡ್ಡವನ್ನು ಬೋಳಿಸಿಕೊಳ್ಳಬೇಕು ಮತ್ತು ತಲೆ ಮೇಲೆ ಶೂ ಹೊತ್ತುಕೊಳ್ಳಬೇಕು ಎಂದು ಷರತ್ತು ಹಾಕಲಾಗಿದೆ.
ಶಿವಾಜಿ ನಗರ ಪ್ರದೇಶದ ನಿವಾಸಿ ಹೀರಾಲಾಲ್ ಘೋಸಿ ಈ ಬಗ್ಗೆ ಮಂಗಳವಾರ(ನ.16) ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ದೂರಿನಲ್ಲಿ ಸ್ಥಳೀಯ ಪಂಚಾಯತಿಯು ತನ್ನ ತಲೆಯ ಮೇಲೆ ಬೂಟುಗಳನ್ನು ಹೊತ್ತುಕೊಳ್ಳಬೇಕು, ಗಡ್ಡವನ್ನು ಬೋಳಿಸಿಕೊಳ್ಳಬೇಕು ಮತ್ತು ಕುಟುಂಬ ಸದಸ್ಯರಿಗೆ ಗೋಮೂತ್ರವನ್ನು ಕುಡಿಯಲು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಾಗಲೂರು ಗ್ರಾಪಂ: ದಲಿತ ಅಧ್ಯಕ್ಷೆ ಕುಳಿತ ಕುರ್ಚಿ ಗೋಮೂತ್ರದಿಂದ ಶುದ್ಧೀಕರಣ: ಬಿಜೆಪಿ ದೂರು
ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ತನ್ನ ಕುಟುಂಬದ ಒಡೆತನದಲ್ಲಿರುವ ಸಂಪೂರ್ಣ ಜಮೀನನ್ನು ದಾನ ಮಾಡುವಂತೆ ಆರಂಭದಿಂದಲೂ ಒತ್ತಾಯಿಸಲಾಗುತ್ತಿದೆ ಎಂದು ಹೀರಾಲಾಲ್ ಘೋಸಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
‘ನಮ್ಮ ಕುಟುಂಬವು ದೇವಾಲಯದ ನಿರ್ಮಾಣಕ್ಕಾಗಿ ನಮ್ಮ ಭೂಮಿಯ ಒಂದು ಭಾಗವನ್ನು ದಾನ ಮಾಡಿದೆ. ಆದರೆ ಪಂಚಾಯತ್ ಸದಸ್ಯರು ಸಂಪೂರ್ಣ ಭೂಮಿ ಬೇಕು ಎಂದು ಹೇಳುತ್ತಿದ್ದಾರೆ. ಅದು ನಮನ್ನು ಭೂರಹಿತರನ್ನಾಗಿ ಮಾಡುತ್ತದೆ. ಹೀಗಾಗಿ ನಾವು ಸಂಪೂರ್ಣ ಭೂಮಿ ನೀಡಲು ನಿರಾಕರಿಸಿದ್ದೇವೆ. ಅದಕ್ಕಾಗಿ, ನಮ್ಮ ಕುಟುಂಬವನ್ನು ಸಮುದಾಯದಿಂದ ಬಹಿಷ್ಕರಿದ್ದಾರೆ. ನಮ್ಮ ಮನೆಗೆ ಯಾರೂ ಬರುವುದಿಲ್ಲ. ಸಮುದಾಯದ ಯಾರನ್ನೂ ನಮ್ಮ ಕುಟುಂಬದವರು ಮದುವೆಯಾಗಂತೆ ತಡೆಯಲಾಗುತ್ತಿದೆ ’ ಎಂದು ಹೀರಾಲಾಲ್ ತಿಳಿಸಿದ್ದಾರೆ.
ಸಂತ್ರಸ್ತ ಹೀರಾಲಾಲ್ ಘೋಸಿ ಅವರ ದೂರನ್ನು ಅಧರಿಸಿ ತನಿಖೆಗೆ ಆದೇಶಿಸಲಾಗಿದೆ. ಪ್ರಕರಣ ಸಾಬೀತಾದಲ್ಲಿ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗುನಾ ಜಿಲ್ಲಾಧಿಕಾರಿ ಫ್ರಾಂಕ್ ನೊಬೆಲ್ ತಿಳಿಸಿದ್ದಾರೆ.
ಇದನ್ನೂ ಓದಿ: ದಿಂಡಗನೂರು: ದೇವಾಲಯ ಪ್ರವೇಶದ ಬಳಿಕ ದಲಿತರಿಗೆ ಅಘೋಷಿತ ಸಾಮಾಜಿಕ ಬಹಿಷ್ಕಾರ