ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್ನ ಭಿಗ್ವಾನ್ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮದುವೆ ಸಿದ್ಧತೆಯಲ್ಲಿದ್ದ ಯುವತಿ ತಾಯಿ ಮತ್ತು ಸಹೋದರನ ಜೊತೆ ಮದುವೆ ಶಾಪಿಂಗ್ ಗೆ ಹೋದಾಗ, ಸಹೋದರ ಮತ್ತು ತಾಯಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿ ಹುಡುಗಿಯನ್ನು ಅಪಹರಿಸಿರುವುದಾಗಿ ಕುಟುಂಬ ಹೇಳಿಕೊಂಡಿದೆ.
ಹಿಂದೂ ಧರ್ಮದವಳಾದ ಆ ಹುಡುಗಿಗೆ ಒಂದು ವಾರದಲ್ಲಿ ಮದುವೆ ಆಗಬೇಕಿತ್ತು ಮತ್ತು ಮದುವೆಗೆ ಮುಂಚಿತವಾಗಿ ಶಾಪಿಂಗ್ ಮಾಡುತ್ತಿದ್ದಳು.
ಘಟನೆಯಲ್ಲಿ ಸಂತ್ರಸ್ತೆಯ ತಾಯಿ ಮತ್ತು ಸಹೋದರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳನ್ನು ಜಹೀರ್ ಹರೂನ್ ಶೇಖ್ ಮತ್ತು ಅಯಾನ್ ಹರೂನ್ ಶೇಖ್ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಭಿಗ್ವಾನ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.
ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಆರೋಪಿಗಳು
ಆರೋಪಿಗಳು ಹುಡುಗಿಯ ಕುಟುಂಬವಿದ್ದ ಪ್ರದೇಶದಲ್ಲಿಯೇ ವಾಸಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಇನ್ನೂ ಮಂಗಳವಾರ ಸಂಜೆ ಕೋಪಗೊಂಡ ನಿವಾಸಿಗಳು ಮತ್ತು ಹಲವಾರು ಬಲಪಂಥೀಯ ಗುಂಪುಗಳು ಪುಣೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಲ್ಪ ಸಮಯದವರೆಗೆ ಟೈರ್ಗಳಿಗೆ ಬೆಂಕಿ ಹಚ್ಚುವ ಮೂಲಕ ತಡೆದರು, ವಾಹನ ಸಂಚಾರಕ್ಕೆ ಅಡ್ಡಿಯಾಯಿತು, ಇದರಿಂದಾಗಿ ಪೊಲೀಸ್ ತಂಡಗಳು ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದವು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಣೇಶ್ ಬಿರಾದಾರ್ ಗ್ರಾಮಕ್ಕೆ ಧಾವಿಸಿ, “ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ” ಎಂದು ಹೇಳಿದರು.
ಭಿಗ್ವಾನ್ ಪಟ್ಟಣವು ಪುಣೆ, ಸೋಲಾಪುರ ಮತ್ತು ಅಹಲ್ಯಾನಗರ ಜಿಲ್ಲೆಗಳ ಗಡಿಯಲ್ಲಿದೆ – ಪಕ್ಷಿ ವೀಕ್ಷಣೆಗೆ ಹೆಸರುವಾಸಿಯಾದ ಉಜನಿ ಅಣೆಕಟ್ಟಿನ ಹಿನ್ನೀರಿನಲ್ಲಿದೆ.
ಪೊಲೀಸರ ಪ್ರಕಾರ, ಯುವತಿ ಮತ್ತು ಆರೋಪಿಗಳ ಮನೆಗಳು ಪರಸ್ಪರ ಅಕ್ಕ-ಪಕ್ಕದಲ್ಲಿದ್ದು, ಕಳೆದ ಒಂದು ತಿಂಗಳಿನಿಂದ ಅವರು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಫೆಬ್ರವರಿ 22 ರಂದು ಯುವತಿಯ ವಿವಾಹ ನಿಗದಿಯಾಗಿತ್ತು ಎಂದು ಆಕೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.


