ಕುಡಿಯುವ ನೀರಿಗಾಗಿ 25 ಅಗಲ ಮತ್ತು 40 ಅಡಿ ಆಳದ ನದಿಯ ಮೇಲೆ ಒಂದೆರಡು ಮರದ ದಿಮ್ಮಿಗಳನ್ನು ಇರಿಸಿ ತಲೆಯ ಮೇಲೆ ನೀರಿನ ಬಿಂದಿಗೆ ಹೊತ್ತು ಪ್ರಾಣ ಭಯದಲ್ಲಿ ನದಿ ದಾಟುತ್ತಿದ್ದ ಮಹಾರಾಷ್ಟ್ರದ ಬುಡಕಟ್ಟು ಮಹಿಳೆಯರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರದ ಖರ್ಖೇತ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸರ್ವಪಾಡಾದಲ್ಲಿ ಬುಡಕಟ್ಟು ಮಹಿಳೆಯರ ಈ ಚಿತ್ರಗಳು ವೈರಲ್ ಆದ ಬಳಿಕ ಹಲವು ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದವು. ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಎರಡು ದಿನಗಳಲ್ಲಿ ನದಿಗೆ ಕಬ್ಬಿಣದ ಸೇತುವೆ ಅಳವಡಿಸಿದೆ.
ಖಾರ್ಖೇತ್ ಗ್ರಾಮ ಪಂಚಾಯಿತಿಯಲ್ಲಿ 25 ಬುಡಕಟ್ಟು ಹಾಡಿಗಳಿದ್ದು, ಇವುಗಳಲ್ಲಿ 300 ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಪ್ರತಿ ದಿನ ಕುಡಿಯುವ ನೀರಿಗಾಗಿ ನದಿಯ ಮೇಲೆ ಹಾಕಲಾಗಿರುವ ಕಂಬದ ಸಹಾಯದಿಂದ 40 ಅಡಿ ಆಳದ ಹಳ್ಳವನ್ನು ದಾಟಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಲುಪಬೇಕಾಗಿತ್ತು.
ಇದನ್ನೂ ಓದಿ: ಲಿಂಗ ತಾರತಮ್ಯ ಹೋಗಲಾಡಿಸುವ ಕ್ರಮ: ಸರ್, ಮೇಡಂ ಸಂಬೋಧನೆ ಬಿಟ್ಟ ಕೇರಳದ ಶಾಲೆ
ಗ್ರಾಮದ ನಿವಾಸಿ ಲಕ್ಷ್ಮಣ ದಹವಾಡ ಮಾತನಾಡಿ, “ತಮ್ಮ ಗ್ರಾಮಕ್ಕೆ ಸರ್ಕಾರದ ಹಲವು ಯೋಜನೆಗಳು ಬಂದಿವೆ, ಆದರೆ ಒಂದೇ ಒಂದು ಯೋಜನೆ ಗಿರಿಜನರಿಗೆ ತಲುಪಿಲ್ಲ. ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು, ಆದರೆ ಅದನ್ನು ಪಡೆಯುವ ಭಾಗ್ಯ ಕೂಡ ನಮಗಿಲ್ಲ. ಹಾಡಿಯ ಬಳಿ ನದಿ ಇದೆ. ಆದರೆ ಶುದ್ಧ ನೀರಿನ ಕೊರತೆಯಿಂದ ಮಹಿಳೆಯರು ಹೊರ ಹೋಗಬೇಕಾಗಿದೆ. ತಮ್ಮ ಜೀವ ಭಯದಲ್ಲೇ ಈ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ’ ಎಂದಿದ್ದಾರೆ.
ಈ ಚಿತ್ರಗಳು ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಪರಿಸರ ಸಚಿವ ಆದಿತ್ಯ ಠಾಕ್ರೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಬಳಿಕ ನಾಸಿಕ್ ಮತ್ತು ಮುಂಬೈ ಅಧಿಕಾರಿಗಳು ಎರಡು ದಿನಗಳಲ್ಲಿ ನದಿಗೆ ಕಬ್ಬಿಣದ ಸೇತುವೆ ಅಳವಡಿಸುವ ಕಾಮಗಾರಿ ಆರಂಭಿಸಿದ್ದು, ಕೆಲಸ ಮುಗಿಸಿದೆ. ಇದು ಸ್ಥಳೀಯರಲ್ಲಿ ಕೊಂಚ ನೆಮ್ಮದಿಗೆ ಕಾರಣವಾಗಿದೆ.
ಸುದ್ದಿ ಗಮನಿಸಿರುವ ಶಿವಸೇನೆಯ ಸಂಸದ ಹೇಮಂತ್ ಗೋಡ್ಸೆ, ಖರ್ಖೇತ್ಬುಡಕಟ್ಟು ಸಮುದಾಯದ ಮನೆಗಳಿಗೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವ ಭರವಸೆ ನೀಡಿದ್ದಾರೆ. ಆದರೆ, ಒಂದು ಸೇತುವೆ ನಿರ್ಮಾಣವಾಗಲು ಇಷ್ಟು ವರ್ಷಗಳ ಕಾಯಬೇಕಾದ ಜನ ಮನೆಗೆ ಪೈಪ್ಲೈನ್ನಲ್ಲಿ ನೀರು ಬರಲು ಎಷ್ಟು ವರ್ಷಗಳು ಕಾಯಬೇಕೋ ಎಂದು ಪ್ರಶ್ನಿಸಿದ್ದಾರೆ.
ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೊಂದೆ ಅಲ್ಲದೆ ರಸ್ತೆ ಕೂಡ ಇಲ್ಲ. ಮಕ್ಕಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಈ ಮರದ ದಿಮ್ಮಿಯ ಸಹಾಯದಿಂದ ನದಿ ದಾಟಿ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ನದಿಯ ಪಕ್ಕದಲ್ಲಿ ಕೃಷಿ ಭೂಮಿ ಇದೆ, ಆದರೆ ವಿದ್ಯುತ್ ಇಲ್ಲದ ಕಾರಣ ಮೋಟಾರ್ ಬಳಸಿ ನೀರು ಎತ್ತಲು ಸಾಧ್ಯವಾಗುತ್ತಿಲ್ಲ. ಮಳೆಯ ನೀರಲ್ಲೇ ಕೃಷಿ ಮಾಡುಲಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.