Homeಚಳವಳಿಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ

- Advertisement -
- Advertisement -

ಚಂಪಾರಿಗೆ ಎಪ್ಪತ್ತು! ನಂಬುವುದೇ ಕಷ್ಟ. ಅವರ ಬಂಡಾಯ, ಕಿಲಾಡಿ ಮತ್ತು ಕಿಡಿಗೇಡಿತನಕ್ಕೆ ಎಪ್ಪತ್ತು  ತುಂಬಲು ಸಾಧ್ಯವಿಲ್ಲ, ಅದು ಬಂಡಾಯ ಮತ್ತು ನವ್ಯದ ನಡುಕಾಲದಲ್ಲೇ ನಿಂತಿರಬೇಕು ಅನ್ನಿಸಿತು. ಆದರೂ ಅವರನ್ನು ಮಾತನಾಡಿಸಿ ಒಂದು ಹಾರೈಕೆ ಮಾತೇಳುವುದು ನಮ್ಮ ಕರ್ತವ್ಯವಲ್ಲವೆ. ಫೋನ್  ಮಾಡಿದ್ರೆ ಸಿಕ್ಕೇಬಿಟ್ರು.

“ಹಲೋ ನಮಸ್ಕಾರ ಸಾರ್, ನಾನು ಯಾಹೂ”

“ಯಾಹು ಅಂದ್ರ ಗೌರಿ ಲಂಕೇಶದಾಗ ಬರೀತಿರಲ್ಲಿ ಅವರ ಹೌದಲ್ಲೋ ?

“ಹೌದು ಸಾರ್”.

“ನಿಮ್ಮ ಹೆಸರೇನ್ರಿ ?”

“ಯಾಹೂ ಅಂತ ಸಾರ್ ?

“ಅದು ಖರೇರಿ, ತಂದಿ ತಾಯಿ ಇಟ್ಟ ಹೆಸರಿಲ್ಲೇನು ?”

“ಅದು ಕರಿಯಕ್ಕೆ ಚನ್ನಾಗಿಲ್ಲ ಅಂತ ಗೌರಿಮೇಡಂ ಯಾಹೂ ಅಂತ ಇಟ್ಟವರೆ ಸಾ”,

“ಅಂಗೆನ ಯದಕ ಫೋನ್ ಮಾಡಿದಿರಿ ಹೇಳ್ರಲ್ಲ ?”

“ಯಪ್ಪತ್ತು ವರ್ಸಾಯ್ತಂತಲ್ಲ ಸಾರ್ ನಿಮಗೆ ?”

 “ಅನಂತಮೂರ್ತಿಗಾಗ್ಲೆ ಎಪ್ಪತ್ತಾರಾತು ಗೊತ್ತೇನ ?”

“ಅವು ಎಪ್ಪತ್ತಾರಕ್ಕಿಂತ್ಲೂ ಜಾಸ್ತಿಯಾದಂಗೆ ಕಣ್ತಾರೆ. ಆದ್ರೆ ನೀವು ಮಾತ್ರ ಇನ್ನು ಐವತ್ತಾರು ವರ್ಷದಂಗೆ ಕಾಣ್ತೀರಿ. ಇದರ ಗುಟ್ಟೇನು ಸಾರ್ ?

“ಇದರಾಗ ಗುಟ್ಟೇನು ಬಂತ್ರಿ, ನನ್ನ ಮಾತುಕತಿ, ಬರವಣಿಗೆ, ನಡವಳಿಕೆ ಇವೇನದಾವು ಇವುಕೂ, ನನ್ನ ವಯಸಿಗೂ ಸಂಬಂದಿಲ್ಲ, ನಮ್ಮ ದೇಶದಾಗ ಒಂದೊಂದು ವಯೋಮಾನಕ್ಕೆ ಒಂದೊಂದು ನಡವಳಿಕೆ ಇರಾಕೆ ಬೇಕು ಅಂತ ಹೇಳಿ ನಿಯಮ ಮಾಡ್ಕಾರ, ಅದನ್ನ ಮುರಕೊಂಡ ಹೋದ್ರೆ ನಾವು ಅರಾಮಿರತೇವಿ, ಅಷ್ಟ”.

“ನೀವೀಗ ಯಾವುದನ್ನು ಮುರದಿದ್ದಿರಿ ಸಾರ್ ?”

“ಅರವತ್ತರ ಅರಳುಮರಳು ಮುರುದು ಹತ್ತು ವರ್ಸಾತು”

“ಈ ಎಪ್ಪತ್ತು ವರ್ಷದಲ್ಲಿ ಹಿಂತಿರುಗಿ ನೋಡಿದ್ರೆ ಏನನಸ್ತದೆ ಸಾರ್ ?

“ಭಾಳ ಮಂದಿ ಸಾವಿಗೆ ಸಂತಾಪ ಬರದೇನಿ, ಇನ್ನ ರಗಡ ಮಂದಿಗೆ ಬರಿಬೇಕಲ್ಲಪ್ಪಾ ಅನಸತೈತಿ.”

“ನೀವು ಸಂತಾಪ ಬರಿಯೋ ಮಂದಿ ಬಹಳ ಜನ ಉಳಿದಿಲ್ಲವಲ್ಲ ಸಾರ್ ?”

“ಏ, ಭಾಳ ಮಂದ್ಯದಾರ, ಪುರೋಹಿತರ ಪೈಕಿನ ಒಂದು ಡಜನ್ ಅದಾರ, ರಾಜಕಾರಣದಾಗ ಮೂರು ನಾಕು ಮಂದಿ ಆದಾರ, ಸಾಹಿತ್ಯ ಲೋಕದಾಗ ಆಯಸ್ಸು ಮುಗಿಸಿ ಹೋಗೋ ಮಂದಿಗಿಂತ ಲಬಕ್ಕನ ಹೋಗೋ ಮಂದಿ ಭಾಳದಾರ”.

“ಅದರಲ್ಲೂ ಬಂಡಾಯದೋರು ಬೇಗ ಹೋಗ್ತರಲ್ಲ ಸಾರ್ ?”

“ಹೌದ್ರಿ,  ನವೋದಯದವರು ಪಿಂಚಣಿ ತೊಗಂಡು ಆರಾಮವಾಗಿದ್ದಾರ. ನವ್ಯದವರು, ಬಂಡಾಯದವರು ಕೂಡೇ ಹೊಂಟ ಹೋದರ್‍ರಿ”.

“ಸಾಹಿತ್ಯ ಲೋಕದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಅಂತ ಕೆಲವು ಕಾಲಘಟ್ಟಗಳವಲ್ಲಾ ಸಾರ್, ನಿಮ್ಮ ಬರವಣಿಗೆ ಹೋರಾಟ, ಯಾವ ಘಟ್ಟದಲ್ಲಿ ತೀವ್ರವಾಗಿತ್ತು ಸಾರ್.

“ನೋಡಿ ಇವರೆ, ನಾವು ಯಾವ ಕಾಲಘಟ್ಟದಾಗೂ ಎರಡೂ ಕಾಲಿಟ್ಟವರಲ್ಲ. ಒಂದೊಂದೇ ಕಾಲಿಟ್ಟು ಹಿಂದ ತಗದೇವಿ”.

“ಯಾಕ್ ಸರ್ ?”

“ಯಾಕ್ ಅಂದ್ರ, ಒಂದು ಲೇಬಲ್ ಹಚಗೊಂಡು ಬರಿಯೂದಂದ್ರ ನನಗಾಗುದಿಲ್ರಿ,

ಮೊದಲಿಕ್ಕ ನವೋದಯದವರು ಬರಿಯಕ್ಕತ್ತಿದ್ರು. ಅವುರಿಗೆ ಆಗ ಲೇಬಲ್ ಇರಲಿಲ್ಲ. ಈ ನಮ್ಮ ಪಿತಾಮಹರಿಗೆ ಯಂಗೋ ಏನೋ ನವೋದಯದವರು ಅನ್ನೋ ಲೇಬಲ್ ಸಿಕ್ಕು ‘ಏ ನಮಗ ಲೇಬಲ್ ಸಿಕ್ತು’ ಅಂತೇಳಿ ಬರದು ಬರೆದು ಸುಸ್ತಾದರ್‍ರಿ.”

“ಆದ್ರು ಇವತ್ತಿಗೂ ಅವರನ್ನ ಓದಬವುದಲ್ಲ ಸಾರ್”…?

“ಕೆಲವು ಮಂದಿನ್ನ ಓದಬವುದು ಅಷ್ಟರಿ, ಇನ್ನ ಕೆಲವು ಮಂದಿ ಪುಸ್ತಕ ತೊಗಂಡು ಸಂತಾಪ ಸೂಚನೆ ಮಾಡಿ ಮುಂದೆ ಹೋಗಬಹುದು”.

“ಆ ತರ ಬರದಿರೋರು ಪ್ರಗತಿಶೀಲರಲ್ಲವ ಸಾರ್ ?”

“ಪ್ರಗತಿಶೀಲರು ಬರಕೊಂಡ್ ಬದುತ್ತೇವಿ ಅಂತ ಹೊಂಟರ್‍ರಿ. ಅದಕ ಅಂಗ ಬರದಾರ, ಪಾಪ ಮೊದಲಕ್ಕ ತಮ್ಮ ಸುತ್ತಮುತ್ತ ಕಾಣೋ ಸಮಾಜ ಕುರುತು ಬರದ್ರು. ಅದು ಖಾಲಿ ಆತು. ಅನಂತರ ಗಟಾರ ಜೀವನ ಬರಿಬೇಕು ಅಂತ ಹೊಂಟರ್‍ರಿ, ಅನುಭವದ ಸಲುವಾಗಿ ಗಟಾರಕ್ಕೋದ್ರು, ವಳ್ಳಿ ಬರಲಿಲ್ಲವರು. ‘ಏ ಇಲ್ಲಿ ಭಾಳ ಅರಾಮೈತ’ ಅಂತ ಅಲ್ಲೇ ಉಳುದ್ರು. “ಅಲ್ಲಿಂದ ಅಂಗೇ ಹೊಂಟೋದರಲ್ಲ?”

“ಹೌದ್ರಿ, ಇನ್ನ ನವ್ಯದವರಿಗೆ ಅನಾಥ ಪ್ರಜ್ಞೆ ಅಮರಿಕೊಂಡು ಏನು ನೋಡಿದ್ರೂ ಚಂದ ಕಾಣಿರಲಿಲ್ಲ ಅವರಿಗೆ. ಆದ್ರಿಂದ ಒಳಗೋದ್ರು. ವಳ್ಳಿ ಬರಲಿಲ್ಲವರು. ನಾವೊಂದಿಷ್ಟು ಮಂದಿ ಹೊರಬಂದು ಬಂಡಾಯದ ಕಡೆ ಹೊಂಟವಿ”.

“ಅಂಗಾದ್ರೆ ನಿಮ್ಮ ಬಂಡಾಯ ಮಧ್ಯಂತರದ್ದ ಸಾರ್ ?”

“ಇಲ್ರೀ, ಬಂಡಾಯ ನನ್ನ ಮನೋಧರ್ಮ, ನಾ ಪೆನ್ನ ತೊಗಂಡ ಕೂಡಲೇ ಹೊರಬಂದಿದ್ದೇ ಬಂಡಾಯ, ಧಾರವಾಡದಾಗ ಬೇಂದ್ರೆ, ಜೋಶಿ ಮತ್ತವರ ಬಳಗ, ಅನಂತರ ಸಿ.ಪ. ಶೆಟ್ಟಿ, ಗಿರಡ್ಡಿ, ಮಾಕು, ದೇಕು, ಗೋಕಾಕ್ ಇವರ ವಿರುದ್ಧ ನನ್ನ ಬಂಡಾಯ ಎಂದೂ ಇದ್ದದ್ದೆ. ಅದಕ ನೋಡ್ರಿ ಎಮರ್ಜೆನ್ಸಿಲಿ ನಾ ಒಬ್ಬವನೇ ಜೇಲಿಗೆ ಹೋದದ್ದು “.

“ಆಗ ಇಡೀ ಧಾರವಾಡ ಖುಷಿಪಡ್ತಾಂತಲ್ಲಾ ಸಾರ್?”

“ನಾ ಹೊರಬಂದಾಗ ಅಷ್ಟೇ ಬೇಸರಾತು ಅವರಿಗೆ”.

“ಜೈಲಲ್ಲಿ ನೀವು ಆರೆಸೆನ್ಸಿನವರ ಜೊತೆಗಿದ್ರಂತೆ ?”

“ಜೈಲಂದ್ರ ಮುಗಿತಲ್ರೀ ಅದು ಪಬ್ಲಿಕ್ ಪಡಖಾನಿ ಇದ್ದಂಗ, ಅಲ್ಲಿಗೆ ದರವೊಬ್ಬರೂ ಬರತಾರ, ಅಂಗ ಚೆಡ್ಡಿ ಹುಡ್ರು ಬಂದಿದ್ದು, ಕೆಲವುರು ನಾ ಆರೆಸ್ಸೆಸ್ಸಲ್ಲ ಅಂತ ಅಳಾಕತ್ತಿದ್ರು.”

“ಆದ್ರಿವತ್ತು ಯಂಗೆ ನಗ್ತಾರೆ ನೋಡಿ ಸಾರ್”

“ಇಲ್ಲಿ ಯಾರ ನಗೂನೂ ಶಾಶ್ವತ ಅಲ್ಲರೀ. ಒಂದು ಕಾಲಕ್ಕೆ ಕಾಂಗ್ರೆಸ್‌ನವರು ಅಂದ್ರೆ ಮಂದಿ ಹೆದರುತಿದ್ದರು. ಆದ್ರ ಇವತ್ತು ಕಾಂಗ್ರೆಸ್ಸಿನವರು ಅಂದ್ರೆ ಒಂದೀಟು ಡುಬ್ಬು ಕೆರೆದು ಹೋಕ್ಯೇನಾ ಅನ್ನಂಗಾಗೇರೆ. ಅಂಗ ಈ ಚೆಡ್ಡಿಗಳ ನಗು ಎಡೂರಪ್ಪ ಲಗಾಟ ಹೊಡೆದ ನಂತರ ಹಿಂಗೇ ಇರುತ್ತೆ ಅಂತ ಹೇಳಾಕ ಬರೂದಿಲ್ಲ”.

“ಇದೊಂತರ ಹತಾಶೆ ಮುಚ್ಚಿಡೋ ಅಭಿಪ್ರಾಯದಂಗೆ ಇದೆಯಲ್ಲ ಸಾರ್”.

“ಹತಾಶ ಅನ್ನದು ನನ್ನ ಸನೇಕ ಸುಳೆದಿಲ್ಲರಿ. ಹತಾಶ ಏನಾರ ನನಗೆ ಇದ್ದಿದ್ರೆ ನನ್ನ ಅರವತ್ತನೇ ವರ್ಷದ ಅದ್ದೂರಿಯಿಂದೆ ಆಚರಿಸೊ ಏರ್ಪಾಡು ಮಾಡತಿದ್ವೆ. “

“ಹೌದ ಸಾರ್?”

“ಹೌದ್ರಿ, ನನಗೆ ಕೆಲವರ ನೋಡಿದ ಕೂಡ್ಳೆ ಬ್ಯಾಟ್ರಿ ಚಾರ್ಜಾಕ್ಕಿತಿ. ಚಡ್ಡಿಗಳ ನೋಡಿದ್ರೆ, ಪುರೋಹಿತರ ನೋಡಿದ್ರೆ, ಪೊಲೀಸರ ನೋಡಿದ್ರೆ, ಇನ್ನು ಕೆಲವರದಾರ ಅವರನ್ನ ನೋಡಿದ್ರೆ, ಅವರ ಬರದದ್ದನ್ನ ಓದಿದ್ರೆ ನನ್ನ ಬ್ಯಾಟರಿ ಚಾರ್ಜ್ ! ಅದಕ ನೋಡ್ರಿ ನನಗೆ ಎಪ್ಪತ್ತಾದದ್ದು ನನಗೇ ಗುರುತಾಗಲಿಲ್ಲ”.

  • ಬಿ. ಚಂದ್ರೇಗೌಡ

(ಚಂಪಾರವರಿಗೆ 70 ವರ್ಷ ತುಂಬಿದ ಸಂದರ್ಭದಲ್ಲಿ ಬಿ.ಚಂದ್ರೇಗೌಡರು ಬರೆದ ಯಾಹೂ ಲೇಖನ)


ಇದನ್ನೂ ಓದಿ; ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...