Homeದಲಿತ್ ಫೈಲ್ಸ್ಅಯೋಧ್ಯೆ- ದಲಿತ ಜಮೀನು ಲಪಟಾಯಿಸಿದ ಪ್ರಸಂಗ

ಅಯೋಧ್ಯೆ- ದಲಿತ ಜಮೀನು ಲಪಟಾಯಿಸಿದ ಪ್ರಸಂಗ

- Advertisement -
- Advertisement -

ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿಯ 2.77 ಎಕರೆಗಳಷ್ಟು ವಿವಾದಿತ ಜಮೀನನ್ನು ರಾಮಮಂದಿರ ಕಟ್ಟಿಕೊಳ್ಳಲು ಸುಪ್ರೀಮ್ ಕೋರ್ಟು ಹಿಂದೂಗಳಿಗೆ ಒಪ್ಪಿಸಿತ್ತು. ಸುಪ್ರೀಮ್ ತೀರ್ಪಿನ ಅನ್ವಯ ರಚಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ 2.77 ಎಕರೆಗಳ ಸುತ್ತಮುತ್ತ ಈವರೆಗೆ 70 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಈ ಎರಡು ವರ್ಷಗಳಲ್ಲಿ ಅಯೋಧ್ಯೆಯ ರಿಯಲ್ ಎಸ್ಟೇಟ್ ದಂಧೆ ಅತಿಶಯವಾಗಿ ಗರಿಗೆದರಿದೆ. ಭವ್ಯ ರಾಮಮಂದಿರದ ಸುತ್ತಮುತ್ತಲ ಜಮೀನಿನ ಖರೀದಿ ದರ ಆಕಾಶಕ್ಕೇರುವ ನಿರೀಕ್ಷೆ ಹೊಂದಿರುವ ಖಾಸಗಿ ಖರೀದಿದಾರರೂ ಈ ಜಮೀನಿಗೆ ಮುಗಿ ಬೀಳತೊಡಗಿದ್ದಾರೆ.

ಸ್ಥಳೀಯ ಶಾಸಕರು ಮತ್ತು ಅಯೋಧ್ಯೆಯ ಉನ್ನತ ಸರ್ಕಾರಿ ಅಧಿಕಾರಿಗಳ ಹತ್ತಿರದ ಸಂಬಂಧಿಕರು ಇಲ್ಲಿನ ಬಡ ದಲಿತರ ಜಮೀನು ಖರೀದಿ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ರಾಮಮಂದಿರ ನಿವೇಶನದಿಂದ ಕೆಲವೇ ಕಿಲೋಮೀಟರುಗಳ ದೂರದ ಬರ್ಹಟ ಮಾಂಝಾ ಮತ್ತಿತರೆ ಗ್ರಾಮಗಳ ದಲಿತರಿಂದ 21 ಬಿಘಾಗಳಷ್ಟು (52,000 ಚದರ ಗಜಗಳು) ಜಮೀನನ್ನು 1990ರ ದಶಕಗಳಲ್ಲಿ ಮಹೇಶ್ ಯೋಗಿ ವಿದ್ಯಾಪೀಠ ಟ್ರಸ್ಟ್ ಖರೀದಿಸಿತ್ತು. 2016ರಲ್ಲಿ ಸಂಬಂಧಪಟ್ಟ ಕಾಯಿದೆ ತಿದ್ದುಪಡಿಗೆ ಮುನ್ನ ದಲಿತರು ತಮ್ಮ ಜಮೀನನ್ನು ದಲಿತೇತರರಿಗೆ ಮುಕ್ತವಾಗಿ ಪರಭಾರೆ ಮಾಡುವಂತಿರಲಿಲ್ಲ. ಆದರೆ ಮಹೇಶ್ ಯೋಗಿ ಟ್ರಸ್ಟ್ ಮೋಸ ಮರೆಯಿಂದ ಹತ್ತು ಹನ್ನೆರಡು ಮಂದಿ ದಲಿತರಿಂದ ಜಮೀನು ಖರೀದಿಸಿತ್ತು. ತನ್ನ ದಲಿತ ಉದ್ಯೋಗಿ ರೊಂಘೈ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿತ್ತು. ಈ ಜಮೀನನ್ನು ರೊಂಘೈನಿಂದ 1996ರಲ್ಲಿ ದಾನವಾಗಿ ಬರೆಯಿಸಿಕೊಂಡಿತ್ತು. ಕೇವಲ 6.38 ಲಕ್ಷ ರುಪಾಯಿಗೆ ದಲಿತರಿಂದ ದಕ್ಕಿಸಿಕೊಂಡಿದ್ದ ಈ ಜಮೀನಿನ ಇಂದಿನ ಮಾರುಕಟ್ಟೆ ಬೆಲೆ ಕೋಟ್ಯಂತರ ರುಪಾಯಿಗಳು. ಮಹಾದೇವನೆಂಬ ದಲಿತನಿಂದ ಬರೆಯಿಸಿಕೊಂಡಿದ್ದ ಮೂರು ಬಿಘಾಗಳಷ್ಟು ಜಮೀನಿಗೆ ಟ್ರಸ್ಟ್ ಅಂದು ನೀಡಿದ್ದ ಮೊತ್ತ 1.02 ಲಕ್ಷ ರುಪಾಯಿ. ಉತ್ತರಪ್ರದೇಶದಲ್ಲಿ ಒಂದು ಎಕರೆ ಜಮೀನು ಅಂದಾಜು ಒಂದೂವರೆ ಎಕರೆ ಬಿಘಾಕ್ಕೆ ಸಮ. ಹೀಗೆ ದಲಿತರಿಂದ ಪಡೆದ ಜಮೀನನ್ನು ಮಹೇಶ್ ಯೋಗಿ ಟ್ರಸ್ಟ್ ತನಗೆ ಬೇಕಾದವರಿಗೆ ಮಾರಾಟ ಮಾಡಲಾರಂಭಿಸಿತು. ತನ್ನ ಜಮೀನನ್ನು ಅಕ್ರಮವಾಗಿ ವರ್ಗ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಮಹಾದೇವ ರೆವಿನ್ಯೂ ಮಂಡಳಿಗೆ ದೂರು ನೀಡಿದ. ಪರಿಣಾಮವಾಗಿ ಜರುಗಿದ ತನಿಖೆಯ ವರದಿಯು ಅಕ್ರಮ ವರ್ಗಾವಣೆಯ ದೂರನ್ನು ಎತ್ತಿ ಹಿಡಿದು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿತು. ಈ ಶಿಫಾರಸನ್ನು ಅನುಮೋದಿಸಿದ ಅಯೋಧ್ಯಾ ವಿಭಾಗಾಧಿಕಾರಿ ಎಂ.ಪಿ.ಅಗರವಾಲ್ ಸಂಬಂಧಿಕರು ಮಹೇಶ್ ಯೋಗಿ ಟ್ರಸ್ಟ್‌ನಿಂದ ನಿವೇಶನಗಳನ್ನು ಪಡೆದಿದ್ದಾರೆ. ಅಗರವಾಲ್ ಅವರ ಪತ್ನಿಯ ತಂದೆ ಮತ್ತು ಪತ್ನಿಯ ಸೋದರರಿಬ್ಬರೂ ತಲಾ ಎರಡೂವರೆ ಸಾವಿರ ಮತ್ತು 1,260 ಚದರ ಗಜಗಳ ಅಳತೆಯ ನಿವೇಶನಗಳನ್ನು 2020ರ ಡಿಸೆಂಬರ್‌ನಲ್ಲಿ ಗಿಟ್ಟಿಸಿದ್ದಾರೆ. ಇದೇ ಟ್ರಸ್ಟಿನಿಂದ ಮುಖ್ಯ ಕಂದಾಯ ಅಧಿಕಾರಿ ಪುರುಷೋತ್ತಮ ದಾಸ್ ಗುಪ್ತಾ ಮತ್ತು ಡಿ.ಐ.ಜಿ. ದೀಪಕ್ ಕುಮಾರ್ ಅವರ ಸಮೀಪದ ಸಂಬಂಧಿಕರು 1,130 ಚದರ ಗಜ ಮತ್ತು 1,020 ಚದರ ಗಜಗಳ ವಿಸ್ತೀರ್ಣದ ನಿವೇಶನಗಳನ್ನು ಬರ್ಹಾಟ ಮಾಂಝಾ ಗ್ರಾಮದಲ್ಲಿ ಖರೀದಿಸಿದ್ದಾರೆ. ಅಯೋಧ್ಯೆಯ ಜಿಲ್ಲಾಧಿಕಾರಿಯ ತಂದೆ ಕೂಡ ಭವ್ಯ ರಾಮಮಂದಿರದಿಂದ ಒಂದು ಕಿ.ಮೀ. ಫಾಸಲೆಯಲ್ಲಿ ಮಹೇಶ್ ಯೋಗಿ ಟ್ರಸ್ಟ್‌ನಿಂದ ನಿವೇಶನ ಖರೀದಿಸಿದ್ದಾರೆ.

ಉಳಿದಂತೆ ಅಯೋಧ್ಯಾ ಜಿಲ್ಲೆಯ ಗೋಸಾಯಿಗಂಜ್ ಬಿಜೆಪಿ ಶಾಸಕ ಇಂದ್ರಪ್ರತಾಪ ತಿವಾರಿ 2019ರ ನವೆಂಬರಿನಲ್ಲಿ 2,593 ಚದರ ಗಜ, ನಿವೃತ್ತ ಐ.ಎ.ಎಸ್. ಅಧಿಕಾರಿ ಉಮಾಧರ ದ್ವಿವೇದಿ ಅವರು 2021ರ ಅಕ್ಟೋಬರಿನಲ್ಲಿ 1,680 ಚದರ ಗಜಗಳ ಅಳತೆಯ ನಿವೇಶನಗಳ ಖರೀದಿಸಿದ್ದಾರೆ.

ಈ ಅಧಿಕಾರಿಗಳು ಮತ್ತು ಅವರ ಸಂಬಂಧಿಕರು ಖರೀದಿಸಿರುವ ನಿವೇಶನಗಳು ವಿವಾದಗ್ರಸ್ತ ದಲಿತ ಜಮೀನಿಗೆ ಸೇರಿಲ್ಲ. ಆದರೆ ದಲಿತರಿಂದ ಅಕ್ರಮವಾಗಿ ಜಮೀನು ಖರೀದಿಸಿದ್ದ ತಪ್ಪಿಗಾಗಿ ಮಹೇಶ್ ಯೋಗಿ ಟ್ರಸ್ಟ್ ಕಟಕಟೆಯಲ್ಲಿ ನಿಂತಿದೆ. ತನಿಖೆಗೆ ಗುರಿಯಾಗಿದೆ. ಅಂತಹ ಟ್ರಸ್ಟಿನಿಂದ ಹಾಲಿ ಅಧಿಕಾರಿಗಳು, ಅವರ ಆಪ್ತಸಂಬಂಧಿಕರು, ನಿವೃತ್ತ ಅಧಿಕಾರಿಗಳು ನಿವೇಶನ ಖರೀದಿಸಿರುವುದು ಔಚಿತ್ಯಪೂರ್ಣ ಎನಿಸಿಕೊಳ್ಳುವುದಿಲ್ಲ. ಈ ನಿವೇಶನಗಳು ತಾನು ಆಪಾದನೆಯಿಂದ ಪಾರಾಗಲೆಂದು ಟ್ರಸ್ಟ್ ನೀಡುತ್ತಿರುವ ’ಲಂಚ’ ಎನಿಸಿಕೊಳ್ಳುತ್ತವೆ. ಖರೀದಿ ಮಾಡಿರುವವರು ಟ್ರಸ್ಟ್‌ಅನ್ನು ಕಾನೂನು ಕ್ರಮದ ಕುಣಿಕೆಯಿಂದ ಬಚಾವು ಮಾಡುವುದಿಲ್ಲವೆಂಬ ಖಾತರಿಯೇನು?

ದಲಿತರ ಜಮೀನನ್ನು ಲಪಟಾಯಿಸಲು ಟ್ರಸ್ಟ್ ಗಾಳವಾಗಿ ಬಳಸಿಕೊಂಡ ದಲಿತ ರೊಂಘೈ ಮತ್ತು ಅವನ ಕುಟುಂಬ ಅಯೋಧ್ಯೆಯಿಂದ ದೂರದಲ್ಲಿ ವಾಸಿಸಿದೆ.

ಭರತ ಭೂಮಿಯ ದಲಿತರು ಸಾವಿರಾರು ವರ್ಷಗಳಿಂದ ಜಮೀನುವಂಚಿತರು. ಜಾತಿವ್ಯವಸ್ಥೆಯು ಅವರಿಗೆ ಜಮೀನಿನ ಒಡೆತನವನ್ನು ನಿರಾಕರಿಸಿತ್ತು. ಭೂಹೀನ ಸ್ಥಿತಿಯು ಬಲಿಷ್ಠ ಜಾತಿಗಳ ಗುಲಾಮಗಿರಿಗೆ
ಅವರನ್ನು ನೂಕಿದೆ.

2011ರ ಜನಗಣತಿಯ ಪ್ರಕಾರ ದೇಶದ ಶೇ.71ರಷ್ಟು ದಲಿತರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ, ಬಳಿ ಸ್ವಂತ ಜಮೀನಿಲ್ಲ. ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಶೇ.90ರಷ್ಟು.

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಉರುಳಿದ್ದರೂ ಭೂಮಿಯ ಕ್ರಮಬದ್ಧ ಮರುಹಂಚಿಕೆ ನಡೆದೇ ಇಲ್ಲ. ಒಂದು ಅಧ್ಯಯನದ ಪ್ರಕಾರ ಏಳು ಹೆಕ್ಟೇರುಗಳ ಭೂಒಡೆತನ ಮಿತಿ ಹೇರಿದರೆ ಮರು ಹಂಚಿಕೆಗೆ ಲಭಿಸುವ ಹೆಚ್ಚುವರಿ ಭೂಮಿ 75 ಲಕ್ಷ ಹೆಕ್ಟೇರುಗಳು.

ಭೂಒಡೆತನವು ಆತ್ಮಗೌರವದ ಮೂಲ ಎಂಬುದು ಗ್ರಾಮೀಣ ಭಾರತದ ವಾಸ್ತವ. ಹೀಗಾಗಿ ಭೂಸುಧಾರಣೆಯು ಸಾಮಾಜಿಕ ನ್ಯಾಯದ ಬಹುಮುಖ್ಯ ಭಾಗ. ಭಾರತದ ದಮನಿತ ಸಮುದಾಯಗಳ ಘನತೆಯೊಂದಿಗೆ ಬೆಸೆದುಕೊಂಡಿರುವ ಪರಿಹಾರ.

ಹಿಂದಿಯ ಬಹುಮುಖ್ಯ ಕವಿಗಳಲ್ಲಿ ಒಬ್ಬರಾದ ಜ್ಞಾನಪೀಠ ಪ್ರಶಸ್ತಿ ವಿಜೇತ ಕುಂವರ ನಾರಾಯಣ ಅವರ ’ಅಯೋಧ್ಯೆ ಕವಿತೆ ನೆನಪಾಗುತ್ತಿದೆ-

ಹೇ ರಾಮ,
ಬದುಕು ಒಂದು ಕಟು ಯಥಾರ್ಥ
ಮತ್ತು ನೀನೊಂದು ಮಹಾಕಾವ್ಯ!

ನಿನ್ನ ಕೈಯಿಂದಾಗದು
ಆ ಅವಿವೇಕವನ್ನು ಗೆಲ್ಲುವುದು
ಹತ್ತು ಇಪ್ಪತ್ತಲ್ಲ, ಅದಕ್ಕೆ
ಈಗ ಲಕ್ಷ ತಲೆಗಳು- ಲಕ್ಷಾಂತರ ಹಸ್ತಗಳು
ಮತ್ತು ವಿಭೀಷಣ ಕೂಡ ಈಗ
ಯಾರ ಜೊತೆಗಿರುವನೋ ತಿಳಿಯದು.

ಇದಕ್ಕಿಂತ ಇನ್ನೇನಾಗಬೇಕು.
ನಮ್ಮ ದೌರ್ಭಾಗ್ಯ
ಒಂದು ವಿವಾದಿತ ಸ್ಥಳಕ್ಕೆ ಕುಗ್ಗಿ
ಕುಸಿಯಿತಲ್ಲ ನಿನ್ನ ಸಾಮ್ರಾಜ್ಯ

ಅಯೋಧ್ಯೆ ಈಗ ನಿನ್ನ ಆಯೋಧ್ಯೆ ಅಲ್ಲ
ಅದು ಯೋಧರ ಲಂಕೆ
’ಮಾನಸ’ ನಿನ್ನ ’ಚರಿತೆ’ ಅಲ್ಲ
ಅದು ಚುನಾವಣೆಯ ನಗಾರಿ!

ಹೇ ರಾಮ, ಈ ಯುಗವೆಲ್ಲಿ
ಎಲ್ಲಿ ನಿನ್ನ ತ್ರೇತಾಯುಗ,
ಎಲ್ಲಿ ನೀನು ಮರ್ಯಾದಾ ಪುರುಷೋತ್ತಮ
ಎಲ್ಲಿ ಈ ನೇತಾ ಯುಗ!

ಸವಿನಯ ನಿವೇದನೆ ಪ್ರಭೂ, ವಾಪಸು ಹೋಗಿಬಿಡು
ಯಾವುದಾದರೂ ಪುರಾಣ- ಮತ್ಯಾವುದೋ ಧರ್ಮಗ್ರಂಥದೊಳಕ್ಕೆ
ಸಕುಶಲ ಸಪತ್ನೀಕ….
ವಾಲ್ಮೀಕಿ ಅಲೆದಾಡಿದ ಆ ಅಡವಿಯಲ್ಲ!
ಈಗಿನ ಅಡವಿ


ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ದಿನ: ರಾಮ್‌ ಕೆ ನಾಮ್ | ರಾಮನ ಹೆಸರಿನಲ್ಲಿ | In the name of God | ಸಾಕ್ಷ್ಯಚಿತ್ರ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...