Homeಕರ್ನಾಟಕಮಂಗಳೂರು: ಮತ್ತೊಂದು ಮತೀಯ ಗೂಂಡಾಗಿರಿ ಪ್ರಕರಣ; ವಿಡಿಯೊ ವೈರಲ್‌

ಮಂಗಳೂರು: ಮತ್ತೊಂದು ಮತೀಯ ಗೂಂಡಾಗಿರಿ ಪ್ರಕರಣ; ವಿಡಿಯೊ ವೈರಲ್‌

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಗೂಂಡಾಗಿರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಮತ್ತೊಂದು ಪ್ರಕರಣ ಶುಕ್ರವಾರ ನಡೆದಿದೆ.

ಮಂಗಳೂರು ನಗರದಲ್ಲಿ ಇಬ್ಬರು ವಿದ್ಯಾರ್ಥಿಗಳ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಮತೀಯ ಗೂಂಡಾಗಿರಿ ನಡೆಸಿದ್ದು, ವಿಡಿಯೊ ವೈರಲ್‌ ಆಗಿದೆ.

ಶುಕ್ರವಾರ ಬೆಳಿಗ್ಗೆ ನಗರ ಸರ್ವಿಸ್ ಬಸ್ ನಿಲ್ಯಾಣದಲ್ಲಿದ್ದ ಬಸ್ಸಿನಿಂದ ಇಬ್ಬರು ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಗೂಂಡಾಗಿರಿ ನಡೆಸಿರುವ ಆರೋಪ ಕೇಳಿ ಬಂದಿದೆ.

ಮಂಗಳೂರು ನಗರದ ಸ್ಟೇಟ್ ಬ್ಯಾಂಕ್‌ ಸಮೀಪದ ಖಾಸಗಿ ಬಸ್ ನಿಲ್ದಾಣದಲ್ಲಿ ಮಂಗಳೂರಿನಿಂದ ಉಡುಪಿಗೆ ತೆರಳಲು ಇಬ್ಬರು ಬಸ್ಸಿನಲ್ಲಿ ಕುಳಿತಿದ್ದರು. ಶಿವಮೊಗ್ಗ ಮೂಲದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಉಡುಪಿ ಮೂಲದವರು ಎಂದು ವರದಿಗಳಾಗಿವೆ.

ನಗರ ಹೊರವಲಯದ ಮಂಗಳೂರಿನ ವಾಮಂಜೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ಇವರು ಉಡುಪಿಗೆ ತೆರಳುವ ಬಸ್ಸಿನಲ್ಲಿ ಕುಳಿತಿದ್ದುದನ್ನು ಕಂಡ ಸಂಘ ಪರಿವಾರದ ಕಾರ್ಯಕರ್ತರು ಬಸ್ಸಿನೊಳಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೆದರಿಸಿ ಬಲವಂತವಾಗಿ ಕೆಳಗಿಳಿಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಯ ಗುರುತಿನ ಚೀಟಿ ಮತ್ತು ವಿಳಾಸವನ್ನು ಕೇಳಿ ಬೆದರಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್, ‘ಪ್ರಕರಣದ ಬಗ್ಗೆ ಮತ್ತು ವಿದ್ಯಾರ್ಥಿಗಳು ಎಲ್ಲಿಯವರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ ಎಂದು ‘ವಾರ್ತಾಭಾರತಿ’ ವರದಿ ಮಾಡಿದೆ.

ದಕ್ಷಿಣ ಕನ್ನಡದ ಹೆಚ್ಚುತ್ತಿದೆ ಕೋಮುದ್ವೇಷ

ಪೀಪಲ್ಸ್‌ ಯೂನಿಯನ್ ಫಾರ್‌ ಲಿಬರ್ಟೀಸ್‌ ಕರ್ನಾಟಕ (ಪಿಯುಸಿಎಲ್‌-ಕ) ಆಲ್‌ ಇಂಡಿಯಾ ಲಾಯರ್ಸ್ ಅಸೋಸಿಯೇಷನ್‌ ಫಾರ್‌ ಜಸ್ಟಿಸ್‌ (ಎಐಎಲ್‌ಎಜೆ), ಆಲ್‌ ಇಂಡಿಯಾ ಪೀಪಲ್ಸ್ ಫೋರಮ್‌‌ (ಎಐಪಿಎಫ್‌) ಮತ್ತು ಗೌರಿ ಲಂಕೇಶ್‌ ನ್ಯೂಸ್‌.ಕಾಂ (gaurilankeshnews.com) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಕೋಮುದ್ವೇಷ ಅಪರಾಧ’ಗಳ ಕುರಿತು ಆತಂಕ ವ್ಯಕ್ತಪಡಿಸಿದೆ.

ಕರಾವಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯರವರು ಮತೀಯ ಗೂಂಡಾಗಿರಿಯನ್ನು ಬಹಿರಂಗವಾಗಿ ಸಮರ್ಥಿಸಿ ಹೇಳಿಕೆ ನೀಡಿದ್ದನ್ನು, ಸಾಮಾಜಿಕ ಸಂಘಟನೆಗಳು, ನಾಗರಿಕರು, ವಿದ್ಯಾರ್ಥಿಗಳು, ವಕೀಲರು ಮತ್ತು ವಿರೋಧ ಪಕ್ಷದ ನಾಯಕರುಗಳು ತೀವ್ರವಾಗಿ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಎಂತಹ ಗಂಭೀರ ಪರಿಸ್ಥಿತಿಯಲ್ಲಿ ನಾವು ಇದ್ದೇವೆ ಎನ್ನುವುದನ್ನು ಈ ವರದಿಯು ಉಲ್ಲೇಖಿಸುತ್ತದೆ.


ಇದನ್ನೂ ಓದಿರಿ: ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ: ಅನ್ಯಧರ್ಮದ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ


ಈ ವರದಿಯು ದಕ್ಷಿಣ ಕನ್ನಡದಲ್ಲಿ ಜನವರಿ 2021ರಿಂದ ಸೆಪ್ಟೆಂಬರ್‌ 2021ರವರೆಗೆ ನಡೆದ ಮತೀಯ ಗೂಂಡಾಗಿರಿ ಮತ್ತು ದ್ವೇಷದ ಅಪರಾಧಿಕ ಘಟನೆಗಳನ್ನು ವಿಶ್ಲೇಷಿಸಿದೆ. ಜೊತೆಗೆ ಆರು ವಿಭಿನ್ನ ಮಾದರಿಯ ಘಟನೆಗಳನ್ನು ಗುರುತಿಸುತ್ತದೆ. ಅವುಗಳೆಂದರೆ, 1. ಸಾಮಾಜಿಕ ಪ್ರತ್ಯೇಕತೆಯನ್ನು ಜಾರಿಗೊಳಿಸುವುದು 2. ಆತ್ಮೀಯ ಸಂಬಂಧಗಳನ್ನು ನಿಯಂತ್ರಿಸುವುದು. 3. ಆರ್ಥಿಕ ಸಾಮಾಜಿಕ ಬಹಿಷ್ಕಾರ. 4. ಗೋವಿನ ಹೆಸರಲ್ಲಿ ದಾಳಿಗಳು. 5. ಧಾರ್ಮಿಕ ಸ್ವಾತಂತ್ರ್ಯವನ್ನು ನಿಗ್ರಹಿಸುವುದು. 6. ದ್ವೇಷ ಹರಡುವ ಭಾಷಣಗಳನ್ನು ಮಾಡುವುದು.

ಕೋಮುದ್ವೇಷವನ್ನು ತಡೆಯುವಲ್ಲಿ ಪೊಲೀಸರ ಪಾತ್ರವನ್ನು ಈ ವರದಿ ಉಲ್ಲೇಖಿಸಿದೆ. ಜೊತೆಗೆ ಪೊಲೀಸರ ತಪ್ಪುಗಳನ್ನು ವರದಿ ಉಲ್ಲೇಖಿಸಿದೆ. ಅಂತರ ಧರ್ಮೀಯ ಸಂಬಂಧಗಳಿಗೆ ತೊಂದರೆಯುಂಟುಮಾಡಿದ ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಲ್ಲ. ಬದಲಾಗಿ ಅಂತರ ಧರ್ಮೀಯ ಸ್ನೇಹಿತರು ಅಥವಾ ದಂಪತಿಗಳನ್ನೇ ಪೊಲೀಸ್ ಠಾಣೆಗೆ ಕರೆಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಂದೆಡೆ ಹಿಂಸಾಚಾರ ಎಸಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೂ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಸಂತ್ರಸ್ತರನ್ನು ಠಾಣೆಗೆ ಕರೆದೊಯ್ದು ಪ್ರಶ್ನಿಸುವ ಮೂಲಕ ತಪ್ಪಿತಸ್ಥರೆಂದು ಪರಿಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂತರ ಧರ್ಮೀಯ ಸಂಬಂಧಗಳನ್ನು ಬಲವಂತವಾಗಿ ಪ್ರತ್ಯೇಕಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ಆರೋಪಿಗಳ ಮಿತ್ರರಾಗಿದ್ದಾರೆ ಎಂದು ವರದಿಯು ಆತಂಕ ವ್ಯಕ್ತಪಡಿಸಿದೆ.


ಇದನ್ನೂ ಓದಿರಿ: ಶನಿವಾರಪೇಟೆ: ಬುರ್ಖಾ ಧರಿಸಿದಕ್ಕೆ ಅಮಾಯಕ ಬಾಲಕಿಯರ ಮೇಲೆ ಮತೀಯ ಗೂಂಡಾಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...