“ಜಯಕುಮಾರ್ ಉಸಿರು ನಿಂತಿದೆ, ಮಣ್ಣಲ್ಲಿ ಮಣ್ಣಾಗಿರುವ ದಲಿತ ಆತ್ಮಗಳು ನೀವು ಏನು ಮಾಡುತ್ತಿದ್ದೀರಿ ಎಂದು ನಮ್ಮನ್ನು ಪ್ರಶ್ನೆ ಮಾಡುತ್ತಿವೆ” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಮೇ 17ರಂದು ನಡೆದಿರುವ ದಲಿತ ಯುವಕ ಜಯಕುಮಾರ್ ಅವರ ಆಪಾದಿತ ಕೊಲೆ ಖಂಡಿಸಿ ಮಂಗಳವಾರ ಆಯೋಜಿಸಿದ್ದ ‘ಕೆ.ಆರ್ ಪೇಟೆ ಚಲೋ’ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಕಂಬಾಲಪಲ್ಲಿಯಲ್ಲಿ 7 ಜನ ದಲಿತರು ಸುಟ್ಟು ಕರಕಲಾಗಿದ್ದರು. ಅವರ ಶವಗಳನ್ನು ಬಿಳಿ ಬಟ್ಟೆ ಸುತ್ತಿ ಇಟ್ಟಿದ್ದರು. ಜಯಕುಮಾರ್ ಅವರ ಶವವನ್ನೂ ಕೂಡ ಹೀಗೆ ಸುತ್ತಿ ಇಟ್ಟಿದ್ದರು. ಇದು ಹೊಸತಲ್ಲ, ಇಂತಹ ಹತ್ಯೆಗಳು ಸಹಜ ಎಂಬಂತೆ ನಡೆಯುತ್ತಲೇ ಇವೆ. ದಲಿತ ಚಳವಳಿ ಗಟ್ಟಿಯಾಗಿದ್ದರೆ ಇಂತವರಿಗೆ ಭಯ ಇರುತ್ತದೆ. ನಾವು ಜೀವಂತವಾಗಿ ಇರಬೇಕಾಗಿರುವುದೇ ನಮಗೆ ಶಕ್ತಿಯಾಗುತ್ತದೆ” ಎಂದರು.
ಸರ್ಕಾರಗಳು ಬದಲಾದರೂ ವ್ಯವಸ್ಥೆ ಬದಲಾಗಿಲ್ಲ. ದಲಿತರ ಮೇಲಿನ ಅತ್ಯಾಚಾರ, ಕೊಲೆಗಳು ನಡೆಯುತ್ತಲೇ ಇವೆ. ಅನೇಕ ದಲಿತ ಹತ್ಯಾಕಾಂಡಗಳು ಸಾಕ್ಷಿಗಳು ಇಲ್ಲದೆ ಮುಕ್ತಾಯಗೊಂಡಿದೆ. ಕಂಬಾಲಪಲ್ಲಿ ಪ್ರಕರಣ ಇಂದಿಗೂ ನ್ಯಾಯಾಲಯದಲ್ಲಿ ಬಾಕಿ ಇದೆ. ನ್ಯಾಯಾಂಗಕ್ಕೂ ಇಂದು ಕಣ್ಣು, ಕಿವಿ ಇಲ್ಲದಂತಾಗಿದೆ. ಸಾಕ್ಷಿಯೇ ಇಲ್ಲದ ಮೇಲೆ ಜೀವಂತವಾಗಿ ಸತ್ತವರು ಯಾರು? ಈ ಸರ್ಕಾರವನ್ನು ಅಧಿಕಾರಕ್ಕೆ ತಂದದ್ದು ತಳ ಸಮುದಾಯಗಳು. ಆದರೆ, ಅವರಿಗೇ ಈಗ ಸರ್ಕಾರದಿಂದ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ದಲಿತ ಯುವಕನ ಕೈ ಕತ್ತರಿಸಲಾಗಿದೆ. ಅಲೆಮಾರಿ ಬಾಲಕಿಯ ಕೊಲೆ ಆಗಿದೆ. ಇಷ್ಟೊಂದು ದಲಿತ ಹತ್ಯಾಕಾಂಡ ಆಗುತ್ತಿದ್ದರೂ, ಮೋದಿ ಸುಮ್ಮನಿದ್ದಾರೆ. ಪೊಲೀಸ್ ಇಲಾಖೆಯಾದರೂ ಗಂಭೀರವಾಗಿ ಚಿಂತಿಸಬೇಕು. ಆದರೆ, ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕೂಡ ಮನುಷ್ಯತ್ವ ಕಳೆದುಕೊಂಡಿರುವುದು ದುರಾದೃಷ್ಟ. ಜಯಕುಮಾರ್ ಕೊಲೆ ಕೂಡಾ ಈ ದುಷ್ಠ ಕೂಟದ ಷಡ್ಯಂತ್ರಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಹಾಗಾಗಿ, ನಾವೆಲ್ಲರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದರು.
ಜಯಕುಮಾರ್ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಅವರ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು.
ಸಮಾಜ ಕಲ್ಯಾಣ ಸಚಿವ ಮತ್ತು ಗೃಹ ಸಚಿವರು ಗ್ರಾಮಕ್ಕೆ ಆಗಮಿಸಿ ಮೃತ ಯುವಕನ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಬೇಕು. ಅಷ್ಟೇ ಅಲ್ಲ ಸುಳ್ಳು ದೂರು ಪಡೆದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು. ಅವರಿಂದ ನ್ಯಾಯ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಸರ್ಕಾರ ಈ ಕೂಡಲೇ ಪ್ರಕರಣವನ್ನು ಎಸ್ಐಟಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ಶಾಸಕರಾದ ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಬಿಜೆಪಿಯಿಂದ ಉಚ್ಛಾಟನೆ