ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ರವರು 2024ರಲ್ಲಿ ಬಿಜೆಪಿ ಮಣಿಸಲು ವಿರೋಧ ಪಕ್ಷಗಳ ಬೃಹತ್ ಸಭೆ ಆಯೋಜಿಸಿದ್ದು ಹಲವು ಪ್ರತಿಪಕ್ಷಗಳ ಮುಖಂಡರನ್ನು ಪಾಟ್ನಾದ ಸಭೆಗೆ ಆಹ್ವಾನಿಸಿದ್ದಾರೆ.
ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದ ನಿತೀಶ್ ಕುಮಾರ್ ಕಳೆದ ವರ್ಷ ಮೈತ್ರಿ ಮುಗಿದುಕೊಂಡು ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿ ಸೇರಿ ಸಿಎಂ ಆಗಿದ್ದಾರೆ. ಅಲ್ಲದೇ 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪ್ರತಿ ಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸುತ್ತಿದ್ದಾರೆ. ಆ ಭಾಗವಾಗಿ ಜೂನ್ 23 ರಂದು ಪಾಟ್ನಾದಲ್ಲಿ ಪ್ರತಿ ಪಕ್ಷಗಳ ಮುಖಂಡರ ಮಹತ್ವದ ಸಭೆ ಕರೆದಿದ್ದಾರೆ.
”ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸುವ ತಂತ್ರ ರೂಪಿಸಲಷ್ಟೇ ಸಭೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಸೀಟುಗಳ ಹಂಚಿಕೆಯಾಗಲೀ ಅಥವಾ ನಾಯಕತ್ವ ವಿಷಯವನ್ನು ಸಭೆಯಲ್ಲಿ ಚರ್ಚಿಸದಿರಲು ನಿರ್ಧರಿಸಲಾಗಿದೆ” ಎಂದು ಮೂಲಗಳು ಹೇಳಿವೆ.
”ಮಣಿಪುರ ಗಲಭೆ ಹಾಗೂ ಇದನ್ನು ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಕುರಿತು ನಾಯಕರು ಚರ್ಚೆ ನಡೆಸಲಿದ್ದಾರೆ. ಇಂತಹ ಇನ್ನೂ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಕಟ್ಟಿಹಾಕುವ ಬಗೆ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಲಿವೆ” ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ವ್ಯಕ್ತಿ ತಿಳಿಸಿದ್ದಾರೆ.
ಪಾಟ್ನಾ ಸಭೆ ಕುರಿತು ಬಿಜೆಪಿ ಪ್ರತಿಕ್ರಿಯೆ: ”ತಮ್ಮ ಸ್ಥಾನಮಾನದ ಕುರಿತೇ ವಿರೋಧಪಕ್ಷಗಳಲ್ಲಿ ಪರಸ್ಪರ ಗೊಂದಲಗಳಿವೆ. ಈ ಕೂಟದ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬುದೇ ಇನ್ನೂ ತೀರ್ಮಾನವಾಗಿಲ್ಲ” ಎಂದು ವ್ಯಂಗ್ಯವಾಡಿತ್ತು.
ಬಿಜೆಪಿಗೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ತಿರುಗೇಟು: ”ವಿರೋಧಪಕ್ಷಗಳಿಗೆ ನಾಯಕತ್ವದ ಮುಖ ಅಗತ್ಯವಿಲ್ಲ. ಇದು ಒಗ್ಗಟ್ಟಿನ ಹೋರಾಟ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಎಲ್ಲರೂ ಚರ್ಚಿಸಿ ನಿರ್ಧರಿಸಲಾಗುವುದು” ಎಂದಿದ್ದಾರೆ.
ಇದನ್ನೂ ಓದಿ: ನೂತನ ಶಾಸಕರಿಗೆ ಪ್ರೇರಣಾ ಉಪನ್ಯಾಸ ನೀಡಲು ಗುರುರಾಜ ಕರ್ಜಗಿ, ರವಿಶಂಕರ್ ಗುರೂಜಿಗೆ ಆಹ್ವಾನ: ತೀವ್ರ ವಿರೋಧ
ಈ ಬಗ್ಗೆ ಸಿಪಿಐ ಮುಖಂಡ ಡಿ. ರಾಜಾ ಮಾತನಾಡಿ, ”ಜಾತ್ಯತೀತ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಮಣಿಸಬೇಕಿದೆ. ಸ್ಥಾನಗಳನ್ನು ಗೆಲ್ಲುವುದಷ್ಟೇ ಈ ಹೋರಾಟದ ಮುಖ್ಯ ಉದ್ದೇಶವಲ್ಲ. ಪ್ರಜಾಪ್ರಭುತ್ವ, ಸಂವಿಧಾನ, ದೇಶದ ಜಾತ್ಯತೀತ ಸತ್ವ ಮತ್ತು ಸ್ವತಂತ್ರ ಸಂಸತ್ತಿನ ಸಾರ್ವಭೌಮತ್ವವನ್ನು ಕಾಪಾಡುವುದೇ ಮುಖ್ಯ ಉದ್ದೇಶವಾಗಿದೆ” ಎಂದಿದ್ದಾರೆ.
”ಚುನಾವಣೆ ಘೋಷಣೆಯಾದ ನಂತರ ಸೀಟುಗಳ ಹಂಚಿಕೆ ಕುರಿತು ಆಯಾ ರಾಜ್ಯ ಮಟ್ಟದಲ್ಲಿ ಚರ್ಚೆಗಳು ನಡೆಯಲಿವೆ. ಇದನ್ನು ಅಲ್ಲಿನ ಪಕ್ಷಗಳ ಹಿಡಿತವನ್ನು ಪರಿಗಣಿಸಿ ನಿರ್ಧರಿಸಲಾಗುವುದು. ಈ ವಿಷಯದಲ್ಲಿ ಜಾತ್ಯತೀತ ನಿಲುವುಳ್ಳ ಪಕ್ಷಗಳು ಇನ್ನಷ್ಟು ಉದಾರವಾಗಿ ಹಾಗೂ ಪರಸ್ಪರ ಮಾತುಕತೆ ಮೂಲಕ ಹಂಚಿಕೆ ಮಾಡಿಕೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಳಿನ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಎನ್ಸಿಪಿ ಮುಖಂಡ ಶರದ್ ಪವಾರ್ ಭಾಗವಹಿಸಲಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಸಿಪಿಐ ಪಕ್ಷ ಮುಖಂಡ ಡಿ.ರಾಜ, ಸಿಪಿಎ(ಎಂ) ಮುಖಂಡ ಸೀತರಾಂ ಯೆಚೂರಿ, ಸಿಪಿಐ(ಎಂಎಲ್)ಲಿಬರೇಷನ್ ಪಕ್ಷದ ದೀಪಂಕರ್ ಭಟ್ಟಾಚಾರ್ಯ ಸೇರಿದಂತೆ ಹಲವರು ಭಾಗವವಹಿಸುವ ನಿರೀಕ್ಷೆ ಇದೆ. ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ ಪೂರ್ವನಿರ್ಧರಿತ ಕಾರ್ಯಕ್ರಮ ಇರುವುದರಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ವಿರೋಧ ಪಕ್ಷಗಳ ಜೊತೆ ತಮ್ಮ ಪಕ್ಷ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಯಾವುದೇ ಚರ್ಚೆಗಳು ನಡೆಯುವುದಿಲ್ಲ. ಬದಲಿಗೆ ಬಿಜೆಪಿ ಸೋಲಿಸಲು ಇರುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಸಭೆಗೆ ಬಿಎಸ್ಪಿ, ಬಿಆರ್ಎಸ್, ಬಿಜೆಪಿ, ವೈಎಸ್ಆರ್ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹಲವು ವಿಪಕ್ಷಗಳು ಭಾಗವಹಿಸುತ್ತಿಲ್ಲ.


